Thursday, December 05, 2013

ಪ್ರೀತಿಯ ಲಕ್ಕಿಗೆ

 ಪ್ರೀತಿಯ ಲಕ್ಕಿಗೆ
ಹೇಳಿದ್ದೆನಲ್ಲಾ??
ನಿನ್ನ ಹುಟ್ಟು ಹಬ್ಬಕ್ಕೆ ಬರೆದುಕೊಡುವೆನೊಂದು ಕವಿತೆ
ನೀ ಬರುವ ಹಿಂದಿನ ದಿನ ಅದ ಬರೆಯುತ್ತ ಕುಳಿತೆ
ಎದೆಯಲ್ಲಿದ್ದ ಸವಿ ನೆನಪುಗಳ ಕೊಡವಿ ಕೊಡವಿ ಹಾಸಲು
ಹೊರಬಂದ ಒಂದೊಂದು ಪದಗಳು ನಮ್ಮ ಪ್ರೀತಿಗೆ ಮೀಸಲು

ನಾನೇನಾದರೂ ಆಗಿದ್ದಿದ್ದರೆ ಅದ್ಭುತ ಪ್ರೇಮ ಕವಿ
ಒದರುತ್ತಲೇ ಇರುತ್ತಿದ್ದೆ ನನ್ನ ಪ್ರೇಮಕಾವ್ಯವನು
ನೀ ಮುಚ್ಚಿಕೊಳ್ಳುವವರೆಗು ಕಿವಿ
ಏನು ಮಾಡಲಿ ನಾನೊಬ್ಬ ಸಾಮಾನ್ಯ ಪ್ರೇಮಿ
ಆದರೂ ನಾನಲ್ಲ ಯಾವ ಕವಿಗೂ ಕಮ್ಮಿ..!
ಏಕೆ ಗೊತ್ತೇ??
ಕವಿ ಹುಚ್ಚನಂತೆ, ಪ್ರೇಮಿಯೂ ಹುಚ್ಚನೆ
ನಾ ನಿನ್ನ ಪ್ರೀತಿಯ ಹುಚ್ಚ
ನಾ ಕವಿಯೂ ಹೌದು ಪ್ರೇಮಿಯೂ ಹೌದು

ನಿರಾಭರಣ ಸುಂದರಿ ನೀನು
ನಾ ಹೇಳಿದೆನೆಂದು ಧರಿಸಿದೆ ಮೂಗುಬೊಟ್ಟನು
ಅದ ನೋಡಿದ ಮರುಕ್ಷಣ ನಾ ಸೋತುಬಿಟ್ಟೆನು
ನೀಳ ಮೂಗ ಆಗಸಕೆ ಮೂಗುತಿಯೆ ಚಂದಿರ
ತುಂಟತನದಿ ಕುಡಿಹುಬ್ಬ ಹಾರಿಸುವ ಪರಿಯೆಷ್ಟು ಸುಂದರ
ಅಪ್ಪಣೆ ಕೊಡು ಗೆಳತಿ
ಮುಖದ ಮೇಲೆಯೇ ನಾನಿರುವೆ ಕಟ್ಟಿಕೊಂಡು ಮಂದಿರ

ಹಣೆಯ ಮೇಲಿನ ಮುಂಗುರುಳು ಎಡಗೈಯ ಕಿರುಬೆರಳು
ಸಾಕೆನಗೆ ಹಿಡಿಸಲು ಹುಚ್ಚು - ಹಗಲೂ ಇರುಳೂ
ಎಷ್ಟುದ್ದವಿತ್ತು ಆ ನಿನ್ನ ಕಿರುಬೆರಳ ಉಗುರು
ಅದಕ್ಕಿಂತ ಒಂದು ಕೈ ಹೆಚ್ಚಾಗಿಯೇ ಇತ್ತು ನಿನ್ನ ಪೊಗರು
ಆ ಉಗುರು ಮುರಿಯಿತು ಕಣ್ತುಂಬ ಅತ್ತೆ
ಈ ಪೊಗರು ಇಳಿಯದಿರೆ ನನ್ನಾಣೆ ನಾ ಸತ್ತೆ

ಎದೆಯಲ್ಲಿ ಬಿತ್ತಿರುವೆ ಹಸಿ ಹಸಿ ಕನಸುಗಳ ಗಿಡ
ಮುಳುಗಿಸದೆ ತೇಲಿಸೆನ್ನ ಸಿಗುವವರೆಗೆ ಪ್ರೀತಿ ಕಡಲ ದಡ
ನೀನೇ ನನ್ನ ಪಾಲಿನ ವಾಣಿ ಲತಿಕಾ ಲಕ್ಕಿ
ನಿನಗೆಂದೆ ಬುಕ್ ಆಗಿದೆ ನನ್ನೆದೆಯ ಪಲ್ಲಕ್ಕಿ
ನಾವಾಡಿದ ಜಗಳಗಳಿಗೆ ಮೊದಲಿಲ್ಲ ಕೊನೆಯಿಲ್ಲ
ಆದರೂ ಪ್ರೀತಿ ಕೋಟೆಯ ಸಣ್ಣ ಕಲ್ಲೂ ಕದಲಿಲ್ಲ
ಜೊತೆಯಾಗಿ ನೀನಿರಲು ಮಾಡುವೆ ಕೊನೆಯಿರದ ತಂಟತನ
ನೀ ಹೋದ ಮರುಗಳಿಗೆ ಕಾಡುವುದು ಒಂಟಿತನ
ಹೋಗದಿರು ನನ್ನನ್ನು ತೊರೆದು
ನನ್ನೆದೆಯ ಮೇಲೆ ಕೊನೆ ಸಾಲ ಬರೆದು

- ತ್ರಿವಿಕ್ರಮ 

Monday, November 04, 2013

ನಿದ್ಗೆಟ್ ಪದಗಳು

ಹಗಲಲ್ಲೇ ದಬ್ಬಾಕೊಂಡ್
ಮಲ್ಕೊಂಡು ಮಾಮೂಲಿ
ಕನಸುಗಳ ಕಾಣೋದು ಸಾಕಾಗಿದೆ
ನೈಟೀಗು ಒಸಿ ನಿದ್ದೆ ಬೇಕಾಗಿದೆ..!!

ಇಡಿ ರಾತ್ರಿ ಆಕಾಶ
ನೋಡ್ಕೊಂಡು ನಕ್ಷತ್ರ
ಎಣಿಸುತಾ ಲೆಕ್ಕ ಮರೆತೋಗಿದೆ
ಮಲಗೆದ್ದು ಮಗ್ಗೀನ ಕಲಿಬೇಕಿದೆ..!!

ಚಂದ್ರಂಗೆ ಯಾಕೆ ಯಾವಾಗ್ಲು ಇರಬೇಕು ರಾತ್ರೀಯ ಪಾಳಿ?
ಬೆಳಕ್ಹರಿಯೊ ತನಕ ಕಂಪೆನಿ ಕೊಡಬೇಕು ನಕ್ಷತ್ರ ಜೊತೇಲೀ?
ಬಿಸಿಲಲ್ಲಿ ಊರನ್ನು ಸುತ್ತೋನು ಸೂರ್ಯ
ಅವನೆದೆಯಲ್ ಇರಬಹುದು ಮಾಯದ ಗಾಯ
ಚಂದ್ರಂಗೆ ಸಿಗಬೇಕಾ ಎಲ್ಲಾ ವಿಲಾಸ?
ಲೋಕದ ಸೃಷ್ಠೀಲಿ ಏಕಿಂತ ಮೋಸ?

ತಡರಾತ್ರಿ ಬೀಳುವ ತಲೆಕೆಟ್ಟ ಕನಸಿಗೆ ನಾನೇನೇ ಬಾಸು
ಬೆಳಗಿದ್ದು ಕಣ್ಬಿಟ್ರೆ ಈ ಲೋಕ್ದಲ್ ನಾನೊಬ್ಬ ಮೆಂಟಲ್ಲು ಕೇಸು
ಕನಸಲ್ಲಿ ಪ್ರತಿಕ್ಷಣವು ಪೆಪ್ಪರ್ಮೆಂಟು
ಲೋಕದಾ ಸಂತೇಲಿ ತೊಂದ್ರೆ ನೂರೆಂಟು
ಕಾಣುವಾ ಕನಸಲ್ಲೆ ಕಳೆದೋಗೋ ಆಸೆ
ಮಲ್ಕೊಂಡೆ ತಿನ್ನುತ್ತಾ ಮಸಾಲೆದೋಸೆ

ನುಂಗಿ ನೀರ್ಕುಡಿದರೂ ನಿದ್ದೆ ಮಾತ್ರೇನಾ, ಯಾಕೋ ಹತ್ತುತಿಲ್ಲ ನಿದ್ದೆ
ಕಿವಿಗೆ ಇಯರ್ ಪೋನು, ಮ್ಯಾಲೆ ತಿರುಗೋ ಫ್ಯಾನು ನೋಡ್ಕೊಂಡ್ ಮಲ್ಗಿದ್ದೆ
ನೀ  ಬಂದು ಎದೆಯಲ್ಲಿ ಎಡಗಾಲು ಇಟ್ಟೆ
ಸಾವಿರದ ಸ್ವಪ್ನಕ್ಕೆ ನನ್ನ ನೂಕಿಬಿಟ್ಟೆ
ಕ್ಲೈಮ್ಯಾಕ್ಸು ಬರೊಮೊದಲೇ ಆಗೋಯ್ತು ಎಚ್ಚರ
ಮರೆತೋಗೋ ಕನಸನ್ನು ಕಾಣೋರು ಹುಚ್ಚರಾ..?

ನನ್ನೊಡನೆ ಪದ್ಗಲೂ ನಿದ್ಗೆಟ್ಟು ನಲುಗಿವೆ
ಮರೆತೋಗೊ ಮುನ್ನ ಬರೆದಿಟ್ಟು ಮಲಗುವೆ

ಗುಡ್ನೈಟ್

-ತ್ರಿವಿಕ್ರಮ


ಸಮಯದ ಸವತಿ

ಸಮಯದ ಸವತಿ

 ಬಿಟ್ಯಾಕೆ ಹೋಗುವೆ ನೀ ನನ್ನ ತುಂಟಿ
ನೀನಿರದ ಊರಲ್ಲಿ ನಾನೆಂದು ಒಂಟಿ

ನೀ ಸನಿಹ ಇರುವಾಗ
ಓಡುವಾ ಸಮಯ
ನೀ ದೂರ ಹೋದೊಡನೆ
ಬರುವುದು ಸನಿಹ
ಬಗೆಹರಿಸು ನನದೊಂದು ಅನುಮಾನ
ಆ ಸಮಯ ನಿನಗೇನು ಸವತೀನಾ?

