Saturday, July 25, 2020

ಕೆಮಿಸ್ಟ್ರಿ ಮಿಸ್ಸಿಗಿಷ್ಟು ಪ್ರಶ್ನೆಗಳು

ಕೆಮಿಸ್ಟ್ರಿ ಮಿಸ್ಸಿಗಿಷ್ಟು ಪ್ರಶ್ನೆಗಳು



(ವಿ.ಸೂ. ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದಕ್ಕಿಂತ ಹೆಚ್ಚು ಮುತ್ತುಗಳಲ್ಲಿ ಉತ್ತರಿಸತಕ್ಕದ್ದು)

ಎರಡು ಪೆಗ್ಗನು ಕುಡಿದೆನೆಂದು
ಮುನಿದ ನಿನ್ನಯ ಮನದ ಮೊಗ್ಗು
ಮತ್ತೆ ಅರಳಿ ಘಮವ ಚೆಲ್ಲಲು
ಎಷ್ಟು ಎಂ.ಎಲ್ ಒಲವು ಬೇಕೇ?

ನಿನಗೆ ಬರೆದ ಕವಿತೆಯೆಲ್ಲವೂ
ಉಸಿರ ಬಿಸಿಗೆ ಅಳಿಸದಂತೆ
ಅಚ್ಚು ಒತ್ತಿದ ಹಾಗೆ ಉಳಿಯಲು
ಯಾವ ದ್ರಾವಣ ಬೆರೆಸಬೇಕೆ?

ಮುಖವ ಕಾಣದ ದಿನಗಳೆಣಿಸಿ
ನೆನಪು ಕಾಡಿದ ಕ್ಷಣವ ಗುಣಿಸಿ
ಎನ್ನ ಮನದ ದುಗುಡ ತಿಳಿಸಲು
ಯಾವ ಫಾರ್ಮುಲ ಬಳಸಬೇಕೆ?

ಎಲ್ಲಾ ತಪ್ಪನು ಮಾಫಿ ಮಾಡಲು
ನಿನ್ನ ಕೊಪದ ಮದ್ಯಸಾರದಿ
ವಿರಹ ತಪಿತ ಹೃದಯವನ್ನು
ಎಷ್ಟು ಡಿಗ್ರಿಲಿ ದಹಿಸಬೇಕೇ?

ಹಾಲು ಬಿಳುಪಿನ ಕೆನ್ನೆ ಮೇಲೆ
ತಿಳಿಯ ಕೆಂಪು ಬಣ್ಣ ಮೂಡಲು
ಕಿವಿಯ ಒಳಗೆ ಕದ್ದು ಪಿಸುಗುಡೋ
ಪೋಲಿ ಪದಗಳ ಲೆಕ್ಕ ಸಾಕೇ?

ತ್ರಿವಿಕ್ರಮ

Friday, February 07, 2020

ಶ್ಯಾಮನು ಬಂದನು ರಾಧೆಯ ಮನೆಗೆ..


ಶ್ಯಾಮನು ಬಂದನು ರಾಧೆಯ ಮನೆಗೆ..




ಶ್ಯಾಮನು ಬಂದನು ರಾಧೆಯ ಮನೆಗೆ ರಾತ್ರಿಯಾಗಿತ್ತು
ಮಾಗಿಯ ಚಳಿಗೆ ಮುಸುಕನು ಹೊದ್ದು ಮಥುರೆಯು ಮಲಗಿತ್ತು
ಆದರೂ ವಿರಹವು ಸುಡುತಿತ್ತು.                                              (1)

ಸುತ್ತಾ ಮುತ್ತಲು ನೋಡುತ ಶ್ಯಾಮ ಹಿತ್ತಲ ಸೇರಿದನು..
ಚಿಲಕವೆ ಇಲ್ಲದ ಬಾಗಿಲ ಮೆಲ್ಲನೆ ಹಿಂದಕೆ ದೂಡಿದನು..
ಕಾಣದೇ ಹೊಸ್ತಿಲನೆಡವಿದನು.                                              (2)

ಹಿತ್ತಲ ಬೇಲಿಯ ಹಿಂದೆಯೇ ಕಾದಿಹ ಪಿಳಿ ಪಿಳಿ ಕಣ್ಣೆರಡು
ಒಳಗಡಿಯಿಟ್ಟ ಶ್ಯಾಮನ ಹೆಜ್ಜೆಯ ಜಾಡನು ಹಿಡಿದಿತ್ತು.
ಹಿಂದೆಯೇ ಮನೆಯನು ಹೊಕ್ಕಿತ್ತು                                           (3)

ಆರು ಕಾಲ್ಗಳುನಾಲ್ಕು ಕಂಗಳು ಕತ್ತಲ ಕದಡಿರಲು
ನೂರು ದೇವರ ನೆನೆಯುತ ಶ್ಯಾಮ ಅಟ್ಟವನೇರಿದನು
ರಾಧೆಯು ಕೋಣೆಯ ಸೇರಿದನು                                            (4)

ಸ್ವರ್ಗದ ಅಪ್ಸರೆ ಮೈದಳೆದಂತೆ ರಾಧೆಯು ಮಲಗಿರಲು
ಬಾನಿನ ದೀಪದ ಬೆಳ್ಳನೆ ಬೆಳಕು ಮೈಯನು ತೊಳೆದಿರಲು
ಇರುಳಲಿ ಮೂಗುತಿ ಹೊಳೆದಿರಲು.                                          (5)

ನಲ್ಲೆಯ ಎದೆಯ ಏರಿಳಿತಗಳು ಉಕ್ಕುವ ಅಲೆಯಂತೆ..
ಅದರೊಳಗಿಳಿದು ತೇಲಿದ ಶ್ಯಾಮ ಮುತ್ತುಗದೆಲೆಯಂತೆ..
ನೋಡುತಾ ನಿಂತನು ಶಿಲೆಯಂತೆ                                           (6)

ಪ್ರೇಮಿಯ ಹರುಷವೇ ಬೆಕ್ಕಿಗೂ  ಕಡೆ ಹಾಲನು ಕಂಡಾಗ
ಸರಿ ಹೊತ್ತಿನಲಿ ಕೇಳದೇ ದೊರೆತ ಸಿರಿಯನು ಸ್ವೀಕರಿಸಿ..
ಸವಿಯಿತು ನಾಲಿಗೆ ಚಪ್ಪರಿಸಿ.                                                (7)

