Tuesday, December 18, 2018

ಮ್ಯಾರಥಾನ್ ಗಾಂಧಿ


ಮ್ಯಾರಥಾನ್ ಗಾಂಧಿ


ನಾಥೂರಾಮನ ಕೈಯಲ್ಲಿದ್ದ ಬೆರೆಟ್ಟಾ ಎಂ34 ಪಿಸ್ತೂಲಿನಿಂದ ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ ಗುಂಡೊಂದು ಸಿಡಿಯಿತು. ಅದರ ಹಿಂದೆಯೇ ಇನ್ನೊಂದು, ಮತ್ತೊಂದು..!

ಗಾಂಧೀಜಿ ಬೆಚ್ಚಿ ತನ್ನತ್ತಲೇ ಮುಖ ಮಾಡಿದ್ದ ಪಿಸ್ತೂಲಿನ ಕಡೆಗೆ ನೋಡಿದರು. ಆದರೆ ಅದರಿಂದ ಹೊರಬರುತ್ತಿದ್ದ ಗುಂಡುಗಳು ಕೇವಲ ಗುಂಡುಗಳಾಗಿರಲಿಲ್ಲ. ಅದರಲ್ಲಿದ್ದದ್ದು ಇಬ್ಭಾಗವಾದ ದೇಶದ ನಡುವೆ ಸಿಕ್ಕಿಕೊಂಡು ತಮ್ಮದೆಲ್ಲವನ್ನೂ ಕಳೆದುಕೊಂಡವರ ದುಃಖ, ಎರಡು ದೇಶಗಳಲ್ಲಿ ತಾವು ಎಲ್ಲಿಗೂ ಸೇರದೇ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡವರ ಅಸಹಾಯಕತೆ, ಯಾರೋ ಮಾಡಿದ ತಪ್ಪಿಗೆ, ಯಾರದ್ದೋ ಅಧಿಕಾರದ ಲಾಲಸೆಗೆ, ತಮ್ಮ ಜೀವನ ಬಲಿ ಕೊಟ್ಟವರ ದ್ವೇಷ, ರೋಷ, ಆಕ್ರೋಷಗಳು. ಇವೆಲ್ಲವೂ ಸೇರಿ ನಾಥೂರಾಮನ ಕೈಲಿದ್ದ ಪಿಸ್ತೂಲಿನ ಮೂರು ಗುಂಡುಗಳಾಗಿ ಬಂದು ಇನ್ನೇನು ಗಾಂಧೀಜಿಯ ಎದೆ ಸೀಳಬೇಕು, ಅಷ್ಟರಲ್ಲಿ..

ಗಾಂಧೀಜಿ ಕೂಡಲೇ ಕೈಯಲ್ಲಿದ್ದ ಕೋಲನ್ನು ಮೇಲೆಸೆದು ಹಿಂದೆ ತಿರುಗಿ ಓಡತೊಡಗಿದರು. ನಾಥೂರಾಮನ ಗುಂಡುಗಳು ಹಿಂಬಾಲಿಸತೊಡಗಿದವು. ಗಾಂಧೀಜಿಯವರ ಪಕ್ಕದಲ್ಲಿದ್ದ ಮನುಬೆನ್ ಮತ್ತು ಅಭಾ, ಸುತ್ತಲೂ ಪ್ರಚಾರಕ್ಕೆಂದು ನೆರೆದಿದ್ದ ಅನುಯಾಯಿಗಳು, ಗುಂಡು ಹಾರಿಸಿದ ನಾಥೂರಾಮ, ಎಲ್ಲರೂ ಏನಾಯಿತು ಎಂದು ನೋಡುವಷ್ಟರಲ್ಲಿ, ಅವರು ಬಿರ್ಲಾ ಭವನದಿಂದ ಬಹಳ ದೂರ ಓಡಿಹೋಗಿದ್ದರು. ಕಾಲಿನಲ್ಲಿದ್ದ ಚಪ್ಪಲಿ, ಮೈಮೇಲೆ ಹೊದ್ದಿದ್ದ ಅಂಗವಸ್ತ್ರ, ಕಣ್ಣಿನ ಕನ್ನಡಕ ಅದೆಲ್ಲೆಲ್ಲಿ ಹಾರಿ ಬಿದ್ದವೋ, ಗಾಂಧೀಜಿ ಎದ್ದು ಬಿದ್ದು ಓಡತೊಡಗಿದ್ದರು. ತಾನು ಎತ್ತ ಓಡುತ್ತಿದ್ದೇನೆಂಬ ಪರಿವೆಯೂ ಇಲ್ಲದೇ ಓಡುತ್ತಿದ್ದ ಅವರು ದೆಹಲಿಯನ್ನೆಲ್ಲಾ ಸುತ್ತಿ, ಪಂಜಾಬಿನ ಕಡೆಗೆಲ್ಲೋ ಓಡತೊಡಗಿದರು. ಆ ಮೂರು ಗುಂಡುಗಳು ಬಿಡದೇ ಹಿಂಬಾಲಿಸುತ್ತಲೇ ಇದ್ದವು.

ಇತ್ತ ಗುಂಡು ಹಾರಿಸಿದ ನಾಥೂರಾಮನಿಗೆ ಮೊದಲು ಬಿರ್ಲಾ ಭವನದಲ್ಲಿದ್ದ ಜನರೆಲ್ಲಾ ಚೆನ್ನಾಗಿ ಥಳಿಸಿದರು. ಗಾಂಧೀಜಿ ಇರುವ ತನಕ ತಮ್ಮನ್ನು ಕಚ್ಚಿದ ಇರುವೆಯನ್ನೂ ಕೊಲ್ಲದೇ ಅಹಿಂಸಾ ತತ್ವವನ್ನು ಪಾಲಿಸುತ್ತಿದ್ದ ಅವರು ಗಾಂಧೀಜಿ ಓಡುತ್ತಲೇ ನಾಥೂರಾಮನ ಮೇಲೆ ಮುಗಿಬಿದ್ದರು. ಆಳಿಗೊಂದೇಟು ಎಂಬಂತೆ ಹೊಡೆಯುವವರೆ. ಅಷ್ಟರಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಅವನನ್ನು ಬಂಧಿಸಿ ಕರೆದೊಯ್ದರು. ನ್ಯಾಯಲಯದ ಮುಂದೆ ಹಾಜರಿಪಡಿಸಿದರು. ವಿಚಾರಣೆ ನೆಡೆಯಿತು. ನಾಥೂರಾಮ ಗುಂಡು ಹಾರಿಸಿದ್ದನಾದರೂ ಅವು ಗಾಂಧಿಯನ್ನು ಕೊಲ್ಲುವ ತನಕ ಯಾವ ತೀರ್ಪನ್ನೂ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ತಾನು ಹಾರಿಸಿದ ಗುಂಡುಗಳು ಇಂದಲ್ಲ ನಾಳೆ ಗಾಂಧಿಯನ್ನು ಕೊಲ್ಲುತ್ತದೆ ಎಂಬ ಆತ್ಮವಿಶ್ವಾಸದಿಂದ ನಾಥೂರಾಮನೂ ಕಾಯತೊಡಗಿದ.

ಈ ಓಟ ಮುಗಿಯುವುದಿಲ್ಲವೆಂದು ಅರಿವಾದ ಗಾಂಧೀಜೀ ಹಿಂದೆ ತಿರುಗಿ ಗುಂಡುಗಳ ಜೊತೆಗೆ ಸಂಧಾನ ಮಾಡಿಕೊಳ್ಳಲು ಪ್ರಯತ್ನಿಸಿದರು. ‘ದೇಶ ವಿಭಜನೆಯಲ್ಲಿ ತನ್ನ ತಪ್ಪೇನಿಲ್ಲ, ಆ ಪರಿಸ್ಥಿತಿಯಲ್ಲಿ ಅದು ಅವಶ್ಯಕವಾಗಿತ್ತು’ ಎಂದು ತಿಳಿಹೇಳಿದರು. ‘ಪಾಕಿಸ್ತಾನಕ್ಕೆ ಹಣ ಸಹಾಯ ಮಾಡಿದ್ದರಲ್ಲಿ ತನಗೆ ಒಂದು ಪೈಸೆ ಲಾಭವಿಲ್ಲ, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಷ್ಟೇ ತನ್ನ ಉದ್ದೇಶವಾಗಿತ್ತು’ ಎಂದು ಪರಿಪರಿಯಾಗಿ ವಿವರಿಸಿದರು. ‘ಈ ದೇಶ ಇಬ್ಭಾಗವಾದರೆ ಅದು ತನ್ನ ಗೋರಿಯ ಮೇಲೆಯೇ ಎಂದು ಒಮ್ಮೆ ಹೇಳಿದ್ದನ್ನೂ ಒತ್ತಿ ಒತ್ತಿ ಹೇಳಿ ತಾನು ವಿಭಜನೆಯ ಪರವಾಗಿ ಇರಲಿಲ್ಲ ಎಂದು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಆದರೆ ಗುಂಡುಗಳಿಗೆ ತಮ್ಮ ಗುರಿ ತಲುಪುವುದರ ಹೊರತಾಗಿ ಮತ್ಯಾವುದರ ಕಡೆಗೂ ಲಕ್ಷ್ಯವಿರದಿದ್ದನ್ನು ಅರಿತ ಗಾಂಧೀಜಿ ಸುಮ್ಮನೇ ಓಡತೊಡಗಿದರು.

ಗಾಂದೀಜಿಯ ಈ ಸಾವಿನ ಮ್ಯಾರಥಾನ್ ಸುದ್ದಿ ದೇಶದಲ್ಲೆಲ್ಲಾ ಹಬ್ಬಿತು. ರೇಡಿಯೋಗಳಲ್ಲಿ ಗಾಂಧಿ ಯಾವ ಊರಿನಲ್ಲಿ ಓಡುತ್ತಿದ್ದಾರೆ ಎಂದು ಗಂಟೆಗೊಮ್ಮೆ ಸುದ್ದಿ ಬಿತ್ತರವಾಗತೊಡಗಿತು. ನೆಡೆಯಲೂ ಶಕ್ತಿ ಇಲ್ಲದೇ ಕೋಲನ್ನೂರುತ್ತಲೋ, ಬೇರೆಯವರ ಹೆಗಲ ಮೇಲೆ ಕೈಯಿರಿಸಿಕೊಂಡೋ ನೆಡೆಯುತ್ತಿದ್ದ ಎಪ್ಪತ್ತೇಳರ ಮುದುಕಪ್ಪ ಆಯಾಸವೇ ಇಲ್ಲದಂತೆ ಓಡುತ್ತಿದ್ದಿದ್ದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಈ ಬಗ್ಗೆ ಎಲ್ಲೆಡೆ ಬಹಳಷ್ಟು ಚರ್ಚೆಗಳಾದವು. ಅವರ ಈ ಅಶ್ವಶಕ್ತಿಗೆ ವರುಷಗಳಿಂದ ತನ್ನ ಮೇಲೆಯೆ ಮಾಡಿಕೊಳ್ಳುತ್ತಿದ್ದ ವಿಶೇಷ ಯೋಗ, ಪ್ರಯೋಗಗಳೇ ಕಾರಣವಿರಬಹುದು ಎಂದು ಜನ ಮಾತನಾಡಿಕೊಂಡರು. ಗಾಂಧೀಜಿಯವರು ಊರಿಂದ ಊರಿಗೆ ಓಡುತ್ತಿದ್ದರೆ, ಮುಂದೆ ಯಾವ ಊರಿಗೆ ಓಡಬಹುದೆಂದು ಊಹಿಸುತ್ತಿದ್ದ ಜನ ಆ ಊರು ತಲುಪಿ ಅವರ ಓಟವನ್ನು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ನೋಡುತ್ತಿದ್ದರು. ಕೆಲವರಂತೂ ಅವರು ಎಷ್ಟು ನಿಮಿಷದಲ್ಲಿ ಊರು ದಾಟಬಹುದು, ಮುಂದೆ ಯಾವ ಊರಿಗೆ ಹೋಗಬಹುದು, ಗುಂಡು ಯಾವ ಊರಿನಲ್ಲಿ ಅವರ ಮೈ ಸೇರಬಹುದೆಂದು ತಮ್ಮ ತಮ್ಮಲ್ಲೇ ಹಣ ಕಟ್ಟಿಕೊಂಡು ಜೂಜಾಡಿದರು. ಇಂಥಹವರನ್ನೆಲ್ಲಾ ಪೊಲೀಸರು ಅವರನ್ನು ರಾಷ್ಟ್ರದ್ರೋಹದ ಆರೋಪದ ಮೇಲೆ ಬಂಧಿಸಿದರು.

ಗಾಂಧಿ ನೂರಾರು ಕಿ.ಮೀ ಓಡಿಯಾಗಿತ್ತು. ಮಹಾತ್ಮರನ್ನು ಕೊಲ್ಲಲು ಗುಂಡುಗಳು ಹಿಂದೆ ಬಿದ್ದಿರುವಾಗ ತಾವು ಸುಮ್ಮನಿರುವುದು ಸೂಕ್ತವಲ್ಲವೆಂದು ಮಂತ್ರಿಮಂಡಲ ಸಭೆ ಸೇರಿತು. ದೇಶ ವಿಭಜನೆಗೆ ಕಾರಣವಾದವರು ಯಾರಾದರೂ ಗಾಂಧೀಜಿಯ ಹಿಂದೆ ಬಿದ್ದಿದ್ದ ಗುಂಡುಗಳಿಗೆ ಬಲಿಯಾಗುವುದರಿಂದ ಗಾಂಧೀಜಿಯವರ ಸಾವನ್ನು ತಪ್ಪಿಸಬಹುದೆಂದು ನಿರ್ಧಾರಿಸಲಾಯಿತು. ‘ಪ್ರತಿಯೊಬ್ಬ ಹಿಂದೂವಿಗೂ ಅಖಂಡ ಭಾರತದ ಕನಸಿತ್ತು. ದೇಶ ವಿಭಜನೆಗಾಗಿ ಪಟ್ಟು ಹಿಡಿದು ಕುಳಿತದ್ದು ಮುಸ್ಲೀಂ ಲೀಗಿನವೇರೇ ಇದಕ್ಕೆ ನೇರ ಹೊಣೆಯಾದ್ದರಿಂದ ಹಿಂದೂಗಳು ಪ್ರಾಣತ್ಯಾಗ ಮಾಡುವ ಪ್ರಶ್ನೆಯೇ ಇಲ್ಲವೆಂದು ವಿರೋಧ ಪಕ್ಷದವರು ವಾದಿಸಿದರು. ಆಡಳಿತ ಪಕ್ಷದವರಿಗೆ ಇದು ಸರಿ ಎನ್ನಿಸಿತು. ಯಾರಾದರೂ ಮುಸ್ಲೀಮರೇ ತಲೆದಂಡ ಮಾಡಬೇಕೆಂದು ಕೂಡಲೇ ಭಾರತದಿಂದ ಪಾಕಿಸ್ತಾನಕ್ಕೆ ಟೆಲಿಗ್ರಾಂ ಹೋಯಿತು. ‘ನಾವೇನೋ ಪ್ರಾಣ ನೀಡಲು ಸಿದ್ಧರಿದ್ದೇವೆ. ಆದರೆ ಗಾಂಧೀಜಿಯವರಿಗೆ ಪ್ರತಿಯೊಬ್ಬ ಮುಸ್ಲೀಮರ ಪ್ರಾಣವೂ ತುಂಬಾ ಅಮೂಲ್ಯವಾಗಿತ್ತು. ತನ್ನ ಜೀವ ಉಳಿಸಿಕೊಳ್ಳಲು ಆ ಮಹಾತ್ಮ ಎಂದಿಗೂ ಮುಸ್ಲೀಮರನ್ನು ಬಲಿ ಕೊಡಲಿಕ್ಕಿಲ್ಲ’ ಎಂದು ಮರುತ್ತರ ಬರೆದರು. ಆಡಳಿತ ಪಕ್ಷದವರಿಗೆ ಇದೂ ಸರಿ ಎನ್ನಿಸಿತು. ಕಡೆಗೆ ಯಾರನ್ನು ಬಲಿ ಕೊಡುವುದೆಂಬ ವಿಷಯ ಇತ್ಯರ್ಥವಾಗದೇ ಎಲ್ಲರೂ ಪ್ರಧಾನ ಮಂತ್ರಿಯ ಕಡೆಗೆ ನೋಡಿದರು. 

‘’ಹಣ್ಣು ಹಂಚಿ ತಿನ್ನು, ದೇಶ ಒಡೆದು ಆಳು’’ ಎಂದು ಬ್ರಿಟೀಷರು ಉಡುಗೊರೆಯಾಗಿ ಕೊಟ್ಟಿದ್ದ ಡೈರಿಯೊಂದಲ್ಲಿ ಬರೆದುಕೊಂಡಿದ್ದ ವಾಕ್ಯವನ್ನು ಉಲ್ಲೇಖಿಸುತ್ತಾ ಭಾಷಣ ಪ್ರಾರಂಭಿಸಿದರು ಮಾನ್ಯ ಪ್ರಧಾನಿಗಳು. ನಂತರ ಬಹಳ ಗಂಭೀರವಾದ ಧ್ವನಿಯಲ್ಲಿ ದೇಶವನ್ನು ಸೇಬಿನ ಹಣ್ಣಿಗೆ ಹೋಲಿಸುತ್ತಾ, ಹೇಗೆ ಅದನ್ನು ಭಾಗ ಮಾಡಿ ತಿಂದಾಗ ಮಾತ್ರ ಮುಂದಿನ ದಿನಗಳಲ್ಲಿ ಯಾವ ಕಿತ್ತಾಟವಿಲ್ಲದೇ ಎಲ್ಲರೂ ಸವಿಯಲು ಸಾಧ್ಯವಿದೆಯೆಂದು ಹೇಳಿದರು. ಈ ಬಗ್ಗೆ ಗಾಂಧೀಜಿಯವರಿಗಿದ್ದ ಆ ದೂರದೃಷ್ಟಿಯನ್ನು ಶ್ಲಾಘಿಸಿ, ಅವರ ನಿಲುವನ್ನು ಸಮರ್ಥಿಸಿಕೊಂಡರು. ಕೊನೆಯಲ್ಲಿ ‘ಸದಾ ದೇಶದ ಒಳಿತನ್ನೇ ಬಯಸಿ, ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಆ ಮಹಾತ್ಮನಿಗೆ ಮಾತ್ರ ಆ ಗುಂಡುಗಳಿಗೆ ಎದೆಯೊಡ್ಡುವ ಯೋಗ್ಯತೆ ಇದಯೇ ಹೊರತು ನಮ್ಮಂತಹ ಸಾಮಾನ್ಯ ಆತ್ಮಗಳಿಗಲ್ಲ. ಅವರನ್ನು ಕಳೆದುಕೊಳ್ಳುವ ದೇಶ ಅನಾಥವಾಗುತ್ತದೆ ನಿಜ, ಆದರೆ ಇಲ್ಲಿಯವರೆಗೂ ಮಹಾತ್ಮರಾಗಿದ್ದ ಅವರು ನಮ್ಮ ಮನಸ್ಸಿನಲ್ಲಿ ಹುತಾತ್ಮರಾಗುತ್ತಾರೆ’ ಎಂದು ಗದ್ಗದಿತರಾಗಿ ತಮ್ಮ ಸುದೀರ್ಘ ಭಾಷಣವನ್ನು ಮುಗಿಸಲು ನೆರೆದಿದ್ದ ಸಭೀಕರಲ್ಲಿ ಮೌನ ಆವರಿಸಿತ್ತು. ಮರುಕ್ಷಣ ಚಪ್ಪಾಳೆಯ ಧ್ವನಿ ಮುಗಿಲು ಮುಟ್ಟಿತು.

ಆ ಚಪ್ಪಾಳೆಯ ಧ್ವನಿಯ ಓವರ್ ಲ್ಯಾಪಿನಲ್ಲಿಯೇ ಗಾಂಧಿ ಓಡುತ್ತಾ ಓಡುತ್ತಾ ಭಾರತ ಪಾಕಿಸ್ತಾನದ ಗಡಿ ತಲುಪಿದರು. ಪಾಕಿಸ್ತಾನದಿಂದ ಹಿಂದೂಗಳನ್ನು ಕೊಲ್ಲಲು ಬೆನ್ನತ್ತಿ ಬರುತ್ತಿದ್ದ ಮುಸ್ಲೀಮರು, ಭಾರತದಿಂದ ತಲೆಮರೆಸಿ ಓಡುತ್ತಿದ್ದ ಮುಸ್ಲೀಮರ ತಲೆ ಕಡಿಯಲು ಬಂದ ಹಿಂದೂಗಳು ಈ ಗಲಾಟೆಯ ನಡುವೆ ಓಡಿ ಧೋತಿ ಉಟ್ಟು ಓಡಿಬಂದ ಗಾಂಧಿಜಿಯನ್ನು ಕಂಡು ಒಂದು ಕ್ಷಣ ಅವಕ್ಕಾಗಿ ನಿಂತು ನೋಡಿದರು. ನಂತರ ತಮಗೆ ಸಂಬಂಧವಿಲ್ಲ ಎಂಬಂತೆ ಕೊಲ್ಲುವುದನ್ನು ಮುಂದುವರೆಸಿದರು. ಗಾಂಧೀಜಿ ಅವರಿಗೆ ‘ಈ ಕ್ರೌರ್ಯವೆಲ್ಲಾ ತನಗೆ ಇಷ್ಟವಿಲ್ಲ, ನಿಲ್ಲಿಸಿ, ನಿಲ್ಲಿಸಿ’ ಎಂದು ಕೂಗಿ ಹೇಳಲು ಪ್ರಯತ್ನಿಸಿದರು. ಆದರೆ ಯಾರೂ ಅವರ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ತಾನೆಲ್ಲಿ ಎಡವಿದೆನೆಂದು ಗಾಂಧೀಜಿಯವರಿಗೆ ನಿಧಾನವಾಗಿ ಅರಿವಾಗತೊಡಗಿತು. ಓಡುತ್ತಾ ಓಡುತ್ತಾ ಅವರ ಕಾಲುಗಳು ಸೋತು ಅಲ್ಲಿ ಬಿದ್ದಿದ್ದ ಯಾವುದೋ ಶವವನ್ನು ಎಡವಿ ಮುಗ್ಗರಿಸಿದರು. ಹೇಗೋ ಸಾವರಿಸಿಕೊಂಡು ಮೇಲೆದ್ದರು. ಮತ್ತೆ ಓಡಲು ಇನ್ನೇನು ಹಿಂದೆ ತಿರುಗಬೇಕು. ಅಷ್ಟರಲ್ಲಿ ತಾವು ಎಡವಿದ ಶವದ ಮೇಲೆ ಅವರ ಕಣ್ಣು ಬಿದ್ದಿತು.

ಗಾಂಧೀಜಿಗೆ ತಾವು ಕಣ್ಣಿಂದ ಕಂಡದ್ದನ್ನು ನಂಬಲಾಗಲಿಲ್ಲ. ಅಲ್ಲಿದ್ದದ್ದು ಸ್ವತಃ ಅವರದ್ದೇ ಶವ. ಅವರದ್ದೇ ಸಣಕಲು ದೇಹದ, ಬೋಳು ತಲೆಯ ಅರೆನಗ್ನ ಶವ. ಗಾಂಧೀಜಿ ಬೆಚ್ಚಿ ಬಿದ್ದು ಅತ್ತಿತ್ತ ಕಣ್ಣು ಹಾಯಿಸಿದರೆ ಸುತ್ತಲೂ ಬಿದ್ದಿರುವ ಪ್ರತಿ ಶವವೂ ಅವರದ್ದೇ. ಆ ಶವಗಳನ್ನು ಆಯುಧ ಹಿಡಿದು ಹೊಡೆದು ಉರುಳಿಸುತ್ತಿರುವುದು ಕೂಡ ಅವರೇ. ಇದನ್ನೆಲ್ಲಾ ನೋಡುತ್ತಾ ನಿಂತ ಗಾಂಧೀಜಿಯವರಿಗೆ ಕಣ್ಣು ಕತ್ತಲೆ ಬಂದಂತಾಯಿತು. ಅಲ್ಲಿಂದ ದೂರ ಓಡೋಣವೆಂದರೆ ಹಜ್ಜೆ ಕಿತ್ತಿಡಲು ಸಾಧ್ಯವಾಗಲಿಲ್ಲ. ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ಹಿಂಬಾಲಿಸಿ ಬಂದ ನಾಥೂರಾಮನ ಗುಂಡುಗಳು ಕಡೆಗೂ ಗಾಂಧಿಜಿಯವರ ಎದೆಯನ್ನು ಸೀಳಿದ್ದವು. ಗಾಂಧೀಜಿ ಎದೆ ಹಿಡಿದುಕೊಂಡು ಕೆಳಗುರುಳಿದರು.

ಅವರು ‘ಹೇ ರಾಮ್’ ಎಂದದ್ದು ಯಾರಿಗೂ ಕೇಳಿಸಲಿಲ್ಲ.

-      ತ್ರಿಲೋಕ್ ತ್ರಿವಿಕ್ರಮ

Wednesday, November 14, 2018

ಕಾರ್ನರ್ ಸೀಟಿನ ಕಥೆಗಳು


ಕಾರ್ನರ್ ಸೀಟಿನ ಕಥೆಗಳು



ಮಧ್ಯಂತರ

ತೆರೆಯ ಮೇಲೆ ಮಧ್ಯಂತರ ಎಂಬ ಅಕ್ಷರಗಳು ಕಾಣುತ್ತಿದ್ದ ಹಾಗೆ, ಅಂಟಿ ಕುಳಿತಿದ್ದ ಪ್ರೇಮಿಗಳ ಮಧ್ಯ - ಅಂತರವೂ ಹೆಚ್ಚಾಯಿತು. ದೀಪಗಳು ಹೊತ್ತಿಕೊಂಡವು. ಸಿನಿಮಾ ಅಷ್ಟೇನೂ ಚೆನ್ನಾಗಿರದಿದ್ದರಿಂದ ಇದ್ದವರು ಕೆಲವೇ ಜನ. ಅದರಲ್ಲೊಂದಿಬ್ಬರು ಮೇಲೆದ್ದು ನಗುತ್ತಾ, ತಮ್ಮ ತಮ್ಮಲ್ಲೇ ಮಾತನಾಡುತ್ತಾ ಬಾಗಿಲುಗಳ ಕಡೆ ನೆಡೆದರು. ಇನ್ನು ಕೆಲವರು ಕೂತಲ್ಲಿಯೇ ಕೂತು ಜೇಬಿನಿಂದ ಮೊಬೈಲ್ ಹೊರತೆಗೆದರು, ಒಂದಿಬ್ಬರು ಹುಡುಗರು ಸಿನಿಮಾಗೆ ಬರುವ ಬದಲು ಬಾರಿಗಾದರೂ ಹೋಗಬಹುದಿತ್ತು ಎಂದು ಬೈದುಕೊಳ್ಳುತ್ತಾ ನನ್ನ ಎದುರೆ ನೆಡೆದು ಹೋದರು. ಇಲ್ಲಿ ಕುಳಿತಿದ್ದ ಪ್ರೇಮಿಗಳು ಹೋಗುವುದೋ ಬೇಡವೋ ಎಂದು ಒಂದಷ್ಟು ಚರ್ಚೆ ಮಾಡಿ ಕೊನೆಗೆ ಎದ್ದು ಹೊರನೆಡೆದರು. ಅವರು ಹೋದ ಮೇಲೆ ನಾನೂ ಆಕಳಿಸಿ ಕೂತಲ್ಲೇ ನಿಟ್ಟುಸಿರು ಬಿಟ್ಟೆ. ಇನ್ನು ಹತ್ತು ನಿಮಿಷಗಳ ವಿರಾಮ ನನಗೆ.