ಆ ಕಾಲವೇ ಇಲ್ಲಿ ಬಿದ್ದಿದೆ
ಮುರಿದುಕೊಂಡು ಕಾಲನ್ನು
ತೆವಳುವ ಕಾಲವ ತಳ್ಳೋದು
ಸಾಕಾಗಿದೆ ನನಗಿನ್ನು
ತಿರುಗೋದ ನಿಲ್ಲಿಸಿದೆ ಈ ಭೂಮಿ
ಎಲ್ಲಿರುವೆ ನೀ ಬೇಗ ಬಾರಮ್ಮಿ

ಕೂಡಿ ಕೂಡಿ ಕಳೆದಿರುವೆ
ಒಂದೊಂದು ಕ್ಷಣವನ್ನು
ಇಡಿ ರಾತ್ರಿ ಎಣಿಸಿರುವೆ
ನೀ ಬರುವ ದಿನವನ್ನು
ನಿಂತಲ್ಲೇ ನಿಂತಿದೆ ಎದೆಗೂಡ ಗಡಿಯಾರದ ಮುಳ್ಳು
ನೀ ಬಂದು ಸೇರಿಕೋ, ನೀನೇ ಅದ ತಿರುಗಿಸೋ ಶಲ್ಲು

-ತ್ರಿವಿಕ್ರಮ

Sunday, August 04, 2013

ಮಹಾಯುದ್ಧ

ಮಹಾಯುದ್ಧ


"ಈಗ ನಾನು, ಜಗತ್ತುಗಳ ವಿನಾಶಕ ಮೃತ್ಯುವಾಗಿದ್ದೇನೆ"
-ಭಗವದ್ಗೀತೆ

ಬಾನಿಗೆ ಜಿಗಿದಿತ್ತು ಯುದ್ಧವಿಮಾನ

ಜಪಾನಿನೆಡೆಗೆ ಮಾಡಿತ್ತು ಪ್ರಯಾಣ
ಕಾದು ಕುಳಿತಿದ್ದನು ಯಮನು
ಕೊಂಡೊಯ್ಯಲು ತನ್ನೊಡನೆ
ನರಳಲಿರುವ ನರರ ಪ್ರಾಣ

***

ನಗರಕ್ಕದೊಂದು ಹೊಸದಿನ
ಆಗತಾನೆ ಮನೆಗಳಿಂದ
ಹೊರಗಡಿಯಿಡುತದ್ದರು ಜನ
ಮೇಲಿಂದ ಬರಲಿದ್ದ ಮೃತ್ಯು ದೇವನ
ಕಡೆಗಿರಲಿಲ್ಲ ಯಾರದೂ ಗಮನ

ರೋಗಿಗೆ ಮಾತ್ರೆ ಕೊಟ್ಟಳು ನರ್ಸು
ಪೋಂ ಪೋಂ ಎಂದಿತು ಶಾಲೆಯ ಬಸ್ಸು
ಗಂಡನು ಕೂಗಿದ 'ಬಾರೆ ಬೇಗ'
ಹೆಂಡತಿ ಹಾಕಿದಳು ಮನೆಗೆ ಬೀಗ
ಅಮ್ಮ ತಿನಿಸಿದಳು ಮಗುವಿಗೆ ಬ್ರೆಡ್ಡು
ಹಾಲಿನವ ಕೇಳಿದ ತಿಂಗಳ ದುಡ್ಡು
ಮುದುಕಿಯು ತಿರುಗಿಸಿದಳು ಕ್ಯಾಲೆಂಡರ್ರು
ಗುರುತು ಮಾಡಿದಳು "ಆಗಸ್ಟ್ ಆರು"

ಕೇಳಿತು ಕಿವಿ ಗಡಚಿಕ್ಕುವ ಶಬ್ದ
ಊರಿಗೆ ಊರೇ ಆಯಿತು ಸ್ತಬ್ದ
ಗಗನದಿ ಕಂಡಿತು
ಹಣಬೆಯಂತ ಕಾರ್ಮೋಡ
ಹೊಮ್ಮಿತು ಒಡನೆಯೆ ಬೆಂಕಿಯು ಕೂಡ
ಚಾಚುತ್ತ ತನ್ನಯ ಕೆನ್ನಾಲಿಗೆ
ನುಂಗಿತು ಸಾಗಿತು
ಎದುರಿಗೆ ಸಿಕ್ಕವರನೊಮ್ಮೆಗೆ
ತಿಳಿಯದು ಯಾರಿಗೂ ಏನದು ಎಂದು
ಹೇಳುವವರೆಗೂ
ಸಾವೇ ಬಳಿ ಬಂದು..!


ನಿಮಿಷದಿ ನೆಡೆದಿತ್ತು ಸರ್ವನಾಶ
ಉಳಿಸದೆ ಯಾವುದೆ ಅವಶೇಷ
ಸುತ್ತಲೂ ಜನರು ಸತ್ತು ಬಿದ್ದಿರಲು
ನಡುಗಿ ಶರಣಾಯಿತು ದೇಶ.
ಹೆಡೆಯಾಡಿಸಿತ್ತು
ದೊಡ್ಡಣ್ಣನೆಂಬ ವಿಷಸರ್ಪ
ಕೇಳುವರೇ ಇರಲಿಲ್ಲ ಅದರ ದರ್ಪ
ಒಬ್ಬ ಸತ್ತರೆ ಅದು ಸಾವು
ಸಾವಿರ ಜನ ಸತ್ತರೆ
ನಿಂತು ಲೆಕ್ಕ ಹಾಕುವೆವು ನಾವು

ನೆಲಸಮವಾಗಿತ್ತು ಹಿರೋಶಿಮಾ
ಅಮಯಾಕರ ಬಲಿಪಡೆದ
ಅಮೇರಿಕಾ ತೋರಿತ್ತು ಪರಾಕ್ರಮ
ವಿಜ್ಞಾನವೆ ಆಗಿ ಆಯುಧ
ಮುಗಿಸಿತ್ತು ಎರಡನೇ ಮಹಾಯುದ್ಧ

***

ಕಣ್ಣ ಮುಂದೆಯೇ ಇಂದು
ಮೇಲೆದ್ದಿದೆ ಹಿರೋಶಿಮಾ
ಆ ಬೂದಿಯ ಕೊಡವಿಕೊಂಡು
ಆದರೂ ಆರಿಲ್ಲ ಬೆಂಕಿಯ ತಾಪ
ತಟ್ಟುತ್ತಲೇ ಇದೆ
ಜಪಾನಿನ ಜನರಿಗೆ ಶಾಪ.
ಬದುಕುತಿರುವರು ಮಡಿದವರ ನೆನಪಿನೊಡನೆ
ನೆನೆಯುತ್ತಾ ಆ ದಿನವ ಕಣ್ಣೀರಿನೊಡನೆ..!

                                                                                                                    - ತ್ರಿವಿಕ್ರಮ

















Saturday, August 03, 2013

ಎಲ್ಲಿರುವೆ??

ಎಲ್ಲಿರುವೆ??


ನಾ ಕರೆ ಮಾಡಿದಾಗಲೆಲ್ಲ
ನೀ ವ್ಯಾಪ್ತಿ ಪ್ರದೇಶದಿಂದ ಹೊರಗೆ
ಪ್ರೀತಿಗೆಲ್ಲಿದೆ ವ್ಯಾಪ್ತಿ??
ಚಂದ್ರನ ಮೇಲೆಯೇ ಇದ್ದರೂ
ಇಳಿದು ಬಂದು ಈ ಧರೆಗೆ
ಉತ್ತರಿಸು ನೀ ನನ್ನ ಕರೆಗೆ

ನಾನಲ್ಲ ಕಾಳಿದಾಸ
ಕಳಿಸಲು ನಿನಗೆ ಮೇಘಸಂದೇಶ
ಆದರೂ ಕೇಳಲಾರದು
ನನ್ನ ಹುಚ್ಚು ಮನಸ್ಸು
ಕಳಿಸು ಎನುವುದು ನಿನಗೆ ಎಸ್ಸೆಮ್ಮೆಸ್ಸು
ನನಗೆ ತಿಳಿಯದಿರುವಾಗ
ನಿನ್ನನ್ನು ತಲುಪುವ ಬಗೆ
ಡೊಕೊಮೋ ನಿನ್ನನ್ನು ಹುಡುಕೀತು ಹೇಗೆ?

ಸಾಕಾಗಿದೆ ಹುಚ್ಚು ಕನಸುಗಳ ಸವಾರಿ
ಕಟ್ಟುವುದಕ್ಕೂ ಮುನ್ನ
ಕೆಟ್ಟಿರೋ ಹೃದಯಕ್ಕೊಂದು ಗೋರಿ
ತೋರಿಸು ನಿನ್ನ
ಮನಸನ್ನು ಸೇರುವ ದಾರಿ
ಅದಕಾಗಿ ನಾ ಎಲ್ಲಕ್ಕೂ ತಯಾರಿ

ಆಗಲೇ ನಿನ ಕನಸುಗಳ ರಾಯಭಾರಿ?
ಬರೆಯುಲೇ ನಿನ್
ಹೆಸರಲ್ಲೊಂದು ಕಾದಂಬರಿ?
ಹಾಡಲೇ ಕನ್ನಡದಲ್ಲಿ ಕೋಲವರಿ?

ನೆನಪಿಡು ಹುಡುಗಿ
ನೀನೇ ಇಲ್ಲದ ನಾನು
ಮೋಡ ಮುಸುಕಿದ ಬಾನು
ರೆಕ್ಕೆ ತಿರುಗದ ಫ್ಯಾನು
ಕುಡಿದೆಸೆದ ಕೋಲಾ ಕ್ಯಾನು
ಮತ್ತೊಮ್ಮೆ ಹೇಳುವೆ
ಎಲ್ಲೇ ಇದ್ದರೂ ನೀನು
ತಡಮಾಡದೆ ಬಂದು ಸೇರೆನ್ನನು..!