ಬೆಚ್ಚನೆ ಒಲೆಯುಮುಚ್ಚಿದ ಕಂಗಳುಬೆಕ್ಕಿಗೆ ಮೈ ಮರೆತು
ಒಲೆಯ ಬೂದಿಯು ಮುಚ್ಚಿದ ಕೆಂಡಕೆ ಬಾಲವ ತಾಕಿಸಿತು
ಕಿರುಚಿ ಪಾತ್ರೆಯನುರುಳಿಸಿತು                                               (8)

ನೆಲವನು ಸೇರಿದ ಪಾತ್ರೆಯ ಸಪ್ಪಳ ಮನೆಯಿಡಿ ಮಾರ್ದನಿಸಿ..
ಕೂಗಿದರ್ಯಾರೋ ನಡುಮನೆಯಿಂದ ‘ಯಾರದು ಸದ್ದಲ್ಲಿ?’
ಬೆಕ್ಕು ಹಾರಿತು ಕಿಟಕಿಯಲಿ                                                   (9)

ಬಾಗಿಲ ಪರೆದೆಯ ಆಚೆಗೆ ಯಾವುದೋ ದೀಪವು ಬೆಳಗಿರಲು
ನೆರಳನು ಕಂಡು ನುಸುಳಿದ ಶ್ಯಾಮ ರಾಧೆಯ ಮಂಚದಡಿ..
ಭಯದಲಿ ಬಾಗಿಲ ಕಡೆ ನೋಡಿ                                              (10)

ಬೆನ್ನಲಿ ಸುರಿಯಲು ಬೆವರಿನ ಮಳೆಯು ಗುಡುಗುವ ಎದೆಬಡಿತ..
ತಪ್ಪಿಸಿಕೊಳ್ಳುವ ತವಕದಿ ದಾರಿಯ ಹುಡುಕುತ ರಾಧಸಖ..
ಕಾದನು ಬೆಳಗಾಗುವ ತನಕ                                                 (11)

ಕೊಕ್ಕೊಕ್ಕೋಕ್ಕೋ.. ಕೂಗಿದ ನಸುಕಲಿ ಕೋಳಿಯನನುಕರಿಸಿ
ಮೈಯನು ಮುರಿಯುತಾ ಎದ್ದಳು ರಾಧೆ ಹಮ್ಮನೇ ಆಕಳಿಸಿ..
ನಿಂತಳು ಹೊದಿಕೆಯನು ಸರಿಸಿ..                                            (12)

ರಾಧೆಯು ನೆಡೆಯಲು ಗೆಜ್ಜೆಯ ದನಿಯು ದಾರಿಯ ಹೇಳುತಿರೆ..
ಹಿತ್ತಲ ಬಾಗಿಲ ತಲುಪಿದ ಶ್ಯಾಮಕಳಚಿತು ತಿಮಿರ ತೆರೆ
ನಲ್ಲೆಯು ಸಿಕ್ಕಳು ತೋಳಸೆರೆ                                                (13)

ಬೆಚ್ಚಿದ ರಾಧೆಯ ಮಂಪರುಗೆದರಿಸೋ ಕಂಪನ ದೇಹದಲಿ..
ಇನಿಯನ ತೋಳಿನ ಪಂಜರದಲ್ಲಿ ಆದಳು ಕೆಂಪು ಗಿಳಿ
ನಾಚಿಕೆ ಇಣುಕಿತು ಕಣ್ಣಿನಲಿ                                                   (14)

ಬಿಸಿಯಪ್ಪುಗೆಯ ಕುಲುಮೆಯ ಒಳಗಡೆ ಕರಗಿದ ಚೆಲುವೆಯನು
ನಡುವಲಿ ಹಿಡಿದು ಅದರುವ ತುಟಿಗೆ ತುಟಿಯನು ತೀಡಿದನು..
ಬಾನಲಿ ಸೂರ್ಯನು ಮೂಡಿದನು..                                          (15)

ಶ್ಯಾಮನು ಹೊರಟನು ಗೋಕುಲದೆಡೆಗೆ ರಾತ್ರಿ ಕಳೆದಿತ್ತು
ಮೂಡಣದಾಗಸ ರಾಧೆಯ ಕೆನ್ನೆಗೆ ಕನ್ನಡಿಯಾಗಿತ್ತು
ಮಿನುಗುವ ತುಟಿಯಲಿ ನಗುವಿತ್ತು.                                           (16)


ತ್ರಿವಿಕ್ರಮ

Tuesday, January 14, 2020

ಕುದುರೆಯಷ್ಟೇ ನಾನು.


ಕುದುರೆಯಷ್ಟೇ ನಾನು.
 
ಕುದುರೆಯಷ್ಟೇ ನಾನು.
ಕಣ್ಣ-ಪಟ್ಟಿ ಕಟ್ಟಿಕೊಂಡು
ಎಡಕ್ಕು ನೋಡದೇ, ಬಲಕ್ಕೂ ನೋಡದೇ
ಮುಂದಕ್ಕೋಡಬೇಕು..
ಎದುರಾದರೆ ಎಡ-ಬಲಗಳು
ಲಾಳದ ಅಚ್ಚೊತ್ತುವಂತೆ
ಮುಖದ ಮೇಲೆ ಜಾಡಿಸಿ ಒದೆಯಬೇಕು!

ನಾ ಓಡುತ್ತಿದ್ದೆ, ಅತ್ತಿತ್ತ ನೋಡದೇ..
ಬರಲಿದೆ ಎಂದರು ಬಲದಲ್ಲಿ ಮಂದಿರ
ಕೈ ಮುಗಿದು ಬಂದೆ..
ಇಡ್ಲಿ ಕೊಡುತಿದ್ದಳು ಎಡದಲ್ಲಿ ಇಂದಿರಾ
ಚಟ್ನಿ ಜೊತೆ ತಿಂದೆ..
ಎಡ-ಬಲಗಳ ಭುಜಬಲಗಳ ಚಿಂತೆ
ಹುಲ್ಲು ತಿನ್ನುವ ಕುರುಡು ಕುದುರೆಗೆ ಉಂಟೆ?
ನನ್ನ ದಾರಿಯು ನನಗೆ, ಸಾಗುತಿದ್ದೆ ಮುಂದೆ!