ನಾನು ಎಫ್ 22 ನಂಬರಿನ ಮೂಲೆಯ ಸೀಟು, ಅರ್ಥಾತ್ ಕಾರ್ನರ್ ಸೀಟು.

‘ಕಾರ್ನರ್ ಸೀಟು’ ಎಂದು ನನ್ನ ಅನ್ವರ್ಥನಾಮವನ್ನು ಕೇಳುತ್ತಿದ್ದಂತೇ ಎಲ್ಲರ ಮುಖದಲ್ಲೂ ವಿಷಯ ಅರ್ಥವಾದಂತೆ ಅದೊಂದು ನಗು ಹಾದು ಹೋಗುತ್ತದೆ. ಗೆಳೆಯನ ಕಂಪ್ಯೂಟರಿನಲ್ಲಿ ನಲವತ್ತು ಜಿಬಿ ಗಾತ್ರದ ಸ್ಟಡಿ ಮೆಟೀರಿಯಲ್ ಎಂಬ ಫೋಲ್ಡರನ್ನು ನೋಡಿದಾಗಲೋ, ಹನಿಮೂನ್ ಮುಗಿಸಿ ಹೋದವರ ರೂಮು ಕ್ಲೀನು ಮಾಡಲು ರೂಂ ಬಾಯ್ ಒಳಗೆ ಹೋದಾಗಲೋ ಬರುವಂತಹ ತುಂಟ ನಗು. ಪರವಾಗಿಲ್ಲ, ನನಗೆ ಅದರಲ್ಲೇನು ಮುಜುಗರವಿಲ್ಲ. ಕುಬೇರ ಮೂಲೆಯಲ್ಲಿಟ್ಟರೇ ತಾನೆ ತಿಜೋರಿ ತುಂಬುವುದು? ಹಾಗೆಯೇ ಟಾಕೀಸಿನ ಮೂಲೆಯಲಿ ಕೂತರೆನೇ, ತುಂಟತನ ಹೊರಗೆ ಬರುವುದು. ಹೌದು, ನನ್ನಲ್ಲಿಗೆ ಬರುವವರಲ್ಲಿ ಬಹುಪಾಲು ಮಂದಿ ತುಂಟರೇ. ಅವರಲ್ಲಿ ಹಾಲು ಕದಿಯಲು ಬಂದ ಬೆಕ್ಕಿನ ಅವಸರ, ಕರೆಂಟು ಹೋದಾಗ ಕ್ಯಾಂಡಲ್ಲು ಹುಡುಕುವ ಕೈಗಳ ಚಾತುರ್ಯ, ನಡುರಾತ್ರಿಯಲಿ ದಾರಿ ತಪ್ಪಿದವವರ ಭಯ, ದೂರದಲ್ಲಿ ಕಾಣುವ ಬೆಳಕನ್ನು ಹಿಂಬಾಲಿಸಿ ಹೋಗುವವರ ಕುತೂಹಲ, ಎಲ್ಲವೂ ಇದೆ. ಹೀಗೆ ಸಿನಿಮಾದ ಮುಂದೆ ನೆಡೆಯುವ ಲೈವ್ ಸಿನಿಮಾಗಳಿಗೆ ಪ್ರೇಕ್ಷಕ ನಾನು. ಕತ್ತಲೆಯೊಳಗೆ ನೆಡೆಯುವ ಈ ಕಣ್ಣಾಮುಚ್ಚಾಲೆ ಆಟಗಳಿಗೆ ಅಂಪೈರು ನಾನು.

ಕಂಡವರ ಮಾತುಗಳನ್ನು ಕದ್ದು ಕೇಳಿಸಿಕೊಳ್ಳುವ ಈ ನನ್ನ ಚಟವನ್ನು ಕಂಡು ಮೂಗು ಮುರಿಯಬಹುದು. ಆದರೆ ನೀವೇ ನನ್ನ ಜಾಗದಲ್ಲಿ ನಿಂತು ಯೋಚಿಸಿ. (ಆಯ್ತು ನಿಲ್ಲಬೇಡಿ ಕೂತು ಯೋಚಿಸಿ). ನೀವೊಂದು ಸಿನಿಮಾವನ್ನು ಒಂದು ಸಲ ನೋಡಬಹುದು, ಎರಡು ಸಲ ನೋಡಬಹುದು. ಬಹಳ ಚೆನ್ನಾಗಿದ್ದರೆ ಹತ್ತು ಸಲ ನೋಡಬಹುದು. ಆದರೆ ನಾನು ಸಿನಿಮಾ ಚೆನ್ನಾಗಿದ್ದರೂ ಇಲ್ಲದಿದ್ದರೂ ದಿನಕ್ಕೆ ನಾಲ್ಕು ಸಲ ನೋಡಲೇಬೇಕು. ಹಿಟ್ ಸಿನಿಮಾವಾದರೆ, ಐವತ್ತು ದಿನ ನೂರು ದಿನಗಳವರೆಗೂ ನನಗೆ ಮುಕ್ತಿಯಿಲ್ಲ. ನನಗಿನ್ನೆಷ್ಟು ಜಿಗುಪ್ಸೆಯಾಗಬಹುದು? ಅದರಿಂದ ಹೊರಗೆ ಬರುವ ಒಂದೇ ಒಂದು ದಾರಿಯೆಂದರೆ ನನ್ನಲ್ಲಿಗೆ ಬಂದು ಕುಳಿತವರ ಕಥೆಗಳಿಗೆ ಕಿವಿಯಾಗುವುದು,

ಒಬ್ಬೊಬ್ಬರದು ಒಂದೊಂದು ಕಥೆಗಳು. ಆದರೆ ಸಾಮಾನ್ಯವಾಗಿ ಈ ಎಲ್ಲಾ ಕಥೆಗಳ ಕ್ಯಾಟಗರಿ ಒಂದೇ. ಏಕೆಂದರೆ ಇದರಲ್ಲಿ ಬಹುತೇಕ ಕಥೆಗಳು ಪಿಸುಮಾತಿನಲ್ಲಿ ಶುರುವಾಗಿ ಬಿಸಿಯುಸಿರಿನಲ್ಲಿ ಮುಂದುವರೆದು ನಸು ನಾಚಿಕೆಯಲ್ಲಿ ಕೊನೆಯಾಗುತ್ತವೆ. ಅವನ ರಸಿಕತೆ, ಅವಳ ಭಾವುಕತೆ, ಇಬ್ಬರನ್ನೂ ತನ್ನೊಳಗೆ ಬಚ್ಚಿಟ್ಟುಕೊಂಡ ಕತ್ತಲಿನ ಜಾಗರೂಕತೆ, ಅಕ್ಕಪಕ್ಕದ ಸೀಟುಗಳಲಿ ಕುಳಿತವರ ಸಿನಿಕತೆ, ಇವೆಲ್ಲವೂ ಇದರಲ್ಲಿವೆ. ಹೇಳುವವರಿಗೆ ಈ ಕಥೆ ಮುಜುಗರ ತಂದರೂ, ಕೇಳುವವರಿಗೆ ಎಂದಿಗೂ ಈ ಕಥೆಗಳ ಬಗ್ಗೆ ಕುತೂಹಲ ಬತ್ತುವುದಿಲ್ಲ. ನಾನು ಮೊದಲೇ ಹೇಳಿದಂತೆ ಯಾವ ಮುಜುಗರವಿಲ್ಲದೇ ಒಂದಷ್ಟು ಕಥೆಗಳನ್ನು ಹೇಳುವೆ ಕೇಳಿ.

#@#

ಕಥೆ ೧

ಇತ್ತೀಚಿನ ಕಥೆಯೊಂದರಿಂದ ಪ್ರಾರಂಭಿಸುತ್ತೇನೆ. ಅವರಿಬ್ಬರೂ ಒಂದೇ ಆಫೀಸಿನವರಿರಬೇಕು, ಕೆಲಸದ ಶಿಫ್ಟು ಮುಗಿಸಿ ನೈಟು ಷೋಗೆ ಬಂದಿದ್ದರು. ತೋಳಿನ ಮೇಲೆ ಹೂವಿನ ಟ್ಯಾಟೂ ಇದ್ದ ಹಿಂದಿ ಹುಡುಗಿಗೆ ಕನ್ನಡದ ಒಂದೊಂದು ಸಂಭಾಷಣೆಯನ್ನೂ ಹಿಂದಿಗೆ ಅನುವಾದಿಸಿ ಹೇಳುತ್ತಿದ್ದ ಆ ಕನ್ನಡಕದ ಹುಡುಗ. ಅವನ ಮಾತುಗಳನ್ನು ಕೇಳಿ ಅವಳು ಬಿದ್ದು ಬಿದ್ದು ನಗುತ್ತಿದ್ದರೆ, ತನ್ನದೇ ಜೋಕಿಗೆ ನಗುತ್ತಿದ್ದಾಳೆಂಬಂತೆ ಖುಷಿಯಿಂದ ಬೀಗುತ್ತಿದ್ದ. ಬಿಟ್ಟಿದ್ದರೆ ಪೂರ್ತಿ ಸಿನಿಮಾವನ್ನೆ ಹಿಂದಿಗೆ ಡಬ್ ಮಾಡಿಬಿಡುತ್ತಿದ್ದನೇನೋ, ಅಷ್ಟರಲ್ಲಿ ಸುಂದರವಾದ ರೊಮ್ಯಾಂಟಿಕ್ ಹಾಡೊಂದು ಶುರುವಾಯಿತು, ಅವನು ಮಾತು ನಿಲ್ಲಿಸಿಬಿಟ್ಟ. ಅವಳು ಏನಾಯಿತೆಂಬಂತೆ ಇವನತ್ತ ತಿರುಗಿದಳು. ಟಾಕೀಸಿನ ಡಿಟಿಎಸ್ ಸ್ಪೀಕರುಗಳಲ್ಲಿ ಹಾಡು ಕೇಳುತ್ತಿದ್ದರೆ ಅದಕ್ಕೆ ತಕ್ಕಂತೆ ಇಲ್ಲಿ ಇವನ ಕೈಬೆರಳುಗಳು ಅವಳ ತೋಳ ಮೇಲೆ ಸಂಗೀತ ನುಡಿಸತೊಗಿದವು. ಎಲ್ಲಿಯೂ ಲಯ ತಪ್ಪದ ಅವನ ರಾಗಕ್ಕೆ ಇವಳು ಮಿಡಿದು ಶೃತಿಯಾದಳು. ಅವನ ರಸಿಕತೆಗೆ ರತಿಯಾದಳು. ಕನ್ನಡದ ಈ ಹೇರಿಕೆಯನ್ನು ಹಿಂದಿ ವಿರೋಧಿಸಲಿಲ್ಲ. ಕೆಲವು ನಿಮಿಷಗಳ ಕಾಲ ದೇಹದೊಳಗೆ ಉಚ್ವಾಸ ನಿಶ್ವಾಸಗಳ ಹಗ್ಗ ಜಗ್ಗಾಟ ನೆಡೆದು ಕಡೆಯಲ್ಲಿ ಇಬ್ಬರೂ ಸೋತಿದ್ದರು, ಇಬ್ಬರೂ ಗೆದ್ದಿದ್ದರು. ಕತ್ತಲು ಕಳೆದು ಮುಂಜಾನೆಗೆ ಹೂವರಳುವಂತೆ, ನಡುರಾತ್ರಿಯಲಿ ಥಿಯೇಟರಿನ ದೀಪಗಳುರಿದಾಗ ಅವಳ ಗುಳಿಕೆನ್ನೆಗಳಲಿ ಕೆಂಪು ಕೆಂಪಾದ ಹೂವರಳಿದ್ದವು. ಹಣೆಯ ಮೇಲೆ ಇಬ್ಬನಿಯಂತೆ ಬೆವರ ಹನಿ.

ಕಥೆ ೨

ಮುಂದಿನ ಕಥೆ ಅದೊಂದು ಮಾರ್ನಿಂಗ್ ಷೋಗೆ ಕಾಲೇಜಿಗೆ ಬಂಕು ಹಾಕಿ ಯೂನಿಫಾರ್ಮಿನಲೇ ಬಂದಿದ್ದ ಅವರಿಬ್ಬರದು. ಅದೆಷ್ಟು ನಿದ್ದೆಗೆಟ್ಟ ರಾತ್ರಿಗಳ ವಾಟ್ಸಾಪ್ ಮೆಸೇಜುಗಳ ಫಲವೋ, ಅಂತೂ ಇಬ್ಬರೂ ಒಂದಾಗಿ ಸಿನಿಮಾಗೆ ಬಂದಿದ್ದರು. ಬುಕ್ ಮಾಡುವಾಗಲೇ ಖಾಲಿಯಿದ್ದ ಕಾರ್ನರ್ ಸೀಟು ಹುಡುಕಿ ಬುದ್ಧಿವಂತಿಕೆ ಮೆರೆದಿದ್ದ ಹುಡುಗ. ಅವಳು ಕ್ರೈಸ್ತರ ಹುಡುಗಿ. ಕತ್ತಿನಲ್ಲಿ ಕ್ರಾಸ್ ಇತ್ತು. ಬಹುಶಃ ಇಬ್ಬರೂ ಅದೇ ಮೊದಲು ಸಿನಿಮಾಗೆ ಜೊತೆಗೆ ಬಂದಿದ್ದಿರಬೇಕು. ಚಿತ್ರದುದ್ದಕ್ಕೂ ಭಯದಿಂದ ಮುದುರಿ ಕುಳಿತಿದ್ದಳು. ಪೋನು ವೈಬ್ರೇಟಾದರೆ ಬೆಚ್ಚಿಬೀಳುತ್ತಿದ್ದಳು. ಆಗಾಗ ವಾಚು ನೋಡುತ್ತಿದ್ದಳು. ವಾಷ್ ರೂಮಿಗೆ ಎದ್ದು ಹೋಗಬೇಕಾದೀತು ಎಂದು ಆತ ತಂದುಕೊಟ್ಟ ಜ್ಯೂಸನ್ನೂ ಮುಟ್ಟಲಿಲ್ಲ. ಸೆಕೆಂಡ್ ಹಾಫ್ ಶುರುವಾಯಿತು. ಹುಡುಗ ಕೇಳಲೋ ಬೇಡವೋ ಎನ್ನುವಂತೆ ಪಿಸುಮಾತಿನಲ್ಲೇ ಪಪ್ಪಿಯೊಂದಕ್ಕೆ ಬೇಡಿಕೆಯಿಟ್ಟ. ಅವಳು ಅವನನ್ನೊಮ್ಮೆ ದುರುಗುಟ್ಟಿ ನೋಡಿ ಸಾಧ್ಯವೇ ಇಲ್ಲವೆಂದಳು. ಹಲವು ಗುಸುಗುಸು ಪಿಸುಪಿಸುಗಳ ನಂತರ ಅವಳು ಕೊಡುವುದಿಲ್ಲವೆಂದು, ಆತನೇ ಕೊಡಬೇಕೆಂದು ನಿರ್ಧಾರವಾಗಿ ಅವಳು ಧೈರ್ಯ ತಂದುಕೊಂಡು ಸಂಕೋಚಗಳಿಂದ ಹ್ಯಾಂಡ್ ರೆಸ್ಟಿನ ಮೇಲೆ ಒರಗಿ ಕೂರುವಂತೆ ಮುಂದೆ ಭಾಗಿ ಕೆನ್ನೆ ಕೊಟ್ಟಳು. ತುಟಿ ಕೊಡುವಳೆಂದು ನಿರೀಕ್ಷಿಸಿದ್ದ ಹುಡುಗನಿಗೆ ನಿರಾಸೆಯಾದರೂ ಕಣ್ಣ ಮುಂದಿದ್ದ ಕೆನ್ನೆಯೂ ಹಿಂದೆ ಹೋಗುವುದರೊಳಗೆ ರಪಕ್ಕನೇ ಮುತ್ತಿಕ್ಕಿದ. ಕಿವಿಗೆ ಅಷ್ಟು ಸನಿಹದಲ್ಲೇ ಕೇಳಿದ ಆ ಮುತ್ತಿನ ಸದ್ದಿಗೆ ಬಾಂಬು ಸಿಡಿದವಳಂತೆ ಬೆಚ್ಚಿಬಿದ್ದು ಹಿಂದೆ ಸೀಟಿಗೊರಗಿ ಎದುಸಿರು ಬಿಡುತ್ತಿದ್ದರೇ. ಅವನು ಏನೋ ಸಾಧಿಸಿದವನಂತೆ ಹೆಮ್ಮೆಯಿಂದ ನಿಟ್ಟುಸಿರು ಬಿಟ್ಟ. ಸಿನಿಮಾ ಪರದೆಯನ್ನೇ ನೋಡುತ್ತಾ ಕುಳಿತ ಅವಳು ಅವನನ್ನು ಮತ್ತೆ ತಿರುಗಿ ನೋಡಲಿಲ್ಲ. ಅವಳನ್ನೇ ನೋಡುತ್ತಾ ಕುಳಿತ ಅವನು ಮತ್ತೆ ಸಿನಿಮಾ ನೋಡಲಿಲ್ಲ.

ಕಥೆ ೩

ಇದು ಕೆಲವು ವರುಷಗಳ ಹಿಂದಿನ ಕಥೆ. ಪರೀಕ್ಷೆ ಮುಗಿಸಿ ರಜೆಗೆ ಊರಿಗೆ ಹೋಗುತ್ತಿದ್ದ ಪ್ರೇಮಿಗಳಿಬ್ಬರು ಟ್ರೈನು ಹೊರಡಲು ಸಮಯವಿದ್ದುದರಿಂದ ಕೈಯಲ್ಲಿ ದೊಡ್ಡ ದೊಡ್ಡ ಲಗೇಜುಗಳನ್ನು ಹಿಡಿದು ಸಿನಿಮಾ ನೋಡಲು ಬಂದಿದ್ದರು. ಅವರೇನಾದರೂ ರೈಲ್ವೇ ಸ್ಟೇಷನ್ನಿನಲ್ಲಿ ಇಷ್ಟು ಲಗೇಜುಗಳೊಂದಿಗೆ ಕುಳಿತಿದ್ದರೆ, ಎಲ್ಲಿಗೋ ಓಡಿಹೋಗಲು ತಯಾರಾದವರಂತೆ ಕಾಣುತ್ತಿದ್ದರು. ಬಹುಶಃ ಅವರು ಹೀಗೆ ರಜೆಗೆ ಹೋಗುವುದು ಅದೇ ಮೊದಲ ಸಲವಾಗಿರಲಿಲ್ಲ. ಟಾಕೀಸಿನ ಕತ್ತಲಲಿ ಅಕ್ಕಪಕ್ಕದಲಿ ಕುಳಿತಾಗ ಮುತ್ತು ನೀಡಲು ಎಷ್ಟು ಡಿಗ್ರಿಯವರೆಗೆ ತಿರುಗಬೇಕು, ಸೊಂಟದಲ್ಲಿ ಕೈ ಜಾರಿಸಲು ಸೀಟಿನಲ್ಲಿ ಎಷ್ಟು ಇಂಚು ಕೆಳಗೆ ಜಾರಬೇಕು ಎಂಬ ಸಂಪೂರ್ಣ ಲೆಕ್ಕಾಚಾರಗಳು ಇದ್ದಂತಿತ್ತು. ರಜೆ ಮುಗಿಯುವವರೆಗೆ ಅದೆಷ್ಟು ದಿನಗಳ ಕಾಲ ದೂರವಿರಬೇಕಿತ್ತೋ ಏನೋ ಸಿನಿಮಾ ಪ್ರಾರಂಭವಾದ ಕೂಡಲೇ ಇಬ್ಬರೂ ಅಷ್ಟೂ ದಿನಗಳಿಗಾಗುವಷ್ಟು ನೆನಪುಗಳನ್ನು ಕಲೆಹಾಕತೊಡಗಿದರು. ಅವನ ಕೈಬೆರಳುಗಳು ಯುದ್ಧಕ್ಕೆ ಹೊರಟ ಕಾಲಾಳುಗಳಂತೆ ಅವಳ ದೇಹದ ಮೂಲೆ ಮೂಲೆಗಳನ್ನೆಲ್ಲಾ ಆಕ್ರಮಿಸುತ್ತಿರಲು, ಆತ ನೆನಪುಗಳನ್ನು ದೋಚುತ್ತಾ ಶ್ರೀಮಂತನಾದನು, ಶರಣಾದ ಅವಳು ಯಾವ ಪ್ರತಿರೋಧವಿಲ್ಲದೇ ಬೆರಳುಗಳು ಬಂದಲ್ಲಿಗೆ ದಾರಿ ಮಾಡಿಕೊಟ್ಟು ತನ್ನನ್ನೇ ಅರ್ಪಿಸಿಕೊಂಡು ಅವನ ಸಾಮಂತಳಾದಳು. ಸಿನಿಮಾವಿನ್ನೂ ಮುಗಿದಿರಲಿಲ್ಲ, ಆದರೆ ಟ್ರೈನಿಗೆ ಸಮಯವಾಗಿತ್ತು. ಇಬ್ಬರೂ ನಡುವಿನಲ್ಲೆ ಎದ್ದು ಹೊರಟರು. ಕೈಲಿದ್ದ ಲಗೇಜಿನ ಜೊತೆಗೆ ಎದೆಯೊಳಗೆ ನೂರಾರು ನಾಟಿ ನೆನಪುಗಳ ಲಗೇಜು ಭರ್ತಿಯಾಗಿತ್ತು.

ಕಥೆ ೪

ನನ್ನಲ್ಲಿಗೆ ಬರುವವರು ಪ್ರೇಮಿಗಳಷ್ಟೇ ಅಲ್ಲ. ಒಮ್ಮೊಮ್ಮೆ ಮದುವೆಯಾದ ದಂಪತಿಗಳು ಇಲ್ಲಿ ಬಂದು ಕೂರುವುದಿದೆ. (ಬೇರೆ ಬೇರೆಯವರ ಜೊತೆಗೆ ಮದುವೆಯಾಗಿದ್ದವರೂ ಬರುವುದುಂಟು, ಅದರ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ) ಕಳೆದ ತಿಂಗಳು ನವವಿವಾಹಿತರಿಬ್ಬರು ಬಂದಿದ್ದರು. ಹೊಸದಾಗಿ ಮದುವೆಯಾಗಿದ್ದರಲ್ಲವೇ, ಅತ್ತೆ ಮನೆಯಲ್ಲಿ ಬಯಸಿದ ಏಕಾಂತ ಸಿಕ್ಕಂತಿರಲಿಲ್ಲ. ಅವರಿಬ್ಬರ ಹಣೆಬರಹದಲ್ಲಿ ಹನಿಮೂನು ಬರೆದಂತಿರಲಿಲ್ಲ. ದೇವಸ್ಥಾನಕ್ಕೆ ಪೂಜೆಗೋ, ಆಸ್ಪತ್ರೆಯ ಚೆಕಪ್ಪಿಗೋ ಹೋಗುವೆವೆಂದು ಹಳೆ ಸಿನಿಮಾದವರ ಹಾಗೆ ಸುಳ್ಳು ಹೇಳಿ ಬಂದಂತಿತ್ತು. ಹೆಂಡತಿಯಿನ್ನೂ ಚಿಕ್ಕವಳು. ಚೂರು ಬಾಯಿಬಡುಕಿ, ಗಂಡ ಮೂವತ್ತು ದಾಟಿದ ಮೌನೇಶ್ವರ. ಇಬ್ಬರಲ್ಲೂ ಆಗಷ್ಟೇ ಸಲುಗೆ ಮೊಳಕೆ ಹೊಡೆದು ಬೆಳೆಯುತ್ತಿತ್ತು. ಅವಳಿನ್ನು ಅವನನ್ನು ಏನೆಂದು ಕರೆಯಬೇಕೆಂದು ನಿರ್ಧರಿಸಿದಂತಿರಲಿಲ್ಲ. ಅದರ ಬಗ್ಗೆಯೇ ಚರ್ಚೆ ನೆಡೆಯುತ್ತಿತ್ತು. ಅಷ್ಟರಲ್ಲಿ ಸಿನಿಮಾ ಶುರುವಾಯಿತು. ನೋಡಿದರೆ ಸಿನಿಮಾದಲ್ಲಿದ್ದ ಹೀರೋ ಹೆಸರೂ, ಪಕ್ಕದ ಸೀಟಿನಲ್ಲಿ ಕುಳಿತಿದ್ದ ಹೀರೋ ಹೆಸರೂ ಎರಡೂ ಒಂದೇ. ಸಿನಿಮಾದಲ್ಲಿ ಅವನ ಹೆಸರು ಬಂದಾಗಲೆಲ್ಲಾ ಇವಳೂ ಅದೇ ಧಾಟಿಯಲ್ಲಿ ಅವನ ಹೆಸರನ್ನು ಕೂಗುತ್ತಾ ರೇಗಿಸತೊಡಗಿದಳು. ಗಂಡ ನೋಡುವ ತನಕ ನೋಡಿ, ಅವಳನ್ನು ಹತ್ತಿರಕ್ಕೆ ಎಳೆದುಕೊಂಡು ಮುತ್ತಿಟ್ಟುಬಿಟ್ಟ. ಇದನ್ನು ನಿರೀಕ್ಷಿಸದ ಅವಳಿಗೆ ಒಮ್ಮೆಲೆ ರೋಮಾಂಚನವಾಯಿತು. ಮಾತು ನಿಂತುಹೋಯಿತು. ಅಮ್ಮನ ಮುಂದೆ ನಿಂತು ಮಾತನಾಡಲೂ ಹೆದರುವ ತನ್ನ ಗಂಡನಿಗೆ ಇಷ್ಟೊಂದು ಧೈರ್ಯವೇ ಎನ್ನಿಸಿತು. ಅವಳ ನಾಚಿದ್ದನ್ನು ಕಂಡು ಒಳಗೊಳಗೆ ಹಿಗ್ಗಿದ ಪತಿಮಹಾಶಯ ಕೈಯನ್ನು ಚಾಚಿ ಕೆನ್ನೆಯ ಬಳಿಗೆ ತಂದಾಗ ಅದನ್ನು ಎರಡು ಕೈಗಳಲ್ಲಿ ಕೆಳಗೆ ತಂದು ಉಳಿದದ್ದನ್ನು ಮನೆಯಲ್ಲಿ ಮುಂದುವರೆಸುವಂತೆ ಕಣ್ಣಲ್ಲೇ ಬೇಡಿಕೊಂಡಳು ಹೆಂಡತಿ. ಆತ ತನ್ನ ತಾಕತ್ತು ತೋರಿಸಿದವನಂತೆ, ಆಯ್ತು ಎನ್ನುತ್ತಾ ಮೀಸೆ ತಿರುವಿ ಸಿನಿಮಾ ನೋಡತೊಡಗಿದ, ಅವಳು ಮನಸ್ಸಿನಲ್ಲೇ ಮನೆ ದೇವರನ್ನು ನೆನಪಿಸಿಕೊಂಡಿದ್ದಳು.