                                                                                                                -  ತ್ರಿವಿಕ್ರಮ





 



Tuesday, July 23, 2013

ಅವಳ ಮೂ(ಗು)ತಿಗೆ

ಅವಳ ಮೂ(ಗು)ತಿಗೆ


ಅವಳ ಮುದ್ದು ಮೊಗಕೆ
ಆ ಮೂಗೇ ಭೂಷಣ
ಕೊಳ್ಳಬೇಕೆಂದಿದ್ದೆ ಅಲ್ಲೊಂದೆರಡು ಖಾಲಿ ನಿವೇಶನ.
ಅಷ್ಟರಲಿ ನೀ ಬಂದು
ಆವರಿಸಿದೆ ಆ ಜಾಗ
ಈಗ ನೀ ಅವಳ ಮುಖದ ಅವಿಭಾಜ್ಯ ಭಾಗ.
ಆ ಮೂಗೇ ಈಗ ನಿನ್ನ ನಿವಾಸ
ಅವಳ ಪ್ರತಿ ಉಸಿರು ಹೇಳುವವು ನಿನ್ನ ವಿಳಾಸ.


ಬಂದಲ್ಲಿ ಬೇರೂರಿದೆ ನೀನು
ಊರ ಬೆಳಗುವ ಸೂರ್ಯನೂ
ಈಗವಳ ಫ್ಯಾನು..!
ಮಾಡದೇ ಹೋಗಲಾರ ಈ ಬ್ಯೂಟಿಯ ಭೇಟಿ
ಅವನ ಕಿರಣಗಳಿಗೋ
ಮೂಗಿನ ಮೇಲೆಯೇ ಡ್ಯೂಟಿ.
ಅವಳಿ ಸೂರ್ಯರು ಅವಳಿರುವ ಊರಿಗೆ,
ಸಾಟಿ ಇನ್ಯಾರು ನನ ಮೂಗುತಿ ನಾರಿಗೆ.


ಹೇ ಮೂಗುತಿಯೇ.. ನೀನೆಷ್ಟು 'ಲಕ್ಕಿ'
ಅವಳ ಪ್ರತಿ ಉಸಿರು
ಸಾಗಲೇಬೇಕು ನಿನ್ನ ಮೈತಾಕಿ.
ಉಚ್ವಾಸ ನಿಶ್ವಾಸ ನಿನಗೆಲ್ಲ ಅಭ್ಯಾಸ
ಉಸಿರಿಗೆ ಉಸಿರಾಗಿ
ಜೊತೆಗಿರುವೆ ಪ್ರತಿನಿಮಿಷ.
ನನಗೂನು ನೀಡಯ್ಯ ಒಂದೆರಡು ದಿವಸ,
ಅವಳುಸಿರ ಏರಿಳಿತಗಳ ಎಣಿಸುವ ಕೆಲಸ.


ನನದೊಂದು ಬಿನ್ನಹ
ಕೇಳಪ್ಪ ಪರಬ್ರಹ್ಮ
ಆದಷ್ಟು ಬೇಗ ನೀಡೆನೆಗೆ ಮರುಜನ್ಮ.
ಆಗಬೇಕಿದೆ ನಾನವಳ
ಮೂತಿಗೆ ಮೂಗುತಿ
ಬಿಸಿಉಸಿರಿನೊಡನಾಡಲು ದಿನಂಪ್ರತಿ.

ಇರುವೆನು ಮೂರೊತ್ತು ಮೂತಿಯ ಮೇಲೆ,
ಉಸಿರಿಗೆ ಬರೆಯುತ್ತ ಪ್ರೀತಿಯ ಓಲೆ.

                                                                                                                         -ತ್ರಿವಿಕ್ರಮ


Friday, June 14, 2013

ಅವಳಕ್ಕನ ಮದುವೆ

 ಅವಳಕ್ಕನ ಮದುವೆ

ಅವಳಕ್ಕನ ಮದುವೆಗೆ ನಾನು ಹೋಗಿದ್ದೆ
ಇರಲಿಲ್ಲ ಆಮಂತ್ರಣ
ಯಾರಾದರೂ ಕೇಳಿದರೇ ಎಂದು ಹೆದರಿದ್ದೆ
ಕೇವಲ ಒಂದು ಕ್ಷಣ

ಮದುವೆ ಮನೆಯ ತುಂಬಾ ಇವಳದೇ ಓಡಾಟ
ಅಕ್ಕನ ಮುದ್ದಿನ ತಂಗಿ
ಬಂದ ಬಂಧುಗಳೊಡನೆ ಆತ್ಮೀಯ ಒಡನಾಟ
ಅದ್ಭುತ ಹಾವ-ಭಾವ-ಭಂಗಿ

ನಾ ಕಂಡೆ, ಹೃದಯ ಬಾಯಿಗೆ ಬಂತೇನೋ
ದೃಷ್ಟಿಯಾಯ್ತು ಏರುಪೇರು
ನಾ ಕಣ ಹೊಡೆದೆ ಅಂತೇನೋ
ಕೋಪವೂ ಕಾಣಿಸಿತು ಚೂರು

ಬಳಿಗೋಡಿ ಬಂದು ತುಸು ಕೋಪದಿ ಕೇಳಿದಳು
'ನೀ ಯಾಕೆ ಇಲ್ಲಿಗೆ ಬಂದೆ?'
ಹಿಂದಿರುಗಿ ನೋಡಿ ಹೆದರುತ್ತ ಹೇಳಿದಳು
'ಮೊದಲು ಜಾಗ ಖಾಲಿ ಮಾಡು ತಂದೆ..!'

'ಮದುವೆಗೆ ಬಂದರೆ ಇಷ್ಟೊಂದು ಭಯವೇ?
ನಿಮ್ಮಕ್ಕ ನನಗೂ ಅಕ್ಕ
ಹೇಗೂ ಬಂದಿರುವೆ ಊಟ ಮಾಡಿ ಹೋಗುವೆ
ನೀ ಬಂದು ಕೂರು ಪಕ್ಕ'

'ಅಯ್ಯೋ..! ಊಟದ ಮನೆ ಹಾಳಾಯ್ತು,
ಕೈ ಮುಗಿವೆ ಹೊರನಡಿಯೊ ಚಿನ್ನು
ನೀ ಇಲ್ಲಿಯವರೆಗೆ ಬಂದಿದ್ದೆ ಹೆಚ್ಚಾಯ್ತು
ಅಣ್ಣಂದಿರ ವಿಚಾರ ಗೊತ್ತಿಲ್ಲ ನಿನಗಿನ್ನು'

'ಅವರೇನು ಹುಲಿಗಳೇ, ಕಾಡೇನು ನಿಮ್ಮನೆ?
ಬೇಟೆಯಾಡೋದು ನನಗೂನು ಗೊತ್ತು
ಹೋಗಬೇಕಿದ್ದರೆ ನಾನೀಗ ಸುಮ್ಮನೆ
ಕೊಡಬೇಕು ನನಗೊಂದು ಮುತ್ತು.'

ತಕ್ಷಣ ಬಾಯ್ಮುಚ್ಚಿದಳು ಕೈಯನ್ನು ಮುಂದೆ ಚಾಚಿ
ದುರುಗುಟ್ಟಿ ನೋಡಿದಳು ನನ್ನೇ.
ಮತ್ತೊಮ್ಮೆ ಕಣ ಹೊಡೆದೆ ನೀರಾದಳು ನಾಚಿ
ಮರುಕ್ಷಣವೆ ಕೆಂಪಾಯ್ತು ಕೆನ್ನೆ.

ಅದಾಗದ ಮಾತೆಂದು ಪರಿಯಾಗಿ ಬೇಡಿದಳು
ಬಾಕಿಯಿತ್ತು ಅಳುವುದು ಒಂದೇ
ನಾ ಜಗ್ಗದೇ ಇರಲು ಹುಸಿ ಕೋಪದಿ ನುಡಿದಳು
"ಕಾದಿರು ಮನೆಯ ಹಿಂದೆ"

ನಾ ಹೋಗಿ ಕಾದೆ ಮರೆಯಲ್ಲಿ ನಿಂತು
ಯಾರಿಲ್ಲವೆಂದು ಮಾಡಿಕೊಂಡು ಖಾತರಿ
ಯಾರಾದರೂ ನೋಡಿದರೆ, ನನಗೂ ತಿಳಿದಿತ್ತು
ಬೀಳುವುದು ಪ್ರೇಮಕ್ಕೆ ಕತ್ತರಿ

ಹಿಂತಿರುಗಿ ನೋಡುತ್ತ ಮೆಲ್ಲನೇ ಬಂದಳು
ಕೋಪವಿನ್ನು ಕಣ್ಣಲ್ಲೇ ಇತ್ತು.
ಆ ಕೋಪಕ್ಕೆ ದನಿಯನ್ನು ತಂದಳು
"ಇದೇ ನಿನ್ನ ಕೊನೆಯ ಮುತ್ತು"

ಪೋಲಿ ನಗು ನಕ್ಕು ತುಂಟತನದಿ ಕೇಳಿದೆ
"ಮತ್ತೆ ಕೊಡಲಾರೆಯಾ ಯಾವತ್ತು?"
ಅವಳ ಕಣ್ಣಲ್ಲೇ ಕಣ್ಣಿಟ್ಟು ಹೇಳಿದೆ
"ಈ ತುಟಿಗಳು ನನ್ನದೇ ಸ್ವತ್ತು"

ಜಾಸ್ತಿ ತಡಮಾಡದೇ ತುಟಿಗೆ ತುಟಿ ಒತ್ತಿದೆ
ಮಕರಂದ ಹೀರುತ್ತ ಮೃದುವಾಗಿ ಕಚ್ಚಿದೆ
ತೋಳಲ್ಲಿ ಅವಳನ್ನು ಹಿತವಾಗಿ ಸುತ್ತಿದೆ
ಆ ಮಧುರ ಸ್ಪರ್ಶಕ್ಕೆ ನಾನೇ ನಾಚಿದೆ

ಅವಳ ಭಯವನ್ನೆಲ್ಲ ಕ್ಷಣದಲ್ಲಿ ತೊಲಗಿಸಿತು
ಆ ಸಿಹಿಯ ಚುಂಬನ
ಮನೆಯ ಹಿತ್ತಲು ಮತ್ತೂ ಹೆಚ್ಚಿಸಿತು
ಸಿಹಿಮುತ್ತ ರೋಮಾಂಚನ
ತುಟಿಯ ಚಿಲಕವನು ತಾನೇ ತೆರೆದಳು
ಜೇನಂತ ನಾಲಿಗೆಯನು ತಳ್ಳಿ
ಮತ್ತೊಂದು ಸವಿಮುತ್ತ ಲೆಕ್ಕ ಬರೆದಳು
ಕೋಪದ ನಾಟಕವಾಡುತ ಕಳ್ಳಿ

ಬಿಡಲಾರದೆ ಬಿಟ್ಟು ತಲೆತಗ್ಗಿಸಿ ನಿಂತಳು
ಕಣ್ಣಲ್ಲಿ ಇರಲಿಲ್ಲ ಕೋಪ
ನಸುನಗೆ ಬೀರಿ ನಾಚುತ್ತ ನೋಡಿದಳು
ಕೆಂಪಾಗಿಯೇ ಇದ್ದವು ಕೆನ್ನೆ, ಪಾಪ..!