ಓಟ ಮುಂದುವರೆದಿತ್ತು, ಬಂದಿತ್ತು
ಪೊಳ್ಳು ಪ್ರತಿಭಟನೆಗಳ, ಸುಳ್ಳು ಸಂಘರ್ಷಗಳ
ಸುದ್ದಿ ಸಾವಿರ ಕಣ್ಮುಂದೆ..
ಕುದುರೆಯೋ ಕತ್ತೆಯೋ, ದಾಖಲೆ ಕೇಳಿದಿರಾ?
ಲದ್ದಿ ಹಾಕುವೆ, ಬಗ್ಗಿರಿ ಹಿಂದೆ!
ಎಲ್ಲಿಂದಲೋ ಬಂದವನು, ಎಲ್ಲಿಗೋ ಹೊರಟವನು
ಇದ್ದಕಿದ್ದಂತೆ ಹೊತ್ತಿ ವ್ಯಾಪಿಸಿದ
ಗುರುತು ದಾಖಲೆಯ ದಳ್ಳುರಿಯಲಿ ಬೆಂದೆ.

ಓಡಿದೆ ಓಡಿದೆ, ಮೈಮರೆತು ಓಡಿದೆ
ಅಸಹ್ಯವಾಗುತಿತ್ತು ಮೆತ್ತಿಕೊಳ್ಳುತಿರಲು
ಮೈಗೆಲ್ಲಾ ಕೆಸರಿಯ ಬಣ್ಣ.
ಓಡಿದೆ ಓಡಿದೆ, ಮೈ ಬೆವತು ಓಡಿದೆ
ಹಸುವ ತಿಂದವರು ಕುದುರೆಯ ಕೊಂದು
ಬಾಯಿ ಚಪ್ಪರಿಸುವ ಮುನ್ನ.
ಅವರ ಮೇಲಿವರು, ಇವರ ಮೇಲವರು
ಹರಿಹಾಯುತಲಿರಲು ಪ್ರತಿನಿತ್ಯ
ಅರಿವಾಯಿತು ನನಗೆ ಕಟುಸತ್ಯ.
ಜಾತಿ(ಧರ್ಮ) ಇಲ್ಲದೇ ಬಲಕೆ ಬಲವಿಲ್ಲ
ನೀತಿಗೆಟ್ಟವರೇ ಎಡದ ಕುಲವೆಲ್ಲಾ

ಓಡಲೇಬೇಕು ಇಲ್ಲಿ, ಕಲಿಗಾಲದಲ್ಲಿ
ಅಧರ್ಮ ಧರ್ಮವ ಗೆಲ್ಲದು
ಧರ್ಮ ಅಧರ್ಮವನು ಮೆಟ್ಟಿ ನಿಲ್ಲದು.
ಕುದುರೆಯಷ್ಟೇ ನಾನು, ಓಡುವುದಷ್ಟೇ ನನ್ನ ಕೆಲಸ.
ನಿನ್ನ ಕರ್ಮವ ನೀ ಮಾಡೆಂದು ನುಡಿದ
ನನ್ನ ಲಗಾಮು ಹಿಡಿದಿರುವ ಜಾಕಿ
ಧರ್ಮ-ಅಧರ್ಮದ ತಕ್ಕಡಿಯ ತೂಗಲು
ಮತ್ತೆ ಅವತಾರವೆತ್ತುವುದು ಬಾಕಿ.

-      - ಆಫ್ಟರ್ ಎ ಲಾಂಗ್ ಟೈಮ್, ತ್ರಿವಿಕ್ರಮ

Wednesday, April 03, 2019

ಕಾದನು ಮಾಧವ ವೇದನೆಯಿಂದಲಿ..


ಕಾದನು ಮಾಧವ ವೇದನೆಯಿಂದಲಿ..



ಕಾದನು ಮಾಧವ ವೇದನೆಯಿಂದಲಿ
ರಾಧೆಯ ದರುಶನಕೆ..
ಒದಗಿದ ವಿರಹವ ಸೈರಿಸಲಾರದೇ
ಸೊರಗಿದ ದಿನದಿನಕೆ..
ಮಾಧವ.. ಸೊರಗಿದ ದಿನದಿನಕೆ..

ತಿಂಗಳೇ ಆಯಿತು.. ಕಂಗಳ ಮುಂದೆ
ಬಾರದೇ ರಾಧೆಮಣಿ
ಕಾದಿಹ ಕರ್ಣವ, ಅಂತಃಕರಣವ
ಸೇರದೇ ಅವಳ ದನಿ
ಕರ್ಣವ.. ಸೇರದೇ ಅವಳ ದನಿ..

ಇತಿಮಿತಿ ಇಲ್ಲದ.. ಕರೆದರು ನಿಲ್ಲದ..
ಕಾಲವ ಶಪಿಸಿದನು..
ಕಾಣದ ನಲ್ಲೆಯ.. ಎಲ್ಲೆಡೆ ಕಾಣುತ..
ನಾಮವ ಜಪಿಸಿದನು..
ನಲ್ಲೆಯ.. ನಾಮವ ಜಪಿಸಿದನು..

ಬರುವಳೇ ರಾಧೆ.. ಇರುಳಲಿ ಕಾದಿದೆ
ಗೋಕುಲದಾ ಬೀದಿ..
ವಿರಹದ ಸೆರೆಯಲಿ, ರಾಧೆಯ ನೆನೆವ
ಮಾಧವ ಅಪರಾಧಿ..
ಸೆರೆಯಲಿ.. ಮಾಧವ ಅಪರಾಧಿ


-      ತ್ರಿವಿಕ್ರಮ

Tuesday, February 19, 2019

ಸರಸ್ವತಿ ನಿನಗೆ ಅಮ್ಮನಲ್ಲ, ಆಂಟಿ..!


ಸರಸ್ವತಿ ನಿನಗೆ ಅಮ್ಮನಲ್ಲ, ಆಂಟಿ..!
ಬಲ್ಲವರು ಹೇಳುವುದ
ಶಿರ ಬಗ್ಗಿಸಿ, ದನಿ ತಗ್ಗಿಸಿ
ಬರೆದುಕೊಳ್ಳಯ್ಯ ಮೂರ್ಖ..!
ವ್ಯಾಸ ವಾಚಿತ ಭಾರತವ
ಬರೆದುಕೊಂಡಂತೆ ಆ ಗಜಮುಖ.

ಕ್ಲರ್ಕು, ಸ್ಟೆನೋ, ಟೈಪಿಸ್ಟುಗಳಂತೆ
ಹಸಿದು ಪಂಕ್ತಿಯಲಿ ಕೂತ
ಬಂಡಲುಗಟ್ಟಲೇ ಬಿಳಿಹಾಳೆಗಳಿಗೆ,
ಮತ್ಯಾರೋ ಮಾಡಿದಡುಗೆಯ
ಬಡಿಸುವ ಭಾಗ್ಯವಷ್ಟೇ ನಿನದು
ಅನ್ನದಾನದ ಪುಣ್ಯದಲಿ
ಪಾಲು ಕೇಳಲೇಬಾರದು.