ನಿಮಗೆ ಈ ಕಥೆಗಳು ಹೊಸದಾಗಿದ್ದರೇ ನಿಮ್ಮನ್ನು ಒಂದು ಪ್ರಶ್ನೆ ಕಾಡುತ್ತಿರಬಹುದು, ನನ್ನಲ್ಲಿ ಬಂದು ಕುಳಿತ ಮಾತ್ರಕ್ಕೆ ಅವರೇನು ಅದೃಷ್ಯರಾಗಿಬಿಡುತ್ತಾರಾ? ನಾನೇನು ಮಾಯಾ ಕುರ್ಚಿಯಾ ಎಂದು. ಖಂಡಿತ ಇಲ್ಲ. ನನ್ನನ್ನು ಹಾಗೆ ಮಾಯಾ ಕುರ್ಚಿಯೆಂದುಕೊಂಡು ಕುಳಿತು ಸಿಕ್ಕಿಬಿದ್ದವರೂ ಇದ್ದಾರೆ. ಅದೊಮ್ಮೆ ಪಕ್ಕದಲ್ಲಿ ಸೀನಿಯರ್ ಸಿಟಿಜನ್ ಒಬ್ಬರು ಕುಳಿತಿದ್ದಾರೆಂಬ ಪರಿವೆಯೂ ಇಲ್ಲದೇ ಯೌವನದ ಹೊಳೆ ಹರಿಸುತ್ತಿದ್ದ ಜೋಡಿಯೊಂದಕ್ಕೆ ಅಂಕಲ್ ಇಡೀ ಟಾಕೀಸಿಗೆ ಕೇಳುವಂತೆ ಉಗಿದು ಉಪ್ಪು ಹಾಕಿದ್ದರು. ಹೊಳೆಗೆ ಅಣೆಕಟ್ಟು ಕಟ್ಟಿದ್ದರು. ಇನ್ನೊಮ್ಮೆ ಸಿನಿಮಾದ ಕ್ಲೈಮ್ಯಾಕ್ಸಿನ ಹಿನ್ನಲೆ ಸಂಗೀತದ ಹಿನ್ನಲೆಯಲ್ಲಿ ಪ್ರೇಮಿಗಳು ಕ್ಲೈಮ್ಯಾಕ್ಸ್ ತಲುಪುತ್ತಿದ್ದ ಸದ್ದುಗಳು, ಇದ್ದಕ್ಕಿದ್ದಂತೆ ಸಂಗೀತ ನಿಂತಾಗ ಚಿತ್ರಮಂದಿರದಲೆಲ್ಲಾ ವ್ಯಾಪಿಸಿ ಇಡೀ ಚಿತ್ರ ಮಂದಿರ ನನ್ನ ಕಡೆಗೆ ತಿರುಗಿತ್ತು. ಪ್ರೇಮಿಗಳಿಗೆ ರಸಭಂಗವಾಗಿತ್ತು. ಮೊನ್ನೆ ಮೊನ್ನೆಯಷ್ಟೇ ತುಂಬಿದ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಮುಗಿದು ಕೆಲವೇ ನಿಮಿಷದಲಿ ಲೋಕವನೇ ಮರೆತು ತುಟಿಗೆ ತುಟಿಯೊತ್ತಿದ್ದ ಪ್ರೇಮಿಗಳ ಮೇಲೆ ವಾಚ್ ಮನ್ ಕೆಂಪಣ್ಣ ಬಂದು ಟಾರ್ಚು ಬಿಟ್ಟಾಗ ಕೆಂಪಗಿದ್ದ ಆ ಹೊರರಾಜ್ಯದ ಜೋಡಿ ಮತ್ತಷ್ಟು ಕೆಂಪಾಗಿ ಹೋಗಿದ್ದರು. ಕೆಂಪಣ್ಣನಿಗೆ ಇದೆಲ್ಲಾ ಸಾಮಾನ್ಯವಾಗಿದ್ದರಿಂದ ಮೆಲ್ಲಗೆ ಗೊಣಗಿಕೊಳ್ಳುತ್ತಾ ತಾನು ಇತರೆ ಸೀಟುಗಳ ಕಡೆಗೆ ಟಾರ್ಚು ಬಿಡುತ್ತಾ ಮುಂದೆ ಹೋದ. ಆದರೆ ನಾಚಿಕೆಯಾದ ಆ ಇಬ್ಬರೂ ಅಲ್ಲಿ ಕೂರಲಾರದೇ ಅವಸರದಲ್ಲಿ ಎದ್ದು ಹೊರಗೆ ಹೊರಟು ಕತ್ತಲೆಯಲ್ಲಿ ಎತ್ತೆತ್ತಲೋ ಸಾಗಿ ಯಾರದೋ ಕಾಲೆಡವಿ ಬಿದ್ದು, ಮತ್ಯಾರದೋ ಕಾಲು ತುಳಿದು ಬಾಗಿಲಿನ ಕಡೆಗೆ ಕೆಂಪಣ್ಣನೇ ಮತ್ತೆ ಬಂದು ಬ್ಯಾಟರಿ ಬಿಟ್ಟು ಅವರಿಗೆ ಹೊರಕ್ಕೆ ದಾರಿ ತೋರಿಸಿದ್ದ.

#@#

ಹೇಳುತ್ತಾ ಹೋದರೆ, ಈ ಕಥೆಗಳಿಗೆ ಕೊನೆಯೇ ಇಲ್ಲ. ವರ್ಷಕ್ಕೆ ಎಷ್ಟು ಸಿನಿಮಾಗಳು ಬಿಡುಗಡೆಯಾಗುತ್ತವೆಯೋ ಅದರ ಹತ್ತರಷ್ಟು ಕಥೆಗಳು ನನ್ನ ಬಳಿಯಿವೆ. ಇಲ್ಲಿ ಕೂತಿದ್ದು ಎದ್ದು ಹೋದ ಸಾವಿರಾರು ಜನರ ಕಥೆಗಳು. ಇಲ್ಲಿ ಕುಳಿತಿರುವಷ್ಟು ಹೊತ್ತು ಅದು ಅವರ ಕಥೆಗಳು. ಅವರು ಎದ್ದು ಹೋದ ಮೇಲೆ ಅವರ ಕಥೆಗಳು ನನ್ನ ಕಥೆಗಳು. ನಾ ನಿಮಗೆ ಹೇಳಬೇಕಾದ ಕಥೆಗಳು. ಹೇಳದಿದ್ದರೇ ಕತ್ತಲಲ್ಲೇ ಕಳೆದು ಹೋಗುವ ಕಥೆಗಳು.

ಸದ್ಯಕ್ಕಿಷ್ಟು ಸಾಕು. ಸಿನಿಮಾ ಮತ್ತೆ ಶುರುವಾಗುತ್ತಿದೆ. ಅಗೋ, ಆ ಜೋಡಿ ಪಾಪ್‌ಕಾರ್ನು, ಕೂಲ್‌ಡ್ರಿಂಕು ಹಿಡಿದು ಇತ್ತಲೇ ಬರುತ್ತಿದೆ. ಈ ಏಸಿಯ ಚಳಿಯಲ್ಲೂ ತಾವು ಬೆಚ್ಚಾಗಾಗಿ ನನ್ನನ್ನೂ ಬಿಸಿ ಮಾಡುತ್ತಾ ಮತ್ತೊಂದು ಹೊಸ ಕಥೆ ಹೇಳಲು.

Friday, November 02, 2018

ಡೈರೀಸ್ ಆಫ್ ದಾಳಿ ಪಾಪಣ್ಣ - 4


ಅಧ್ಯಾಯ – 4 – ಮತ್ತೆ ಪರಾರಿಯಾದ ಪಾಪಣ್ಣ



ಹಿಂದಿನ ಭಾಗದಲ್ಲಿ : ಪಾಪಣ್ಣನಿಗೆ ಬಸುರಿಯಾಗಿದ್ದ ಮಣಿಕರ್ಣಿಕಾಳನ್ನು ಕಾಣುವ ಬಯಕೆ ಹೆಚ್ಚಾಗಿ, ಹೆರಿಗೆಯ ಸಮಯದಲ್ಲಿ ಅವಳ ಜೊತೆಯಲ್ಲಿರಬೇಕೆಂಬ ಆಸೆಯಿಂದ, ಅದೊಂದು ರಾತ್ರಿ ಜೈಲಿನ ಗೋಡೆ ಹಾರಿ ಪಲಾಯನ ಮಾಡುತ್ತಾನೆ.

          ಗಂಟೆ ಸುಮಾರು ಮೂರು ಮುಕ್ಕಾಲಾಗಿತ್ತು. ದುರ್ಗದ ರಸ್ತೆಗಳು ನಿರ್ಜನವಾಗಿದ್ದವು. ಪಾಪಣ್ಣ ಕೋಟೆ ಬೀದಿಯನ್ನು ಸುತ್ತಿ ಬಂದು ಗೋಪಾಲ ಸ್ವಾಮಿ ಹೊಂಡದಲ್ಲಿಳಿದು ತಣ್ಣಗೆ ಕೊರೆಯುತ್ತಿದ್ದ ನೀರಿನ್ನು ಮುಖಕ್ಕೆರಚಿಕೊಂಡ. ಕೈಗೆ ಜೈಲು ಗೋಡೆಯ ತಂತಿಗಳು ಚುಚ್ಚಿದ್ದ ಗಾಯ ಚುರ್ರೆಂದಿತು. ಚಳಿ ತಾಳಲಾರದೆ ದೇವಸ್ಥಾನದ ಪಡಸಾಲೆಯಲ್ಲಿ ಹುಡುಕಿದಾಗ ಯಾವುದೋ ಹರಿದ ಕಂಬಳಿ ಸಿಕ್ಕಿತು. ಹೊದ್ದುಕೊಂಡು ಮತ್ತೆ ಹೊಂಡದ ಬದಿಯಲ್ಲಿ ಬಂದು ಕುಳಿತ. ಹಿಂದಿದ್ದ ಕೋಟೆಯ ಕಲ್ಲಿನ ನೆರಳುಗಳು ಅವನನ್ನು ಸುರಕ್ಷಿತವಾಗಿ ಬಚ್ಚಿಟ್ಟುಕೊಂಡಂತೆ ಅನ್ನಿಸಿತು. ಜೈಲಿನಲ್ಲೀಗ ಏನಾಗುತ್ತಿರಬಹುದು? ಇಷ್ಟು ಹೊತ್ತಿಗಾಗಲೇ ತಾನು ತಪ್ಪಿಸಿಕೊಂಡ ಸುದ್ದಿ ಗೊತ್ತಾಗಿರಬಹುದೇ? ನೈಟು ಡ್ಯೂಟಿಯಲ್ಲಿದ್ದ ಜಿತೇಂದ್ರ ಮತ್ತೆ ತನ್ನ ಕೋಣೆಯ ಬಳಿಗೆ ಹೋಗಿರಬಹುದೇ? ಗೊತ್ತಾದ ಕೂಡಲೇ ಮೊದಲು ಏನು ಮಾಡಿರಬಹುದು? ಜೈಲರ್ ಬಳಿ ಹೋಗಿರಬಹುದು. ಶಿವಶಂಕರ ಅರ್ಧ ನಿದ್ದೆಯಲ್ಲಿಯೇ ಎದ್ದು ಜೀತೇಂದ್ರನಿಗೆ ಉಗಿದು ಉಪ್ಪು ಹಾಕುತ್ತಾ ಜೈಲಿಗೆ ಓಡಿ ಬಂದಿರಬಹುದು. ಗಂಟಲು ಕೆಟ್ಟ ಆ ಹಳೇ ಸೈರನ್ನುಗಳನ್ನು ಕೂಗಿಸಲು ಆರ್ಡರ್ ಮಾಡಿರಬಹುದು. ಬೆಚ್ಚಿ ಬಿದ್ದವನಂತೆ ಎದ್ದು ನಿಂತು ಜೈಲಿನ ಕಡೆಗೆ ನೋಡಿದ. ಜಾವದ ನಿಶ್ಯಬ್ದದ ಹೊರತಾಗಿ ಬೇರ್ಯಾವ ಸದ್ದೂ ಕೇಳಿಸಲಿಲ್ಲ.

ಬೆಳಕು ಹರಿಯಲು ಸ್ವಲ್ಪ ಸಮಯ ಬಾಕಿ ಇತ್ತು. ಪಾಪಣ್ಣನಿಗೆ ಮಣಿಕರ್ಣಿಕಾಳ ನೆನಪಾಯಿತು. ಹೇಗಿದ್ದಾಳೋ ಏನೋ, ಗಿರಿಜಾಳ ಬಸುರಿನಲ್ಲಿ ಅವಳನ್ನು ತಂಗಿಯಂತೆ ನೋಡಿಕೊಂಡಿದ್ದವಳು. ಈಗ ಅವಳ ಆರೈಕೆಗೆ ಯಾರಿದ್ದಾರೋ, ಆದಷ್ಟು ಬೇಗ ಅವಳನ್ನು ನೋಡಬೇಕು ಎಂದುಕೊಂಡ. ಆದರೆ ಅವಳ ಮನೆ ದುರ್ಗದ ಯಾವ ಭಾಗದಲ್ಲಿ ಇರಬಹುದೆಂಬ ಕಿಂಚಿತ್ ಸುಳಿಹು ಅವನಿಗಿರಲಿಲ್ಲ. ಅವಳನ್ನು ಹುಡುಕುತ್ತಾ ಊರೆಲ್ಲಾ ಅಲೆಯುವುದೂ ಸಾಧ್ಯವಿರಲಿಲ್ಲ. ಪೋಲಿಸರು ಯಾವ ಕ್ಷಣದಲ್ಲಾದರೂ ಹುಡುಕಾಟ ಶುರು ಮಾಡಬಹುದಿತ್ತು. ತಾನು ಅವರ ಕೈಗೆ ಸಿಗದಂತೆ ಮಣಿಯನ್ನು ಪತ್ತೆ ಹಚ್ಚುವುದು ಅಸಾಧ್ಯವಾಗಿತ್ತು. ಯೋಚಿಸುತ್ತಾ ಕುಳಿತ ಪಾಪಣ್ಣನಿಗೆ ಉಪಾಯವೊಂದು ಹೊಳೆಯತು. ಇಡೀ ಚಿತ್ರದುರ್ಗಕ್ಕೆ ಇದ್ದದ್ದೊಂದು ಸರ್ಕಾರಿ ಆರೋಗ್ಯ ಕೇಂದ್ರ. ದುರ್ಗದಲ್ಲೇ ಇದ್ದಳಾದರೆ ಬಸುರಿಯಾಗಿದ್ದ ಮಣಿಕರ್ಣಿಕಾ ಅಲ್ಲಿಗೆ ಔಷಧಿಗಾಗಿ ಬರಲೇಬೇಕಿತ್ತು. ತಾನಲ್ಲಿಗೆ ರೋಗಿಯಾಗಿ ಹೋಗಿ ಹಾಸಿಗೆ ಹಿಡಿದು ಮಲಗಿದರೆ ಮಣಿ ತನಗೆ ಸಿಕ್ಕೇ ಸಿಗುತ್ತಾಳೆ ಎಂದುಕೊಂಡು ಬೆಳಕು ಹರಿಯುವ ತನಕ ಕಾದು ದೇವರಿಗೆ ಕೈಮುಗಿದು, ಆಸ್ಪತ್ರೆಯ ಕಡೆಗೆ ಹೊರಟ.

ಜೈಲಿನಲ್ಲಿದ್ದಾಗಲೇ ಬಡಕಲಾಗಿ ರೋಗಿಯಂತಾಗಿದ್ದ ಪಾಪಣ್ಣನಿಗೆ ಆಸ್ಪತ್ರೆಯಲ್ಲಿ ದಾಖಲಾಗುವುದೇನು ಹೆಚ್ಚು ಕಷ್ಟವಾಗಲಿಲ್ಲ. ಬಹಳ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದೇನೆಂದ್ದು ಡಾಕ್ಟರ ಮುಂದೆ ಬಿದ್ದು ಒದ್ದಾಡಿದಾಗ ಔಷಧಿ ಕೊಟ್ಟು ಎರಡು ದಿನದ ಮಟ್ಟಿಗೆ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಯಿತು. ಎರಡು ದಿನ ನಾಲ್ಕು ದಿನವಾಗಿ ವಾರವೇ ಕಳೆಯಿತು. ಸರ್ಕಾರಿ ಆಸ್ಪತ್ರೆಯಾದ್ದರಿಂದ ಯಾರೂ ಅಷ್ಟಾಗಿ ಪಾಪಣ್ಣನ ಬಗ್ಗೆ ಅಷ್ಟು ಚಿಂತೆ ಮಾಡಿದಂತೆ ಕಾಣಲಿಲ್ಲ. ಆದರೆ ಪಾಪಣ್ಣನಿಗೆ ಮಣಿಕರ್ಣಿಕಾಳದ್ದೇ ಚಿಂತೆಯಾಗಿತ್ತು, ಅವಳೇನಾದರೂ ತನ್ನ ಸಂಬಂಧಿಕರ ಊರಿಗೆ ಹೋಗಿದ್ದರೆ? ಏಕೋ ಆಸ್ಪತ್ರೆಯಲ್ಲಿ ಕಾಯುವುದು ವ್ಯರ್ಥವೆನ್ನಿಸಿತು. ಅದಲ್ಲದೇ ಆಸ್ಪತ್ರೆ ಅಷ್ಟು ಸುರಕ್ಷಿತವೂ ಆಗಿರಲಿಲ್ಲ. ಆದಷ್ಟು ಬೇಗ ಬೇರೇನಾದರೂ ಮಾಡಬೇಕೆಂದು ಯೋಚಿಸತೊಡಗಿದ.

ಮರುದಿನ ಸಂಜೆ ಆಸ್ಪತ್ರೆಯ ದಾದಿಯರು ಮನೆಗೆ ಹೊರಡುವ ಸಮಯ. ಪಾಪಣ್ಣ ಡಾಕ್ಟರು ಕೊಟ್ಟು ಹೋದ ಗುಳಿಗೆಯನ್ನು ಕಿಟಕಿಯಿಂದ ಆಚೆಗೆ ಎಸೆದು ಇತ್ತ ತಿರುಗಬೇಕು. ಎದುರಿನಿಂದ ಸಾಕ್ಷಾತ್ ಮಣಿಕರ್ಣಿಕಾಳೇ ನೆಡೆದು ಬರುತ್ತಿದ್ದಳು. ಪಾಪಣ್ಣನಿಗೆ ಕಣ್ಣಿಂದಲೇ ನಂಬಲಾಗಲಿಲ್ಲ. ತನ್ನ ರೋಗವೆಲ್ಲಾ ವಾಸಿಯಾದವನಂತೆ ಮೈಕೊಡವಿ ಮೇಲೆದ್ದು ಬಾಗಿಲ ಬಳಿಗೆ ಓಡಿದ. ಮಣಿಕರ್ಣಿಕಾ ಒಳಗೆ ಬಂದಳು. ತುಸು ದಪ್ಪವೆನ್ನಿಸಿದರೂ, ಮೈ ಕೈ ತುಂಬಿಕೊಂಡು ಲಕಲಕ ಹೊಳೆಯುತ್ತಿದ್ದಳು. ಅವಳನ್ನು ಕಂಡ ಪಾಪಣ್ಣನಿಗೆ ಸ್ವರ್ಗವೇ ಕಂಡಂತಾಗಿ ಮೈಮರೆತು ನಿಂತ. ಮಣಿಕರ್ಣಿಕಾ ಒಳಗೆ ಬಂದು ಡಾಕ್ಟರ ಬಳಿ ಮಾತನಾಡಿ ಔಷಧಿ ತೆಗೆದುಕೊಂಡವಳು ದಾದಿಯರೊಡನೆ ಸ್ವಲ್ಪ ಹೊತ್ತು ಹರಟೆ ಹೊಡೆದು ನಂತರ ಹೊರಗೆ ಹೊರಟಳು. ಅವಳು ಬಾಗಿಲಿನಿಂದ ಹೊರಗೆ ಹೋದ ಮೇಲೆ ಹತ್ತು ಎಣಿಸಿ ತಾನೂ ಹೊರಬಿದ್ದು ಅವಳನ್ನು ಹಿಂಬಾಲಿಸತೊಡಗಿದ.

ಆದರೆ ಖಾಕಿ ಬಟ್ಟೆಯಲ್ಲಿದ್ದ ಪೇದೆಗಳಿಬ್ಬರು ಆತನ ಹಿಂದೆ ಇದ್ದದ್ದು ಅವನಿಗೆ ತಿಳಿಯಲೇ ಇಲ್ಲ.

***

ಪಾಪಣ್ಣ ಜೈಲಿನಿಂದ ತಪ್ಪಿಸಿಕೊಂಡ ಸುದ್ದಿಯನ್ನು ಕೇಳಿ ಶಿವಶಂಕರನಿಗೆ ತಲೆ ಕೆಟ್ಟು ಹೋಯಿತು, ಆ ಸುದ್ದಿ ಹೊರಗೆ ತಲುಪದಂತೆ ಪಾಪಣ್ಣನನ್ನು ಹುಡುಕಲು ಏರ್ಪಾಡು ಮಾಡಿದ್ದ. ಇದ್ಯಾವುದು ಅರಿಯದ ಮಣಿಕರ್ಣಿಕಾ ಮುಂದಿನ ಭಾನುವಾರ ಬಿರಿಯಾನಿ ಮಾಡಿ ಸರ್ವೇಶನ ಕೈಲಿ ಜೈಲಿಗೆ ಕೊಟ್ಟು ಕಳುಹಿಸಿದ್ದಳು. ಶಿವಶಂಕರ ಪಾಪಣ್ಣನನ್ನು ಭೇಟಿ ಮಾಡಲು ಸಾಧ್ಯವಿಲ್ಲವೆಂದು ಸಬೂಬು ಹೇಳಿ ಬಿರಿಯಾನಿಯನ್ನು ತಾನೇ ತಿಂದು ಸರ್ವೇಶನಿಗೆ ಡಬ್ಬಿ ವಾಪಸ್ಸು ಕೊಟ್ಟು ಆತನ ಹಿಂದೆ ಪೇದೆಗಳನ್ನು ಬಿಟ್ಟಿದ್ದ. ಅವನನ್ನು ಹಿಂಬಾಲಿಸಿದ ಪೇದೆಗಳು ಪಾಪಣ್ಣನಿಗೆ ಬಿರಿಯಾನಿ ಕಳಿಸಿದ್ದು ಮಣಿಕರ್ಣಿಕಾ ಎಂದು ತಿಳಿದಾಗ ಕೆಂಡಮಂಡಲನಾಗಿದ್ದ. ನಿಧಾನವಾಗಿ ಅವನಿಗೆ ಎಲ್ಲವೂ ಅರ್ಥವಾಯಿತು. ಮಣಿಯ ಬಸುರಿಗೆ ಪಾಪಣ್ಣನೇ ಕಾರಣವಾದರೆ ಆತ ಅವಳನ್ನು ಕಾಣಲು ಬಂದೇ ಬರುವನೆಂದು ಊಹಿಸಿ ಮಣಿಯ ಮನೆಯ ಬಳಿ ಪೇದೆಗಳನ್ನು ಬಿಟ್ಟಿದ್ದ. ಅವಳೆಲ್ಲಿಗೆ ಹೋದರೂ ಬಾಲದಂತೆ ಹಿಂಬಾಲಿಸುತ್ತಿದ್ದ ಪೇದೆಗಳಿಗೆ ಆಸ್ಪತ್ರೆಯ ಬಳಿ ಮಣಿಯ ಹಿಂಬಾಲಿಸಿದ ಪಾಪಣ್ಣನನ್ನು ಕಂಡು ಲಾಟರಿ ಹೊಡೆದಂತಾಗಿ ಲಾಟಿ ತಿರುಗಿಸುತ್ತಾ ಖುಷಿಯಿಂದ ಅವನನ್ನು ಹಿಂಬಾಲಿಸಿದ್ದರು.

***
ಮಣಿಕರ್ಣಿಕಾ ರಸ್ತೆ ಬದಿಯಲ್ಲಿ ನೆಡೆಯುತ್ತಿದ್ದವಳು, ಇದ್ದಕ್ಕಿದ್ದಂತೆ ನಿಂತು ಏನೋ ನೆನಪಾದವಳಂತೆ ಹಿಂದಕ್ಕೆ ತಿರುಗಿ ಬಂದು ರಸ್ತೆ ಬದಿಯಲ್ಲಿ ಮಾರುತ್ತಿದ್ದ ಮಾವಿನಕಾಯಿ ವ್ಯಾಪಾರ ಮಾಡತೊಡಗಿದಳು. ಪಾಪಣ್ಣ ಅವಳಿಗೆ ಕಾಣದಂತೆ ಮರೆಯಾಗಿ ನಿಂತ. ಹಿಂದೆ ಇದ್ದ ಪೇದೆ ಸತೀಶ ಇದೇ ಸರಿಯಾದ ಸಮಯವೆಂದು ಹಿಡಿಯಲು ಮುನ್ನುಗ್ಗಿದ.

ಆದರೆ ಅವನನ್ನು ತಡೆದ ಮತ್ತೊಬ್ಬ ಪೇದೆ ಚೆನ್ನಪ್ಪ ‘ನಾವಿಬ್ರೇ ಅವನನ್ನ ಹಿಡಿಯೋದ್ ಸರಿಯಾಗಲ್ಲ. ಓಡೋದ್ರೆ ಕಷ್ಟ’ ಹೆಂಗೂ ಅವನು ಆಯಮ್ಮನ ಮನೆಗೆ ಹೋಗ್ತಾವ್ನೇ. ನಾನು ಹಿಂದೆ ಹೋಗ್ತೀನಿ’ ನೀನು ಹೋಗಿ ಸಾಹೇಬ್ರನ್ನ, ನಾಲ್ಕೈದು ಜನನ್ನ ಕರ್ಕಂಡ್ ಬಾ’ ಎಂದ.

‘ಏ ಒಬ್ಬನ್ ಹಿಡ್ಯಕ್ಕೆ, ನಾಲ್ಕೈದು ಜನಾನಾ?, ಬಾರಯ್ಯ ನಾನಿದಿನಿ’ ಎಂದು ಮುಂದೆ ಹೆಜ್ಜೆ ಇಟ್ಟ ಸತೀಶ.

‘ಹೇಳ್ದಷ್ಟ್ ಮಾಡಲೇ, ಅವನತ್ರ ಏನಾದ್ರೂ ಕತ್ತಿಗಿತ್ತಿ ಇದ್ದು, ಹೊಟ್ಟೆಗೆ ಹೆಟ್ಬುಟ್ರೆ ಏನ್ ಮಾಡ್ತಿಯಾ?’ ಎಂದು ಚೆನ್ನಪ್ಪ.
ಸತೀಶ ಏನೋ ಯೋಚಿಸಿ ‘ನೀನೇ ಹೋಗು, ನಾನೇ ಫಾಳೋ ಮಾಡ್ತಿನಿ’ ಎಂದ.

‘ನಾನ್ ಸೀನಿಯರ್ರು. ನಾ ಹೇಳಿದ್ ನೀನ್ ಮಾಡಬೇಕು, ಹೋಗ್ತಾ ಇರು’ ಎಂದು ದರ್ಪದಿಂದ ಗದರಿದ.
ಸತೀಶ ಚೆನ್ನಪ್ಪನನ್ನು ಬೈದುಕೊಳ್ಳತ್ತಾ ಜೈಲಿನ ಕಡೆಗೆ ಹೊರಟ. ಮಣಿಕರ್ಣಿಕಾ ಮಾವಿನ ಕಾಯಿ ಕೊಂಡು ಮನೆ ಕಡೆಗೆ ನೆಡೆಯತೊಡಗಿದಳು. ಮುಂದೆ ಮಣಿ, ಅವಳ ಹಿಂದೆ ಪಾಪಣ್ಣ, ಆತನ ಹಿಂದೆ ಪೇದೆ ಚೆನ್ನಪ್ಪ.