"ನೂರು ಮುತ್ತಿಕ್ಕಿದರೂ ತೀರದು ನನ್ನ ಆಸೆ
ಒಂದು ಯಾವ ಲೆಕ್ಕಕ್ಕೆ ಸಾಕೇ?"
"ಬಿಟ್ಟರೆ ಈಗಲೆ ಕೊಡುತೀಯ ಕೂಸೇ,
ಹೊರಡು, ಮತ್ತೆ ಬಂದರೆ ಜೋಕೆ" 

ಅಷ್ಟರಲೆ ಒಳಗಿಂದ ಮತ್ತೊಮ್ಮೆ ಮಗದೊಮ್ಮೆ
ಕೂಗಿರಲು ಅವಳ ಹೆಸರು
ನೋಡಿದಳು ನಸುನಗುತ ನನ್ನ ಕಡೆಗೊಮ್ಮೆ
ಓಡಿದಳು ಕಟ್ಟಿಕೊಂಡಉ ಉಸಿರು

ಅವಳೋದ ಮೇಲೆ ನಾ ಯೋಚಿಸುತ ನಿಂತಿರಲು
'ಮಾಡಲೇ ಅಕ್ಕನ ಮದುವೆಯ ಊಟ?'
ಯಾರೋ ಲೇಡೀಸು ಆ ಕಡೆಗೆ ಬರುತಿರಲು
ನಿಲ್ಲದೇ ನಾ ಕಿತ್ತೆ ಓಟ

ರಾತ್ರಿ ಬಂದಿತು ಅವಳದೊಂದು  ಮೆಸೇಜು
'ಅಲ್ಲಿಗ್ಯಾಕೋ ಬಂದಿದ್ದೆ ಕೋತಿ'
ಅದರ ಹಿಂದೆಯೇ ಹಾಕಿದಳು ಆವಾಜು
'ಮತ್ತೆ ಬಂದರೆ ಇದೆ ನಿನ್ನ ತಿಥಿ'

ಪ್ರೀತಿಯಲಿ ನಾನೆನಲು
"ಅಕ್ಕನ ಮದುವೆಯ ಮುತ್ತು ಪ್ರತಿನಿಮಿಷ ಕೊಲ್ಲುತಿದೆ
ಬಾಕಿ ಉಳಿದಿರುವುದೇ ನನ್ನ ತಿಥಿ"
ತುಂಟತನದಿ ನುಡಿದಳು
" ಈ ತಂಗಿ ಮದುವೆಗೂ ಬಾ ಕೊಡುವೆ
ತಾಳಿ ಕಟ್ಟಿ ಆಗೆನ್ನ ಪತಿ"

                                                                                             -ತ್ರಿವಿಕ್ರಮ


Saturday, March 16, 2013

ಚಂದ್ರಗನ್ನಡಿ

 ಚಂದ್ರಗನ್ನಡಿ

ಟೆರೆಸಿನ ಮೇಲೆ ಕುಳಿತು
ಕತ್ತೆತ್ತಿದರೆ ಕಾಣುತ್ತಿದ್ದ ಚಂದಿರ
ಆಕಾಶವೇ ಆಗಿರಲು ಬಿಳಿಯ ಹಾಳೆ
ಪೆನ್ನಿದ್ದರೆ ಬರೆಯಬಹುದಿತ್ತು ಚುಕ್ಕಿಗಳಿಗೊಂದು ಓಲೆ
ಹಬ್ಬಿರಲು ಹಾಳು ಬೆಳದಿಂಗಳು ದೂರ ದಿಗಂತದವರೆಗೆ
ಹೋಗುತ್ತಿತ್ತು ಕರೆನ್ಸಿ ನಾ ಮಾಡಿದ್ದ ಪೋನ್ ಕರೆಗೆ..!

ನನ್ನವಳನ್ನು ಕೇಳಿದೆ - "ಹುಣ್ಣಿಮೆಯೇನೇ ಇಂದು?
ನಗುತ್ತಿರುವನು ಚಂದಿರ, ನೋಡೆಯಾ ಹೊರಬಂದು?"
ಅವಳೆಂದು ಕೊಟ್ಟಿದ್ದು ಕಾಣೆ ನೇರವಾಗಿ ಉತ್ತರ
ಪ್ರಶ್ನೆಗೊಂದು ಪ್ರಶ್ನೆ ಹಾಕಿ
ಹರಿಸುವಳು ಕಣ್ಣಿನಲ್ಲಿ ನೆತ್ತರ.

ಅವಳೆಂದಳು - "ಬರಬೇಕು ನಾ ಹೊರಗೆ ಏಕೆ?
ನಗುತ್ತಿರುವನೇ ಚಂದಿರ?
ನಿನಗೆಲ್ಲೋ ಅರೆಹುಚ್ಚು, ಜೋಕೆ."

ನಾನೇನೋ ಛಲಬಿಡದ ತ್ರಿವಿಕ್ರಮ
ಆದರೂ ಅವಳ ಮುಂದೆ ನೆಡೆಯದು ನನ್ನ ಪರಾಕ್ರಮ
ಹೊರಗೆ ಕರೆಯಲು ಬೇಕಾಯಿತು ಅತಿ ಪರಿಶ್ರಮ
ಹಲವು ನೈಸುಗಳ ನಂತರ
ಹಲವು ಪ್ಲೀಸುಗಳ ನಂತರ
ಓಗೊಟ್ಟಳು ನನ್ನ ಕರೆಗೆ
ಕೊರಗುತ್ತಲೇ ಬಂದಳು ಹೊರಗೆ

ಮುಂದಿನದು ಅಚ್ಚರಿಗಳ ಸರಣಿ -
ಒಮ್ಮೆಗೆ ಇಮ್ಮಡಿಯಾಯ್ತು ಚಂದಿರನ ಹೊಳಪು
ಆಗಸದಿ ತುಂಬಿತು ನಿರ್ಮಾ ಸೋಪಿನ ಬಿಳುಪು
ತಿರುಗಿದೆ ಚಂದಿರನತ್ತ
ಮತ್ತೊಮ್ಮೆ ನೋಡಿದೆ, ಮಗದೊಮ್ಮೆ ನೋಡಿದೆ
ಕಣ್ಮುಚ್ಚಿ ನೋಡಿದೆ, ಬಾಯ್ ತೆರೆದು ನೋದಿದೆ

ಸಂಶಯವೇ ಇಲ್ಲ..!
ಮೂತಿಗೆ ಸ್ವಲ್ಪ ದೊಡ್ಡದೇ ಆದ ಮೂಗು
ಅದರ ಕೆಳಗಿದ್ದ ತುಟಿಗಳಲಿ ಅರಳಿದ್ದ ನಸುನಗು
ಕಣ್ಣ ಮೇಲೆ ಹರಿದಿದ್ದ ಆ ನೀಳ ಹುಬ್ಬು
ನೋಡೀ ಕಣ್ತುಂಬಿಬಂತು ದೃಷ್ಟಿಯಾಯ್ತು ಮಬ್ಬು
ಆದರ ನಡುವೆಯೇ ಚುಕ್ಕಿಯಂತೆ ಹೊಳೆಯುತ್ತಿತ್ತು
ಅವಳ ಮುತ್ತಿನ ಮೂಗುತಿ
ಆಕಡೆಯಿಂದ ಅವಳು ಕಿರುಚಿದಳು
"ಹೇಯ್ ಮಾತಾಡೋ ಕೋತಿ"

ನಾ ತೊದಲುತ್ತಾ ನುಡಿದೆ -
"ಚಿನ್ನಮ್ಮಾ ಚಂದಿರನ್ನೊಮ್ಮೆ ಚೂಡು"
"ಎಂದುಕುರಾ ಹುಡುಗಾ"
ರಾಗವೆಳೆಯುತ ಕತ್ತೆತ್ತಿದಳಷ್ಟೇ..!

ಅಷ್ಟೇ..
ಆ ಕಣ್ಣಲ್ಲಿ ಕಂಡೆನು ಅಚ್ಚರಿಯ ಛಾಯೆ
ಮೂಕವಿಸ್ಮಿತವಾಗಿಸಲು ಚಂದಿರನ ಮಾಯೆ
ತೆರೆದವಳು ಮತ್ತೆ ಮುಚ್ಚಲೇ ಇಲ್ಲ ಬಾಯೇ..!