ಗಣಪನಿಗಾದರೂ ಐಡೆಂಟಿಟಿಯಿತ್ತು.
ನಿನಗೇನುಂಟು ಬದನೇಕಾಯಿ ತೊಟ್ಟು?
ಸಾರಸ್ವತ ಲೋಕದ ಡ್ರೈನೇಜಿನಲಿ
ಲೇಖನಿಯ ಹರಿಗೋಲಾಗಿಸಿ
ಕಾಗದದ ತೆಪ್ಪದಲಿ ತೇಲುತ್ತಿದ್ದ
ಸಾಂದರ್ಭಿಕ ಶಿಶು ನೀನು,
ಶಾರದೆಯು ಸಾಕಿದಳು ತಂದು,
ತನ್ನ ವರಪುತ್ರರು ಗೀಚಾಡಿದ
ಸ್ಲೇಟು ಒರೆಸಿಕೊಂಡಿರು ಎಂದು..!

ಒರೆಸುತಲಿ ಒರೆಸುತಲಿ
ಹೊಟ್ಟೆಗನ್ನವ ಅರಸುತಲಿ
ನಾಲ್ಕು ಅಕ್ಷರ ಕಲಿತು,
ಬರೆಯುವಾಸೆಯು ಬಲಿತು,
ಛಲದಿಂ ತಾಯನೊಲಿಸಿಕೊಂಡ
ಆ ಪ್ರೇಮಪುತ್ರರ ಪಕ್ಕ ಕುಳಿತು,
ಅವರುಲಿದದ್ದು ಬರೆದುಕೊಂಡು
ಅವರುಂಡ ತಟ್ಟೆಯಲುಂಡು
ಎಲ್ಲದರಲು ಅವರನನುಸರಿಸಿ
ಅವರಮ್ಮನ ನೀ ಅಮ್ಮನೆಂದರೆ
ಅದು ಕೇವಲ ನಿನ್ನ ಭ್ರಾಂತಿ,
ಅರಿತುಕೋ ಕಂದ
ಸರಸ್ವತಿ ನಿನಗೆ ಅಮ್ಮನಲ್ಲ, ಆಂಟಿ..!

ಹೋಗು, ಮೊದಲು ಕೈತೊಳದು ಬಾ,
ಅಳಿಸಿಹೋಗಲಿ ಕೈರೇಖೆಗಳು
ಕಾಣಿದಂತೆ ಮೆತ್ತಿಕೊಂಡ ಇಂಕು,
ಇಳಿದುಹೋಗಲಿ ತಾನೊಬ್ಬ
ಕವಿಯೆನ್ನುವ ಮಂಕು.

-      - ತ್ರಿವಿಕ್ರಮ


Tuesday, December 18, 2018

ಮ್ಯಾರಥಾನ್ ಗಾಂಧಿ


ಮ್ಯಾರಥಾನ್ ಗಾಂಧಿ


ನಾಥೂರಾಮನ ಕೈಯಲ್ಲಿದ್ದ ಬೆರೆಟ್ಟಾ ಎಂ34 ಪಿಸ್ತೂಲಿನಿಂದ ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ ಗುಂಡೊಂದು ಸಿಡಿಯಿತು. ಅದರ ಹಿಂದೆಯೇ ಇನ್ನೊಂದು, ಮತ್ತೊಂದು..!

ಗಾಂಧೀಜಿ ಬೆಚ್ಚಿ ತನ್ನತ್ತಲೇ ಮುಖ ಮಾಡಿದ್ದ ಪಿಸ್ತೂಲಿನ ಕಡೆಗೆ ನೋಡಿದರು. ಆದರೆ ಅದರಿಂದ ಹೊರಬರುತ್ತಿದ್ದ ಗುಂಡುಗಳು ಕೇವಲ ಗುಂಡುಗಳಾಗಿರಲಿಲ್ಲ. ಅದರಲ್ಲಿದ್ದದ್ದು ಇಬ್ಭಾಗವಾದ ದೇಶದ ನಡುವೆ ಸಿಕ್ಕಿಕೊಂಡು ತಮ್ಮದೆಲ್ಲವನ್ನೂ ಕಳೆದುಕೊಂಡವರ ದುಃಖ, ಎರಡು ದೇಶಗಳಲ್ಲಿ ತಾವು ಎಲ್ಲಿಗೂ ಸೇರದೇ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡವರ ಅಸಹಾಯಕತೆ, ಯಾರೋ ಮಾಡಿದ ತಪ್ಪಿಗೆ, ಯಾರದ್ದೋ ಅಧಿಕಾರದ ಲಾಲಸೆಗೆ, ತಮ್ಮ ಜೀವನ ಬಲಿ ಕೊಟ್ಟವರ ದ್ವೇಷ, ರೋಷ, ಆಕ್ರೋಷಗಳು. ಇವೆಲ್ಲವೂ ಸೇರಿ ನಾಥೂರಾಮನ ಕೈಲಿದ್ದ ಪಿಸ್ತೂಲಿನ ಮೂರು ಗುಂಡುಗಳಾಗಿ ಬಂದು ಇನ್ನೇನು ಗಾಂಧೀಜಿಯ ಎದೆ ಸೀಳಬೇಕು, ಅಷ್ಟರಲ್ಲಿ..

ಗಾಂಧೀಜಿ ಕೂಡಲೇ ಕೈಯಲ್ಲಿದ್ದ ಕೋಲನ್ನು ಮೇಲೆಸೆದು ಹಿಂದೆ ತಿರುಗಿ ಓಡತೊಡಗಿದರು. ನಾಥೂರಾಮನ ಗುಂಡುಗಳು ಹಿಂಬಾಲಿಸತೊಡಗಿದವು. ಗಾಂಧೀಜಿಯವರ ಪಕ್ಕದಲ್ಲಿದ್ದ ಮನುಬೆನ್ ಮತ್ತು ಅಭಾ, ಸುತ್ತಲೂ ಪ್ರಚಾರಕ್ಕೆಂದು ನೆರೆದಿದ್ದ ಅನುಯಾಯಿಗಳು, ಗುಂಡು ಹಾರಿಸಿದ ನಾಥೂರಾಮ, ಎಲ್ಲರೂ ಏನಾಯಿತು ಎಂದು ನೋಡುವಷ್ಟರಲ್ಲಿ, ಅವರು ಬಿರ್ಲಾ ಭವನದಿಂದ ಬಹಳ ದೂರ ಓಡಿಹೋಗಿದ್ದರು. ಕಾಲಿನಲ್ಲಿದ್ದ ಚಪ್ಪಲಿ, ಮೈಮೇಲೆ ಹೊದ್ದಿದ್ದ ಅಂಗವಸ್ತ್ರ, ಕಣ್ಣಿನ ಕನ್ನಡಕ ಅದೆಲ್ಲೆಲ್ಲಿ ಹಾರಿ ಬಿದ್ದವೋ, ಗಾಂಧೀಜಿ ಎದ್ದು ಬಿದ್ದು ಓಡತೊಡಗಿದ್ದರು. ತಾನು ಎತ್ತ ಓಡುತ್ತಿದ್ದೇನೆಂಬ ಪರಿವೆಯೂ ಇಲ್ಲದೇ ಓಡುತ್ತಿದ್ದ ಅವರು ದೆಹಲಿಯನ್ನೆಲ್ಲಾ ಸುತ್ತಿ, ಪಂಜಾಬಿನ ಕಡೆಗೆಲ್ಲೋ ಓಡತೊಡಗಿದರು. ಆ ಮೂರು ಗುಂಡುಗಳು ಬಿಡದೇ ಹಿಂಬಾಲಿಸುತ್ತಲೇ ಇದ್ದವು.