ಕತ್ತಲು ನಿಧಾನವಾಗಿ ಆವರಿಸುತ್ತಿತ್ತು. ಮನೆ ತಲುಪಿದ ಮಣಿಕರ್ಣಿಕಾ ಹಣೆಯ ಮೇಲಿನ ಬೆವರು ಒರೆಸುತ್ತಾ ಬಾಗಿಲು ತಟ್ಟಿದಳು. ಬಾಗಿಲು ತೆಗೆದ ಸರ್ವೇಶ ಅವಳ ಕೈಲಿದ್ದ ಬ್ಯಾಗು ತೆಗೆದುಕೊಂಡು ಒಳಗೆ ಹೋದ. ಮಣಿ ಒಳಗೆ ಹೋಗಿ ಇನ್ನೇನು ಬಾಗಿಲು ಹಾಕಬೇಕು, ಪಾಪಣ್ಣ ಹಿಂದಿನಿಂದ ಸೀದಾ ಒಳಗೆ ನುಗ್ಗಿ ಬಾಗಿಲು ಮುಚ್ಚಿದ. ಮಣಿ ಕಿಟಾರನೇ ಕಿರುಚಿದಳು. ಸರ್ವೇಶ ‘ಏಏಏನಾಯ್ತಕ್ಕೋ..’ ಎಂದು ಕೂಗುತ್ತಾ ಬ್ಯಾಗು ಕೈಯಲ್ಲಿ ಹಿಡಿದೇ ಹೊರಗೆ ಓಡಿಬಂದ. ಪಾಪಣ್ಣ ಅವಳ ಬಾಯಿಯನ್ನು ಮುಚ್ಚಿಹಿಡಿದು ಹೊದ್ದುಕೊಂಡಿದ್ದ ಕಂಬಳಿಯನ್ನು ಕೆಳಗೆ ಬಿಟ್ಟ. ಇಬ್ಬರಿಗೂ ಪಾಪಣ್ಣನನ್ನು ಕಂಡು ದಿಗ್ಭ್ರಮೆಯಾಯಿತು. ಮಣಿಯಂತೂ ಮಾತೇ ಹೊರಡದೇ ಅವನನ್ನು ತಬ್ಬಿ ಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಪಾಪಣ್ಣ ನಿಧಾನವಾಗಿ ಅವಳ ಬೆನ್ನು ಸವರುತ್ತಾ ಸಮಾಧಾನ ಮಾಡಿದ. ಹಿಂದೆ ನಿಂತಿದ್ದ ಸರ್ವೇಶನನ್ನು ಕಂಡು ಮುಗುಳ್ನಕ್ಕ.

ಮಣಿ ಸುಧಾರಿಸಿಕೊಂಡು ಕಣ್ಣೀರು ಒರೆಸಿಕೊಳ್ಳುತ್ತಾ ಹಿಂದಕ್ಕೆ ಬಂದು ಪಾಪಣ್ಣನನ್ನು ಕಣ್ತುಂಬಾ ನೋಡಿದಳು. ಕೊನೆಯ ಬಾರಿ ಜೈಲಿನಲ್ಲಿ ಎಲ್ಲಾ ಕಳೆದುಕೊಂಡಂತಿದ್ದ ಪಾಪಣ್ಣ ಈಗ ಸಾಕಷ್ಟು ಬದಲಾಗಿದ್ದ, ಗಡ್ಡ ಮೀಸೆಗಳು ಹಾಗೆಯೇ ಇದ್ದರೂ ಕಣ್ಣುಗಳಲ್ಲಿ ಮಣಿಕರ್ಣಿಕಾಳನ್ನು ಕಂಡು ಹೊಸದೊಂದು ಸಂತಸವಿತ್ತು. ಮಣಿಯ ಕಣ್ಣುಗಳಲ್ಲೂ ಪಾಪಣ್ಣನನ್ನು ಕಂಡು ಅದೇ ಸಂತಸ ಪ್ರತಿಫಲಿಸುತ್ತಿತ್ತು. ಆ ಸಂತೋಷದ ನಡುವೆಯೂ ಅವಳ ಮನದಲ್ಲಿ ನೂರಾರು ಪ್ರಶ್ನೆಗಳು ಬಂದವು,

ಆದರೆ ಮೊದಲು ನಾಲಿಗೆಯಿಂದ ಹೊರಬಿದ್ದಿದ್ದು ‘ಹೇಗೆ ಬಂದಿರಿ?’

ಪಾಪಣ್ಣ ಅವಳ ಭುಜವನ್ನು ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ‘ನಿಮ್ಮುನ್ ನೋಡ್ಬೇಕ್ ಅನ್ನುಸ್ತು, ಸೀದಾ ಬೇಲಿ ಹಾರ್ಕಂಡ್ ಬಂದ್ಬುಟೆ’ ಎಂದ.

ಮಣಿ ನಾಚುತ್ತಾ ತಲೆತಗ್ಗಿಸಿದಳು. ಭುಜದ ಮೇಲಿದ್ದ ಪಾಪಣ್ಣನ ಕೈಯನ್ನು ತೆಗೆದು ತುಂಬಿದ್ದ ಹೊಟ್ಟೆಯ ಮೇಲೆ ಇರಿಸಿಕೊಂಡಳು. ಏಕೋ ಗೊತ್ತಿಲ್ಲ, ಪಾಪಣ್ಣನಿಗೆ ಅದನ್ನು ಮುಟ್ಟಿದ ಕೂಡಲೇ ಮೊದಲ ಹೆಂಡತಿ ಗಿರಿಜಾಳ ನೆನಪಾಯಿತು. ಅವಳ ಹೊಟ್ಟೆಯನ್ನು ಹೀಗೆ ಜೈಲಿನ ಸರಳುಗಳ ನಡುವಿನಿಂದ ಸವರಿದ್ದು, ಆಮೇಲೆ ಮಗು ಜನಿಸಿದಾಗ ಖುಷಿಪಟ್ಟಿದ್ದು, ಮತ್ತೆ ಅದು ಸತ್ತಾಗ ಕಣ್ಣೀರಿಟ್ಟಿದ್ದು ಎಲ್ಲವೂ ಒಮ್ಮೆ ಕಣ್ಮುಂದೆ ಬಂದು ಹೋಯಿತು. ಅವಳ ಮುಂದೆ ಕುಸಿದು ಕುಳಿತು ‘ನಿಮ್ಗೆ ಹೆರಿಗೆ ಆಗೋಗಂಟ ನಿಮ್ ಜೊತೆಗೆ ಇರ್ತಿನಿ ಮೇಡಮ್ಮೋರೆ, ಎಲ್ಗೂ ಹೋಗಕಿಲ್ಲಾ, ಎಂದು ಅವಳ ಒಡಲನ್ನು ತಬ್ಬಿಕೊಂಡು ಕಣ್ಣಿರಿಟ್ಟ.

ಆಗಲೇ ಬಾಗಿಲು ತಟ್ಟಿದ ಸದ್ದಾಯಿತು. ಪಾಪಣ್ಣ ಬೆಚ್ಚಿಬಿದ್ದ.

ಹಿಂದೆಯೆ ಚೆನ್ನಪ್ಪನ ಧ್ವನಿ ಬಂದಿತು ‘ಪಾಪಣ್ಣ ಒಳಗಿದ್ಯಾ ಅಂತ ಗೊತ್ತು, ಬಾಗ್ಲು ತಗಿ’

ಶಿವಶಂಕರ, ಮತ್ತು ಇನ್ನಷ್ಟು ಜನ ಪೋಲಿಸರನ್ನು ಕರೆದುಕೊಂಡು ಬರಲು ಹೊರಟ ಸತೀಶನಿಗೆ ಚೆನ್ನಪ್ಪ ತಾನೊಬ್ಬನೇ ಪಾಪಣ್ಣನನ್ನು ಹಿಡಿದು ಸಾಹೇಬರಿಂದ ಶಹಬಾಸಗಿರಿ ತೆಗೆದುಕೊಳ್ಳುವ ಪ್ಲಾನು ಮಾಡಿದ್ದಾನೆಂಬ ಆಲೋಚನೆ ಬಂದಿತು. ‘ಛೇ, ತಾನು ಮೂರ್ಖನಂತೆ ಅವನೊಬ್ಬನನ್ನೇ ಬಿಟ್ಟು ಬರಬಾರದಿತ್ತು’ ಎಂದುಕೊಂಡು ಅರ್ಧ ದಾರಿಯಲ್ಲೇ ವಾಪಸ್ಸು ಬಂದಿದ್ದ. ಚೆನ್ನಪ್ಪನಿಗೆ ಅವನ ಈ ಉದ್ಧಟತನವನ್ನು ಕಂಡು ಮೈಯೆಲ್ಲಾ ಉರಿದರೂ ಹೆಚ್ಚು ಸಮಯವಿಲ್ಲದೇ ಇದ್ದಿದ್ದರಿಂದ, ಕೂಡಲೇ ಏನಾದರೂ ಮಾಡಬೇಕೆಂದು ಮನೆಯ ಬಾಗಿಲು ತಟ್ಟಿದ್ದ.

‘ಮಣಿಯಮ್ಮ ಬಾಗ್ಲು ತೆಗೆದುಬಿಡು, ಆಟ ಆಡ್ಬೇಡ’ ಮತ್ತೆ ಕೂಗುತ್ತಾ ಬಾಗಿಲು ಬಡಿದ ಚೆನ್ನಪ್ಪ.

ಪಾಪಣ್ಣನ ಮೈಯಲ್ಲ ಬೆವತು ಹೋಯಿತು. ಕೂಡಲೇ ಮೇಲೆದ್ದು ಅತ್ತಿತ್ತ ನೋಡುತ್ತಾ ಮೆಲ್ಲಗೆ ಕೇಳಿದ, ‘ಬಚ್ಚಿಟ್ಕಳಕ್ ಎಲ್ಲಾದ್ರೂ ಜಾಗ ಐತಾ?’

ಮಣಿಕರ್ಣಿಕಾಳಿಗೆ ನಿಂತಲ್ಲೇ ತರತರ ನಡುಗುತ್ತಿದ್ದಳು. ‘ನೀವು ಸರೆಂಡರ್ ಆಗೋದು ಒಳ್ಳೆದು’ ಎಂದು ನಡುಗುವ ದನಿಯಲ್ಲಿ ಹೇಳಿದಳು.

ಪಾಪಣ್ಣ ಅವಳನ್ನೊಮ್ಮೆ ದಿಟ್ಟಿಸಿ ನೋಡಿ ಇಲ್ಲವೆನ್ನುವಂತೆ ತಲೆಯಾಡಿಸುತ್ತಾ ‘ಇಲ್ಲ ಮೇಡಮ್ನೋರೆ ನಿಮ್ ಹೆರಿಗೆ ಆಗೊಗಂಟ ನಾನ್ ಈ ಪೋಲಿಸ್ನೋರ ಕೈಗೆ ಸಿಗಿದಿಲಾ’ ಎಂದು ಅತ್ತಿತ್ತಾ ಓಡಾಡತೊಡಗಿದ.

‘ಸರೆಂಡರ್ ಆಗು ಪಾಪಣ್ಣ, ನಮ್ ಹತ್ರ ಬಂದೂಕಿದೆ, ಸುಟ್ಟುಬಿಡ್ತಿವಿ’ ಸತೀಶ ಹೊರಗಿನಿಂದ ಧಮಕಿ ಹಾಕಿದ.

ಅವರಿಬ್ಬರೇ ಮತ್ತೆ ಮತ್ತೆ ಮಾತನಾಡುತ್ತಿದ್ದರಿಂದ ಹೊರಗೆ ತುಂಬಾ ಜನವಿಲ್ಲವೆಂದು ಪಾಪಣ್ಣನಿಗೆ ಅರಿವಾಯಿತು. ಮಣಿಕರ್ಣಿಕಾ ಇನ್ನೂ ಅಳುತ್ತಲೇ ಇದ್ದಳು. ಏನೂ ಆಗುವುದಿಲ್ಲವೆಂದು ಅವಳಿಗೆ ಸಮಾಧಾನ ಮಾಡಿ ಸುತ್ತಮುತ್ತಲೂ ನೋಡಿದ. ಸರ್ವೇಶನ ಕೈಲಿದ್ದ ಮಾವಿನ ಕಾಯಿಯ ಚೀಲ ಕಾಣಿಸಿತು. ತಕ್ಷಣ ಏನೋ ಯೋಚಿಸಿ ಕೆಳಗೆ ಬಿದ್ದಿದ್ದ ಕಂಬಳಿಯೊಳಗೆ ಮೂರ್ನಾಲ್ಕು ದಪ್ಪದಪ್ಪ ಮಾವಿನ ಕಾಯಿ ಹಾಕಿ ಸುತ್ತಿಟ್ಟ. ಮಣಿಕರ್ಣಿಕಾಳಿಗೆ ಧೈರ್ಯ ಹೇಳಿ ಒಳಗೆ ಕಳುಹಿಸಿ ಸರ್ವೇಶನಿಗೆ ಬಾಗಿಲು ತೆಗೆಯುವಂತೆ ಹೇಳಿದ. ತಾನು ಕೈಲಿ ಮಾವಿನ ಕಾಯಿ ಹಿಡಿದು ಬಾಗಿಲ ಎದುರು ಕುಳಿತ. ಸರ್ವೇಶ ಭಯದಿಂದಲೇ ಹಿಂದೆ ಹಿಂದೆ ನೋಡುತ್ತಾ ಬಾಗಿಲು ತೆಗೆದ.

ಬಾಗಿಲು ತಳ್ಳಿ ಮೊದಲು ಒಳನುಗ್ಗಿದ ಸತೀಶನ ಮುಖಕ್ಕೆ ರಪ್ಪನೆ ಮಾವಿನ ಕಾಯಿಯೊಂದು ಬಡಿದು ಅಪ್ಪಚ್ಚಿಯಾಯಿತು. ಅವನ ಹಿಂದೆಯೇ ಒಳಗೆ ಬಂದ ಚೆನ್ನಪ್ಪನ ತಲೆಗೂ ಮಾವಿನ ಕಾಯಿ ಬಡಿಯಿತು. ಏನಾಗುತ್ತಿದೆ ಎಂದು ಅವರಿಬ್ಬರಿಗೆ ಅರಿವಾಗುಷ್ಟರಲ್ಲಿ ಮಿಂಚಿನಂತೆ ಮುನ್ನುಗ್ಗಿದ ಪಾಪಣ್ಣ ಮಾವಿನಕಾಯಿ ಸುತ್ತಿದ್ದ ಕಂಬಳಿಯನ್ನು ಬಲವಾಗಿ ಬೀಸುತ್ತಾ ಪೇದೆಗಳ ತಲೆ, ಬೆನ್ನು, ಭುಜ, ಹೊಟ್ಟೆ, ತಿಕ ಹೀಗೆ ಎಲ್ಲೆಂದರಲ್ಲಿ ಬಾರಿಸತೊಡಗಿದ. ಚೆನ್ನಪ್ಪ ಹಾಗು ಸತೀಶ ನೆಲಕ್ಕೆ ಬಿದ್ದು ನೋವಿನಿಂದ ಚೀರತೊಡಗಿದರು. ಗಲಾಟೆ ಕೇಳಿ ಮಣಿಕರ್ಣಿಕಾ ಹೊರಗೆ ಓಡಿಬಂದು ಆಶ್ಚರ್ಯದಿಂದ ಪಾಪಣ್ಣನ ಈ ಪ್ರತಾಪವನ್ನು ನೋಡುತ್ತಾ ನಿಂತಳು. ಚೆನ್ನಾಗಿ ಥಳಿಸಿದ್ದಾದ ಮೇಲೆ ಅರೆಕ್ಷಣ ಸುಮ್ಮನೇ ನಿಂತು ಮಣಿಕರ್ಣಿಕಾಳತ್ತ ನೋಡಿದ ಪಾಪಣ್ಣ ಮನೆಯಿಂದ ಹೊರಬಿದ್ದು ಕತ್ತಲೆಯಲ್ಲಿ ಓಡತೊಡಗಿದ. ಚೆನ್ನಪ್ಪ ಸತೀಶ ಸುಧಾರಿಸಿಕೊಂಡು ಮೇಲೆದ್ದು ನೋವಿನಿಂದ ನರಳುತ್ತಾ ಆತನ ಹಿಂದೆ ಓಡತೊಡಗಿದರು.

(ಮುಂದುವರೆಯುವುದು)

Saturday, August 18, 2018

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವಾ?


ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವಾ?



ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವಾ?
ಕರಣಕರಳುವ ವರವ ಮರಳಿ ಕರುಣಿಸು ಗುರುವೇ.

ಹಸಿದ ಉದರದ ಒಳಗೆ ಉಸಿರ ತುಂಬಿಸಬಹುದು
ನಿದಿರೆ ಸಲ್ಲದು ಎಂದು ಕಣ್ಣ ನಂಬಿಸಬಹುದು
ಲೋಕದಂದವ ತ್ಯಜಿಸಿ ಅಂಧನಾಗಿರಬಹುದು
ಗೋವಿಂದ, ನಿನ್ನಿಂದ ದೂರಾಗಿ ಇರಲಾಗದು

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವಾ?
ಕರಣಕರಳುವ ವರವ ಮರಳಿ ಕರುಣಿಸು ಗುರುವೇ.

ಸಖಿಯ ಒಲುಮೆಯ ನುಡಿಗೆ ಕಿವುಡನಾಗಿರಬಹುದು
ಮಾಂಸ ಮದಿರೆಗಳಿರದೆ ಪಾರ್ಟಿ ಮಾಡಲುಬಹುದು
ಜಗದ ಇರುವನೆ ಮರೆತು ಇರುಳ ತಳ್ಳಲುಬಹುದು
ಭಗವಂತ, ನನಿನ್ನಿಂದ ದೂರಾಗಿ ಇರಲಾಗದು

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವಾ?
ಕರಣಕರಳುವ ವರವ ಮರಳಿ ಕರುಣಿಸು ಗುರುವೇ.

ಅನ್ನ ನೀಡದ ಅಕ್ಷರವ ಮಣ್ಣಿಗೆಸೆಯಲುಬಹುದು
ಪದ್ಯ ಗೀಚುವ ಕೈಗೆ ಪೆನ್ಷನ್ನು ಕೊಡಬಹುದು
ಕಲಿತದೆಲ್ಲವ ಮರೆತು ಪಾಮರನಾಗಿರಬಹುದು
ಶ್ರೀಹರಿಯೆ, ನಿನ್ನಿಂದ  ದೂರಾಗಿ ಇರಲಾಗದು

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವಾ?
ಕರಣಕರಳುವ ವರವ ಮರಳಿ ಕರುಣಿಸು ಗುರುವೇ.


- ತ್ರಿವಿಕ್ರಮ 

Wednesday, June 20, 2018

ಅಳಿಯ ಅಲ್ಲ ಮಗನ ಗಂಡ


ಅಳಿಯ ಅಲ್ಲ ಮಗನ ಗಂಡ




‘ಆ ಹುಡುಗನ ಹೆಸರು ಮಂಜುನಾಥ ಅಂತ, ನಮ್ಮ ಶ್ರೀಹರಿ ಉಪನಯನದಲ್ಲಿ ನಾನವನ್ನ ಮೊದಲು ನೋಡಿದ್ದು’ ವಾಸು ಅಂಕಲ್ ಗೋಡೆಯ ಮೇಲಿದ್ದ ಶ್ರೀಹರಿಯ ಪೋಟೋವನ್ನೇ ದಿಟ್ಟಿಸಿ ನೋಡುತ್ತಾ ನೆನಪಿಸಿಕೊಂಡರು. ಆತನ ಪೋಟೋ ನೋಡುತ್ತಾ ಅವರು ಫ್ಲಾಷ್ ಬ್ಯಾಕಿಗೆ ಹೋದದ್ದು ಸಿನಿಮೀಯ ರೀತಿಯಲ್ಲಿ ಇತ್ತು. ವಸುಧಾ ಆ ಪೋಟೋ ನೋಡಿದಳು. ಆ ಪೋಟೋದಲ್ಲಿ ಶ್ರೀಹರಿಗೆ ಐದು ಆರು ವಯಸ್ಸಿರಬಹುದು. ದುಂಡು ದುಂಡಗೆ ಒಳ್ಳೆ ಬಿಳಿ ಆಲುಗಡ್ಡೆಯ ತರ ಇದ್ದ. ಮ್ಯಾಟ್ರಿಮನಿ ಸೈಟಿನಲ್ಲಿ ಹಾಕಿದ ಪೋಟೋದಲ್ಲೂ ಥೇಟು ಅದೇ ದುಂಡು ಮುಖವೇ ಇದ್ದದ್ದಲ್ಲವೇ. ವಸುಧಾ ಅದೇ ಫೋಟೋ ನೋಡುತ್ತಾ ಅವಳ ಫ್ಲಾಷ್ ಬ್ಯಾಕಿಗೆ ಹೋದಳು.

ಭಾರತ್ ಮ್ಯಾಟ್ರಿಮನಿಯಲ್ಲಿ ಮೂವತ್ತು ದಾಟಿದ್ದ ಹುಡುಗಿಯರಿಗೂ ಒಳ್ಳೊಳ್ಳೆ ಗಂಡುಗಳು ಸಿಗುತ್ತಾರೆಂದು ವಸುಧಾಳ ಸೋದರತ್ತೆ ಒತ್ತಿ ಒತ್ತಿ ಹೇಳಿ ಅಕೌಂಟ್ ಕ್ರಿಯೇಟ್ ಮಾಡಿಸಿದ್ದರು. ದಿನಪತ್ರಿಕೆಯೊಂದರಲ್ಲಿ ರಿಪೋರ್ಟರ್ ಆಗಿದ್ದ ವಸುಧಾಗೆ ಯಾವತ್ತೂ ಮದುವೆಯಾಗಬೇಕು ಎಂದು ಅನ್ನಿಸಿರಲಿಲ್ಲ. ಹಾಗಂತ ಆಗಬಾರದು ಅಂತಲೂ ಇರಲಿಲ್ಲ. ಅತ್ತೆಯ ಒತ್ತಾಯಕ್ಕೆ ಹುಟ್ಟಿದ ಅಕೌಂಟಿನಿಂದ ಪ್ರತಿದಿನವೂ ಬರುತ್ತಿದ್ದ ಇಮೇಲುಗಳನ್ನು ಕಂಡು ಅದೊಂದು ದಿನ ಹಾಗೆ ಸುಮ್ಮನೆ ಕುತೂಹಲಕ್ಕೆ ಚೆಕ್ ಮಾಡಿದ್ದಳು. ಬಂದಿದ್ದ ರಿಕ್ವೆಸ್ಟುಗಳಲ್ಲೆಲ್ಲಾ ಸ್ವಂತ ಬ್ಯೂಟಿ ಪಾರ್ಲರ್ ನೆಡೆಸುತ್ತಿದ್ದ ಬ್ರಾಹ್ಮಣ ವರ ಶ್ರೀಹರಿಯ ಪ್ರೋಫೈಲು ಇಂಟರೆಸ್ಟಿಂಗ್ ಆಗಿ ಕಂಡಿತ್ತು. ಹುಡುಗ ನೋಡಲು ರೋಜಾ ಸಿನಿಮಾದ ಅರವಿಂದ ಸ್ವಾಮಿಯಂತಿದ್ದ. ವಸುಧಾಳಿಗೆ ಇಷ್ಟವಾಯ್ತು. ಕೂಡಲೇ ಕರೆ ಮಾಡದೇ ಎರಡು ದಿನ ತನ್ನನ್ನು ತಾನೇ ಸತಾಯಿಸಿಕೊಂಡರೂ ನಂತರ ತಡೆಯಲಾರದೆ ಅವನಿಗೆ ಮೆಸೇಜ್ ಮಾಡಿದಳು. ಆದಾದ ಮೇಲೆ ಎಲ್ಲಾ ಬೇಗ ಬೇಗನೆ ನೆಡೆದು ವಾಟ್ಸಪ್ಪಿನಲ್ಲಿ ಪೋಟೋ ವಿನಿಮಯಗಳಾಗಿ ಮೂರು ವಾರ ಕಳೆದು ಶ್ರೀಮಾನ್ ಶ್ರೀಹರಿಯವರು ಕುಟುಂಬ ಸಮೇತರಾಗಿ ವಧು ಪರೀಕ್ಷೆಗೆ ಬಂದಿದ್ದರು.

ಜಾತಕ ಕೂಡಿತ್ತು. ಮಾತು ಕತೆ ನೆಡೆದಿತ್ತು. ಮಾಡಿದ್ದ ಕೇಸರಿಬಾತು ಸ್ವಲ್ಪ ಜಾಸ್ತಿಯೇ ಸಿಹಿಯಾಗಿತ್ತು. ಎಲ್ಲವೂ ಸರಿಯಾಗಿ ಜ್ಯೋಯಿಸರು ಡೀಲು ಕುದುರಿಸುವುದರಲ್ಲಿದ್ದರು. ಆಗಲೇ ಇಬ್ಬರೂ ಪ್ರೈವೇಟ್ ಆಗಿ ಮಾತನಾಡಲು ಹೋಗಿದ್ದು. ವಸುಧಾ ಮೊದಲೆ ಬಾಯಿಬಡುಕಿ. ಬಾಲ್ಕನಿಗೆ ಕಾಲಿಡುತ್ತಿದ್ದ ಹಾಗೆಯೇ ಅದೇನೋ ಹೇಳಲು ಬಾಯಿತೆರೆದಳು. ಆದರೆ ಶ್ರೀಹರಿ ಅವಳಿಗಿಂತಲೂ ಮೊದಲು ಮಾತನಾಡಿದ.

‘ನೋಡಿ ಮಿಸ್ ವಸುಧಾ, ಸುತ್ತಿ ಬಳಸಿ ಹೇಳದೇ ನೇರ ವಿಷಯಕ್ಕೆ ಬರ್ತೀನಿ’ ಅಲ್ಲಿಯವರೆಗೂ ನಗುಮುಖದಲ್ಲಿದ್ದ ಆತ ಇದ್ದಕ್ಕಿದ್ದಂತೆ ಸೀರಿಯಸ್ ಆಗಿ ಮಾತನಾಡಿದ. ‘ನನಗೆ ಈ ಮದುವೆ ಇಷ್ಟ ಇಲ್ಲ. ‘ಆಕ್ಚುಯಲಿ, ಐ ಆಮ್ ಅಲ್ ರೆಡಿ ಇನ್ ಎ ರಿಲೇಷನ್ ಶಿಪ್’  ನೇರವಾಗಿ ವಿಷಯ ಹೇಳಿ ಅವಳ ಮುಖದಲ್ಲಾಗುವ ಬದಲಾವಣೆಗೆ ಕಾಯತೊಡಗಿದ.

‘ಇಷ್ಟು ಕ್ಯೂಟ್ ಆಗಿರೋ ಹುಡುಗನ್ನ ಹುಡುಗೀರು ಇಷ್ಟು ದಿನ ಬಿಡ್ತಾರಾ’ ಅಂತ ಮನಸ್ಸಿನಲ್ಲೇ ಅಂದುಕೊಂಡ, ನೊಂದುಕೊಂಡ ವಸುಧಾ, ಮುಖ ಸಣ್ಣಗೆ ಮಾಡಿ ‘ಅಯ್ಯೋ ಇದ್ರೆ ಮನೇಲಿ ಹೇಳಬೇಕು ತಾನೆ? ಅದನ್ನ ಬಿಟ್ಟು ಮ್ಯಾಟ್ರುಮನಿ ಸೈಟಲ್ಲಿ ಅಕೌಂಟ್ ಯಾಕ್ರೀ ಕ್ರಿಯೇಟ್ ಮಾಡ್ಕೊಂಡಿದೀರಾ?’ ಎಂದು ಕೇಳಿದಳು

‘ಪ್ಲೀಸ್ ಕೋಪ ಮಾಡ್ಕೋಬೇಡಿ, ಅದನ್ನ ಅಪ್ಪ ಅಮ್ಮನೇ ಹ್ಯಾಂಡಲ್ ಮಾಡ್ತಾರೆ, ಅವರೇ ಹುಡುಗೀನು ಸೆಲೆಕ್ಟ್ ಮಾಡೋದು, ನೋಡೋಕೆ ಬರದೆ ರಿಜೆಕ್ಟ್ ಮಾಡಿದ್ರೆ ಕಾರಣ ಹೇಳಬೇಕು ಅಂತ ಇಲ್ಲಿಯವರೆಗೂ ಬಂದೆ’.