ಕಣ್ಣುಗಳು ಕಲೆತವು ಲೋಕವನು ಮರೆತವು
ಎರಡು ಜೀವಗಳೂ ಒಂದಾಗಿ ಬೆರೆತವು
ಆ ಬೆಳ್ಳಂಬೆಳಕಿನಲೆ ಇಡಿ ರಾತ್ರಿ ಸರಿಯಿತು
ಮಾತಾಡುವ ಮೊದಲೆ ಮತ್ತೆ ಬೆಳಕು ಹರಿಯಿತು

ನಾನೇ ಮುರಿದೆ ಮೌನವನು -
"ಏನಾದ್ರು ಮಾತಾಡೇ"
ಕತ್ತು ಆಡಿಸುತ ನಕ್ಕಳಷ್ಟೇ ಬಾಯ್ತುಂಬಾ
ಚಂದ್ರನಲ್ಲಿ ಕನ್ನಡಿಯಂತೆ ನಾಚಿತವಳ ಪ್ರತಿಬಿಂಬ

-ತ್ರಿವಿಕ್ರಮ

Saturday, March 02, 2013

ಗಡಿಪಾರು

ಗಡಿಪಾರು

ಮನಸ್ಸಿನ ಮೂಲೆಯಲ್ಲಿದ್ದ
ಸಂತಸದ ಆ ನಗು
ಜೀವ ಕಳೆದುಕೊಂಡಿತ್ತು.
ಆದರೂ, ಉಸಿರಿತ್ತು.
ಒಳಗಿದ್ದ ನೋವೆಲ್ಲ ನದಿಯಾಗಿ ಹರಿದಿತ್ತು.
ದಣಿದಿತ್ತು, ಸಾಗರವ ಹುಡುಕಿ ಹುಡುಕಿ..

ವರುಷಗಟ್ಟಲೆ ಹಿಡಿದಿದ್ದ
ಪ್ರೀತಿ ಪ್ರೇಮದ ಪಾಶ
ಸಡಿಲಗೊಂವಿತ್ತು.
ಆದರೂ, ಬಂಧನದಲ್ಲಿತ್ತು.
ಮನಸ್ಸಿನ ಕೊಳ ಬತ್ತಿಹೋಗಿತ್ತು.
ಹೊರತೆಗೆದಿತ್ತು, ನೆನಪುಗಳ ಕೆದಕಿ ಕೆದಕಿ..

ಅಳತೆಯಿಲ್ಲದ ಮನಸು
ಒಲವಿನ ಸುಳಿಯಲ್ಲಿ
ಪ್ರೀತಿಯನು ಉಳಿಸಿತ್ತು.
ಆದರೂ, ಗಡಿಪಾರು ಮಾಡಿತ್ತು.
ಮಾಡಿರದ ತಪ್ಪಿಗೆ ಶಿಕ್ಷೆಯನು ನೀಡಿತ್ತು.
ನೊಂದಿತ್ತು, ಜೀವನವೆ ಬದುಕಿ ಬದುಕಿ..

-ತ್ರಿವಿಕ್ರಮ

Thursday, February 14, 2013

Fourteen - ಹದಿನಾಲ್ಕು


 ಹದಿನಾಲ್ಕು 

        ಅಂತೂ ಇಂತೂ ಹದಿನಾಲ್ಕು ಕಳೆದೇ  ಹೋಯಿತು. ಕಳೆದ ಹದಿನಾಲ್ಕು ವರ್ಷಗಳಿಂದ ಇರುತ್ತಿದ್ದ ಸಂಭ್ರಮ ಉಲ್ಲಾಸ ಈ ಹದಿನಾಲ್ಕರಲ್ಲಿರಲಿಲ್ಲ. ಇಂದು ಅವಳ ಸುಳಿವಿಲ್ಲ, ಅವಳ ನಸುನಗುವಿಲ್ಲ, ಮುದ್ದಾದ ಮಾತಿಲ್ಲ. ಈ ಹದಿನಾಲ್ಕಕ್ಕೆ ಕೆವಲ ಅವಳ ನೆನಪೇ ಉಡುಗೊರೆ. ಅವಳು ಬರುವುದಿಲ್ಲವೆಂದು ಹದಿನಾಲ್ಕು ದಿನ ಮೊದಲೇ ತಿಳಿದಿತ್ತು. ನನ್ನ ಪುಟ್ಟ ತಂಗಿಯ ಕನ್ನಡ ಪುಸ್ತಕದ ಹದಿನಾಲ್ಕನೇ ಪುಟದಲ್ಲಿ ಗುಟ್ಟಾಗಿ ಬಚ್ಚಿಟ್ಟಿದ್ದ ಪತ್ರದ ಆ ಹದಿನಾಲ್ಕು ಸಾಲುಗಳು ನನಗೆ ಎಲ್ಲವನ್ನು ಖಚಿತಪಡಿಸಿದ್ದವು. ಅವಳೇನೋ ತನ್ನ ಮನಸಿನಲ್ಲಿದ್ದ ಮಾತುಗಳನ್ನು, ತೆಗೆದುಕೊಂಡಿದ್ದ ನಿರ್ಧಾರವನ್ನು ಹದಿನಾಲ್ಕು ಸಾಲುಗಳಲ್ಲಿ ಹೊರಹಾಕಿದ್ದಳು. ಆದರದು ನನಗೆ ಹದಿನಾಲ್ಕು ಯುಗಗಳಿಗಾಗುವಷ್ಟು ನೋವನ್ನು ತಂದಿತ್ತು. ಅಂದು ಹದಿನಾಲ್ಕು ನಿಮಿಷ ತಡವಾಗಿ ಬಂದ ಬಸ್ಸಿನಿಂದ ಇಳಿದ ಹದಿನಾಲ್ಕು ಪ್ರಯಾಣಿಕರಲ್ಲಿ ಅವಳಿರಲಿಲ್ಲ. ಆದರು ಹದಿನಾಲ್ಕು ಕಳೆದಿತ್ತು.

        ಈ ಹದಿನಾಲ್ಕು ನನ್ನ ಜೀವನದ ಸಂಕೇತವಾಯಿತೇನೋ ಎಂಬಂತೆ ಪತ್ರವನ್ನು ಹದಿನಾಲ್ಕನೇ ಬಾರಿಗೆ ಓದಿ ಅದನ್ನು ಹದಿನಾಲ್ಕು ಚೂರುಗಳನ್ನಾಗಿಸಿದೆ. ಅವಳ ಮದುವೆಗೆ ಇನ್ನು ಹದಿನಾಲ್ಕು ದಿನ ಮಾತ್ರ ಇತ್ತು.

-ತ್ರಿವಿಕ್ರಮ 

Monday, January 28, 2013

Why Sooo Serious - ವೈ ಸೋ ಸೀರಿಯಸ್?

ವೈ ಸೋ ಸೀರಿಯಸ್ಸು?

ವಯಸಿನ್ನು ದಾಟಿಲ್ಲ ಹದಿನೆಂಟು
ಈಗಲೇ ಏಕಿಷ್ಟು ಡಿಸಪಾಯಿಂಟ್ ಮೆಂಟು?
ನಗುನಗುತ ಕಳೆಯೋಣ ಪೂರ್ತಿ ಆಯಸ್ಸು
ವೈ ಸೋ ಸೀರಿಯಸ್ಸು??

ಎಸ್ಸೆಸಲ್ಸಿ, ಆದಮೇಲೆ ಪೀಯೂಸಿ
ಜೀವನ ಸಾಯೋವರೆಗೂ ತುಂಬಾ ಬ್ಯುಸಿ
ಹಾಳಾಗಿಹೋಗಲಿ ಪಾಸಾಗದಿದ್ದರೆ ಸಿಇಟಿ
ಬದುಕೋಕೆ ದಾರಿಗಳಿವೆ ಕೋಟಿ ಕೋಟಿ
ಹುಟ್ಟಿಸಿದ ದೇವರು ಮೇಯಿಸೋಲ್ಲ ಹುಲ್ಲು
ಇರುವವರೆಗು ಜೀವನವನ್ನು ಖುಷಿಯಿಂದ ತಳ್ಳು

ಅರ್ಧ ಜೀವನ ಓದಿದ್ದೇ ಆಯಿತು,
ಅಂತೂ ಇಂತೂ ಕೋರ್ಸು ಮುಗಿಯಿತು.
ಸಿಗಬಹುದು ಎಂಎನ್ಸೀಯಲ್ಲೊಂದು ಜಾಬು
ತುಂಬಿ ತುಳುಕುತ್ತಿರುತ್ತದೆ ಜೇಬು
ಖರ್ಚು ಮಾಡಲಾದರೂ ಎಲ್ಲಿದೆ ಸಮಯ?
ಆಫೀಸು ಕೆಲಸದಲ್ಲೇ ಆಗಿರುವಿರಿ ಮಾಯ

ಇಷ್ಟರಲ್ಲೇ ಆಗಿರುವುದು ಯೌವ್ವನದ ಕೊಲೆ
ಕೂದಲುದುರಿ ಆವರಿಸಿರುತ್ತದೆ ಬೋಳುತಲೆ
ಹಿಂತಿರುಗಿ ನೋಡಿದರೆ ಎಲ್ಲ ಖಾಲಿ ಖಾಲಿ
ಸವೆದಿರುತ್ತದೆ ಅಷ್ಟೇ ಜೀವನದ ಚಪ್ಪಲಿ
ಇದರೋಳಗೆ ನಗೋದಕ್ಕೂ ಮಾಡಿಕೊಳ್ಳಿ ಟೈಮು
ಖುಷಿಯಾಗಿರೋದೇನು ಅಲ್ಲವಲ್ಲ ಕ್ರೈಮು?

ಕೈ ಜಾರಿ ಹೋಗುವುದು ಕಣ್ಣೆದುರೆ ವಯಸ್ಸು
ಸಂತಸದಿಂದಿರಲಿ ಸದಾ ನಿಮ್ಮ ಮನಸ್ಸು
ಈಗಲಾದರು ನಕ್ಕುಬಿಡಿ
ವೈ ಸೋ ಸೀರಿಯಸ್ಸು???

-ತ್ರಿವಿಕ್ರಮ



Thursday, January 24, 2013

Second innings - ಸೆಕೆಂಡ್ ಇನ್ನಿಂಗ್ಸು

ಸೆಕೆಂಡ್ ಇನ್ನಿಂಗ್ಸು


ಮೊದಲ ಪ್ರೇಮದ ಕುರುಹುಗಳ
ಎದೆಯಿಂದ ಅಳಿಸಬಹುದೇ?
ನಿತ್ಯ ನೈಟಿನಲಿ ನಿದಿರೆ ಕದಿಯುವ
ಆ ಹುಚ್ಚು ನೆನಪುಗಳ
ಸೆರೆಮನೆಗೆ ಕಳಿಸಬಹುದೇ?