ಇತ್ತ ಗುಂಡು ಹಾರಿಸಿದ ನಾಥೂರಾಮನಿಗೆ ಮೊದಲು ಬಿರ್ಲಾ ಭವನದಲ್ಲಿದ್ದ ಜನರೆಲ್ಲಾ ಚೆನ್ನಾಗಿ ಥಳಿಸಿದರು. ಗಾಂಧೀಜಿ ಇರುವ ತನಕ ತಮ್ಮನ್ನು ಕಚ್ಚಿದ ಇರುವೆಯನ್ನೂ ಕೊಲ್ಲದೇ ಅಹಿಂಸಾ ತತ್ವವನ್ನು ಪಾಲಿಸುತ್ತಿದ್ದ ಅವರು ಗಾಂಧೀಜಿ ಓಡುತ್ತಲೇ ನಾಥೂರಾಮನ ಮೇಲೆ ಮುಗಿಬಿದ್ದರು. ಆಳಿಗೊಂದೇಟು ಎಂಬಂತೆ ಹೊಡೆಯುವವರೆ. ಅಷ್ಟರಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಅವನನ್ನು ಬಂಧಿಸಿ ಕರೆದೊಯ್ದರು. ನ್ಯಾಯಲಯದ ಮುಂದೆ ಹಾಜರಿಪಡಿಸಿದರು. ವಿಚಾರಣೆ ನೆಡೆಯಿತು. ನಾಥೂರಾಮ ಗುಂಡು ಹಾರಿಸಿದ್ದನಾದರೂ ಅವು ಗಾಂಧಿಯನ್ನು ಕೊಲ್ಲುವ ತನಕ ಯಾವ ತೀರ್ಪನ್ನೂ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ತಾನು ಹಾರಿಸಿದ ಗುಂಡುಗಳು ಇಂದಲ್ಲ ನಾಳೆ ಗಾಂಧಿಯನ್ನು ಕೊಲ್ಲುತ್ತದೆ ಎಂಬ ಆತ್ಮವಿಶ್ವಾಸದಿಂದ ನಾಥೂರಾಮನೂ ಕಾಯತೊಡಗಿದ.

ಈ ಓಟ ಮುಗಿಯುವುದಿಲ್ಲವೆಂದು ಅರಿವಾದ ಗಾಂಧೀಜೀ ಹಿಂದೆ ತಿರುಗಿ ಗುಂಡುಗಳ ಜೊತೆಗೆ ಸಂಧಾನ ಮಾಡಿಕೊಳ್ಳಲು ಪ್ರಯತ್ನಿಸಿದರು. ‘ದೇಶ ವಿಭಜನೆಯಲ್ಲಿ ತನ್ನ ತಪ್ಪೇನಿಲ್ಲ, ಆ ಪರಿಸ್ಥಿತಿಯಲ್ಲಿ ಅದು ಅವಶ್ಯಕವಾಗಿತ್ತು’ ಎಂದು ತಿಳಿಹೇಳಿದರು. ‘ಪಾಕಿಸ್ತಾನಕ್ಕೆ ಹಣ ಸಹಾಯ ಮಾಡಿದ್ದರಲ್ಲಿ ತನಗೆ ಒಂದು ಪೈಸೆ ಲಾಭವಿಲ್ಲ, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಷ್ಟೇ ತನ್ನ ಉದ್ದೇಶವಾಗಿತ್ತು’ ಎಂದು ಪರಿಪರಿಯಾಗಿ ವಿವರಿಸಿದರು. ‘ಈ ದೇಶ ಇಬ್ಭಾಗವಾದರೆ ಅದು ತನ್ನ ಗೋರಿಯ ಮೇಲೆಯೇ ಎಂದು ಒಮ್ಮೆ ಹೇಳಿದ್ದನ್ನೂ ಒತ್ತಿ ಒತ್ತಿ ಹೇಳಿ ತಾನು ವಿಭಜನೆಯ ಪರವಾಗಿ ಇರಲಿಲ್ಲ ಎಂದು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಆದರೆ ಗುಂಡುಗಳಿಗೆ ತಮ್ಮ ಗುರಿ ತಲುಪುವುದರ ಹೊರತಾಗಿ ಮತ್ಯಾವುದರ ಕಡೆಗೂ ಲಕ್ಷ್ಯವಿರದಿದ್ದನ್ನು ಅರಿತ ಗಾಂಧೀಜಿ ಸುಮ್ಮನೇ ಓಡತೊಡಗಿದರು.

