ಕವಿತೆ ಬರೆಯುತ್ತೇನೆ ನಾನು
ಕವಿತೆ ಬರೆಯುತ್ತೇನೆ ನಾನು;
ನಿನ್ನ ನೆನಪುಗಳ ಗೆದ್ದು ಮೇಲೆದ್ದು
ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ
ಲೆಕ್ಕವೇ ಇರದ ಪ್ರೆಮಕಾವ್ಯಗಳು
ನೆನಪಿನ ಜ್ವಾಲೆಗಾಹುತಿಯಾಗಿರುವಾಗ
ನಾ ಬರೆಯುವ ಕವಿತೆ
ನಿನ್ನ ನೆನಪುಗಳ ಗೆಲ್ಲಬಹುದೆಂಬ
ಕೊಲ್ಲಬಹುದೆಂಬ ಭ್ರಾಂತಿ ನನಗಿಲ್ಲ.
ಕವಿತೆ ಬರೆಯುತ್ತೇನೆ ನಾನು;
ನೆನಪಿನ ದೋಣಿಯ ಯಾನ ಮುಗಿಸಿ
ತೀರ ಸೇರುವೆನೆಂಬ ಆಸೆಯಿಂದಲ್ಲ.
ಕೊನೆಯಿರದ ನೆನಪಿನ ಕಡಲಿನಲಿ
ತೇಲುತಲೇ ಇರುವೆನು ನಾನು
ನೀ ತೊರೆದಾಗಿನಿಂದಲೂ.
ಆಗೊಮ್ಮೆ ಈಗೊಮ್ಮೆ
ದೋಣಿಯಿಂದಾಚೆಗೆ ಜಿಗಿದು
ಈಜಲೆತ್ನಿಸಿ, ತೇಲಾಡಿ, ಓಲಾಡಿ,
ಮುಳುಗಿ ಉಸಿರುಗಟ್ಟಿ ಒದ್ದಾಡಿದ್ದೇನೆ.
ಕಡೆಗೆ ‘ಪ್ರೀತಿ ಮಧುರ
ನೆನಪುಗಳು ಅವiರ’ ಎನ್ನುತಾ
ಮತ್ತೆ ದೋಣಿ ಹತ್ತಿ ಕೂತಿದ್ದೇನೆ.
ನನಗೆ ಗೊತ್ತು ನಿನ್ನ ನೆನಪುಗಳಿಗೆ
ನೀಗಲಾರದ ದಾಹ.
ಎಷ್ಟು ಕವಿತೆಗಳ ಗೀಚಿದರೂ
ತಿದ್ದಿದರೂ, ತೀಡಿದರೂ, ಬೇಸತ್ತು
ಹಾಳೆ ಹರಿದೆಸೆದರೂ
ಇದಕೆ ಇನ್ನು ಬೇಕು
ಇನ್ನು ಬೇಕೆನ್ನುವ ಬಯಕೆ.
ಕವಿತೆ ಬರೆಯುತ್ತೇನೆ ನಾನು;
ನಿನ್ನ ನೆನಪುಗಳಿಗೆ
ಕಡಿವಾಣ ಹಾಕಬಲ್ಲೆನೆಂಬ
ವಿಶ್ವಾಸದಿಂದಲ್ಲ.
ಬರೆದಷ್ಟು ಹೊತ್ತು
ನೆನಪುಗಳ ಹಾಳೆಯಲಿ ತುಂಬಿಟ್ಟು
ನಿಶ್ಚಿಂತೆಯಿಂದಿರಬಹುದೆಂಬ
ಸಣ್ಣದೊಂದು ಆಸೆಯಿಂದ.
ಹಾಳೆ ಹರಿದೆಸೆಯಲು
ನಾನು ಮತ್ತದೇ ನಾನು
ನನ್ನೊಳಗೆ ನೀನು.