ಅಂದು ರಕ್ಷಾ ಬಂಧನ -
ಎಷ್ಟೋ ಲವ್ ಸ್ಟೋರಿಗಳಿಗೆ
ರಾಖಿ ಹಾಕಿತ್ತು ಚೂರಿ
ಎದೆಯೆ ಆಗಿತ್ತು ಗೋರಿ
ಕೈಗಳಾದಾಗ ರಕ್ಷೆಯಲಿ ಬಂಧಿ.
ಆದರೆ ಸಖತ್ ಡಿಫರೆಂಟ್ ರೀ
ನಮ್ ಲವ್ ಸ್ಟೋರಿ - ಇಲ್ಲಿ
ರಾಖಿಯೇ ಹಾಡಿತ್ತು ಪ್ರೇಮಕ್ಕೆ ನಾಂದಿ.

ಕೈಗಳನು ಮುಂದೆ ಚಾಚಿ
ಕಟ್ಟಿಸಿಕೊಳ್ಳುತ್ತಿದ್ದೆ ರಾಖಿ
ಕಣ್ಣುಗಳು ಬೆರೆತವು, ಕರೆಂಟು ಹೊಡೆಯಿತು
ಅವಳ ಕೈಗೆ ಕೈ ತಾಕಿ.

ರಾಖಿ ಕಟ್ಟಿದ ಅವಳಿಗೆ
ನಾನಾಗಬೇಕಿತ್ತು ಬ್ರದರ್ರು
ಆದರೆ ಎದೆಯಲ್ಲಿದ್ದ ಕಾಮನೆಗಳ
ಕಾಮನಬಿಲ್ಲಿಗೆ ಅವಳು ಹಚ್ಚಿದ್ದಳು
ಕೋಟಿ ಕೋಟಿ ಕಲರ್ರು.

ಮನಸ್ಸಿನ ಕೊಳದಲ್ಲಿ ಇಳಿದ
ಅವಳೊಂದು ಬಣ್ಣದ ಮೀನು
ಮೀನ ಹಿಡಿಯಲು ಗಾಳ ಇಳಿಸಿದ
ನನಗಿನ್ನು ಏಜು ತರ್ಟೀನು..!
ಮುಖದಲ್ಲಿ ಮೀಸೆ ಮೂಡುವ ಮೊದಲೇ
ಎದೆಯಲ್ಲಿ ಆಸೆ ಮಾಡಿತ್ತು ತರಲೆ

ನನ್ನೊಳಗೆ ನನಗೆ ತಿಳಿಯದೆ
ಕಟ್ಟಿದ ಕನಸುಗಳು ನೂರಾರು
ನನಗೆ ಇಂದಿಗೂ ತಿಳಿಯದು
ಅದಕ್ಕೆಲ್ಲ ಹೊಣೆಯಾರು??
ಪ್ರಾಯದ ಹೊಸ್ತಿಲಲ್ಲೇ ಆಗಿತ್ತು
ನನಗೂ ವಿರಹ ವೇದನೆ
ತಡೆಯಲಾರದೆ  ನಾ ಮಾಡಿದ್ದೆ
ನನ್ನ ಪ್ರೇಮ ನಿವೇದನೆ

ನನ್ನ ಪ್ರಪೋಸಲ್ಲು ಅವಳಿಗೆ
ತಂದಿತ್ತು ಭರಿಸಲಾಗದ ಅಚ್ಚರಿ
ಪ್ರೇಮ ಪತ್ರ ಹರಿದು ಚೂರಾಗಿತ್ತು
ನಾ ಯೋಚಿಸುವ ಮೊದಲು ಬೇರೆ ದಾರಿ
ವೀಕಾಗಿ ಹೋಯ್ತು ನನ್ನೆದೆಯ ಬ್ಯಾಟರಿ
ಹೊತ್ತಿಕೊಂಡಿತು ಎದೆಯಾಳದಲ್ಲಿ
ಧಗಧಗನೇ ಉರಿವ ಉರಿ.

ನನ್ನದೂ ಅದೇ ಕಥೆಯಾಯ್ತು
ಮತ್ತೆ ತಂದಳು ರಾಖಿ ಎಂಬ ವೆಪನ್ನು
ಈ ಬಾರಿ ಮಾಡಿದ್ದಳು ಪ್ರೀತಿಯ ದಫನು.
ಮೊದಲ ರಾಖಿಯಿಂದ ಲವ್ವು
ಬೀರಿತ್ತು ಒಲವಿನ ನಗೆ
ಈ ರಾಖಿ ಹಾಕಿತ್ತು ಆ ಲವ್ವಿಗೆ ಹೊಗೆ.

ದೊಡ್ಡವರು ಸುಮ್ಮನೇ ಹೇಳಿಲ್ಲ
ಒಳ್ಳೆಯದಕ್ಕಾಗಿಯೇ ಆಗುವುದೆಲ್ಲ
ಮನದಲ್ಲಿ ಮೂಡಿತ್ತು ಹೊಸದೊಂದು ಕನಸು
ಶುರುವಾಗುವುದಿತ್ತು ಸೆಕೆಂಡ್ ಇನ್ನಿಂಗ್ಸು.

ಜಾಸ್ತಿ ದಿನ ಇಟ್ಟುಕೊಳ್ಳಬಾರದಂತೆ
ಖಾಲಿ ಹೊಡೆಯುತ್ತಿರುವ ಹಾರ್ಟು
ಅದಕೆಂದೆ ಕರೆಸಿದ್ದೆ ಮತ್ತೊಬ್ಬಳನು
ಮಾಡಲು ಪ್ರೇಯಸಿಯ ಪಾರ್ಟು.

ಬಾಡಿಯಲೇ ಕೊಳೆಯುತ್ತಿದ್ದ ಹಾರ್ಟಿಗೆ
ಬಾಡಿಗೆಗೆ ಎಂದು ಬಂದಳು
ಬಾಡಿ ಹೋಗುತ್ತಿದ್ದ ಪ್ರೀತಿಗೆ
ಮಳೆನೀರ ತಂದಳು.
ಬಾಡಿಗೆ ಮನೆ ಅವಳಿಗೆ ಸ್ವಂತವಾಯ್ತು
ಅಂದಿಗೆ ನನ್ನ ನೋವೆಲ್ಲ ಅಂತ್ಯವಾಯ್ತು.

ಪ್ರೀತಿಯ ಹೂ ಅರಳಿ ನಿಂತಿದೆ
ಇದು ಅವಳ ಕೊಡುಗೆ
ನೀವೇನು ಹೇಳುವಿರಿ? ಸೇರಬೇಕು ತಾನೆ
ಈ ಹೂ ಅವಳ ಮುಡಿಗೆ?

 




 -ತ್ರಿವಿಕ್ರಮ


Monday, January 21, 2013

ನಗು

 ನಗು


        ದೇವಸ್ಥಾನದ ಘಂಟೆಯ ಸದ್ದಾಯಿತು. ಗರ್ಭಗುಡಿಯಿಂದ ಹೊರಗಿಣುಕಿದೆ. ಬಿಳಿ ಸೀರೆ ಉಟ್ಟಿದ್ದ ಇಪ್ಪತ್ತರ ಆಸುಪಾಸಿನ ಮಹಿಳೆಯೊಬ್ಬಳು ತನ್ನ ಕಂದಮ್ಮನನ್ನು ಘಂಟೆಯ ಬಳಿ ಎತ್ತಿ ಹಿಡಿದಿದ್ದಳು. ಆ ಮಗು ತನ್ನ ಪುಟ್ಟ ಬೆರಳುಗಳಿಂದ ಘಂಟೆಯನ್ನು ಬಡಿದು ಸಂತೋಷಪಡುತ್ತಿತ್ತು. ತೀರ್ಥ ನೀಡಲೆಂದು ಹೊರಹೋದವನ ನೋಟ ಆ ತಾಯಿಯ ಮುಖದ ಮೇಲೆ ಹರಿಯಿತು. ನಗುವಿನ ನೆನಪೇ ಮರೆತುಹೋದಂತಿದ್ದ ಆ ಮುಖದಲ್ಲಿದ್ದ ನಿಸ್ತೇಜ ಕಣ್ಣುಗಳು ನನ್ನನ್ನೇ ದಿಟ್ಟಿಸಿ ನೋಡಿದಾಗ ಕೊಂಚ ತಳಮಳವಾಯಿತು. ಹಣೆಯಲ್ಲಿ ಕುಂಕುಮವಿಲ್ಲ, ಕೆನ್ನೆಯಲ್ಲಿ ಅರಿಸಿನವಿಲ್ಲ, ಕೊರಳಿನಲ್ಲಿ ಮಾಂಗಲ್ಯವಿಲ್ಲ. ಆ ಒಂದು ಕ್ಷಣ ದ.ರಾ.ಬೇಂದ್ರೆಯವರ ಪುಟ್ಟ ವಿಧವೆ ನೆನಪಾದಳು. ಕತ್ತು ಬಗ್ಗಿಸಿ ತೀರ್ಥವನ್ನು ನೀಡಿ ಗರ್ಭಗುಡಿ ಸೇರಿದೆ. ಅಲ್ಲಿದ್ದ ಕಲ್ಲಿನ ದೇವರ ವಿಗ್ರಹ ನಗುತ್ತಿತ್ತು.
          ಹೊರಗೆ ಜೀವವಿದ್ದ ಮಹಿಳೆ ನಗುತ್ತಿರಲಿಲ್ಲ. ಒಳಗೆ ನಗುತ್ತಿದ್ದ ದೇವರಿಗೆ ಜೀವವೇ ಇರಲಿಲ್ಲ.