‘ಹೀಗೆ ಎಷ್ಟು ಜನ ಹುಡುಗೀರ ಮನೇಲಿ ಕೇಸರಿಬಾತ್ ತಿಂದು ಬಾಲ್ಕನಿಯಲ್ಲಿ ನಿಮ್ಮ ಲವ್ ಮ್ಯಾಟರ್ ಹೇಳಿದೀರಾ?’

‘ನೀವು ಮೂರನೇ ಹುಡುಗಿ. ಬೇರೆ ಬೇರೆ ಹುಡುಗಿಯರಿಗೆ ಬೇರೆ ಬೇರೆ ರೀಸನ್ ಹೇಳಿದ್ದೆ. ಬಟ್ ನಿಮ್ಮ ಹತ್ರ ನಿಜನೇ ಹೇಳಬೇಕು ಅನ್ನಿಸ್ತು, ಹೇಳ್ಕೊಂಡೆ. ಹೋಪ್ ಯು ಅಂಡರಸ್ಟಾಂಡ್’’

‘ಓಹೋ ಈಗೇನು ಸತ್ಯ ಹರೀಶ್ಚಂದ್ರ ಮೈಮೇಲೆ ಬಂದಿದ್ದಾ? ಹೀಗೆ ಮಾಡೋದ್ರು ಬದಲು ಡೈರೆಕ್ಟಾಗಿ ಹುಡುಗಿಯನ್ನ ಕರ್ಕೊಂಡು ಹೋಗಿ ಅಪ್ಪ ಅಮ್ಮನ ಎದುರು ನಿಲ್ಲಿಸಿ ಹೇಳಬೇಕು ತಾನೆ?’ ವಸುಧಾಳ ದನಿ ಪಕ್ಕದ ರೋಡಿಗೂ ಕೇಳಿಸುವಷ್ಟು ಜೋರಾಗಿತ್ತು.

‘ಹುಡುಗಿ ಆಗಿದ್ರೆ ಹೇಳಬಹುದಿತ್ತು, ಬಟ್’ ಒಂದು ಚಿಕ್ಕ ವಿರಾಮ ತೆಗೆದುಕೊಂಡ ಶ್ರೀಹರಿ ಹೇಳಲೋ ಬೇಡವಂತೆ ಯೋಚಿಸಿ ಆಚೀಚೇ ನೋಡುತ್ತಾ ಹೇಳಿದ ‘ಇಟ್ಸ್ ಎ ಹೋಮೋಸೆಕ್ಸುಯಲ್ ರಿಲೇಷನ್ ಶಿಪ್’

ವಸುಧಾಳಿಗೆ ಶಾಕ್ ಆಯಿತು. ಅವನನ್ನೊಮ್ಮೆ ದಿಟ್ಟಿಸಿ ನೋಡಿದಳು. ಮ್ಯಾಟ್ರಿಮನಿ ಸೈಟಲ್ಲಿ ಸಿಗುವ ಗಂಡುಗಳು ಬೋಡು ತಲೆಯಿದ್ದರೂ ವಿಗ್ ಹಾಕಿಕೊಂಡೋ, ಶೋಕಿಗೆ ಬಾಡಿಗೆ ಕಾರು ತೆಗೆದುಕೊಂಡೋ ಅಥವಾ ಡೂಪ್ಲಿಕೇಟ್ ಸ್ಯಾಲರಿ ಸರ್ಟಿಫಿಕೇಟುಗಳನ್ನು ತಂದೋ ಮೋಸ ಮಾಡುತ್ತಾರೆಂದು ಅವರಿವರು ಹೇಳಿದ್ದರು. ಆದರೆ ಈ ರೀತಿಯೂ ಆಗಬಹುದೆಂದು ಊಹಿಸಿರಲಿಲ್ಲ. ಒಳಗೊಳಗೆ ಇಷ್ಟು ಚಂದದ ಹುಡುಗ ತನ್ನ ಕೈತಪ್ಪಿ ಹೋದನಲ್ಲ ಎಂಬ ಹೊಟ್ಟೆ ಕಿಚ್ಚಾಯಿತು. ಇನ್ಯಾವ ಹೆಣ್ಣು ಜಾತಿಗೂ ಈತ ದಕ್ಕುವುದಿಲ್ಲವೆಂದು ಬೇಸರವಾಯಿತು. ಈತ ಹೀಗೆ ಮನೆಯವರಿಗೆ ಹೆದರಿ ಕಡೆಗೆ ಹುಡುಗಿಯನ್ನು ಕಟ್ಟಿಕೊಂಡು ಅವಳ ಬಾಳು ಹಾಳು ಮಾಡುವನೆಂದು ಸಾಮಾಜಿಕ ಕಳಕಳಿ ಜಾಸ್ತಿಯಾದವಳಂತೆ ಸೀದಾ ಕೆಳಗೆ ಹೋದವಳೇ, ಮುಂದಿನ ಪರಿಣಾಮಗಳನ್ನು ಯೋಚಿಸದೇ ಇದ್ದದ್ದು ಇದ್ದ ಹಾಗೆ ಎದೆಗೆ ಒದ್ದಂತೆ ಹೇಳಿ ಬಂದವರ ಎದುರೆಲ್ಲಾ ರಂಪ ರಾದ್ಧಾಂತ ಮಾಡಿಬಿಟ್ಟಳು. ಶ್ರೀಹರಿಯ ತಂದೆ ತಾಯಿಗೆ ವಿಷಯ ಕೇಳಿ ಆಘಾತದ ಜೊತೆಗೆ ಅವಮಾನವಾಗಿ ಅಲ್ಲಿ ನಿಲ್ಲಲಾರದೇ ಹೊರಟುಹೋದರು. ಬಂದಿದ್ದ ವಸುಧಾಳ ನೆಂಟರು ಈಕೆ ಜರ್ನಲಿಸ್ಟ್ ಆಗಿದ್ದು ಸಾರ್ಥಕವಾಯಿತು, ಮೊದಲೇ ಮಹಡಿ ಮೇಲೆ ಹೋಗಿ ಆತನಿಂದ ವಿಷಯ ಬಾಯಿ ಬಿಡಿಸಿದಳೆಂದು ಸಮಾಧಾನಪಟ್ಟುಕೊಂಡರು. ವಸುಧಾ ಅಂದು ರಾತ್ರಿಯೇ ಮ್ಯಾಟ್ರಿಮನಿ ಅಕೌಂಟು ಡಿಲೀಟು ಮಾಡಿಬಿಟ್ಟಳು.

ಆದಾಗಿ ಕೆಲವು ದಿನ ತಾನು ಸರಿಯಾದುದನ್ನೇ ಮಾಡಿದ್ದೇನೆ ಎಂದು ತನ್ನಲ್ಲೇ ಸುಳ್ಳು ಹೇಳಿಕೊಳ್ಳುತ್ತಿದ್ದ ವಸುಧಾಗೆ ಮೊನ್ನೆಯಿಂದೇಕೋ ತಾನು ಹಾಗೆ ಮಾತನಾಡಬಾರದಿತ್ತು ಎನ್ನಿಸತೊಡಗಿತ್ತು. ಪಾಪ ಅವನೇನು ತಪ್ಪು ಮಾಡಿರಲಿಲ್ಲ, ಮದುವೆಗೆ ಮೊದಲೇ ಇದ್ದ ವಿಷಯ ಹೇಳಿಕೊಂಡಿದ್ದ, ಅದಕ್ಕೆ ತಾನು ಫಸ್ಟ್ ನೈಟಿನಲ್ಲಿ ವಿಷಯ ಗೊತ್ತಾದಷ್ಟು ರಿಯಾಕ್ಟ್ ಮಾಡಬಾರದಿತ್ತು ಎನ್ನಿಸಿತು. ತಿಂಗಳ ನಂತರ ಕ್ಷಮೆ ಕೇಳಬೇಕೆಂದೆನಿಸಿ ಶ್ರೀಹರಿಗೆ ಕರೆ ಮಾಡಿದ್ದಳು. ಆದರೆ ಆತ ಪೋನು ಕಟ್ ಮಾಡಿದ್ದ. ಮತ್ತೆ ಮತ್ತೆ ಕರೆ ಮಾಡಿದಾಗ ಸ್ವಿಚ್ ಆಫ್ ಮಾಡಿದ್ದ. ವಸುಧಾ ಹಠಮಾರಿ. ಆತನ ವಿಳಾಸ ಹುಡುಕಿ ನೇರ ಮನೆಯ ಬಾಗಿಲಿಗೆ ಹುಡುಕಿಕೊಂಡು ಬಂದಿದ್ದಳು. ಶ್ರೀಹರಿ ಮನೆಯಲ್ಲಿರಲಿಲ್ಲ. ಬಾಗಿಲು ತೆರೆದ ಶ್ರೀಹರಿಯ ಅಮ್ಮನಿಗೆ ಅವಳನ್ನು ಅಲ್ಲೆ ಉಗಿದು ಓಡಿಸೋಣವೆನ್ನಿಸಿತು. ಆದರೆ ಅವಳ ಮುಖದಲ್ಲಿದ್ದ ದೈನ್ಯತಾ ಭಾವವನ್ನು ಕಂಡು ಮನಸ್ಸು ಬರಲಿಲ್ಲ. ವಸುಧಾ ಒಂದೆರಡು ನಿಮಿಷ ಮಾತನಾಡಬೇಕೆಂದು ಕೇಳಿದಾಗ ಒಳಗೆ ಕರೆದರು. ವಾಸು ಅಂಕಲ್ ಟಿವಿ ನೋಡುತ್ತಾ ಕುಳಿತಿದ್ದವರು, ವಸುಧಾ ಬಂದದ್ದು ಕಂಡು ಟಿವಿ ಆಫ್ ಮಾಡಿದರು. ಶಾಸ್ತ್ರಕ್ಕೆ ಕೊಟ್ಟ ಕಾಫಿ ಕುಡಿದಿದ್ದಾದದ ಮೇಲೆ ಮುಜುಗರದಿಂದಲೇ ಮಾತು ಆರಂಭಿಸಿದ ವಸುಧಾ ತಾನು ಅವತ್ತು ಹಾಗೆ ಮಾತನಾಡಿದ್ದಕ್ಕೆ ಕ್ಷಮೆ ಕೇಳಿದಳು. ಸ್ವಲ್ಪ ಹೊತ್ತು ಏನೂ ಮಾತನಾಡದೇ ಕುಳಿತಿದ್ದ ಅವರ ಅಂಕಲ್ ನಿಟ್ಟುಸಿರಿಟ್ಟು ಶ್ರೀಹರಿಯ ಪೋಟೋ ನೋಡಿದರು. ಆಗಲೇ ಅವರ ಫ್ಲಾಷ್ ಬ್ಯಾಕ್ ಬಿಚ್ಚಿಕೊಂಡದ್ದು.

‘ಮಂಜುನಾಥ ಮತ್ತೆ ಶ್ರೀಹರಿ, ಹೈಸ್ಕೂಲಿಂದಲೂ ಕ್ಲೋಸು ಫ್ರೆಂಡ್ಸು. ಇಬ್ಬರೂ ಮೂರು ಹೊತ್ತು ಅಂಟಿಕೊಂಡೇ ಇರೋರು. ಇವನು ಅವರ ಮನೆಗೆ ಹೋಗೋನು, ಅವನು ನಮ್ಮನೇಗೆ ಬರೋನು. ನಾಗರಬಾವಿಯಲ್ಲೆಲ್ಲೋ ಅವರ ಮನೆ.  ಲಿಂಗಾಯಿತರ ಜನ, ಹೇಗೂ ಮೀನೂ ಮಾಂಸ ತಿನ್ನಲ್ಲ, ಒಟ್ಟಿಗೆ ಇದ್ರೆ ಇರಲಿ ಬಿಡಿ ಅಂತ ನಾವೂ ಸುಮ್ಮನಿದ್ದು ಬಿಟ್ವಿ’ ವಾಸು ಅಂಕಲ್ ಫ್ಲಾಷ್ ಬ್ಯಾಕು ಮುಂದುವರೆಯಿತು. ವಸುಧಾಳಿಗೆ ಆಗಲೇ ಈ ಮಂಜುನಾಥ ಯಾರಿರಬಹುದೆಂಬುದರ ಕ್ಲೂ ಸಿಕ್ಕಿತ್ತು. ಸುಮ್ಮನೇ ಕೇಳಿಸಿಕೊಳ್ಳತೊಡಗಿದಳು.

‘ಆಮೇಲೆ ಕಾಲೇಜು ಮುಗಿತು, ಎಲ್ಲ ಹುಡುಗ್ರು ಇಂಜಿನಿಯರಿಂಗು ಮೆಡಿಕಲ್ಲು ಓದ್ತಿದ್ರೆ ಇವನು ಅದೇನೋ ಕೋರ್ಸು ಮಾಡಿ ಬ್ಯೂಟಿ ಪಾರ್ಲರ್ ಮಾಡ್ತೀನಿ ಅಂದ. ನಮಗೂ ಏನೋ ಅವನಿಷ್ಟ ಮಾಡಿಕೊಳ್ಳಲಿ ಅಂತ ಸಪೋರ್ಟ್ ಮಾಡಿದ್ವಿ. ಯಾವಾಗಲೂ ಹುಡುಗೀರ ತರ ಕ್ರೀಮು ಲೋಷನ್ನು ಅಂತ ಅದರದ್ದೇ ಚಿಂತೆ ಅವನಿಗೆ. ಅವರಮ್ಮನ ಮೇಲೆ ಅವನ ಎಕ್ಸಪರಿಮೆಂಟುಗಳು. ಅದಕ್ಕೆ ಒಬ್ಬಳನ್ನ ಕಟ್ಕೊಂಡು ಇದೆಲ್ಲಾ ಅವಳ ಮೇಲೆ ಮಾಡ್ಕೊ ಅಂತ ಹೆಣ್ಣು ನೋಡೋಕೆ ಶುರು ಮಾಡಿದ್ವಿ. ಆದ್ರೆ ಅವನೇ ಗಂಡು ನೋಡ್ಕೊಂಡು ಬಿಟ್ಟಿದ್ದ’ ಎಂದು ಹೇಳಿ ಅಂಕಲ್ ಮೌನವಾದರು.

ಕೆಳದಿದ್ದರೂ ಅವರು ಅಷ್ಟೆಲ್ಲಾ ಕಥೆ ಹೇಳಿದ ಮೇಲೆ ವಸುಧಾಳಿಗೆ ತಾನೂ ಏನಾದರೂ ಮಾತನಾಡಬೇಕೆನ್ನಿಸಿತು. ‘ಅದರಲ್ಲಿ ತಪ್ಪೇನಿಲ್ಲವಲ್ಲ ಅಂಕಲ್, ಇದು ಅವರವರ ಫಿಸಿಕಲ್ ನೀಡ್ಸ್ ಅಷ್ಟೆ. ಹುಡುಗ್ರು ಹುಡುಗ್ರನ್ನ, ಹುಡುಗೀರು ಹುಡುಗೀರನ್ನ ಓಪನ್ ಆಗಿ ಮದುವೆ ಆಗ್ತಿದ್ದಾರೆ ಈಗೆಲ್ಲಾ,’ ಎಂದಳು.

‘ಅಯ್ಯೋ ಅದೆಲ್ಲಾ ಬೇರೆ ದೇಶದಲ್ಲಮ್ಮಾ, ನಮ್ಮ ದೇಶದಲ್ಲಿ ಇದೆಲ್ಲಾ ಎಲ್ಲಿ ಒಪ್ಕೊತಾರೆ, ಥೂ ಅಸಹ್ಯ’ ಕಿಚನ್ನಿನ ಬಾಗಿಲಿನಲ್ಲಿದ್ದ ನಿರ್ಮಲಾ ಆಂಟಿ ಮೊದಲ ಬಾರಿಗೆ ಮಾತನಾಡಿದ್ದರು.

‘ಅದರಲ್ಲಿ ಅಸಹ್ಯ ಏನಿದೇ ಆಂಟಿ? ಇದೆಲ್ಲಾ ಹಿಂದೆ ಇಂದಾನು ಇದೆ. ಪುರಾಣದಲ್ಲಿ ವಿಷ್ಣು ಮೋಹಿನಿ ಆದಾಗ ಶಿವನಿಗೆ ಇಷ್ಟ ಆಗಲಿಲ್ಲವಾ? ಅದೆಲ್ಲಾ ಆಗಲೇ ಇತ್ತು. ಈಗ ಜನಕ್ಕೆ ಮುಜುಗರ ಅಷ್ಟೆ. ಎಲ್ಲಾ ಬದಲಾಗತ್ತೆ, ಇಲ್ಲೂ ಅದ್ರ ಬಗ್ಗೆ ಹೋರಾಟಗಳೆಲ್ಲಾ ನೆಡಿತಿವೆ’ ವಸುಧಾ ಪಕ್ಕಾ ಜರ್ನಲಿಸ್ಟ್ ಧಾಟಿಯಲ್ಲಿ ವಾದಿಸಿದಳು. ಇವಳೇನಾದರೂ ತನಗೆ ಸೊಸೆಯಾಗಿದ್ದರೆ ಇಬ್ಬರು ಹೇಗೆ ಜಗಳವಾಡಬಹುದಿತ್ತೆಂದು ನಿರ್ಮಲಾ ಆಂಟಿ ಕಲ್ಪಿಸಿಕೊಂಡರು.

‘ಆದ್ರೂ, ಕೇಳಿದವರಿಗೆಲ್ಲಾ ನಮ್ಮ ಶ್ರೀಹರಿ ಆ ವಿಷ್ಣುವಿನ ಅಪರಾವತಾರ ಅಂತ ಹೇಳೋಕಾಗತ್ತಾ?’ ಅಂಕಲ್ ಹೇಳಿದರೂ ಅವರು ತಮಾಷೆ ಮಾಡಿದರೋ, ಸೀರಿಯಸ್ ಆಗಿ ಹೇಳಿದರೋ ವಸುಧಾಳಿಗೆ ಗೊತ್ತಾಗಲಿಲ್ಲ.
‘ಹಾಗಲ್ಲ ಅಂಕಲ್, ಯಾರು ಏನಂತಾರೆ ಅಂತ ತಲೆ ಕೆಡಿಸಿಕೊಳ್ಳೋದಾ? ಈಗೆಲ್ಲಾ ಮೊದಲಿನ ಹಾಗಿಲ್ಲ. ಈಗೆಲ್ರೂ ಮಾಡ್ರನ್ ಆಗಿ ಥಿಂಕ್ ಮಾಡ್ತಾರೆ.’

ವಸುಧಾ ಇನ್ನು ಮುಂದಕ್ಕೆ ಹೇಳುತ್ತಿದ್ದಳು. ಅಷ್ಟರಲ್ಲಿ ಆಂಟಿ ಮಧ್ಯೆ ಬಾಯಿ ಹಾಕಿದರು. ‘ಅಯ್ಯೋ ನಾವು ಮಾಡ್ರನ್ನೇ ಕಣಮ್ಮ, ನಂದೂ ಫೇಸುಬುಕ್ಕಿದೆ, ಇವರೂ ಕರೆಂಟು ಬಿಲ್ಲು ಕಟ್ಟೋಕೆ ಕ್ಯೂ ನಿಲ್ಲಲ್ಲ, ಪೇಟಿಎಂನಲ್ಲೆ ಕಟ್ತಾರೆ, ಮೊನ್ನೆ ಮೊನ್ನೆ ತಾನೆ ಅಮೇಜಾನಿಂದ ಕುಕ್ಕರ್ ತರಿಸಿದೆ. ನೀ ಸಿಕ್ಕಿದೆಯಲ್ಲಾ ಆ ಮ್ಯಾಟ್ರಿಮನಿ ಸೈಟಲ್ಲೂ ನಾವೇ ಅಕೌಂಟು ಮಾಡಿದ್ದು. ಮನೆಗೊಬ್ಳು ಮುದ್ದು ಮುದ್ದಾಗಿರೋ ಸೊಸೆ ತರೋಣಾ ಅನ್ಕೊಂಡಿದ್ವಿ ಅಷ್ಟರಲ್ಲಿ..’ ಆಂಟಿ ನಿಲ್ಲಿಸಿದರು.

‘ಈ ನನ್ನ ಮಗ ಅಳಿಯನ್ನ ತಂದ್ಬಿಟ್ಟ.’ ಅಂಕಲ್ ಮುಂದುವರೆಸಿದರು.

‘ಥೂ ಅದೇನೆಂತ ಮಾತಾಡ್ತೀರಿ ನೀವು?’ ಅಳಿಯ ಅಂತೆ ಅಳಿಯ’ ಆಂಟಿ ಮುಜುಗರದಿಂದ ಒಳಗೆ ಹೋದರು.

‘ಒಳ್ಳೆ  ಕತೆ ಆಯ್ತಲ್ಲ, ಇನ್ನೇನು ಹೇಳಬೇಕು? ಅಳಿಯ ಅಲ್ಲದಿದ್ರೆ ಮಗನ ಗಂಡ ಅನ್ಬೇಕಲ್ಲಾ’ ಎಂದು ಮುಗುಳ್ನಕ್ಕು ವಸುಧಾಳನ್ನು ನೋಡಿದರು. ವಸುಧಾ ತಾನೂ ಮುಗುಳ್ನಕ್ಕು ಹೊರಡಲು ಎದ್ದು ನಿಂತಳು.


Sunday, June 10, 2018

ಡೈರೀಸ್ ಆಫ್ ದಾಳಿ ಪಾಪಣ್ಣ - ೩

 ಅಧ್ಯಾಯ 3 - ಪಾಪಣ್ಣನ ಪ್ರಿಸನ್ ಬ್ರೇಕ್


ಹಿಂದಿನ ಭಾಗದಲ್ಲಿ : ಮೊದಲ ಹೆಂಡತಿಯನ್ನು ಕಳೆದುಕೊಂಡ ದುಃಖದಿಂದ ಹೊರಬರಲಾರದೇ  ಬದುಕುತ್ತಿದ್ದ ಪಾಪಣ್ಣನನಿಗೆ ಆತನ ಕುಡಿ ತನ್ನ ಒಡಲಿನಲ್ಲಿ ಬೆಳೆಯುತ್ತಿರುವುದಾಗಿ ಹೇಳಿದ ಮಣಿಕರ್ಣಿಕಾ ಅಲ್ಲಿ ನಿಲ್ಲದೇ ಹೊರಟು ಹೋಗುತ್ತಾಳೆ.


ಮಣಿಕರ್ಣಿಕಾ ಹೋದ ದಿಕ್ಕಿನಲ್ಲೇ ನೋಡುತ್ತಾ ಸುಮಾರು ಹೊತ್ತಿನವರೆಗೆ ನಿಂತಲ್ಲಿಯೇ ನಿಂತಿದ್ದ ಪಾಪಣ್ಣನ ಕೈಯಲ್ಲಿದ್ದ ಪೈಪು ಹೂವಿನ ಕುಂಡಗಳಲ್ಲಿದ್ದ ಗಿಡಗಳ ಮೇಲೆ ನೀರು ಸುರಿಯುತ್ತಲೇ ಇತ್ತು. ಕಾಲಿನ ಬುಡವೆಲ್ಲಾ ತೇವವಾದಾಗಲೇ ಪಾಪಣ್ಣನಿಗೆ ಎಚ್ಚರವಾದದ್ದು. ಓಡಿ ಹೋಗಿ ಕೊಳಾಯಿಯನ್ನು ನಿಲ್ಲಿಸಿ ನೀರೆಷ್ಟು ಪೋಲಾಯಿತೋ ನೋಡಲು ತೊಟ್ಟಿಯಲ್ಲಿ ಇಣುಕಿದ. ತೊಟ್ಟಿಯಲ್ಲಿನ್ನೂ ಅರ್ಧದಷ್ಟು ನೀರಿತ್ತು. ಆ ಸಂಜೆಯ ಬೆಳಕಿನಲ್ಲೂ ನೀರಿನೊಳಗೆ ಆತನ ಪ್ರತಿಬಿಂಬ ಸ್ಪಷ್ಟವಾಗಿ ಕಂಡಿತು. ಕಳೆದ ಆರು ತಿಂಗಳಿನಲ್ಲಿ ಆತನಿಗೆ ತನ್ನ ಮುಖವನ್ನು ನೋಡಿದ್ದೇ ನೆನಪಿರಲಿಲ್ಲ. ಮುಖದ ಮೇಲೆಲ್ಲ ಮನಸ್ಸೋ ಇಚ್ಛೆ ಬೆಳೆದ ಮೀಸೆ ಗಡ್ಡಗಳಲ್ಲಿ ಅವನಿಗೆ ಅವನ ಗುರುತೇ ಹತ್ತಲಿಲ್ಲ. ದಿಟ್ಟಿಸಿ ನೋಡುತ್ತಾ ಗಿರಿಜಾಳನ್ನು ನೆನಪಿಸಿಕೊಂಡ, ಇಲ್ಲ, ಅವಳ ಮುಖವೂ ಸ್ಪಷ್ಟವಾಗಿ ನೆನಪಾಗಲಿಲ್ಲ. ಇನ್ನು ಆ ಎರಡು ದಿನದ ಆ ಮಗು? ಉಹ್ಹೂ, ಅದರ ಮುಖವೂ ನೆನಪಿಗೆ ಬರುತ್ತಿಲ್ಲ. ಮತ್ತೆ ಮತ್ತೆ ನೆನಪಿಸಿಕೊಳ್ಳಲು ಪ್ರಯತ್ನಿಸಿದ, ಯಾವ ಪ್ರಯೋಜನವೂ ಆಗಲಿಲ್ಲ. ತಾನಷ್ಟು ಪ್ರೀತಿಸುತ್ತಿದ್ದ ಮಡದಿಯನ್ನು ಇಷ್ಟು ಬೇಗ ಮರೆತೆನೇ ಎಂದು ಆಶ್ಚರ್ಯವಾಯಿತು. ಬಹುಶಃ ನಾನವಳ ನೆನಪಿನಲ್ಲಿ ಕೊರಗಬಾರದೆಂದು ಅವಳೇ ತನ್ನ ನೆನಪಿನಿಂದ ಹೊರಟು ಹೋಗಿರಬೇಕೆಂದು ಸಮಾಧಾನ ಮಾಡಿಕೊಂಡ. ಆದರೆ ಅವಳ ನೆನಪೇ ಇಲ್ಲದ ಮೇಲೆ ಯಾರಿಗಾಗಿ ಇಷ್ಟು ದಿನ ಹೀಗೆ ಎಲ್ಲಾ ಕಳೆದುಕೊಂಡವನಂತೆ ಬದುಕುತಿದ್ದೆ ಎಂದು ಯೋಚನೆಯಾಯಿತು.