ಗಾಂದೀಜಿಯ ಈ ಸಾವಿನ ಮ್ಯಾರಥಾನ್ ಸುದ್ದಿ ದೇಶದಲ್ಲೆಲ್ಲಾ ಹಬ್ಬಿತು. ರೇಡಿಯೋಗಳಲ್ಲಿ ಗಾಂಧಿ ಯಾವ ಊರಿನಲ್ಲಿ ಓಡುತ್ತಿದ್ದಾರೆ ಎಂದು ಗಂಟೆಗೊಮ್ಮೆ ಸುದ್ದಿ ಬಿತ್ತರವಾಗತೊಡಗಿತು. ನೆಡೆಯಲೂ ಶಕ್ತಿ ಇಲ್ಲದೇ ಕೋಲನ್ನೂರುತ್ತಲೋ, ಬೇರೆಯವರ ಹೆಗಲ ಮೇಲೆ ಕೈಯಿರಿಸಿಕೊಂಡೋ ನೆಡೆಯುತ್ತಿದ್ದ ಎಪ್ಪತ್ತೇಳರ ಮುದುಕಪ್ಪ ಆಯಾಸವೇ ಇಲ್ಲದಂತೆ ಓಡುತ್ತಿದ್ದಿದ್ದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಈ ಬಗ್ಗೆ ಎಲ್ಲೆಡೆ ಬಹಳಷ್ಟು ಚರ್ಚೆಗಳಾದವು. ಅವರ ಈ ಅಶ್ವಶಕ್ತಿಗೆ ವರುಷಗಳಿಂದ ತನ್ನ ಮೇಲೆಯೆ ಮಾಡಿಕೊಳ್ಳುತ್ತಿದ್ದ ವಿಶೇಷ ಯೋಗ, ಪ್ರಯೋಗಗಳೇ ಕಾರಣವಿರಬಹುದು ಎಂದು ಜನ ಮಾತನಾಡಿಕೊಂಡರು. ಗಾಂಧೀಜಿಯವರು ಊರಿಂದ ಊರಿಗೆ ಓಡುತ್ತಿದ್ದರೆ, ಮುಂದೆ ಯಾವ ಊರಿಗೆ ಓಡಬಹುದೆಂದು ಊಹಿಸುತ್ತಿದ್ದ ಜನ ಆ ಊರು ತಲುಪಿ ಅವರ ಓಟವನ್ನು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ನೋಡುತ್ತಿದ್ದರು. ಕೆಲವರಂತೂ ಅವರು ಎಷ್ಟು ನಿಮಿಷದಲ್ಲಿ ಊರು ದಾಟಬಹುದು, ಮುಂದೆ ಯಾವ ಊರಿಗೆ ಹೋಗಬಹುದು, ಗುಂಡು ಯಾವ ಊರಿನಲ್ಲಿ ಅವರ ಮೈ ಸೇರಬಹುದೆಂದು ತಮ್ಮ ತಮ್ಮಲ್ಲೇ ಹಣ ಕಟ್ಟಿಕೊಂಡು ಜೂಜಾಡಿದರು. ಇಂಥಹವರನ್ನೆಲ್ಲಾ ಪೊಲೀಸರು ಅವರನ್ನು ರಾಷ್ಟ್ರದ್ರೋಹದ ಆರೋಪದ ಮೇಲೆ ಬಂಧಿಸಿದರು.

ಗಾಂಧಿ ನೂರಾರು ಕಿ.ಮೀ ಓಡಿಯಾಗಿತ್ತು. ಮಹಾತ್ಮರನ್ನು ಕೊಲ್ಲಲು ಗುಂಡುಗಳು ಹಿಂದೆ ಬಿದ್ದಿರುವಾಗ ತಾವು ಸುಮ್ಮನಿರುವುದು ಸೂಕ್ತವಲ್ಲವೆಂದು ಮಂತ್ರಿಮಂಡಲ ಸಭೆ ಸೇರಿತು. ದೇಶ ವಿಭಜನೆಗೆ ಕಾರಣವಾದವರು ಯಾರಾದರೂ ಗಾಂಧೀಜಿಯ ಹಿಂದೆ ಬಿದ್ದಿದ್ದ ಗುಂಡುಗಳಿಗೆ ಬಲಿಯಾಗುವುದರಿಂದ ಗಾಂಧೀಜಿಯವರ ಸಾವನ್ನು ತಪ್ಪಿಸಬಹುದೆಂದು ನಿರ್ಧಾರಿಸಲಾಯಿತು. ‘ಪ್ರತಿಯೊಬ್ಬ ಹಿಂದೂವಿಗೂ ಅಖಂಡ ಭಾರತದ ಕನಸಿತ್ತು. ದೇಶ ವಿಭಜನೆಗಾಗಿ ಪಟ್ಟು ಹಿಡಿದು ಕುಳಿತದ್ದು ಮುಸ್ಲೀಂ ಲೀಗಿನವೇರೇ ಇದಕ್ಕೆ ನೇರ ಹೊಣೆಯಾದ್ದರಿಂದ ಹಿಂದೂಗಳು ಪ್ರಾಣತ್ಯಾಗ ಮಾಡುವ ಪ್ರಶ್ನೆಯೇ ಇಲ್ಲವೆಂದು ವಿರೋಧ ಪಕ್ಷದವರು ವಾದಿಸಿದರು. ಆಡಳಿತ ಪಕ್ಷದವರಿಗೆ ಇದು ಸರಿ ಎನ್ನಿಸಿತು. ಯಾರಾದರೂ ಮುಸ್ಲೀಮರೇ ತಲೆದಂಡ ಮಾಡಬೇಕೆಂದು ಕೂಡಲೇ ಭಾರತದಿಂದ ಪಾಕಿಸ್ತಾನಕ್ಕೆ ಟೆಲಿಗ್ರಾಂ ಹೋಯಿತು. ‘ನಾವೇನೋ ಪ್ರಾಣ ನೀಡಲು ಸಿದ್ಧರಿದ್ದೇವೆ. ಆದರೆ ಗಾಂಧೀಜಿಯವರಿಗೆ ಪ್ರತಿಯೊಬ್ಬ ಮುಸ್ಲೀಮರ ಪ್ರಾಣವೂ ತುಂಬಾ ಅಮೂಲ್ಯವಾಗಿತ್ತು. ತನ್ನ ಜೀವ ಉಳಿಸಿಕೊಳ್ಳಲು ಆ ಮಹಾತ್ಮ ಎಂದಿಗೂ ಮುಸ್ಲೀಮರನ್ನು ಬಲಿ ಕೊಡಲಿಕ್ಕಿಲ್ಲ’ ಎಂದು ಮರುತ್ತರ ಬರೆದರು. ಆಡಳಿತ ಪಕ್ಷದವರಿಗೆ ಇದೂ ಸರಿ ಎನ್ನಿಸಿತು. ಕಡೆಗೆ ಯಾರನ್ನು ಬಲಿ ಕೊಡುವುದೆಂಬ ವಿಷಯ ಇತ್ಯರ್ಥವಾಗದೇ ಎಲ್ಲರೂ ಪ್ರಧಾನ ಮಂತ್ರಿಯ ಕಡೆಗೆ ನೋಡಿದರು. 