Friday, January 18, 2013

ಮೊಬೈಲು ಜೀವ

         ಮೊಬೈಲು ಜೀವ

            ಇಂದು ಮುಂಜಾನೆ ಏಳುತ್ತಿದ್ದಂತೆಯೆ, ಏಕೋ ಏನೋ ಪ್ರತಿದಿನ ಮೊಬೈಲ್ ಬಟನ್ ಒತ್ತುತ್ತಿದ್ದ ಕೈಗಳು ದೇವರಿಗೆ ನಮಿಸಿದವು. ಮೊಬೈಲ್ ಸ್ಕ್ರೀನ್ ನೋಡುತ್ತಿದ್ದ ಕಣ್ಣುಗಳು ಕಿಟಕಿಯಿಂದ ಬರುತ್ತಿದ್ದ ಸೂರ್ಯನ ಕಿರಣಗಳನ್ನು ನೋಡಿದವು. ಮೊಬೈಲ್ ಪಕ್ಕದಲ್ಲೆ ಬಿದ್ದಿರುವುದನ್ನು ಕಂಡರು ಅದನ್ನು ಮುಟ್ಟುವುದಕ್ಕೂ ಮನಸಾಗಲಿಲ್ಲ. ಕಂಡರೂ ಕಾಣದ ಹಾಗೆ ಎದ್ದು ಹೋಗಿ ಸ್ನಾನ, ತಿಂಡಿ ಮುಗಿಸಿ ಬಂದೆ. ಆಸೆ ತಡೆಯಲಾಗದೆ ಹಾಸಿಗೆಯಲ್ಲಿ ನಿಶ್ಚೇತವಾಗಿ ಬಿದ್ದಿದ್ದ ಮೊಬೈಲನ್ನು ಕೈಗೆತ್ತುಕೊಂಡೆನಾದರೂ ಸ್ವಿಚ್ಆಫ್ ಆಗಿದ್ದ ಅದಕ್ಕೆ ಜೀವ ತುಂಬುವ ಮನಸಾಗಲಿಲ್ಲ. ನೆನ್ನೆ ರಾತ್ರಿ ಅವಳಾಡಿದ ಮಾತುಗಳು ಮನಸ್ಸನ್ನು ಇನ್ನೂ ಇರಿಯುತ್ತಿದ್ದವು. ನಿನ್ನನ್ನು ಬಿಟ್ಟು ನಾ ಬದುಕಿರಲಾರೆ ಎಂದಿದ್ದ ನಾಲಿಗೆಯೇ, ದಯವಿಟ್ಟು ನನಗೆ ತೊಂದರೆ ಕೊಡಬೇಡ ನನ್ನನ್ನು ಬಿಟ್ಟುಬಿಡು ಎಂದಿತ್ತು. ಪ್ರೇಮಕ್ಕೆ ಕಣ್ಣು ಮಾತ್ರವಲ್ಲ ಕೊಂಚ ಕರುಣೆಯೂ ಇಲ್ಲ ಎಂದೆನಿಸಿತು. ಮೊಬೈಲನ್ನು ಬಿಚ್ಚಿ ಸಿಮ್ ಹೊರತೆಗೆದು ಕಸದ ಬುಟ್ಟಿ ಸೇರಿಸಿದೆ. ಮನಸ್ಸು ನಿರಾಳವಾಯಿತು.
         ಕಾಲೇಜಿಗೆ ಹೊರಡಲು ಸಮಯ ನೋಡಿದೆ. ಅವಳೇ ಕೊಡಿಸಿದ್ದ ವಾಚ್ ಸಮಯ ತೋರಿಸುವುದನ್ನೂ ನಿಲ್ಲಿಸಿತ್ತು. ಅದನ್ನು ಬಿಚ್ಚಿ ಮೊಬೈಲ್ ಮೇಲಿಟ್ಟು ಹೊರನೆಡೆದೆ.

Saturday, January 12, 2013

Buck-tooth-Beauty- ಉಬ್ಬಲ್ಲು ಸುಂದರಿ

ಉಬ್ಬಲ್ಲು ಸುಂದರಿ

ಕೆಂದುಟಿಯನು ಸೀಳಿ ಹೊರಬಂದ ನಿನ್ನ ಉಬ್ಬಲ್ಲು
ಮಾಡಿದೆ ನಿನ್ನ ಸೌಂದರ್ಯವನ್ನು ಡಬ್ಬಲ್ಲು
ಮಂದಹಾಸ ತುಂಬಿದ ಆ ನಿನ್ನ ವದನದಲಿ
ಎಂದಿಗೂ ದುಃಖದ ಸುಳಿವೇ ಇಲ್ಲ
ನೀ ನಕ್ಕರೂನೂ.. ನಗದಿದ್ದರೂನೂ..
ನೀ ಹಸನ್ಮುಖಿ, ಸದಾ ಹಸನ್ಮುಖಿ

ನಿನ್ನ ಬಾಯಲ್ಲಿರುವುದು ಮುತ್ತಿನ ಮಣಿಗಳೇ
ಆದರವು ಕಪ್ಪೆ ಚಿಪ್ಪ ಕೊರೆದು ಹೊರಬಂದಿವೆ
ನಿನ್ನ ಬಾಯಲ್ಲಿರುವುದು ದಾಳಿಂಬೆ ಬೀಜಗಳೇ
ಆದರವು ಸಿಪ್ಪೆಯ ಹರಿದು ಹೊರಬಂದಿವೆ
ದೇವರು ನಿನಗಿತ್ತ ಸುಂದರ ಶಾಪವಿದು.

ಬಾಲೆಯರ ಗುಂಪಲ್ಲಿ ನೀನಲ್ಲ ಸಾಮಾನ್ಯ ಹೆಣ್ಣು
ಬದಲಿಗೆ ನೀನೇ ಸೆಂಟರ್ ಆಫ್ ಅಟ್ರಾಕ್ಷನ್ನು
ನಗುಮೊಗದ ನೀ ಮತ್ತೊಮ್ಮೆ ನಕ್ಕಾಗ
ದೀಪದ ಪಕ್ಕದಲೆ ದೀಪ ಹೊತ್ತಿಸಿದಂತೆ
ಚಂದಿರನಿದ್ದ ಆಗಸಕೆ ಮತ್ತೊಬ್ಬ ಚಂದಿರ ಬಂದಂತೆ.

ಹಣ್ಣೊಂದ ತಿನುವಾಗ ಬಾಯ್ತುಂಬ ಕಚ್ಚು
ಖಂಡಿತ ಸಿಗುವುದು ನಿನಗೊಂದು ಪಾಲು ಹೆಚ್ಚು
ದೇವರೆಂದು ಓದಿರಲಿಲ್ಲ ಡೆಂಟಲ್ ಸೈನ್ಸನ್ನು
ಆದರು ಜೋಡಿಸಹೊರಟ ನಿನ್ನ ದಂತಪಂಕ್ತಿಯನು
ನಿನ್ನ ಸೌಂದರ್ಯ ಮಾಡಿಸಿತವನಿಂದ ಈ ತಪ್ಪನು
ಆದಕ್ಕಾಗಿ ನೀಡಿರುವನು ಈ ನಗುಮೊಗದ ಹೊಳಪನು

ನಿನ್ನ ನಗುವಿಗೆಂದೂ ಬಂದಿರಲಿಲ್ಲ ಮುಪ್ಪು
ಹಾಕಿಸುವವರೆಗೂ ನೀ ಹಲ್ಲುಗಳಿಗೆ ಕ್ಲಿಪ್ಪು
ಮನೆಯಲ್ಲಿದ್ದ ಕ್ಲೋಸ್ ಅಪ್ ಟೂತ್ ಪೇಸ್ಟು
ಆಗುತ್ತಿತ್ತೇ ನಿನ್ನ ಹಲ್ಲುಗಳಿಂದಲೇ ವೇಸ್ಟು?
ಯಾವ ಸಂತಸಕ್ಕಾಗಿ ಆ ಹಲ್ಲುಗಳ ಮಾಯ ಮಾಡಿದೆ?
ಯಾತಕ್ಕಾಗಿ ಆ ನಿನ್ನ ಮೊದಲ ನಗುವ ಕೊಂದೆ?

ನಿಜ ಹೇಳಲೇ ಚಲುವೆ..?
ಒಮ್ಮೆ ಕೆಂದುಟಿಗಳಿಂದ ಇಣುಕುತ್ತಿದ್ದ ನಿನ್ನ ಉಬ್ಬಲ್ಲು
ನನ್ನಾಣೆಗೂ ಮಾಡಿತ್ತು ನಿನ್ನ ಸೌಂದರ್ಯವನ್ನು ಡಬ್ಬಲ್ಲು..!

ಕ್ಲಿಪ್ಪು ಹಾಕಿಸದೆ ಉಬ್ಬಲ್ಲನ್ನೆ ಮೈಂಟೈನ್ ಮಾಡುತ್ತಿರುವ ಚಲುವೆಯರಿಗೆ..
ಅವರು ಹೇಗಿದ್ದಾರೋ ಹಾಗೆಯೆ ಪ್ರೀತಿಸುತ್ತಿರುವ ಹುಡುಗರಿಗೆ..


-ತ್ರಿವಿಕ್ರಮ

Friday, January 11, 2013

ನಾನು ನಿರ್ಭಯೆ



ನಾನು ನಿರ್ಭಯೆ..

ಬಾಳಿ ಬದುಕುವ ಕಡೆಯ ಆಸೆಗೆ 
ಇಟ್ಟಿರುವೆ ನಿಟ್ಟುಸಿರ ಪೂರ್ಣವಿರಾಮ.
ಉಸಿರು ತನ್ನ ಆಸ್ತಿಯನು
ಸಾವಿನ ಹೆಸರಿಗೆ ಬರೆದು ಕೊಟ್ಟಿದೆ,
ಆದರೆ ಆ ಸಾವಲ್ಲಿಯೂ ನಾ 
ಬದುಕುವ ಸಣ್ಣ ಕನಸ ಕಟ್ಟಿದೆ.
ನನಗಿನ್ನು ಬಂದಿರಲಿಲ್ಲ ಮುಪ್ಪು
ನಾ ಮಾಡಿದ್ದಾದರೂ ಯಾವ ಮಹಾ ತಪ್ಪು?


