Thursday, August 03, 2017

ಪುತ್ರಕಾಮೇಷ್ಟಿಯಾಗ - ೧

ಪುತ್ರಕಾಮೇಷ್ಟಿಯಾಗ - ೧

(ಪರಮ ಪತಿರ್ವತೆ* ಸೀತೆ)


ವರುಷಗಳುರುಳಿದರು ಮನೆಯಲ್ಲಿ
ವಂಶೋದ್ಧಾರಕನ ಸುಳಿವಿರಲಿಲ್ಲ
ಹತ್ತು ಬೆಟ್ಟವ ಹತ್ತಿ ಬಂದರು
ನೂರು ಗುಡಿಯ ಸುತ್ತಿ ಬಂದರು
ಕುಡಿಯ ನೀಡುವ ದೈವ ಒಲಿದಿರಲಿಲ್ಲ

ನಿಂತರೆ ವ್ರತ ಕುಂತರೆ ಪೂಜೆ
ಮಲಗಿ ಉರುಳಿದರೆ ಹರಕೆ ಸೇವೆ
ಸೊತು ಹೋಗಿದ್ದಳು ಸೀತೆ
ಕುಂಚ ಬಣ್ಣದೊಳದ್ದಲಾಗದ ಮೇಲೆ
ಪರದೆ ಮೇಲೆ ಚಿತ್ರ ಮೂಡೀತೆ?
ಹೊಲವೂಳದೆ ಬೆಳೆಯು ಬೆಳದೀತೆ?
ಮರವ ಸುತ್ತಿ ಹರಕೆ ತೀರಿಸಿ ಬಂದು
ಮರದ ಮಂಚದಲಿ ಮಲಗಿ
ಗೊರಕೆ ಹೊಡೆದರೇನು ಫಲ
ಮದ್ದರೆದು ತಿನಿಸಿದರು ಮುದ್ದು ಮಾಡದ
ಪತಿಗೆ ತಾ ಸತಿಯಾಗಿದ್ದಳಷ್ಟೆ
ಬಂದಿರಲಿಲ್ಲ ರತಿಯಾಗುವ ಕಾಲ

ಇವಳು ಹೊರಗಾದಾಗಲೆಲ್ಲ
ಕೊರಗುತಿದ್ದಳು ಅತ್ತೆ ಜಗಲಿಯಲಿ ಕೂತು
ಒಮ್ಮೆ ಮಿತಿಮೀರಿತ್ತು ಅವಳ ಮಾತು:
"ಹೆರಲಾಗದವಳು ಹೊರೆಯಾಗಿ ಏಕಿರುವೆ
ಬೇರೆ ಸೊಸೆಯನಾದರು ತರುವೆ
ಹಾರಿಕೊಳ್ಳಬಾರದೆ ಹೋಗಿ ಕೆರೆಗೆ?"
‘ಅವನು ಮುಟ್ಟದೇ ಮುಟ್ಟು ನಿಲ್ಲುವುದೇನು’
ಬಾಯ್ತದಿಗೆ ಬಂದ ಮಾತ ಮೌನದಲಿ ಕಟ್ಟಿಟ್ಟು
ಕಣ್ಣೀರಿಟ್ಟಿದ್ದಳು ಹೋಗಿ ಮರೆಗೆ..!

ಬೆದಕುತಿರಲು ಅತ್ತೆ ಮಾತು ಮಾತಿಗು
ಬದುಕಿದ್ದಳು ದಿನವು ಸತ್ತು ಸತ್ತು
ಬತ್ತಿ ಹೋಗಿತ್ತು ಕಣ್ಣು ಅತ್ತು ಅತ್ತು
ಇತ್ತ ತಪ್ಪೊಪ್ಪಿಕೊಳ್ಳಲಾರದ ಪತಿಗೆ
ಇತ್ತು ಅದೆಂಥದೋ ಗುಪ್ತರೋಗ
ಅತ್ತ ಅತ್ತೆಯಿಂದ ತಪ್ಪುತಿರಲಿಲ್ಲ
ನಿತ್ಯ ಬೈಗುಳಗಳ ಶ್ರವಣಸಂಭೋಗ

ಇದೇ ಚಿಂತೆಯಲೊಂದು ದಿನ
ಸಂತೆಗೆ ಬಂದಿದ್ದಳು, ಹುಡುಕುತಿದ್ದಳು
ಕೊತ್ತಂಬರಿ ಕಂತೆಗಳಿದ್ದ ಗಾಡಿ
ಆಗ ಕಂಡನಲ್ಲಾ ಅವನು, ಅಬ್ಬಾ
ಎಷ್ಟು ದಿನವಾಯ್ತು ಅವನ ನೋಡಿ
ಇವಳ ಕಂಡವನೆ ಓಡಿ ಬಂದನು
ಕೊಂಚ ತೆಳ್ಳಗಾಗಿದ್ದ, ಬಿಟ್ಟಿದ್ದ ದಾಡಿ
ಇಬ್ಬರಿಗು ಮಾತಿದ್ದರು ಆಡಲು ಕೋಟಿ
ತುಟಿ ಬಿಚ್ಚಲಿಲ್ಲ ಮೌನವನು ಮೀಟಿ
ಪಕ್ಕದಲೆ ನೆಡೆದು ಬಂದರು
ಸಂತೆ ಬೀದಿಯನು ದಾಟಿ