‘’ಹಣ್ಣು ಹಂಚಿ ತಿನ್ನು, ದೇಶ ಒಡೆದು ಆಳು’’ ಎಂದು ಬ್ರಿಟೀಷರು ಉಡುಗೊರೆಯಾಗಿ ಕೊಟ್ಟಿದ್ದ ಡೈರಿಯೊಂದಲ್ಲಿ ಬರೆದುಕೊಂಡಿದ್ದ ವಾಕ್ಯವನ್ನು ಉಲ್ಲೇಖಿಸುತ್ತಾ ಭಾಷಣ ಪ್ರಾರಂಭಿಸಿದರು ಮಾನ್ಯ ಪ್ರಧಾನಿಗಳು. ನಂತರ ಬಹಳ ಗಂಭೀರವಾದ ಧ್ವನಿಯಲ್ಲಿ ದೇಶವನ್ನು ಸೇಬಿನ ಹಣ್ಣಿಗೆ ಹೋಲಿಸುತ್ತಾ, ಹೇಗೆ ಅದನ್ನು ಭಾಗ ಮಾಡಿ ತಿಂದಾಗ ಮಾತ್ರ ಮುಂದಿನ ದಿನಗಳಲ್ಲಿ ಯಾವ ಕಿತ್ತಾಟವಿಲ್ಲದೇ ಎಲ್ಲರೂ ಸವಿಯಲು ಸಾಧ್ಯವಿದೆಯೆಂದು ಹೇಳಿದರು. ಈ ಬಗ್ಗೆ ಗಾಂಧೀಜಿಯವರಿಗಿದ್ದ ಆ ದೂರದೃಷ್ಟಿಯನ್ನು ಶ್ಲಾಘಿಸಿ, ಅವರ ನಿಲುವನ್ನು ಸಮರ್ಥಿಸಿಕೊಂಡರು. ಕೊನೆಯಲ್ಲಿ ‘ಸದಾ ದೇಶದ ಒಳಿತನ್ನೇ ಬಯಸಿ, ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಆ ಮಹಾತ್ಮನಿಗೆ ಮಾತ್ರ ಆ ಗುಂಡುಗಳಿಗೆ ಎದೆಯೊಡ್ಡುವ ಯೋಗ್ಯತೆ ಇದಯೇ ಹೊರತು ನಮ್ಮಂತಹ ಸಾಮಾನ್ಯ ಆತ್ಮಗಳಿಗಲ್ಲ. ಅವರನ್ನು ಕಳೆದುಕೊಳ್ಳುವ ದೇಶ ಅನಾಥವಾಗುತ್ತದೆ ನಿಜ, ಆದರೆ ಇಲ್ಲಿಯವರೆಗೂ ಮಹಾತ್ಮರಾಗಿದ್ದ ಅವರು ನಮ್ಮ ಮನಸ್ಸಿನಲ್ಲಿ ಹುತಾತ್ಮರಾಗುತ್ತಾರೆ’ ಎಂದು ಗದ್ಗದಿತರಾಗಿ ತಮ್ಮ ಸುದೀರ್ಘ ಭಾಷಣವನ್ನು ಮುಗಿಸಲು ನೆರೆದಿದ್ದ ಸಭೀಕರಲ್ಲಿ ಮೌನ ಆವರಿಸಿತ್ತು. ಮರುಕ್ಷಣ ಚಪ್ಪಾಳೆಯ ಧ್ವನಿ ಮುಗಿಲು ಮುಟ್ಟಿತು.

ಆ ಚಪ್ಪಾಳೆಯ ಧ್ವನಿಯ ಓವರ್ ಲ್ಯಾಪಿನಲ್ಲಿಯೇ ಗಾಂಧಿ ಓಡುತ್ತಾ ಓಡುತ್ತಾ ಭಾರತ ಪಾಕಿಸ್ತಾನದ ಗಡಿ ತಲುಪಿದರು. ಪಾಕಿಸ್ತಾನದಿಂದ ಹಿಂದೂಗಳನ್ನು ಕೊಲ್ಲಲು ಬೆನ್ನತ್ತಿ ಬರುತ್ತಿದ್ದ ಮುಸ್ಲೀಮರು, ಭಾರತದಿಂದ ತಲೆಮರೆಸಿ ಓಡುತ್ತಿದ್ದ ಮುಸ್ಲೀಮರ ತಲೆ ಕಡಿಯಲು ಬಂದ ಹಿಂದೂಗಳು ಈ ಗಲಾಟೆಯ ನಡುವೆ ಓಡಿ ಧೋತಿ ಉಟ್ಟು ಓಡಿಬಂದ ಗಾಂಧಿಜಿಯನ್ನು ಕಂಡು ಒಂದು ಕ್ಷಣ ಅವಕ್ಕಾಗಿ ನಿಂತು ನೋಡಿದರು. ನಂತರ ತಮಗೆ ಸಂಬಂಧವಿಲ್ಲ ಎಂಬಂತೆ ಕೊಲ್ಲುವುದನ್ನು ಮುಂದುವರೆಸಿದರು. ಗಾಂಧೀಜಿ ಅವರಿಗೆ ‘ಈ ಕ್ರೌರ್ಯವೆಲ್ಲಾ ತನಗೆ ಇಷ್ಟವಿಲ್ಲ, ನಿಲ್ಲಿಸಿ, ನಿಲ್ಲಿಸಿ’ ಎಂದು ಕೂಗಿ ಹೇಳಲು ಪ್ರಯತ್ನಿಸಿದರು. ಆದರೆ ಯಾರೂ ಅವರ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ತಾನೆಲ್ಲಿ ಎಡವಿದೆನೆಂದು ಗಾಂಧೀಜಿಯವರಿಗೆ ನಿಧಾನವಾಗಿ ಅರಿವಾಗತೊಡಗಿತು. ಓಡುತ್ತಾ ಓಡುತ್ತಾ ಅವರ ಕಾಲುಗಳು ಸೋತು ಅಲ್ಲಿ ಬಿದ್ದಿದ್ದ ಯಾವುದೋ ಶವವನ್ನು ಎಡವಿ ಮುಗ್ಗರಿಸಿದರು. ಹೇಗೋ ಸಾವರಿಸಿಕೊಂಡು ಮೇಲೆದ್ದರು. ಮತ್ತೆ ಓಡಲು ಇನ್ನೇನು ಹಿಂದೆ ತಿರುಗಬೇಕು. ಅಷ್ಟರಲ್ಲಿ ತಾವು ಎಡವಿದ ಶವದ ಮೇಲೆ ಅವರ ಕಣ್ಣು ಬಿದ್ದಿತು.