ಮುದ್ದಾದ ಮುಸ್ಸಂಜೆಯ ಮುಂದಿದ್ದದ್ದು
ಆ ಕ್ರೂರ ಕರಾಳ ರಾತ್ರಿ
ಗರಿಗೆದರಿದ್ದ ಸವಿಗನಸುಗಳ ಹೊತ್ತ 
ಪುಟ್ಟ ಹಕ್ಕಿಯಂತೆ ಗೂಡಿಗೆ ಮರಳುತ್ತಿದ್ದೆ.
ನಾ ಆಗ ತಾನೆ ಅರಳಿದ್ದ ಬಣ್ಣ ಬಣ್ಣದ ಹೂ
ನನಗಿರಲಿಲ್ಲ ಮುದುಡಿಹೋಗುವ
ಒಂದು ಚಿಕ್ಕ ಸುಳಿಹು.
ಆದರೆ ನಾ ಏರಿದ್ದು ಮೃತ್ಯುವಿನ ವಾಹನ
ಕಿಟಕಿಯಲ್ಲಿದ್ದ ಕಪ್ಪು ಚಂದಿರನತ್ತ
ಹರಿಯಲೇ ಇಲ್ಲ ನನ್ನ ಗಮನ.
ನಾ ಆಗಿಹೋಗಿದ್ದೆ ಕ್ಷುದ್ರ ಕ್ರಿಮಿಗಳ ಭೋಜನ.
ಹಸಿದ ನಾಯಿಯ ಹಿಂಡಿಗೆ ಸಿಕ್ಕ
ತುಪ್ಪ ಸವರಿದ ರೊಟ್ಟಿಯಂತಾಗಿದ್ದ ನನ್ನ
ಹರಿದರಿದು ತಿಂದರು.
ಪರಿಧಿಯನು ದಾಟಿ ಸರದಿಯಲಿ ಉಂಡರು
ಕಿಂಚಿತ್ ಕರುಣೆಯ ಕಾಣಿಸದೆ
ಇರಿದಿರಿದು ಕೊಂದರು.
ಮೃಷ್ಟಾನ್ನ ತುಂಬಿದ ಬಾಳೆಲೆಯ
ಬರಿದು ಮಾಡಿ ಬೆರಳ ನೆಕ್ಕಿದರು
ನನ್ನ ಕಣ್ಣಲ್ಲಿ ಅವರಾಗಿರಲಿಲ್ಲ ರಕ್ಕಸರು,
ನಿರ್ಭಾಗ್ಯ ಭಾಜನೆಯಾದ ನನಗೆ
ನಿಸ್ಸಹಾಯಕತೆಯ ನರಕ ತೋರಿದ ನಪುಂಸಕರು.

ನಡುಗಿಸುವ ಆ ನಟ್ಟಿರುಳಿನಲಿ
ನೆತ್ತರ ನೆರಳ ಹುಡುಕುತ್ತಿದ್ದೆ
ಸುತ್ತಲೂ ಇದ್ದದ್ದು ಕಗ್ಗತ್ತಲು
ಬರಲಿಲ್ಲ ಯಾರೂ 
ಕೈ ಹಿಡಿದು ಮೇಲೆತ್ತಲು
ಪಾಳು ಬಿದ್ದ ಮನೆಯ
ಪಾಳಿಯಲಿದ್ದು ಕಾಯುವವರಾರು?
ನೆಲದ ಮೆಲೆ ಚೆಲ್ಲಿದ್ದ ನೆತ್ತರಲಿ
ತನ್ನ ನಗ್ನ ಪ್ರತಿಬಿಂಬವನು ಕಂಡ
ಚಂದಿರನು ಹೊದ್ದಾಗ ಮೋಡದ ಹೊದಿಕೆ
ಛಿದ್ರವಾಗಿ ಹೋಗಿತ್ತು ಈ ನನ್ನ ಬದುಕೆ..!

ನನ್ನ ಬದುಕಿನ ದೀಪ
ನಿಮ್ಮ ಕಣ್ಣೆದುರೆ ಆರುವಾಗ
ನಿಂತು ನೋಡಿದ ನೀವೆಲ್ಲ
ಆಮೇಲೆ ದೀಪ ಹಚ್ಚಿ ಕಣ್ಣೀರಿಟ್ಟದ್ದೇಕೆ?
ಸಿಗಲಿ ಎಂದೇ ನನ್ನ ಆತ್ಮಕ್ಕೆ ಶಾಂತಿ?
ಹಾಗಿದ್ದರೆ ಅದು ನಿಮ್ಮ ಭ್ರಾಂತಿ.
ಪಶ್ಚಾತಾಪದ ಹೆಸರಲ್ಲಿ
ಅನುಕಂಪದ ನೆಪದಲ್ಲಿ
ಗಿಳಿಪಾಠ ಓದುವ ನಾಯಕರೊಡನೆ
ಸೇರಿ ಮಾಡಿದಿರಿ ನೋವಿನ ನಟನೆ
ಅದಕ್ಕೆ ನೀವೆ ಕೊಟ್ಟ ಹೆಸರು ಪ್ರತಿಭಟನೆ.

ದೋಷಗಳೇ ಇರುವ ದೇಶಕ್ಕೊಂದು
ರಕ್ಷಣೆಯೇ ಇರದ ರಾಜಧಾನಿ
ಅದನ್ನಾಳುವ ನೀಯತ್ತಿರದ ನಾಯಕರನ್ನೇ
ತಮ್ಮ ಪ್ರತಿನಿಧಿಗಳನ್ನಾಗಿಸಿರುವ ಪ್ರಜೆಗಳು
ಇಲ್ಲಿರುವುದು ಸುಲಭವಲ್ಲ,
ಆದರೆ ಲೋಕವನ್ನೇ ತ್ಯಜಿಸಿದ
ನನಗಿನ್ನು ಯಾವ ಭಯವೂ ಇಲ್ಲ
ನಾನು ನಿರ್ಭಯೆ,,


ದೇಶಕ್ಕೆ ದೇಶವೆ ಕಂಬನಿ ಸುರಿಸಿದ ನಿರ್ಭಾಗ್ಯೆ ನಿರ್ಭಯಾಳ ಸಾವು ನಿಜವಾಗಿಯೂ ಭಯಂಕರ.
ಅವಳನ್ನು ನನ್ನ ಅಕ್ಕ ಎಂದು ಭಾವಿಸಿ, ಅವಳ ತಮ್ಮನಾಗಿ ಅವಳ್ ಸ್ಥಾನದಲ್ಲಿ ನಿಂತು, ಅವಳಿದ್ದ ಪರಿಸ್ಥಿತಿಯ ಕುರಿತು ಯೋಚಿಸಿದಾಗ ಬಂದ ಕಹಿ-ಕಹಿ ಸಾಲುಗಳ ಸೇರಿಸಿ ಒಂದು ದುರಂತ ಕವಿತೆಯ ರೂಪ ನೀಡಲು ಪ್ರಯತ್ನಿಸಿದ್ದೇನೆ.

                                                    -ತ್ರಿವಿಕ್ರಮ

Tuesday, January 08, 2013

ನನ್ನ ಮೊದಲ ಕವಿತೆ - ಕವಿಸಮಯ

ಕವಿಸಮಯ



ಆಧುನಿಕ ಪ್ರೇಮದ ಪರಿಯೆನಗೆ ಕಗ್ಗಂಟು
ಕಣ್ ಹೊಡೆವ ಕಲೆಯಲ್ಲಿ ನಾನಿನ್ನು ಹೆಬ್ಬೆಟ್ಟು
ಆಸೆಗಳ ಹೊಡೆತಕ್ಕೆ ನಾನಾದೆ ಪೇಷಂಟು
ಕಣ್ಣಲ್ಲೆ ಕೊಡು ಚಲುವೆ ನಸುನಗೆಯ ಟ್ರೀಟ್ಮೆಂಟು

ವಿರಹದ ಜ್ವಾಲೆಗೆ ನಿನ್ನ ನೆನಪುಗಳೆ ಪೆಟ್ರೋಲು
ಧಗಧಗನೆ ಉರಿಯುತಿದೆ ಆಗದು ಕಂಟ್ರೋಲು
ವಿಸ್ಕಿ ಮುಟ್ಟಲಿಲ್ಲ ಧಮ್ಮು ಎಳೆಯಲಿಲ್ಲ
ಕವಿಯಾಗಿ ಬದಲಾದೆ ಕೊನೆಸಾಲು ಹೊಳೆಯಲಿಲ್ಲ

ಕಣ್ಣೆದುರೆ ಆಗುತಿರೆ ನನ್ನೆದೆಯ ದಹನ
ಕಣ್ಮುಚ್ಚಿ ಓದು ಬಾ ನನ್ನುಸಿರ ಕವನ
ಒಂದೊಂದು ಸಾಲಿಗೂ ಮರುಜೀವ ತುಂಬು ನೀ
ಇನ್ನೊಮ್ಮೆ ಒರೆಸು ಬಾ ನನ್ನೊಲವ ಕಂಬನಿ

ಆ ನಿನ್ನ ಕಣ್ಣೋಟ ಕೆಂದುಟಿಯ ತುಂಟಾಟ
ಪ್ರತಿಕ್ಷಣವು ಕೊಲ್ಲುತಿದೆ ನನ್ನ
ಮನಸಲ್ಲಿ ಮನೆಮಾಡು ಕನಸಲ್ಲಿ ನನಕಾಡು
ಕಣ್ಣೀರು ಕೊನೆಯಾಗುವ ಮುನ್ನ

ಎಡಬಿಡದೆ ಆಗುತಿರೆ ಪೋಲಿ ಪದಗಳ ವಿನಿಮಯ
ಅಚ್ಚರಿಪಡಬೇಡ ಹುಡುಗಿ.. ಇದು ಕವಿಸಮಯ

[ಎದೆಯಲ್ಲಿ ನೀ ಮಾಡಿ ಮುಚ್ಚದೆ ಉಳಿಸಿರುವ ಹೋಲುಗಳು
ವಿರಹದ ಸಂಜೆಯಲಿ ಅದರಿಂದ ಹೊರಬಂದ ಈ ಸಾಲುಗಳು
ಗೀಚಿರುವೆ ನಿನಗಾಗಿ ಮರೆಯಾಗುವ ಮೊದಲು]


                                                                                           -ತ್ರಿವಿಕ್ರಮ