ಹೊಸದಾದ ಗಾಂಭಿರ್ಯವನು
ಹಳೆಯ ಒಲುಮೆಯಲಿ ಅದ್ದಿ
ಇದ್ದಕಿದ್ದಂತೆ ಕೇಳಿದನು ‘ಹೇಗಿದ್ದಿ?’
ಅನಿರೀಕ್ಷಿತವಾದ ಪ್ರಶ್ನೆಗೆ
ನಿರೀಕ್ಷಿತ ಉತ್ತರ ‘ಚೆನ್ನಾಗಿದ್ದೇನೆ’
ಎಂದುಲಿದು ಅವಳು ಉಗುಳು ನುಂಗಲು
ಬೇಡವೆಂದರು ತುಂಬಿ ಬಂದವು ಕಂಗಳು
ಬಿಗಿದ ದುಃಖದುರುಳಿಗೆ ಸಿಕ್ಕವಳಂತೆ
ಬಿಕ್ಕಿ ಅತ್ತಳು ಕರುಳು ಕಿತ್ತು ಬರುವಂತೆ

ಎಷ್ಟಾದರು, ಹಳೆಯ ಸಲುಗೆಯ ಗೆಳೆಯ
ತಾಳಲಾಗದೆ ಹೇಳಿದಳೆಲ್ಲ ವಿಷಯ
ಭಾರವಾದ ಇವಳೆದೆ ಬರಿದಾಗುತಿರಲು
ಸಂತಾಪ ತುಂಬಿಕೊಂಡಿತು ಅವನೆದೆಗೆ
ಕಣ್ಣೊರೆಸಿ, ಬೆನ್ನ ನೇವರಿಸುತಿರಲು
ಅವನ ಸ್ಪರ್ಷ ಮೈಯನಾವರಿಸಿ
ಕಣ್ಣರಳಿಸಿ ನೋಡಿದಳು ಅವನೆಡೆಗೆ
ಪರಿಹಾರ ಕಂಡಿತ್ತು ಅವನ ನೋಟದಲ್ಲಿ
ಸಂಜೆ ಸಿಗಲು ಹೇಳಿ ಹೋದಳು ತೋಟದಲ್ಲಿ

ಮನದ ಅಂಜಿಕೆಯನೆಲ್ಲಾ
ಸಂಜೆ ಸೂರ್ಯನಲಿ ಸುಟ್ಟು
ಬಾನಗೆಂಪಲಿ ಅದ್ದಿ ತೆಗೆದಂತಿದ್ದ
ಕೆಂಪು ಸೀರೆಯನು ಉಟ್ಟು
ದೇವರ ಅಭಿಷೇಕದ ಕುಂಟು ನೆಪ ಹೇಳಿ
ಅಭಿಸಾರವ ಸೇರಿದಳು, ಬೀಸಿತ್ತು ತಂಗಾಳಿ

ಚಂದಿರನ ಬೆಳಕಲ್ಲಿ ಕಂಡವನ
ಬಳಿಗೆ ಬಂದಳು ಬಳಸಿ ನಿಂತಳು
ಮನೆಯ ದೈವವನು ಮನದಿ ನೆನೆದಳು
‘ತಪ್ಪೆನ್ನಿಸಿದರೆ ಮನ್ನಿಸದೆ ನರಕ ಸೇರಿಸು
ಇಲ್ಲವಾದರೆ ಒಪ್ಪಿ ಈ ಹರಕೆ ತೀರಿಸು’
ಎಂದು ಅಪ್ಪಿದಳು ಎದುರು ನಿಂತವನನು

ಉರಿವ ಪಂಜಿನಂತಿದ್ದ ಅವನು
ಕೊರೆವ ಮಂಜಿನಂತಿದ್ದ ಇವಳು
ಇಬ್ಬರೂ ಒಂದಾಗಿ ಬೆರೆತಾಗ
ಬಂಜೆಯೆಂದವರ ಬಾಯಿಗೆ ಬಿದ್ದಿತ್ತು ಬೀಗ
ಹರಕೆ ಹೂತ್ತ ದೇವರುಗಳೆಲ್ಲಾ
ಮೇಲೆ ನಿಂತು ಹರಸಿದಂತಿತ್ತು
ನೆಡೆದಿರಲು ಪುತ್ರಕಾಮೇಷ್ಟಿಯಾಗ..!

*ತಿಳಿದು ಮಾಡಿದ ತಪ್ಪಿದೆ. ಶೀರ್ಷಿಕೆಯಲ್ಲೂ, ಕವಿತೆಯಲ್ಲೂ.

- ನಾ ತ್ರಿವಿಕ್ರಮ

No comments:

Post a Comment