ಬಹಳ ದಿನಗಳ ನಂತರ ಅಂದು ರಾತ್ರಿ ದಿಂಬಿಗೆ ತಲೆ ಕೊಟ್ಟ ಕೂಡಲೇ ಕಣ್ಣಿಗೆ ನಿದ್ದೆ ಹತ್ತಿತು. ಕನಸಿನಲ್ಲಿ ಲಾರೆನ್ಸ್ ಗಾರ್ಡನ್ನಿನ ತೊಟ್ಟಿಯೊಳಗಿನಿಂದ ತಲೆಗೆ ಬ್ಯಾಂಡೇಜು ಕಟ್ಟಿಕೊಂಡು ಎದ್ದು ಬಂದ ತನ್ನ ಹಳೆಯ ಅಂಗಡಿಯ ಮಾಲಿಕ ಬಸವಪ್ಪ ಶೆಟ್ಟಿ ಹೂಗಿಡಗಳನೆಲ್ಲಾ ಕಟಾವು ಮಾಡಿಸಿದಂತೆ. ಅವನು ಹೋದ ಮೇಲೆ ಇವನೂ ಮಣಿಕರ್ಣಿಕಾ ಸೇರಿ ಆ ಜಾಗವನ್ನೆಲ್ಲಾ ಅಗೆದು ಕೆಳಗೆ ಮಲಗಿದ್ದ ಗಿರಿಜಾಳನ್ನು ಮೇಲಕ್ಕೆತ್ತಿ ತಂದಂತೆ, ಅವಳು ಎದ್ದಾಗ ಮಣಿಕರ್ಣಿಕಾ ಆಕೆಗೆ ಹೂ ಕಟ್ಟಿ ಮುಡಿಸಿ ಅವಳ ಕಂಕುಳಲ್ಲಿದ್ದ ಮಗುವಿಗೆ ಹಾಲುಣಿಸಿದಂತೆ ಹೀಗೆ ಚಿತ್ರ ವಿಚಿತ್ರ ಕನಸುಗಳು ಬಿದ್ದವು. ಆದರೆ ಬೆಳಗೆದ್ದಾಗ ಮತ್ತೆ ಯಾವ ನೆನಪೂ ಇರಲಿಲ್ಲ. ಆದರೆ ಆತನ ಒಳಗೇನೋ ಬದಲಾವಣೆಯಾಗಿತ್ತು. ಮಣಿಕರ್ಣಿಕಾಳ ಭರವಸೆಯಿಂದಲೋ, ತೊಟ್ಟಿಯ ಬಳಿ ಆದ ಜ್ಞಾನೋದಯದಿಂದಲೋ ಅಥವಾ ಅರ್ಥವಿಲ್ಲದ ಆ ಕನಸಿನಿಂದಲೋ, ಪಾಪಣ್ಣ ಮತ್ತೆ ಮೊದಲಿನಂತಾದ. ನಿಧಾನವಾಗಿ ಚೇತರಿಸಿಕೊಳ್ಳತೊಡಗಿದ.

ಅದೊಂದು ದಿನ ಪಾಪಣ್ಣ ನಲ್ಲಿಯ ಬಳಿ ಸ್ನಾನ ಮಾಡುತ್ತಿದ್ದಾಗ, ಪೇದೆಯೊಬ್ಬ ಬಂದು ಆತನನ್ನು ಕಾಣಲು ಯಾರೋ ಬಂದಿರುವುದಾಗಿ ತಿಳಿಸಿದ. ದಿನಗಳ ಲೆಕ್ಕವೇ ಮರೆತುಹೋಗಿದ್ದ ಪಾಪಣ್ಣನಿಗೆ ಅಂದು ಭಾನುವಾರವೆಂದು ನೆನಪಾಯಿತು. ಗಿರಿಜಾ ಸತ್ತಾಗಿನಿಂದ ಆತನನ್ನು ನೋಡಲು ಬಂದದ್ದು ಜೈಲಿನ ಡಾಕ್ಟರು ಒಬ್ಬರೇ. ಈಗ್ಯಾರು ಬಂದಿರಬಹುದು ಎಂದು ಯೋಚಿಸಿ ಬೇಗ ಬೇಗ ಸ್ನಾನ ಮುಗಿಸಿ ವಿಸಿಟರ್ಸ್ ಕೊಠಡಿಗೆ ಹೋದ. ಆತನನ್ನು ಕರೆದುಕೊಂಡು ಬಂದ ಪೇದೆ ಅಲ್ಲಿ ನಿಂತಿದ್ದ ಹುಡುಗನೊಬ್ಬನನ್ನು ತೋರಿಸಿ ಹೊರಟ. ಸುಮಾರು ಹತ್ತೊಂಬತ್ತು ಇಪ್ಪತ್ತು ವರುಷದ ಹುಡುಗ. ಕೈಯಲ್ಲಿ ಬುಟ್ಟಿ ಹಿಡಿದು ಅತ್ತಿತ್ತ ನೋಡುತ್ತಾ ನಿಂತಿದ್ದ. ಪಾಪಣ್ಣ ಹೋಗಿ ಅವನ ಎದುರು ನಿಂತ. ಹುಡುಗ ಮುಜುಗರದಿಂದಲೇ ಮುಗುಳ್ನಕ್ಕ.

‘ಇ.. ಇದು.. ಪಾಪಣ್ಣ ಅಂದ್ರೇ.. ನೀ…ವೇನಾ?’ ಹುಡುಗ ತೊದಲುತ್ತಾ ಕೇಳಿದ.

ಪಾಪಣ್ಣ ಹೌದೆಂಬಂತೆ ತಲೆಯಾಡಿಸಿದ. ಆತನನ್ನು ಮೊದಲೆಲ್ಲಾದರೂ ನೋಡಿದ್ದೇನೆಯೇ ಎಂದು ನೆನಪಿಸಿಕೊಂಡ. ಇಲ್ಲ. ಆತನ ಗುರುತು ಸಿಗಲಿಲ್ಲ.

‘ಮಮಮಣಿಯಕ್ಕ.. ಕಳ್ಸಿದಾಳೆ. ಇದನ್ನ ಕೊಕೊಕೊಡಕ್ಕೆ.. ಬಿಬಿಬಿರಿಯಾನಿ’ ಹುಡುಗ ಕೈಯಲ್ಲಿದ್ದ ಬುಟ್ಟಿಯನ್ನು ಮೇಲೆತ್ತಿ ತೋರಿಸುತ್ತಾ ಹೇಳಿದ.

ಪಾಪಣ್ಣನಿಗೆ ಆ ತೊದಲು ಮಾತಿನಲ್ಲೂ ಮಣಿಯ ಹೆಸರನ್ನು ಕೇಳಿ ಮೈ ಜುಂ ಎಂದಿತು. ಆ ಹುಡುಗನ ಹೆಸರು ಸರ್ವೇಶ, ಮಣಿಕರ್ಣಿಕಾಳ ಮನೆಯಲ್ಲಿ ಕೆಲಸಕ್ಕಿದ್ದ ಹುಡುಗನಂತೆ. ಅವಳು ತಾನು ಜೈಲಿಗೆ ಬರಲು ಸಾಧ್ಯವಾಗದೇ ಇದ್ದಿದ್ದರಿಂದ ಹುಡುಗನನ್ನು ಕಳುಹಿಸಿದ್ದಳು. ಜೊತೆಯಲ್ಲಿ ತಾನೇ ಕೈಯಾರೆ ಮಾಡಿದ್ದ ಬಿರಿಯಾನಿಯನ್ನು ಕಳುಹಿಸಿದ್ದಳು. ಪಾಪಣ್ಣ ಬಿರಿಯಾನಿ ಸವಿಯುತ್ತಾ ಆ ಹುಡುಗನ ಮೇಲೆ ಮಣಿಕರ್ಣಿಕಾಳ ಕುರಿತಾದ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ. ಆತ ತೊದಲುತ್ತಲೇ ಸಾಧ್ಯವಾದಷ್ಟೂ ಉತ್ತರಿಸಿದ. ಅವನು ಹೋದ ಮೇಲೆ ಪಾಪಣ್ಣ ಇಡೀ ದಿನ ತನ್ನ ಕೈಯಲ್ಲಿದ್ದ ಆ ಬಿರಿಯಾನಿಯ ವಾಸನೆಯನ್ನೇ ಆಸ್ವಾದಿಸಿದ.

ಮರುದಿನ ಲೈಬ್ರರಿಯಲ್ಲಿ ಕ್ಯಾಲೆಂಡರ್ ಬದಲಾಯಿಸುತ್ತಿದ್ದಾಗ ತನ್ನ ಬಿಡುಗಡೆಗೆ ಎಷ್ಟು ತಿಂಗಳಿದೆ ಎಂದು ಯೊಚಿಸಿದ. ನೆನಪಾಗಲಿಲ್ಲ. ತನಗೆ ಶಿಕ್ಷೆಯಾದಾಗ ಗಿರಿಜಾಳಿಗೆ ಮೂರು ತಿಂಗಳು, ಈಗ ಮಣಿಕರ್ಣಿಕಾಗೆ ಆರು. ಅವಳಿಗೆ ಹೆರಿಗೆಯಾದಾಗ ಇವಳ ಬಸಿರು ಕಟ್ಟಿದ್ದು. ಅಲ್ಲಿಗೆ ತನಗಿನ್ನು ಒಂದು ವರ್ಷದ ಶಿಕ್ಷೆಯಷ್ಟೇ ಮುಗಿದದ್ದು ಎಂದು ಅರಿವಾದಾಗ ಪಾಪಣ್ಣನಿಗೆ ತಳಮಳವಾಯಿತು. ಅಲ್ಲಿಯವರೆಗೆ ತಾನು ಮಣಿಯನ್ನು ಕಾಣಲಾಗದೆಂಬ ಬೇಸರವಾದರೆ. ಅದಕ್ಕಿಂತ ಹೆಚ್ಚಾಗಿ ಹೆರಿಗೆ ಸಮಯದಲ್ಲಿ ಮೊದಲ ಹೆಂಡತಿಯಿಂದ ದೂರವಿದ್ದು ಆದ ದುರಂತಗಳು ಇಲ್ಲೂ ಆಗಿಹೋದರೆ ಎಂಬ ಭಯ ಶುರುವಾಯಿತು. ಒಂದು ಹಂತದಲ್ಲಿ ಜೀವನವೇ ಬೇಡವೆಂದು ನಿರ್ಧರಿಸಿದ್ದವನಿಗೆ ಮತ್ತೇಕೋ ಸರಳುಗಳಾಚೆಗಿನ ಬದುಕಿನ ಬಯಕೆ ಹೆಚ್ಚಾಗತೊಡಗಿತು.  

ಜೈಲಿನಿಂದ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿದ

ದುರ್ಗದ ಜೈಲು ಬ್ರಿಟೀಷರ ಕಾಲದ್ದು. ಸುಮಾರು ವರುಷ ಹಳೆಯದು. ಹಳೆಯ ಶಾಲೆಯೊಂದರಲ್ಲೆ ಜೈಲು ಮಾಡಿ ಸುತ್ತಲೂ ಇದ್ದ ಗೋಡೆಗಳ ಎತ್ತರ ಹೆಚ್ಚಿಸಿದ್ದರು. ಚೌಕಾಕಾರದ ಕಟ್ಟಡದ ಮೂರು ಬದಿಯಲ್ಲಿ ಜೈಲು ಕೋಣೆಗಳಿದ್ದವು ಪ್ರತಿ ಬದಿಯಲ್ಲು ಆರು ಸೆಲ್ಲುಗಳು. ಹಳೆಯ ಜೈಲಾದ್ದರಿಂದ ಗೋಡೆಗಳು ಶಿಥಿಲಗೊಂಡಿದ್ದರೆ, ಕಬ್ಬಿಣದ ಕಂಬಿಗಳು ತುಕ್ಕು ಹಿಡಿದಿದ್ದವು. ಹೊಸ ಜಾಗದಲ್ಲಿ ಜೈಲು ಕಟ್ಟಲು ಅನುಮತಿ ದೊರೆತಿದ್ದರಿಂದ ಯಾರೂ ಇದರ ರಿಪೇರಿಗೆ ಕೈ ಹಾಕಿರಲಿಲ್ಲ. ಹಗಲಿನಲ್ಲಿ ಸೆಲ್ಲಿನ ಹೊರಗೆ ಓಡಾಡಿಕೊಂಡಿರಲು ಅನುಮತಿಯಿದ್ದರೂ, ಆ ಸಮಯದಲ್ಲಿ ಮುಂದಿನ ಭಾಗದಲ್ಲಿ ಕಾವಲು ಪೋಲೀಸರು ಕಾವಲಿದ್ದರೆ, ಹಿಂದೆ ಸದಾ ಜನರಿಂದ ಗಿಜಿಗುಡುತ್ತಿದ್ದ ಸಂತೆ ಮೈದಾನವಿತ್ತು. ಸಂಜೆ ಸಂತೆ ಮುಗಿಯುವ ವೇಳೆಗೆ ಖೈದಿಗಳು ಮತ್ತೆ ಸೆಲ್ಲಿನೊಳಗೆ ಸೇರಿಕೊಳ್ಳಬೇಕಿತ್ತು. ಹೀಗೆ ಸಾಧ್ಯಾಸಾಧ್ಯತೆಗಳನ್ನು ಯೋಚಿಸಿದ ಪಾಪಣ್ಣ ಕಡೆಗೆ ನಡುರಾತ್ರಿಯಲ್ಲಿ ಸರಳುಗಳನ್ನು ಕತ್ತರಿಸಿ ಹೊರಗೆ ಬಂದು ಹಿಂದಿನಿಂದ ಗೋಡೆ ಹಾರಿ ತಪ್ಪಿಸಿಕೊಳ್ಳುವುದೆಂದು ನಿರ್ಧರಿಸಿದ.

ತಪ್ಪಿಸಿಕೊಳ್ಳಲು ಸಕಲ ಸಿದ್ಧತೆಗಳನ್ನು ನೆಡೆಯತೊಡಗಿತು. ಮೊದಲು ತೋಟದಿಂದ ಪೈಪು ಕತ್ತರಿಸುವವ ಬ್ಲೇಡನ್ನು ತಂದು ತನ್ನ ಚಾಪೆಯ ಕೆಳಗೆ ಸೇರಿಸಿದ. ಆದರೆ ತುಕ್ಕು ಹಿಡಿದ ಕಂಬಿಗಳು ಕತ್ತರಿಸುವಾಗ ಸದ್ದು ಮಾಡುವ ಸಾಧ್ಯತೆಯಿತ್ತು. ಕೆಲವು ದಿನಗಳ ಹಿಂದೆಯಷ್ಟೆ ರಾತ್ರಿಯೆಲ್ಲಾ ಡಿಪಾರ್ಟಮೆಂಟ್ ಪರೀಕ್ಷೆ ಪಾಸು ಮಾಡಲು ಓದುತ್ತಿದ್ದ ಜಿತೇಂದ್ರ, ಲೈಬ್ರರಿಯ ಕಬ್ಬಿಣದ ಕಿಟಕಿ ಬಾಗಿಲುಗಳು ಗಾಳಿಗೆ ಅಲುಗಿ ಕಿರ ಕಿರ ಸದ್ದು ಮಾಡುತ್ತವೆಂದು ಅವುಗಳಿಗೆ ಗ್ರೀಸು ಹಚ್ಚಿದ್ದ. ಮಿಕ್ಕಿದ್ದ ಗ್ರೀಸನ್ನು ಪಾಪಣ್ಣನ ಕೈಯಲ್ಲೆ ಕಳುಹಿಸಿ ಟಾಯ್ಲೆಟ್ಟಿನ ಹಿಂದೆ ಇರಿಸಿದ್ದ. ಪಾಪಣ್ಣ ಆ ರಾತ್ರಿ ಊಟವಾದ ಮೇಲೆ ಯಾರಿಗೂ ಕಾಣದಂತೆ ತನ್ನ ಲೋಟಕ್ಕೆ ಗ್ರೀಸು ತುಂಬಿಕೊಂಡು ತಂದಿಟ್ಟುಕೊಂಡು ತಪ್ಪಿಸಿಕೊಳ್ಳುವ ದಿನಕ್ಕಾಗಿ ಕಾಯತೊಡಗಿದ.

ಎರಡು ವಾರದ ನಂತರ ಮತ್ತೆ ಜಿತೇಂದ್ರನ ಡ್ಯೂಟಿ ಬಂದಿತು. ಬೇರೆ ಗಾರ್ಡುಗಳಾದರೆ ರಾತ್ರಿ ಎಲ್ಲೆಲ್ಲಿ ತಿರುಗುವರೆಂದು ಊಹಿಸಲು ಸಾಧ್ಯವಿರಲಿಲ್ಲ. ಆದರೆ ಜೀತೇಂದ್ರ ಮಾತ್ರ ಲೈಬ್ರರಿ ಸೇರಿದರೆ ಹೊರಗೆ ಬರುತ್ತಿದ್ದದ್ದು ಅಪರೂಪಕ್ಕೆ. ಆತನ ಡ್ಯೂಟಿ ಪ್ರಾರಂಭವಾಗಿ ಮೂರನೇ ದಿನ ರಾತ್ರಿ ಲೈಬ್ರರಿಯ ಲೈಟು ಹೊತ್ತುವುದನ್ನೇ ಕಾಯುತ್ತಿದ್ದ ಪಾಪಣ್ಣ ಹನ್ನೆರಡು ಗಂಟೆ ಬಡಿದ ಕೂಡಲೇ ಕೆಲಸ ಪ್ರಾರಂಭಿಸಿದ. ಮೊದಲು ಕೆಳಭಾಗದಲ್ಲಿದ್ದ ಮೂರು ಸರಳುಗಳಿಗೆ ಗ್ರೀಸು ಹಚ್ಚಿದ. ನಂತರ ಚಾಪೆಯ ಕೆಳಗಿದ್ದ ಬ್ಲೇಡು ಹೊರಗೆ ತೆಗೆದು ಗ್ರೀಸು ಹಚ್ಚಿದ ಜಾಗದಲ್ಲಿ ನಿಧಾನವಾಗಿ ಕತ್ತರಿಸತೊಡಗಿದ. ಪೈಪು ಕತ್ತರಿಸುವ ಬ್ಲೇಡು ತುಂಬಾ ತೆಳ್ಳಗಿತ್ತು. ಆದರೆ ಆ ತುಕ್ಕು ಹಿಡಿದ ಕಂಬಿಗಳನ್ನು ಕತ್ತರಿಸಲು ಅಷ್ಟು ಸಾಕಿತ್ತು. ಕೆಲಸ ಸ್ವಲ್ಪ ನಿಧಾನವಾದರೂ ಚೂರು ಶಬ್ದ ಬರದೇ ಎರಡು ಸರಳುಗಳನ್ನು ಕತ್ತರಿಸಿದ್ದಾಯ್ತು. ಮೂರನೇ ಸರಳನ್ನು ಅಷ್ಟೇ ಜಾಗರೂಕತೆಯಿಂದ ಕತ್ತರಿಸತೊಡಗಿದ ಪಾಪಣ್ಣ ಲೈಬ್ರರಿಯ ದೀಪ ಆರಿದ್ದನ್ನು ಗಮನಿಸಲೇ ಇಲ್ಲ. ಇದ್ದಕ್ಕಿದ್ದಂತೆ ಕತ್ತರಿಸುತ್ತಿದ್ದ ಬ್ಲೇಡಿನ ಮೇಲೆಯೇ ನೇರವಾಗಿ ಟಾರ್ಚಿನ ಬೆಳಕೊಂದು ಬಿದ್ದಾಗ ಬೆಚ್ಚಿದ ಪಾಪಣ್ಣ ಬ್ಲೇಡು ಕೈಬಿಟ್ಟು ರಪ್ಪನೆ ಗೋಡೆಯ ಹಿಂದೆ ಸರಿದು ಕುಳಿತುಕೊಂಡ.

‘ಪಾಪಣ್ಣ., ಏಯ್ ಪಾಪಣ್ಣ..!’ ಜೀತೇಂದ್ರ ಜೋರಾಗಿ ಕಿರುಚಿದ. ಲೈಬ್ರರಿಯ ಕಡೆಯಿಂದ ಬಂದ ಟಾರ್ಚಿನ ಬೆಳಕು ಆಚೀಚೆ ತಿರುಗಿ ಆರಿತು. ಪಾಪಣ್ಣ ಚೂರು ಅಲ್ಲಾಡದೇ ಕುಳಿತಲ್ಲಿಯೇ ಕುಳಿತಿದ್ದ. ಬೆಳಕು ಆರಿದ್ದೇ ಬ್ಲೇಡು ಕೆಳಗೆ ಬಿಟ್ಟು ಅದರ ಮೇಲೆ ತೊಡೆ ಹಾಕಿ ಕುಳಿತುಕೊಂಡ. ಜೀತೇಂದ್ರ ತಾನು ಕಂಬಿ ಕತ್ತರಿಸುತ್ತಿದ್ದನ್ನು ನೋಡಿಬಿಟ್ಟಿದ್ದರೆ? ಆತ ತನ್ನ ಸೆಲ್ಲಿನೆಡೆಗೆ ಬರುತ್ತಿರುವುದು ಅರಿವಾಗಿ ಎದೆ ಜೋರಾಗಿ ಬಡಿದುಕೊಳ್ಳತೊಡಗಿತು. ತನಗೆ ಆತನ ಹೆಜ್ಜೆ ಸಪ್ಪಳ ಕೇಳುತ್ತಿರುವಷ್ಟೆ ಸ್ಪಷ್ಟವಾಗಿ ಆತನಿಗೆ ನನ್ನ ಎದೆ ಬಡಿತ ಕೇಳುತ್ತಿರಬಹುದು ಎನ್ನಿಸಿತು ಪಾಪಣ್ಣನಿಗೆ. ಬಾಗಿಲಲ್ಲಿ ನಿಂತು ಕಂಬಿಯೊಳಗಿಂದ ಇಣುಕಿದ ಜೀತೇಂದ್ರ ಒಳಗೆ ಬಿದ್ದ ನೆರಳನ್ನೆ ನೋಡುತ್ತಾ ಉಸಿರು ಬಿಗಿಹಿಡಿದು ಕೂತಿದ್ದ ಪಾಪಣ್ಣನ ಮುಖಕ್ಕೆ ಟಾರ್ಚು ಬಿಟ್ಟ. ಪಾಪಣ್ಣ ಬೆಚ್ಚಿದವನಂತೆ ನಟಿಸಿ ಹಿಂದಕ್ಕೆ ತಿರುಗಿದ.

‘ಯೋ ಪಾಪಣ್ಣ, ಎದ್ದಿದ್ಯಾ? ಕೂಗಿದ್ ಕಿವಿ ಕೇಳಲ್ವೇನ್ ನಿಂಗೆ? ’ ಜೀತೇಂದ್ರ ಟಾರ್ಚು ಆರಿಸಿ ಕೇಳಿದ.

‘ಯಾವಾಗ ಜೀತೇಂದ್ರಪ್ಪೋ, ಕೇಳಲೇ ಇಲ್ಲ’ ಎಷ್ಟು ಪ್ರಯತ್ನಿಸಿರದೂ ಮಾತು ತಡವರಿಸಿತು. ಮಾತುಗಳು ಹೊರಗೆ ಹೊರಡುತ್ತಲೇ ತೊಡೆಯ ಕೆಳಗಿದ್ದ ಬ್ಲೇಡು ತಣ್ಣಗೆ ಕೊರೆದು ಮೈಯೆಲ್ಲಾ ಚಳಿಯಾದಂತಾಯಿತು.

   ‘ನಿಂಗೆ ಗ್ಯಾನ ಎಲ್ಲಿರ್ತದೆ ಬಿಡು. ಏನಿಲ್ಲಾ, ಮೊನ್ನೆ ಒಂದಷ್ಟು ಹೊಸ ಬುಕ್ಸ್ ತರ್ಸಿದ್ನಲ್ಲಾ, ಎಲ್ ಜೋಡ್ಸಿದ್ಯಾ ಕೇಳಕ್  ಬಂದೆ’

      ಪಾಪಣ್ಣನ ಶ್ವಾಸದಿಂದ ಸಮಾಧಾನದ ನಿಟ್ಟುಸಿರೊಂದು ಹೊರಗೆ ಬಂದಿದ್ದು ಜೀತೇಂದ್ರನಿಗೆ ಆ ಕತ್ತಲೆಯಲ್ಲಿ ಕಾಣಲಿಲ್ಲ. ಪಾಪಣ್ಣ ಈಗ ಸ್ವಲ್ಪ ಜೋರಾಗಿಯೇ ಮಾತನಾಡಿದ. ‘ಅವನ್ನ ಜೋಡ್ಸಿಲ್ಲಪ್ಪೋ, ಆ ಮೂರನೇ ಲೈನಗೆ ಆ ಗಾಂಧೀ ಪೋಟೋತವನೇ ಮಡ್ಗಿದಿನಿ, ಬಂಡ್ಲುನೂ ಬಿಚ್ಚಿಲ್ಲ’  

‘ಹೌದಾ, ನೋಡ್ತಿನಿ ಬಿಡು. ಟೀ, ಗೀ ಏನಾರ ಕುಡಿತ್ಯಾ?’

      ‘ಟೀಯಾ? ಬ್ಯಾಡ, ನಿದ್ದೆ ಒಂಟೋಯ್ತದೆ’

‘ಈಗೇನ್ ಗೊರ್ಕೆ ಹೊಡ್ಕಂಡ್ ನಿದ್ದೆ ಮಾಡ್ತಿದಿಯಾ ಒಂಟೋಗಕ್ಕೆ, ಕಥೆ ಪಾಪಣ್ಣ ನೀನೊಬ್ಬ’

ಜೀತೇಂದ್ರ ಪಕ್ಕದಲ್ಲಿದ್ದ ಸೆಲ್ಲುಗಳೊಳಕ್ಕೆ ಟಾರ್ಚು ಬಿಡುತ್ತಾ ಲೈಬ್ರರಿಯ ಕಡೆಗೆ ನೆಡೆದು ಹೋಗಿ ಮತ್ತೆ ದೀಪ ಹೊತ್ತಿಸಿದ. ಪಾಪಣ್ಣನಿಗೆ ಹೋದ ಜೀವ ಬಂದಂತಾಯ್ತು. ತಾನು ಸಿಕ್ಕಿಬಿದ್ದಿದ್ದರೆ? ಅಲ್ಲಿಯವರೆಗೂ ಪಾಪಣ್ಣ ಅದರ ಬಗ್ಗೆ ಚಿಂತಿಸಿಯೇ ಇರಲಿಲ್ಲ. ಹೊರಗೆ ಹೋದ ಮೇಲೂ ತಾನು ಸಿಕ್ಕಿಬಿದ್ದರೆ ಏನು ಮಾಡುವುದೆಂಬ ಕಲ್ಪನೆಯೂ ಇರಲಿಲ್ಲ. ಆತನ ತಲೆಯ ತುಂಬಾ ಮಣಿಕರ್ಣಿಕಾಳನ್ನು ಕಾಣುವ ಯೋಚನೆಯೇ ತುಂಬಿಕೊಂಡಿತ್ತು. ಆದರೆ ಈಗೇಕೋ ಸಣ್ಣಗೆ ಭಯ ಶುರುವಾಯಿತು. ಪ್ಲಾನು ಮುಂದಕ್ಕೆ ಹಾಕೋಣಾವೇ ಎನ್ನಿಸಿತು. ಶಿಕ್ಷೆ ಮುಗಿಸಿ ಬಿಡುಗಡೆಗಾಗಿ ಕಾಯುವ ಯೋಚನೆಯೂ ಸುಳಿದು ಹೋಯ್ತು.