-ತ್ರಿವಿಕ್ರಮ
(ಜಿ.ಎಸ್.ಶಿವರುದ್ರಪ್ಪನವರ ‘ನನ್ನ ಹಣತೆ’ ಕವಿತೆಯಿಂದ ಪ್ರೇರಿತವಾಗಿ ಬರೆದದ್ದು)
Monday, January 11, 2016
Friday, January 08, 2016
ಜನವರಿ ಎಂಟು
ಜನವರಿ ಎಂಟು
‘ಜನವರಿ ಎಂಟು’
ಕ್ಯಾಲಂಡರ್ ತಿರುಗಿಸಲು
ಬಿಚ್ಚಿಕೊಳ್ಳತೊಡಗಿತು
ನೂರಿಪ್ಪತ್ತೆಂಟು
ನೆನಪುಗಳ ಗಂಟು.
ಎಂಟು ವರುಷದ ಕೆಳಗೆ
ಪುಟ್ಟ ಡೈರಿಯ ಪುಟದಲ್ಲಿ
ಆ ಜನವರಿ ಎಂಟು
ಎಂಟು ವರುಷದ ಬಳಿಕ
ಕೆಟ್ಟು ನಿಂತ ಮನಸಲ್ಲಿ
ಈ ಜನವರಿ ಎಂಟು
ಎರಡು ಎಷ್ಟೊಂದು ಡಿಫರೆಂಟು.!
ನಿನಗಲ್ಲಿ,
ಹೊಸ ಪ್ರೀತಿಯ ನೆರಳಲ್ಲಿ
ಇಪ್ಪತ್ತೆರಡು ತುಂಬಿದ ಸಡಗರ.
ನನಗಿಲ್ಲಿ,
ಹಳೆ ಪ್ರೇಮಿಯ ಹೆಸರಲ್ಲಿ
ಶುಭ ಹಾರೈಸಲು ಮುಜುಗರ.
ಇಷ್ಟಕ್ಕೂ ನನಗಾಗಲಿ
ನನ್ನ ಹಾರೈಕೆಯಾಗಲಿ
ನಿನ್ನಲ್ಲಿ ಬೆಲೆ ಎಲ್ಲಿ ಉಂಟು?
ಛೇ..! ನನಗ್ಯಾಕೆ ಈ ಗತಿ ಬಂತು?
ಸುಮ್ಮನಿದ್ದುಬಿಡಲೇ ಇದೆಲ್ಲವನು ಬಿಟ್ಟು?
ಹೇಗೆ ಬಿಟ್ಟಿರಲಿ?
ಎಂಟು ವರುಷ ಪ್ರೀತಿಸಿ
ಎಂಟಾಣೆಯ ಬೆಲೆ ಕೊಡದೆ
ಎದೆಯಲ್ಲಿ ಕುಂಟೆಬಿಲ್ಲೆಯಾಡಿ
ಒಂಟಿ ಮಾಡಿ ಮತ್ತೊಬ್ಬನ
ಅಂಟಿಕೊಂಡರೂ ನೀನೆಂದರೆ
ನನಗೊಂಥರ ಸೆಂಟಿಮೆಂಟು..!
ಸತ್ತರೂ ತಿಥಿ ಮಾಡದೆ ಬಿಟ್ಟ
ಈ ಪ್ರೀತಿ ಎಂಬ ಪ್ರೇತ
ಹುಟ್ಟಿಸುವ ಉಸಿರುಗಟ್ಟಿಸುವ
ಇಂತಹ ನೂರೆಂಟು
ಸೆಂಟಿಮೆಂಟುಗಳ ಎದೆಯಲಿಟ್ಟು
ಸೈಲೆಂಟಾಗಿ ಬಾಳುತಿರುವೆ.
ಪ್ರತಿ ವರುಷ ಮತ್ತೆ ಬರುವ ಎಂಟಕ್ಕಾಗಿ ಕಾಯುವೆ..!
ನಿನಗ್ಯಾವ ತಂಟೆ ಮಾಡದೆ ಒಂಟಿಯಾಗಿ ಸಾಯುವೆ..!
- ತ್ರಿವಿಕ್ರಮ
Subscribe to:
Posts (Atom)