ಆದರೆ ಮತ್ತೆ ಮಣಿಕರ್ಣಿಕಾಳ ನೆನಪಾಯ್ತು, ಆದದ್ದಾಗಲಿ ಈಗ ಹಿಂದೇಟು ಹಾಕುವುದು ಬೇಡವೆಂದು ಮತ್ತೆ ಸರಳು ಕತ್ತರಿಸುವುದನ್ನು ಮುಂದುವರೆಸಿದ. ಮೊದಲೆರಡನ್ನು ಕತ್ತರಿಸಿದ ಅನುಭವದಿಂದ ಮೂರನೆಯದನ್ನು ಕತ್ತರಿಸಲು ಹೆಚ್ಚೇನು ಸಮಯ ಹಿಡಿಯಲಿಲ್ಲ. ಇನ್ನು ತಡಮಾಡದೇ, ಬ್ಲೇಡನ್ನು ಮತ್ತೆ ಚಾಪೆಯ ಕೆಳಗೆ ಸೇರಿಸಿ ತನ್ನ ಬಲವನ್ನೆಲ್ಲಾ ಉಪಯೋಗಿಸಿ ಸರಳುಗಳನ್ನು ಬಗ್ಗಿಸಿದ. ನುಸುಳಿ  ಹೊರಬಂದಿದ್ದಾದ ಮೇಲೆ ಸರಳನ್ನು ಮತ್ತೆ ನೇರ ಮಾಡಲು ನೋಡಿದ. ಅವೇಕೋ ಮತ್ತೆ ಮೊದಲಿನಂತಾಗಲು ಒಪ್ಪದೇ ನಾಯಿ ಬಾಲದಂತೆ ಡೊಂಕಾಗಿಯೇ ನಿಂತಿದ್ದವು. ಪಾಪಣ್ಣ ಪ್ರಯತ್ನ ಬಿಟ್ಟು ಎದ್ದು ಕಂಬಗಳ ಮರೆಯಲ್ಲೇ ಓಡಿ ಜೈಲಿನ ಹಿಂಬದಿ ಸೇರಿದ.


ಜೈಲನ್ನು ಒಂದು ಸುತ್ತು ಹೊಡೆದು ಹಿಂದಿನ ಗೋಡೆಯ ಬಳಿಗೆ ಬಂದು ನಿಂತ. ಆಗಲೇ ಅವನಿಗೆ ಆತನ ತಪ್ಪಿನ ಅರಿವಾದದ್ದು. ವರುಷ ಪೂರ್ತಿ ಪ್ರತಿದಿನವೂ ಆ ಗೋಡೆಯನ್ನು ನೋಡಿದ್ದರೂ, ಕೆಲವೊಮ್ಮೆ ಅದಕ್ಕೇ ಒರಗಿ ಮಣಿಕರ್ಣಿಕಾಳ ಜೊತೆಗೆ ಮಾತನಾಡಿದ್ದರೂ, ಯಾರೂ ಇಲ್ಲದಿದ್ದಾಗ ಅದಕ್ಕೆ ಉಚ್ಚೆ ಹೋಯ್ದಿದ್ದರೂ ಎಂದೂ ಅದರ ಎತ್ತರವನ್ನು ಗಮನಿಸಿಯೇ ಇರಲಿಲ್ಲ ಸುಲಭವಾಗಿ ನೆಗೆದು ಕಂಬಿ ಹಿಡಿದು ಹಾರಿ ಹೊರಟುಬಿಡಬಹುದು ಎಂದುಕೊಂಡಿದ್ದ ಗೋಡೆ ಈಗ ಇದ್ದಕ್ಕಿದ್ದಂತೆ ದೊಡ್ಡದಾಗಿ ಬೆಳೆದು ನಿಂತಿದೆ ಎನ್ನಿಸಿತು.

ಗೋಡೆಯಲ್ಲಿ ಕಾಲಿಟ್ಟು ಹತ್ತಲು ಜಾಗವಿದೆಯೇ ಎಂದು ತಡಕಾಡಿದ. ಏನೂ ಕಾಣದೆ ನಿರಾಶನಾಗಿ ಕತ್ತಲಲಿ ನಿಂತು ಸುತ್ತಲೂ ನೋಡುತ್ತಿರುವಾಗ ಕಂಡಿತು ಲಾರೆನ್ಸ್ ಗಾರ್ಡನ್ನಿನಲ್ಲಿ ಗೋಡೆಗೆ ಸಮನಾಗಿ ಬೆಳೆದು ನಿಂತಿದ್ದ ಆ ನುಗ್ಗೆ ಮರ. ಒಮ್ಮೆ ಆತನ ಯೋಚನೆಗೆ ಅವನಿಗೆ ನಗು ಬಂದಿತು. ಆ ಮರ  ಭಾರವನ್ನು ತಡೆಯುವುದು ಸಾಧ್ಯವೇ ಇರಲಿಲ್ಲ. ಆದರೆ ಹೆಂಡತಿ ಸತ್ತ ಮೇಲೆ ಬಹಳ ಇಳಿದು ಹೋಗಿದ್ದಾನೆಂದು ಎಲ್ಲರೂ ಮಾತನಾಡುತ್ತಿದ್ದದು ನೆನಪಾಯ್ತು. ಅಲ್ಲಿಯವರೆಗೆ ಎಂದೂ ಆತನಿಗೆ ಹಾಗನ್ನಿಸದಿದ್ದರೂ ಇವತ್ತೇಕೋ ಅದು ನಿಜವಿರಬೇಕು ಎನ್ನಿಸಿತು. ತಾನು ಬಹಳ ಇಳಿದು ಹೋಗಿದ್ದೇನೆ, ಈ ನುಗ್ಗೇ ಮರವೂ ತನ್ನ ಭಾರವನ್ನು ತಡೆಯಬಲ್ಲದು ಎಂದು ಮನದಲ್ಲೇ ಹೇಳಿಕೊಂಡು ಸೀದಾ ನುಗ್ಗೆಮರದ ಬಳಿ ಬಂದು ನಿಂತನು.

ಸಿಂಹಾಸನವನ್ನೇರುವ ರಾಜ ಮೊದಲು ಅದನ್ನು ಮುಟ್ಟಿ ನಮಸ್ಕರಿಸುವಂತೆ ನುಗ್ಗೇ ಮರಕ್ಕೆ ನಮಸ್ಕಾರ ಮಾಡಿ ಆತನ ತೋಳಿನಷ್ಟೇ ತೆಳ್ಳಗಿದ್ದ ಕೊಂಬೆಗಳನ್ನು ಹಿಡಿದು ನಿಧಾನವಾಗಿ ಅದರ ನಡುವೆ ಬಲಗಾಲಿಟ್ಟು ಮೇಲಕ್ಕೇರಿದ. ಆತನ ಭಾರಕ್ಕೆ ಮರ ಸೀದಾ ಹಿಂದಕ್ಕೆ ಬಾಗಿತು. ಪಾಪಣ್ಣ ನಿಧಾನವಾಗಿ ಅದಕ್ಕಿಂತ ಚೂರು ಎತ್ತರದಲ್ಲಿದ್ದ ಕೊಂಬೆಗಳ ಕವಲಿನಲ್ಲಿ ಎಡಗಾಲಿಟ್ಟು ಬಾವಲಿಯಂತೆ ನೇತಾಡುತ್ತಾ ಅತ್ತಿತ್ತ ತೂಗುತ್ತಿದ್ದ ಮರವನ್ನು ಸಮವಾಗಿರಿಸಿ ಮೇಲೆ ನೋಡಿದ. ಗೋಡೆ ಇನ್ನೂ ಸ್ವಲ್ಪ ಎತ್ತರದಲ್ಲೇ ಇತ್ತು. ವಾಮನ ಭೂಮಿ ಆಕಾಶಗಳ ಮೇಲೆ ಎರಡೂ ಕಾಲಿಟ್ಟಂತೆ ಎರಡೂ ಕೊಂಬೆಗಳ ಮೇಲೆ ಕಾಲಿಟ್ಟು ಮೂರನೇ ಕಾಲಿಡಲು ಜಾಗ ಹುಡುಕಿದ. ಅದರೆ ಮರದ ಮೇಲೆ ಮತ್ತಿನ್ಯಾವ ಕೊಂಬೆಯೂ ಇರಲಿಲ್ಲ. ಏನೋ ಯೋಚಿಸಿ ಉಲ್ಟಾ ತಿರುಗಿ ಗೋಡೆಗೆ ಬಲಗಾಲು ಕೊಟ್ಟು ಮೇಲಿದ್ದ ಕಬ್ಬಿಣದ ಕಂಬಿಯನ್ನೇ ನೋಡುತ್ತಾ ಮನೆದೇವರಾದ ಉಳ್ಳೇಕಾಲು ಲಕ್ಕಮ್ಮನನ್ನು ನೆನೆದು ಮೇಲಕ್ಕೆ ಚಿಮ್ಮಿದ. ನೆಗೆದ ರಭಸಕ್ಕೆ ಆತನಿಗೇ ತಿಳಯದೇ ಗಂಟಲಿನಿಂದ ಉದ್ಗಾರವೊಂದು ಹೊರಬಿದ್ದು, ಎಡಗಾಲಿಟ್ಟಿದ ಕೊಂಬೆ ಪಟ್ಟನೆ ಮುರಿದ ಸದ್ದಿನೊಡನೆ ಬೆರೆತುಹೋಯ್ತು. ಆದಾದ ಮೇಲೆ ಉಳಿದ ನಿಶ್ಯಬ್ದದಲ್ಲಿ ಕಂಬಿಯನ್ನು ಪಾಪಣ್ಣ ಎರಡೂ ಕೈಗಳಿಂದ ಬಿಗಿಯಾಗಿ ಹಿಡಿದು ನೇತಾಡುತ್ತಿದ್ದ.

ಕಂಬಿಯೇನೋ ಸಿಕ್ಕಿತು. ಆದರೆ ಅದನ್ನು ಬಳಸಿ ಗೋಡೆಯ ಮೇಲೆ ಹತ್ತಲು ಪ್ರಯತ್ನಿಸಿದೊಡನೆ ಕಂಬಿ ಅಲುಗಾಡುತ್ತಾ ಗೋಡೆಯಲ್ಲಿ ಬಿರುಕು ಕಾಣಿಸಿತು. ಹೆಚ್ಚು ಪ್ರಯತ್ನಿಸಿದಷ್ಟೂ ಬಿರುಕು ದೊಡ್ಡದಾಗಿ ಕಂಬಿಯೂ ಬಗ್ಗಿತು. ಪಾಪಣ್ಣ ಉಸಿರು ಬಿಗಿ ಹಿಡಿದು ಅಲುಗುತ್ತಿದ್ದ ಕಂಬಿಗೆ ಕಟ್ಟಿದ್ದ ಮುಳ್ಳು ತಂತಿಗೆ ಕೈಹಾಕಿ ಜಗ್ಗಿ ಮೇಲೇರತೊಡಗಿದ. ಮುಳ್ಳುಗಳು ಕೈಗೆ ನಾಟಿಕೊಂಡು ರಕ್ತ ಸೋರತೊಡಗಿತು. ಪಾಪಣ್ಣ ಹಲ್ಲು ಕಚ್ಚಿ ನೋವು ತಡೆಯುತ್ತಾ ಮೇಲಕ್ಕೆ ಬಂದು ಗೋಡೆಯ ಮೇಲೆ ನಿಂತುಬಿಟ್ಟ. ಕತ್ತಲಿನಲ್ಲಿ ವಿಶಾಲವಾದ ಚಿತ್ರದುರ್ಗ ಕಾಣಿಸಿತು. ನಿಧಾನವಾಗಿ ತಂತಿಯನ್ನು ಹಿಡಿದು ಗೋಡೆಯ ಹಿಂಬದಿಗೆ ಬಂದ. ಮರುದಿನದ ಸಂತೆಗೆ ಬಂದ ಒಂದಷ್ಟು ಎತ್ತಿನಗಾಡಿಗಳು ನಿಂತಿದ್ದವು. ಅವುಗಳಿಂದ ಇಳಿಸಿದ ತರಕಾರಿ ಮೂಟೆಗಳನ್ನು ಗೋಡೆಯ ಪಕ್ಕದಲ್ಲೇ ಪಾಪಣ್ಣನಿಗಾಗಿಯೇ ಎಂಬಂತೆ ಜೋಡಿಸಲಾಗಿತ್ತು. ಅದರ ಮೇಲೆ ನೆಗೆದ ಪಾಪಣ್ಣ ಕೈಯಲ್ಲಿ ಸುರಿಯುತ್ತಿದ್ದ ರಕ್ತವನ್ನು ಬಿದ್ದಿದ್ದ ಖಾಲಿ ಚೀಲವೊಂದಕ್ಕೆ ಒರೆಸಿ ಸಂತೆ ಮೈದಾನವನ್ನು ದಾಟಿ ಕತ್ತಲಲ್ಲಿ ನೆಡೆಯತೊಡಗಿದ.




Sunday, June 03, 2018

ಡೈರೀಸ್ ಆಫ್ ದಾಳಿ ಪಾಪಣ್ಣ - 2


ಪಾಪಣ್ಣನ ಪ್ರೇಮ ಪ್ರಸಂಗ



ಹಿಂದಿನ ಭಾಗದಲ್ಲಿ : ಗೋಲ್ಡನ್ ಹಾರ್ಸ್ ಬಾರಿಗೆ ಬಂದಿದ್ದ ಭೂಗತ ವ್ಯಕ್ತಿಯೊಬ್ಬ, ಅಲ್ಲಿದ್ದವರನೆಲ್ಲಾ ಭಯಭೀತಗೊಳಿಸಿ ಏನು ಆಗಿ ಇಲ್ಲವೆಂಬಂತೆ ಮಾತನಾಡಿ ತಾನು ಕಡಿದು ತಂದಿದ್ದ ರಕ್ತಸಿಕ್ತವಾದ ಕೈಯೊಂದಿಗೆ ಹೊತಬೀಳುತ್ತಾನೆ.


ಬಂದ ಆಗುಂತಕ ವ್ಯಕ್ತಿ ಹೊರಗೆ ಹೋಗಿ ಸುಮಾರು ಹೊತ್ತಾದರೂ ವೀರಭದ್ರಪ್ಪ, ನಾರಾಯಣ ಹಾಗು ಶ್ರೀನಿವಾಸ ಗರ ಬಡಿದವರಂತೆ ನಿಂತಲ್ಲಿಯೇ ನಿಂತಿದ್ದರು.

‘ವೀರಣ್ಣ, ಹೋಗ್ ಬತ್ತಿನಿ ನಾನು ಪೋಲೀಸ್ ಕರ್ಕಂಡು ಬರಕ್ಕೆ?’ ಮೊದಲು ಮಾತನಾಡಿದ್ದು ನಾರಾಯಣ.

ವೀರಭದ್ರಪ್ಪ, ಅದು ಕೇಳಿಸದಂತೆ ನಿಂತಲ್ಲಿಯೇ ನಿಂತಿದ್ದವರು, ಸ್ವಲ್ಪ ಹೊತ್ತಿನ ನಂತರ ‘ಬೇಡ ನಾರಾಯ್ಣ, ಈಗ ಸುಮ್ನೆ ಮನೆಗೋಗಿ ಮಲ್ಕಳಿ. ಇಲ್ ನೆಡದಿದ್ ಯಾರ್ಗೂ ಹೇಳ್ಬೇಡಿ.’ ಎಂದು ಸಮಾಧಾನದಲ್ಲಿ ಹೇಳಿ ಅಲ್ಲಿಯೇ ಬಾರಿನ ಕುರ್ಚಿಯೊಂದರ ಮೇಲೆ ಕುಳಿತರು. ಸೀನ ಹಾಗು ನಾರಾಯಣ ಮುಖ ನೋಡಿಕೊಂಡರು.

‘ಈಗ್ಲೇ ಹೇಳದೊಳ್ಳೇದು ಅಲ್ವೇನಣ್ಣೋ?’ ನಾರಾಯಣ ಹೇಳಿದ.

‘ಲೇ, ಆವಯ್ಯ ನಂಗೆ ಗುರ್ತಿನೋನೋ ಕಣ್ಲಾ, ಅವನು ಹೆಸ್ರೇಳ್ದಾ ಕೇಳಸ್ಕಂಡ್ರಾ?’ ಇಬ್ಬರೂ ಇಲ್ಲವೆಂಬಂತೆ ತಲೆಯಾಡಿಸಿದರು.

‘ಪಾಪಣ್ಣ ಅಂತ ಅವ್ನ ಹೆಸ್ರು. ಊರ್ಕಡೆ ಎಲ್ಲಾ ದಾಳಿ ಪಾಪಣ್ಣ ಅಂತ್ಲೇ ಫೇಮಸ್ಸು.’

1985

ದಾಳಿ ಪಾಪಣ್ಣ ಸಾಮಾನ್ಯ ವ್ಯಕ್ತಿಯಲ್ಲ. ಆತನ ಕಥೆ ಶುರುವಾಗುವುದೇ ಜೈಲಿನಲ್ಲಿ. ಇಲ್ಲ, ಅವನೇನು ಕೃಷ್ಣನಂತೆ ಸೆರೆಮನೆಯಲ್ಲಿ ಜನಿಸಲಿಲ್ಲ. ಬದಲು ವಸುದೇವನಂತೆ ಜೈಲಿನಲ್ಲಿದ್ದಾಗಲೇ ಮಗುವೊಂದಕ್ಕೆ ಜನ್ಮ ಕೊಟ್ಟಿದ್ದ. ಮೂವತ್ತೆರಡು ವರುಷದ ಮದುವೆಯಾಗದ ಮಹಿಳಾ ಪೇದೆ ಮಣಿಕರ್ಣಿಕಾ ಇದ್ದಕ್ಕಿದ್ದಂತೆ ಕುಂತಿಯಂತೆ ಬಸುರಾಗಿ ಮೆಟರ್ನಟಿ ಲೀವು ಕೇಳಿದಾಗ ಎಲ್ಲರೂ ಜೈಲರಾಗಿದ್ದ ಶಿವಶಂಕರನೋ, ಆಫೀಸು ಕ್ಲರ್ಕಾಗಿದ್ದ ನಂಜುಂಡಪ್ಪನೋ, ಆಗಾಗ ಮಣಿಕರ್ಣಿಕಾಳನ್ನು ಟೀ ಕುಡಿಯಲು ಕರೆದುಕೊಂಡು ಹೋಗುತ್ತಿದ್ದ, ಇನ್ನೂ ಪ್ರೊಬೇಷನರಿ ಪಿರಿಯಡ್ಡು ಪೂರೈಸದ ಜಿತೇಂದ್ರನೋ ಕಾರಣವಿರಬೇಕು ಎಂದುಕೊಂಡರು. 12ನೇ ಸೆಲ್ಲಿನಲ್ಲಿದ್ದ ಹುರಿ ಮೀಸೆಯ ಖೈದಿಯೊಬ್ಬ ಇದಕ್ಕೆ ಕಾರಣವಿರಬಹುದು ಯಾರಿಗೂ ಊಹಿಸಲೂ ಸಾಧ್ಯವಿರಲಿಲ್ಲ.

ಪಾಪಣ್ಣ ಜೈಲಿಗೆ ಬಂದದ್ದು ಒಂದು ಅಟೆಂಪ್ಟ್ ಟು ಮರ್ಡರ್ ಕೇಸಿಗಾಗಿ. ಬಸುರಿಯಾಗಿದ್ದ ತನ್ನ ಹೆಂಡತಿಯನ್ನು ಆಸ್ಪತ್ರಗೆ ಕರೆದುಕೊಂಡು ಹೋಗಲು ಅರ್ಧ ದಿನ ರಜಾ ಕೇಳಿದಾಗ, ತಾನು ಕೆಲಸ ಮಾಡುತ್ತಿದ್ದ ಕಿರಾಣಿ ಅಂಗಡಿಯ ಮಾಲಿಕ ಬಸವಪ್ಪ ಶೆಟ್ಟಿ ನಿರಾಕರಿಸಿದ್ದ. ಮಾತಿಗೆ ಮಾತು ಬೆಳೆದು ತನ್ನ ಮುದ್ದಿನ ಹೆಂಡತಿ ಯಾರಿಗೆ ಕದ್ದು ಬಸುರಾಗಿದ್ದಾಳೋ ಎಂದು ಶೆಟ್ಟಿ ವ್ಯಂಗ್ಯ ಮಾಡಿದಾಗ ಸಿಟ್ಟಿಗೆದ್ದು ಕೈಗೆ ಸಿಕ್ಕ ದಪ್ಪ ಬೀಗದಿಂದ ಆತನ ತಲೆಗೆ ಬಾರಿಸಿದ್ದ. ಶೆಟ್ಟಿ ಗಟ್ಟಿ ಇದ್ದ, ಬದುಕಿಕೊಂಡ. ಆದರೆ ಪಾಪಣ್ಣನ ಮೇಲೆ ಯಾವ್ಯಾವುದೋ ಕೇಸುಗಳು ಬಿದ್ದು 2 ವರುಷಗಳ ಕಾಲ ಜೈಲು ಶಿಕ್ಷೆಯಾಯಿತು. ಬರಿ ಎರಡು ವರುಷವಾದ್ದರಿಂದ ಸೆಂಟ್ರಲ್ ಜೈಲಿಗೆ ಕಳುಹಿಸದೆ ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲೇ ಇಟ್ಟುಕೊಳ್ಳಲಾಯಿತು. ಹೀಗೆ ತನಗೆ ರಜಾ ನೀಡದಿದ್ದಕ್ಕೆ ಶೆಟ್ಟಿಯ ಮನೆ ಮಂದಿಯೆಲ್ಲಾ ರಜಾ ಹಾಕಿ ಅವನನ್ನು ಕಾಣಲು ಬರುವಂತೆ ಮಾಡಿ ತಾನು ಜೈಲು ಸೇರಿದ್ದ ಪಾಪಣ್ಣ.

ಇತ್ತ ಅವನ ಹೆಂಡತಿ ಗಿರಿಜಾ ತುಂಬು ಬಸುರಿ. ತನ್ನ ಗಂಡ ಹೀಗೆ ಅಚಾನಕ್ಕಾಗಿ ಜೈಲು ಸೇರಿದ ಮೇಲೆ ಅವಳಿಗೆ ದಿಕ್ಕೇ ತೋಚದಾಯಿತು. ಮದುವೆಯಾದಗಿನಿಂದ ಎಂದೂ ಗಂಡನನ್ನು ಬಿಟ್ಟಿರದ ಅವಳಿಗೆ ಗಂಡನ ಪ್ರೀತಿಯಿಲ್ಲದೇ ಬದುಕಲು ಕಷ್ಟವಾಯ್ತು. ವಾರಕ್ಕೊಂದು ಸಲ ತಪ್ಪದೇ ಜೈಲಿಗೆ ಬರುತ್ತಿದ್ದಳು. ಬರುವಾಗ ಆತನಿಗೆಂದು ಕೈಲಾದ ಮಟ್ಟಿಗೆ ರುಚಿರುಚಿಯಾದ ಅಡುಗೆಗಳನ್ನು ಮಾಡಿ ತರುತ್ತಿದ್ದಳು. ಕೈಯಾರೆ ತಿನ್ನಿಸುತ್ತಾ ಸುತ್ತ ಮುತ್ತಲಿನ ಪರಿವೆಯೇ ಇಲ್ಲದೇ ಆತನಿಗೆ ಒದಗಿದ ಕಷ್ಟವನ್ನು ನೋಡಿ ಜೋರಾಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಪಾಪಣ್ಣ ಸರಳುಗಳ ನಡುವಿನಿಂದ ಕೈತೂರಿಸಿ ಕಣ್ಣೊರೆಸಿ ಅವಳ ತುಂಬಿದ ಒಡಲ ತಡವುತ್ತಾ ನಿಂತುಬಿಡುತ್ತಿದ್ದ. ಭೇಟಿಯ ಅವಧಿ ಮುಗಿದರೂ ಅವಳ ಕಣ್ಣೀರಿನ ಕೂಗು ನಿಲ್ಲುತ್ತಲೇ ಇರಲಿಲ್ಲ. ಗಿರಿಜಾಳನ್ನು ಹೊರಗೆ ಕಳುಹಿಸುವ ಕೆಲಸ ಅಲ್ಲಿದ್ದ ಏಕೈಕ ಮಹಿಳಾ ಪೇದೆಯಾಗಿದ್ದ ಮಣಿಕರ್ಣಿಕಾಳ ಪಾಲಿಗೆ ಬೀಳುತ್ತಿತ್ತು. ಸಮಯವಾಯಿತೆಂದು ಎಷ್ಟು ಹೇಳಿದರೂ ಕೇಳದೇ ಗೋಗರೆಯುತ್ತಾ ನಿಂತುಬಿಡುತ್ತಿದ್ದಳು. ಪಾಪಣ್ಣ ಕೂಡ ‘ಮೇಡಮ್ನೋರೆ, ನಮ್ ಹೆಂಗುಸ್ರು ಬಸ್ರಿ, ಒಂಚೂರು ದಾಕ್ಷಿಣ್ಯ ತೋರ್ಸಿ, ನಿಮ್ ದಮ್ಮಯ್ಯ’ ಎನ್ನುತಿದ್ದ.

ತನಗಿಂತ ಚಿಕ್ಕ ವಯಸ್ಸಿನವಳಾದರೂ ತಾಯಿಯಾಗುವ ಸೌಭಾಗ್ಯ ಪಡೆದಿದ್ದ ಗಿರಿಜಾ, ಅವಳನ್ನು ಮನಸಾರೆ ಪ್ರೀತಿಸುವ ಗಂಡ ಪಾಪಣ್ಣ, ಅವರಿಬ್ಬರ ಈ ಬಹಿರಂಗ ಪ್ರೇಮ, ಇದೆಲ್ಲವನ್ನು ನೋಡಿ ಅದೇನೇನು ಅನ್ನಿಸುತ್ತಿತ್ತೋ, ಅವರಿಬ್ಬರನ್ನು ಬೇರೆ ಮಾಡಿ ಅವಳನ್ನು ಎಳೆದುಕೊಂಡು ಹೋಗಲು ಕೈ ಸೋತು ಮೈಮರೆತು ನಿಂತು ಅವರನ್ನೇ ನೋಡುತ್ತಿದ್ದಳು. ಪೋಲೀಸಾದರೇನು, ಅವಳದ್ದು ಹೆಂಗರುಳಲ್ಲವೇ? ಪಾಪಣ್ಣ ಹೆಂಡತಿಯನ್ನು ಮಗುವಿನಂತೆ ಅಕ್ಕರೆಯಿಂದ ಮಾತನಾಡುವಾಗೆಲ್ಲಾ ಒಳಗೊಳಗೇ ಏನೇನೋ ಹಂಬಲಿಸುತ್ತಿದ್ದಳು. ಅವನು ಕೇಳಿಕೊಂಡನೆಂದು ಗಿರಿಜಾಳ ಕಡೆಗೆ ಅಗತ್ಯಕ್ಕಿಂತ ಹೆಚ್ಚೇ ಮೃದುವಾಗುತ್ತಿದ್ದಳು.

ಅದೊಂದು ದಿನ ಇಬ್ಬರೂ ಅತ್ತು ಕರೆದದ್ದೆಲ್ಲಾ ಮುಗಿವವರೆಗೂ ಕಾದ ಮಣಿಕರ್ಣಿಕಾ ಗಿರಿಜಾಳನ್ನು ಸಮಾಧಾನ ಮಾಡುತ್ತಾ ಜೈಲಿನ ಬಾಗಿಲಿನವರೆಗು ಕರೆದುಕೊಂಡು ಬಂದಳು. ಆಗ ಗಿರಿಜಾಳಿಗೆ ಆರು ತಿಂಗಳಿರಬೇಕು. ಅತ್ತು ಅತ್ತು ಸುಸ್ತಾಗಿತ್ತೇನೋ ಪಾಪ ನಿಂತಲ್ಲಿಯೇ ತಲೆ ಸುತ್ತಿ ಬಿದ್ದಳು. ಆಗ ಮಣಿಕರ್ಣಿಕಾ ತಾನೆ ಅವಳನ್ನು ಜೈಲಿನ ಕ್ಯಾಂಟೀನಿಗೆ ಕರೆದೊಯ್ದು  ಕಾಫಿ, ತಿಂಡಿ ಕೊಡಿಸಿ ಕೈಗೊಂದಿಷ್ಟು ದುಡ್ಡು ಕೊಟ್ಟು ಕಳುಹಿಸಿದಳು. ಮುಂದಿನ ವಾರ ಬಂದಾಗ ಗಿರಿಜಾ ಪಾಪಣ್ಣನಿಗೆ ಮಣಿಕರ್ಣಿಕಾಳನ್ನು ತೋರಿಸುತ್ತಾ ನೆಡದಿದ್ದೆಲ್ಲವನ್ನು ಹೇಳಿ ಅವಳ ಸಹಾಯವನ್ನು ಹಾಡಿ ಹೊಗಳಿದ್ದಳು. ಬೇಡ ಬೇಡವೆಂದರೂ ಅವಳಿಗೂ ಒಂದು ಬಟ್ಟಲಿಗೆ ನಾಟಿ ಕೋಳಿ ಸಾರಿನ ಊಟ ಹಾಕಿ ಕೊಟ್ಟಳು. ಅಲ್ಲಿಂದ ಶುರುವಾಯ್ತು ಇವರಿಬ್ಬರ ಒಡನಾಟ.

ಪ್ರತಿ ಬಾರಿ ಬಂದಾಗಲೂ ಗಿರಿಜಾ ಮಣಿಯನ್ನು ಬಾಯ್ತುಂಬಾ ಅಕ್ಕಾ ಅಕ್ಕಾ ಎಂದು ಕರೆಯುತ್ತಾ ಅವಳೊಡನೆ ಮಾತಿಗಿಳಿದು ತನ್ನ ಕಥೆಯನ್ನೆಲ್ಲಾ ಹೇಳಿಕೊಳ್ಳುತ್ತಿದ್ದಳು. ತನ್ನ ಗಂಡ ಹೇಗೆ ತನಗಾಗಿ ಶೆಟ್ಟಿಗೆ ಹೊಡೆದು ಜೈಲು ಸೇರಿದನೆಂದು ಹೇಳಿ ಪಾಪಣ್ಣನ ಮೇಲೆ ಅಭಿಮಾನ ಹುಟ್ಟಿಸಿದ್ದಳು. ಪಾಪಣ್ಣ ಕೂಡ ಜೈಲಿನೊಳಗೆ ಆಕೆಯನ್ನು ಕಂಡಾಗಲೆಲ್ಲಾ ಮುಗುಳ್ನಕ್ಕು ಕಣ್ಣಲೇ ಮಾತನಾಡುತ್ತಿದ್ದ. ಬರುಬರುತ್ತಾ ಈ ಕಣ್ಣಿನ ಸಂಭಾಷಣೆಗಳು ನಿಧಾನವಾಗಿ ತುಟಿಗೂ ಶಿಫ್ಟ್ ಆದವು. ಜಿಲ್ಲಾ ಕಾರಾಗೃಹವಾದ್ದರಿಂದ ಇದ್ದವರೆಲ್ಲಾ ಚಿಕ್ಕ ಪುಟ್ಟ ಕೇಸುಗಳಲ್ಲಿ ಒಳಗೆ ಬಂದ ಖೈದಿಗಳೇ. ಅಂತಹ ದೊಡ್ಡ ಅಪರಾಧಿಗಳಾರು ಇರದಿದ್ದರಿಂದ ಪೋಲೀಸರೂ ಕೂಡ ಅಷ್ಟೇನು ಬಿಗಿಯಾಗಿರಲಿಲ್ಲ. ಖೈದಿಗಳೊಂದಿಗೆ ಸಲುಗೆಯಿಂದಲೇ ಮಾತನಾಡಿಕೊಂಡಿದ್ದರು. ಹೀಗಾಗಿ ಲೈಬ್ರರಿಯ ಕಪಾಟು ಒರೆಸುವಾಗಲೋ, ಊಟದ ನಂತರ ಕೈ ತೊಳೆಯುವ ನಲ್ಲಿಯ ಬಳಿ ಬಂದಾಗಲೋ ಅಥವಾ ಪ್ರಾರ್ಥನೆಗೆ ಜೈಲರು ಬರುವುದು ತಡವಾದಾಗಲೋ, ಪಾಪಣ್ಣ ಮಣಿಕರ್ಣಿಕಾರಿಗೆ ಆರಾಮವಾಗಿ ಮಾತನಾಡಲು ಅವಕಾಶ ಸಿಗುತ್ತಿತ್ತು.  

ಅದೊಮ್ಮೆ ಎಂಟು ತಿಂಗಳು ತುಂಬಿದ್ದ ಗಿರಿಜಾ ಇದ್ದಕ್ಕಿದ್ದಂತೆ ಜೈಲಿಗೆ ಬರುವುದನ್ನು ನಿಲ್ಲಿಸಿಬಿಟ್ಟಳು. ಪಾಪಣ್ಣ ಎರಡು ವಾರ ಜೈಲಿನ ಬಾಗಿಲಲ್ಲಿ ಕಾದಿದ್ದವನು, ಮೂರನೇ ವಾರವೂ ಮಡದಿಯ ಸುಳಿವಿಲ್ಲದಿದ್ದಾಗ ಹೇಗೋ ಮಣಿಕರ್ಣಿಕಾಳನ್ನು ಸಂಪರ್ಕಿಸಿ ಹಂಪನೂರಿನಲ್ಲಿದ್ದ ತನ್ನ ಮನೆಯ ವಿಳಾಸವನ್ನು ಕೊಟ್ಟು ಅವಳ ಕ್ಷೇಮ ವಿಚಾರಿಸಿಕೊಂಡು ಬರಬೇಕೆಂದು ಬೇಡಿಕೊಂಡ. ಮಣಿಕರ್ಣಿಕಾ ಅಂದು ಸಂಜೆಯೇ ಡ್ಯೂಟಿ ಮುಗಿಸಿ ಅವನ ಮನೆಗೆ ಹೋದಳು. ಮನೆಯ ಬಾಗಿಲು ತೆರೆದೇ ಇತ್ತು. ಮಂಚದ ಮೇಲೆ ಮಲಗಿದ್ದ ಗಿರಿಜಾ ಅಲ್ಲಿಂದಲೇ ಕ್ಷೀಣ ದನಿಯಲ್ಲಿ ‘ಯಾರೂ’ ಎಂದು ಕೇಳಿದಳು. ಮಣಿಯ ಮುಖ ಕಂಡದ್ದೇ ಅವಳನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಹೊಟ್ಟೆಯ ಭಾರಕ್ಕೆ, ಕಾಲಿನ ಪಾದಗಳು ಊದಿಕೊಂಡು ಯಾರಿಗೂ ಹೇಳಲೂ ಆಗದೇ, ಆಸ್ಪತ್ರೆಗೂ ಹೋಗಲಾಗದೇ ಮನೆಯಲ್ಲೇ ಒದ್ದಾಡುತ್ತಿದ್ದಳು ಗಿರಿಜಾ. ಮಣಿಕರ್ಣಿಕಾ ತಡಮಾಡದೇ ತನಗೆ ಗೊತ್ತಿದ್ದ ಡಾಕ್ಟರೊಬ್ಬರನ್ನು ಮನೆಗೇ ಕರೆಸಿ ಚಿಕಿತ್ಸೆ ಕೊಡಿಸಿದಳು. ಆ ರಾತ್ರಿ ಅಲ್ಲಿಯೇ ಇದ್ದು ಅವಳನ್ನು ನೊಡಿಕೊಂಡಳು. ಗಿರಿಜಾಳಿಗೆ ತನಗಿಂತಲೂ ಜೈಲಿನಲ್ಲಿದ್ದ ತನ್ನ ಗಂಡನ ಬಗ್ಗೆಯೇ ಅವಳಿಗೆ ಯೋಚನೆಯಾಗಿತ್ತು. ಇಡೀ ರಾತ್ರಿ ಗಂಡನ ಬಗ್ಗೆ ಏನೇನೋ ಮಾತನಾಡುತ್ತಿದ್ದವಳು, ಜಾವದಲ್ಲಿ ನಿದ್ದೆಗೆ ಜಾರಿದಳು. ಮಣಿ ಬೆಳಗ್ಗೆ ಎದ್ದು ಮನೆಗೊಂದಷ್ಟು ಸಾಮಾನುಗಳನ್ನು ತಂದು ತಾನೇ ಅಡುಗೆ ಮಾಡಿಟ್ಟು, ಹೆರಿಗಯಾಗುವವರೆಗೆ ಆಗಾಗ ಬಂದು ನೋಡಿಕೊಂಡು ಹೋಗುವುದಾಗಿ ಹೇಳಿದಳು. ಗಿರಿಜಾ ಹೋಗುವಾಗ ಮರೆಯದೇ ತಾನು ಗಂಡನಿಗಾಗಿ ಹಣೆದಿದ್ದ ಬೀಸಣಿಗೆಯನ್ನು ಕೊಟ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದಳು. ಅದೇನನ್ನಿಸಿತೋ, ಮಣಿಕರ್ಣಿಕಾ ತನಗೇ ತಿಳಿಯದೇ ಹೂಂಗುಟ್ಟಿದಳು.

ಮರುದಿನ ಸಂಜೆ ವಿರಾಮ ಮುಗಿಸಿ ಖೈದಿಗಳೆಲ್ಲಾ ಸೆಲ್ಲಿಗೆ ಹೊರಡುತ್ತಿದ್ದರು. ಪಾಪಣ್ಣ ಲೈಬ್ರರಿಯ ಕೀಗಳನ್ನು ತೆಗೆದುಕೊಂಡು ಹೋಗಲು ಬಂದಾಗ ಆಫೀಸು ಕೊಠಡಿಯಿನ್ನು ತೆರೆದೇ ಇತ್ತು. ಸಾಮಾನ್ಯವಾಗಿ ಆಫೀಸು ಸಿಬ್ಬಂದಿ ಕೆಲಸ ಮುಗಿಸಿ ಹೊರಡುತ್ತಾ ಲೈಬ್ರರಿ ಕೀಯನ್ನು ಪಕ್ಕದಲ್ಲಿದ್ದ ನೋಟೀಸು ಬೋರ್ಡಿನ ಮೇಲಿಟ್ಟು ಹೋಗುತ್ತಿದ್ದರು. ಇಂದು ಬಾಗಿಲಿನ್ನು ತೆರೆದಿದ್ದನ್ನು ಕಂಡು ಯಾರೋ ಕೆಲಸ ಮಾಡುತ್ತಿರಬೇಕೆಂದು ಒಳಗೆ ಬಂದ ಪಾಪಣ್ಣನಿಗೆ ಕಂಡದ್ದು ಆತನಿಗಾಗಿ ಕಾದಿದ್ದ ಮಣಿಕರ್ಣಿಕಾ. ಅವನಿಗೆ ನೆಡೆದ ವಿಷಯವನ್ನೆಲ್ಲಾ ಹೇಳಿದಳು.  ಪಾಪಣ್ಣ ತನ್ನ ಹೆಂಡತಿಯ ಈ ಸ್ಥಿತಿಯಲ್ಲಿ ಬಿಟ್ಟು ತಾನು ಈ ಜೈಲಿನಲ್ಲಿರಬೇಕಾಯಿತೇ ಎಂದು ದುಃಖದಿಂದ ಅಳತೊಡಗಿದ. ಮಣಿಕರ್ಣಿಕಾ ಆತನಿಗೆ ಸಮಾಧಾನ ಮಾಡುತ್ತಾ ಡಾಕ್ಟರು ಯಾವ ತೊಂದರೆಯೂ ಇಲ್ಲವೆಂದು ಹೇಳಿದ್ದಾರೆಂದೂ, ಅಲ್ಲದೇ ತಾನೂ ಸಮಯ ಸಿಕ್ಕಾಗಲೆಲ್ಲ ಹೋಗಿ ನೋಡಿಕೊಂಡು ಬರುವೆನೆಂದು ಹೇಳಿದಳು.

ಪಾಪಣ್ಣ ಏನೂ ಮಾತನಾಡದೇ ನಿಂತು ಅವಳನ್ನೇ ನೋಡಿದ. ನಂತರ ಉದ್ವೇಗದಲ್ಲಿ ‘ದೇವ್ತೇ ಮೇಡಮ್ನೋರೇ ನೀವು, ದೇವ್ತೆ’ ನಿಮ್ಮ ಋಣಾನ ಯಾವತ್ತು ಮರೆಯಕ್ಕಿಲ್ಲಾ’ ಎಂದು ಅವಳ ಭುಜ ಹಿಡಿದುಕೊಂಡು ಅಳತೊಡಗಿದ. ಮಣಿಕರ್ಣಿಕಾಳ ಮೈಯಲ್ಲಿ ಅವನ ಈ ದಿಡೀರ್ ಸ್ಪರ್ಷದಿಂದ ಮಿಂಚು ಸಂಚಾರವಾಯ್ತು. ಅಲ್ಲಿಯವರೆಗೂ ಅವಳಿಗೆ ಪುರುಷ ಸ್ಪರ್ಷದ ಅನುಭವವೇ ಇರಲಿಲ್ಲವೇನೋ. ಅರೆಕ್ಷಣ ಸ್ತಬ್ದಳಾದವಳು ನಂತರ ಸಾವರಿಸಿಕೊಂಡು ಭುಜವನ್ನು ಬಿಗಿಯಾಗಿ ಹಿಡಿದಿದ್ದ ಅವನ ಒರಟು ಕೈಗಳಿಂದ ಬಿಡಿಸಿಕೊಂಡು ಹಿಂದೆ ಸರಿದಳು. ಪಾಪಣ್ಣನಿಗೆ ತಕ್ಷಣಕ್ಕೆ ಏನಾಯಿತೆಂದು ತಿಳಿಯಲಿಲ್ಲ. ಕಣ್ಣೊರಿಸಿಕೊಂಡು ನೋಡಿದಾಗ ಮಣಿಕರ್ಣಿಕಾ ನಿಂತಲ್ಲಿಯೇ ಕಂಪಿಸುತ್ತಿದ್ದಳು. ಪಾಪಣ್ಣ ತನ್ನ ಕೈಗಳನ್ನೊಮ್ಮೆ ನೋಡಿಕೊಂಡು ತನ್ನ ತಪ್ಪಿನ ಅರಿವಾಗಿ ಅದೇನೋ ಹೇಳಲು ಬಾಯ್ತೆರೆದ. ಅಷ್ಟರಲ್ಲಿ ತಾನೇ ಮುಂದೆ ಬಂದ ಮಣಿಕರ್ಣಿಕಾ ಅವನನ್ನು ಬಿಗಿಯಾಗಿ ತಬ್ಬಿಕೊಂಡುಬಿಟ್ಟಳು. ತನ್ನ ಮುಖವನ್ನು ಅವನ ಎದೆಯಲ್ಲಿ ಹುದುಗಿಸಿದಳು. ಸುಮಾರು ದಿನಗಳಿಂದ ಹೆಣ್ಣಿನ ಆ ಬಿಸಿಯಪ್ಪುಗೆಯನ್ನೇ ಕಾಣದ ಪಾಪಣ್ಣ ಸ್ವಲ್ಪ ಹೊತ್ತು ಹಾಗೆಯೇ ನಿಂತಿದ್ದವನು ತಾನೂ ನಿಧಾನವಾಗಿ ಅವಳನ್ನು ತಬ್ಬಿಕೊಂಡ. ಹೀಗೆ ಸರಳುಗಳ ಹಿಂದಿರಬೇಕಾದ ಜೈಲಿನ ಬಿಳಿ ಸಮವಸ್ತ್ರವೊಂದು, ಸರಳುಗಳ ಹೊರಗೆ ನಿಂತು ಕಾಯುವ ಖಾಕಿ ಸಮವಸ್ತ್ರದೊಡನೆ ಸರಳವಾಗಿ ಬೆರೆತು ಹೋಗಿತ್ತು.

ಅದಾದ ಮೇಲೆ ಮುಂದಿನ ಎರಡು ವಾರಗಳವರೆಗೆ ಇಬ್ಬರೂ ಒಬ್ಬರನ್ನೊಬ್ಬರು ಕತ್ತೆತ್ತಿ ನೋಡಿದ್ದೇ ಇಲ್ಲ. ಸಮಯ ಸಿಕ್ಕಾಗಲೆಲ್ಲಾ ಅವಸರ ಅವಸರದಲ್ಲಿ ಗಿರಿಜಾಳ ಆರೋಗ್ಯದ ಬಗ್ಗೆ ಹೇಳಿ ಓಡುತ್ತಿದ್ದಳು ಮಣಿಕರ್ಣಿಕಾ. ಪಾಪಣ್ಣ ಏನೂ ಮಾತನಾಡದೇ ನಿಂತು ಕೇಳಿಸಿಕೊಳ್ಳುತ್ತಿದ್ದ. ಆತನಿಗೆ ತನ್ನ ಹೆಂಡತಿಯ ವಿಚಾರ ಕೇಳಿದ ಸಂತಸವಾದರೆ ಮಣಿಕರ್ಣಿಕಾಳ ಭೇಟಿಯಿಂದ ಅದೊಂತರ ಮೈಪುಳಕವಾಗುತ್ತಿತ್ತು. ಅದೊಂದು ದಿನ ಮಣಿಕರ್ಣಿಕಾ ಕಡೆಗೂ ಸಿಹಿ ಸುದ್ದಿಯೊಂದಿಗೆ ಬಂದಳು. ಜೊತೆಯಲ್ಲಿ ತಾನೇ ಮಾಡಿದ್ದ ಮೈಸೂರು ಪಾಕನ್ನೂ ತಂದಿದ್ದಳು. ಪಾಪಣ್ಣನಿಗೆ ಗಂಡು ಮಗುವಾಗಿತ್ತು. ಸುದ್ದಿ ಕೇಳಿ ನಿಂತಲ್ಲೇ ಕುಣಿದಾಡಿದ ಪಾಪಣ್ಣ ಸಿಹಿ ತಿಂದು ಅವಳಿಗೂ ತಿನ್ನಿಸಿದ. ಬರುವ ಭಾನುವಾರ ಹೇಗಾದರೂ ಮಾಡಿ ತಾಯಿ ಮಗು ಇಬ್ಬರನ್ನೂ ಕರೆದುಕೊಂಡು ಬರಬೇಕೆಂದು ಬೇಡಿಕೊಂಡ. ಮಣಿ ಒಪ್ಪಿದಳು

ತಿಂದ ಸಿಹಿಯನ್ನು ಮನಸ್ಸಿನಲ್ಲೂ ಇಟ್ಟುಕೊಂಡು ಭಾನುವಾರ ಬರುವುದನ್ನೇ ಕಾಯತೊಡಗಿದ ಪಾಪಣ್ಣನಿಗೆ, ಶನಿವಾರ ಬೆಳಗಿನ ಜಾವದಲ್ಲಿ ಕಹಿ ಸುದ್ದಿಯೊಂದು ಬಂದಿತು. ಕುಡಿದ ನೀರಿನಲ್ಲೇನೋ ವ್ಯತ್ಯಾಸವಾಗಿ, ಗಿರಿಜಾಳಿಗೆ ಮತ್ತು ಮಗುವಿಗೆ ಇದ್ದಕ್ಕಿದ್ದಂತೆ ವಾಂತಿ ಭೇದಿ ಕಾಣಿಸಿಕೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಮಗು ಉಳಿಯುವುದೇ ಕಷ್ಟವೆಂದಾಗ ಪಾಪಣ್ಣನನ್ನು ಪೋಲೀಸರ ಕಾವಲಿನಲ್ಲಿ ಆಸ್ಪತ್ರೆಗೆ ಕರೆತರಲಾಯಿತು. ಅವರು ಬರುವ ವೇಳೆಗಾಗಲೇ ಮಗುವಿನ ಜೀವ ಹೋಗಿಯಾಗಿತ್ತು. ಪಾಪಣ್ಣನನ್ನು ಕೊನೆಯ ಬಾರಿಗೆ ಕಾಣಬೇಕೆಂದು ಜೀವ ಹಿಡಿದುಕೊಂಡಿದ್ದಳೇನೋ ಗಿರಿಜಾ, ಅವನು ಬರುತ್ತಿದ್ದಂತೆ ಅವನ ಕೈಯನ್ನು ಬಿಗಿಯಾಗಿ ಒತ್ತಿ ಹಿಡಿದುಕೊಂಡು ಪ್ರಾಣ ಬಿಟ್ಟಳು. ಪಾಪಣ್ಣ ಗಿರಿಜಾಳನ್ನು, ಪಕ್ಕದಲ್ಲಿದ್ದ ಎರಡು ದಿನದ ಹಸುಗೂಸನ್ನು ಅವಚಿಕೊಂಡು ಗೋಳಾಡುತ್ತಿದ್ದರು, ತಾನೂ ಕಣ್ಣಿರನ್ನು ತಡೆಯಲಾರದೇ ಮಣಿಕರ್ಣಿಕಾ ಹೊರಗೋಡಿದ್ದಳು.

***

ತಿಂಗಳುಗಳು ಉರುಳಿದವು. ಪಾಪಣ್ಣ ಮತ್ತೆ ಜೈಲಿನಲ್ಲಿ ಮಾತನಾಡಿದ್ದೇ ನೋಡಿದವರಿರಲಿಲ್ಲ. ಆ ಜೈಲಿನ ಒಂಟಿತನದ ನಡುವೆ ಮತ್ತಷ್ಟು ಒಂಟಿಯಾಗಿಬಿಟ್ಟ. ಜೈಲಿನಲ್ಲಿ ಇತರ ಕೈದಿಗಳೂ, ಪೋಲೀಸರು ಹೇಗೇತೋ ಆತನಿಗೆ ಸಮಾಧಾನ ಮಾಡಲು ನೋಡಿ ಸೋತುಹೋದರು. ಮಣಿಕರ್ಣಿಕಾ ತಾನೂ ಹಲವು ಬಾರಿ ಮಾತನಾಡಿಸಲು ಪ್ರಯತ್ನಿಸಿದರೂ ತಿರುಗಿಯೂ ನೋಡಲಿಲ್ಲ. ತೀವ್ರ ಖಿನ್ನತೆಗೊಳಗಾದ ಅವನ ಆರೋಗ್ಯ ತಪಾಸಣೆಗೆ ಬಂದ ಮನೋವೈದ್ಯರು ಆತನಿಗೆ ನಾಲ್ಕು ಗೋಡೆಗಳ ಒಳಗೇ ಕುಳಿತು ಆಗಿದ್ದರ ಬಗ್ಗೆ ಚಿಂತಿಸದೇ ಆದಷ್ಟು ಸೆಲ್ಲಿನ ಹೊರಗಿರಬೇಕೆಂದು ಹೇಳಿ ಜೈಲಿನ ಕಾಂಪೌಂಡಿನ ಒಳಗೆ ಎಲ್ಲಿಯಾದರೂ ಓಡಾಡಬಹುದೆಂದು ಅನುಮತಿ ಕೊಡಿಸಿದರು. ಆ ಮೂವತ್ತು ಎಕರೆ ವಿಶಾಲ ಜಾಗದಲ್ಲೂ ಏಕಾಂತವನ್ನೇ ಹುಡುಕುತ್ತಿದ್ದ ಪಾಪಣ್ಣ ಸದಾ ಯಾರೂ ಇಲ್ಲದ ಸ್ಥಳಕ್ಕೆ ಹೋಗಿ ಒಂದೇ ದಿಕ್ಕಿಗೆ ನೋಡುತ್ತಾ ಕುಳಿತುಬಿಟ್ಟಿರುತ್ತಿದ್ದ.

ಆಗಲೇ ಮಣಿಕರ್ಣಿಕಾ ಮೆಟರ್ನಿಟಿ ರಜೆಗೆ ಅರ್ಜಿ ಸಲ್ಲಿಸಿದ್ದು. ಇದ್ದ ಒಬ್ಬಳೇ ಮಹಿಳಾ ಪೇದೆ ಮದುವೆಯಾಗದೇ ತಾಯಿಯಾದ ಸುದ್ದಿ ಇಡೀ ಜೈಲಿಗೆ ಹಬ್ಬಿತು. ಪೋಲಿಸರು ಖೈದಿಗಳೆನ್ನದೇ ಎಲ್ಲರೂ ಒಳಗೊಳಗೆ ಗುಸುಗುಸು ಮಾತನಾಡುತ್ತಿದ್ದರು. ಆಕೆ ಬಸುರಾಗಲು ಇದ್ದ ಸಕಲ ದಾರಿಗಳ ಬಗ್ಗೆಯೂ ಅವರವರದೇ ತರ್ಕಗಳು ಹುಟ್ಟಿಕೊಂಡವು. ಆದರೆ ಮಣಿಕರ್ಣಿಕಾ ಮಾತ್ರ ಧೈರ್ಯವಾಗಿ ಗಂಡನ ಹೆಸರಿಲ್ಲದೇ ಅರ್ಜಿಯನ್ನು ಹಾಕಿದಳು. ಅದನ್ನು ತೆಗೆದುಕೊಳ್ಳುತ್ತಾ ಕ್ಲರ್ಕ್ ನಂಜುಂಡಪ್ಪ ಅದೊಂದು ರೀತಿಯಲ್ಲಿ ನಕ್ಕಿದ್ದ. ಆದರೆ ಮಣಿಕರ್ಣಿಕಾ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಅವಳು ಯಾರಿಗೂ ಉತ್ತರ ಕೊಡಬೇಕಿರಲಿಲ್ಲ. ರಜೆಗೆ ಅನುಮತಿ ದೊರೆಯಿತು. ಹೋಗುವ ಹಿಂದಿನ ದಿನ ಲಾರೆನ್ಸ್ ಗಾರ್ಡನ್ನಿನಲ್ಲಿ ಒಂಟಿಯಾಗಿ ಗಿಡಗಳಿಗೆ ನೀರು ಹಾಯಿಸುತ್ತಿದ್ದ ಪಾಪಣ್ಣನೆದುರು ಹೋಗಿ ನಿಂತಳು. ಪಾಪಣ್ಣ ಎಂದಿನಂತೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮಣಿಕರ್ಣಿಕಾ ತಾನೇ ಮಾತನಾಡಿದಳು.

‘ನೀವಿನ್ನೆಷ್ಟು ದಿನ ಹೀಗಿಯೇ ಇರುತ್ತೀರೋ ಗೊತ್ತಿಲ್ಲ, ಆದ್ರೆ ನನ್ನ ಹೊಟ್ಟೆಲಿ ನಿಮ್ಮದೊಂದು ಮಗು ಇದೆ ಅನ್ನೋದು ನೆನಪಿಟ್ಕೊಳಿ’ ಎಂದು ಹೇಳಿ, ಪಾಪಣ್ಣ ಮೊದಲ ಬಾರಿಗೆ ಕತ್ತೆತ್ತಿ ಅವಳನ್ನು ನೋಡಿದ. ಆದರೆ ಅವಳಾಗಲೇ ಅವನಿಗೆ ಬೆನ್ನು ತೋರಿಸಿ ನೆಡೆದು ಹೋಗುತ್ತಿದ್ದಳು.

(ಮುಂದುವರೆಯುವುದು)