ಗಾಂಧೀಜಿಗೆ ತಾವು ಕಣ್ಣಿಂದ ಕಂಡದ್ದನ್ನು ನಂಬಲಾಗಲಿಲ್ಲ. ಅಲ್ಲಿದ್ದದ್ದು ಸ್ವತಃ ಅವರದ್ದೇ ಶವ. ಅವರದ್ದೇ ಸಣಕಲು ದೇಹದ, ಬೋಳು ತಲೆಯ ಅರೆನಗ್ನ ಶವ. ಗಾಂಧೀಜಿ ಬೆಚ್ಚಿ ಬಿದ್ದು ಅತ್ತಿತ್ತ ಕಣ್ಣು ಹಾಯಿಸಿದರೆ ಸುತ್ತಲೂ ಬಿದ್ದಿರುವ ಪ್ರತಿ ಶವವೂ ಅವರದ್ದೇ. ಆ ಶವಗಳನ್ನು ಆಯುಧ ಹಿಡಿದು ಹೊಡೆದು ಉರುಳಿಸುತ್ತಿರುವುದು ಕೂಡ ಅವರೇ. ಇದನ್ನೆಲ್ಲಾ ನೋಡುತ್ತಾ ನಿಂತ ಗಾಂಧೀಜಿಯವರಿಗೆ ಕಣ್ಣು ಕತ್ತಲೆ ಬಂದಂತಾಯಿತು. ಅಲ್ಲಿಂದ ದೂರ ಓಡೋಣವೆಂದರೆ ಹಜ್ಜೆ ಕಿತ್ತಿಡಲು ಸಾಧ್ಯವಾಗಲಿಲ್ಲ. ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ಹಿಂಬಾಲಿಸಿ ಬಂದ ನಾಥೂರಾಮನ ಗುಂಡುಗಳು ಕಡೆಗೂ ಗಾಂಧಿಜಿಯವರ ಎದೆಯನ್ನು ಸೀಳಿದ್ದವು. ಗಾಂಧೀಜಿ ಎದೆ ಹಿಡಿದುಕೊಂಡು ಕೆಳಗುರುಳಿದರು.

ಅವರು ‘ಹೇ ರಾಮ್’ ಎಂದದ್ದು ಯಾರಿಗೂ ಕೇಳಿಸಲಿಲ್ಲ.

-      ತ್ರಿಲೋಕ್ ತ್ರಿವಿಕ್ರಮ

Wednesday, November 14, 2018

ಕಾರ್ನರ್ ಸೀಟಿನ ಕಥೆಗಳು


ಕಾರ್ನರ್ ಸೀಟಿನ ಕಥೆಗಳು



ಮಧ್ಯಂತರ

ತೆರೆಯ ಮೇಲೆ ಮಧ್ಯಂತರ ಎಂಬ ಅಕ್ಷರಗಳು ಕಾಣುತ್ತಿದ್ದ ಹಾಗೆ, ಅಂಟಿ ಕುಳಿತಿದ್ದ ಪ್ರೇಮಿಗಳ ಮಧ್ಯ - ಅಂತರವೂ ಹೆಚ್ಚಾಯಿತು. ದೀಪಗಳು ಹೊತ್ತಿಕೊಂಡವು. ಸಿನಿಮಾ ಅಷ್ಟೇನೂ ಚೆನ್ನಾಗಿರದಿದ್ದರಿಂದ ಇದ್ದವರು ಕೆಲವೇ ಜನ. ಅದರಲ್ಲೊಂದಿಬ್ಬರು ಮೇಲೆದ್ದು ನಗುತ್ತಾ, ತಮ್ಮ ತಮ್ಮಲ್ಲೇ ಮಾತನಾಡುತ್ತಾ ಬಾಗಿಲುಗಳ ಕಡೆ ನೆಡೆದರು. ಇನ್ನು ಕೆಲವರು ಕೂತಲ್ಲಿಯೇ ಕೂತು ಜೇಬಿನಿಂದ ಮೊಬೈಲ್ ಹೊರತೆಗೆದರು, ಒಂದಿಬ್ಬರು ಹುಡುಗರು ಸಿನಿಮಾಗೆ ಬರುವ ಬದಲು ಬಾರಿಗಾದರೂ ಹೋಗಬಹುದಿತ್ತು ಎಂದು ಬೈದುಕೊಳ್ಳುತ್ತಾ ನನ್ನ ಎದುರೆ ನೆಡೆದು ಹೋದರು. ಇಲ್ಲಿ ಕುಳಿತಿದ್ದ ಪ್ರೇಮಿಗಳು ಹೋಗುವುದೋ ಬೇಡವೋ ಎಂದು ಒಂದಷ್ಟು ಚರ್ಚೆ ಮಾಡಿ ಕೊನೆಗೆ ಎದ್ದು ಹೊರನೆಡೆದರು. ಅವರು ಹೋದ ಮೇಲೆ ನಾನೂ ಆಕಳಿಸಿ ಕೂತಲ್ಲೇ ನಿಟ್ಟುಸಿರು ಬಿಟ್ಟೆ. ಇನ್ನು ಹತ್ತು ನಿಮಿಷಗಳ ವಿರಾಮ ನನಗೆ.

ನಾನು ಎಫ್ 22 ನಂಬರಿನ ಮೂಲೆಯ ಸೀಟು, ಅರ್ಥಾತ್ ಕಾರ್ನರ್ ಸೀಟು.

‘ಕಾರ್ನರ್ ಸೀಟು’ ಎಂದು ನನ್ನ ಅನ್ವರ್ಥನಾಮವನ್ನು ಕೇಳುತ್ತಿದ್ದಂತೇ ಎಲ್ಲರ ಮುಖದಲ್ಲೂ ವಿಷಯ ಅರ್ಥವಾದಂತೆ ಅದೊಂದು ನಗು ಹಾದು ಹೋಗುತ್ತದೆ. ಗೆಳೆಯನ ಕಂಪ್ಯೂಟರಿನಲ್ಲಿ ನಲವತ್ತು ಜಿಬಿ ಗಾತ್ರದ ಸ್ಟಡಿ ಮೆಟೀರಿಯಲ್ ಎಂಬ ಫೋಲ್ಡರನ್ನು ನೋಡಿದಾಗಲೋ, ಹನಿಮೂನ್ ಮುಗಿಸಿ ಹೋದವರ ರೂಮು ಕ್ಲೀನು ಮಾಡಲು ರೂಂ ಬಾಯ್ ಒಳಗೆ ಹೋದಾಗಲೋ ಬರುವಂತಹ ತುಂಟ ನಗು. ಪರವಾಗಿಲ್ಲ, ನನಗೆ ಅದರಲ್ಲೇನು ಮುಜುಗರವಿಲ್ಲ. ಕುಬೇರ ಮೂಲೆಯಲ್ಲಿಟ್ಟರೇ ತಾನೆ ತಿಜೋರಿ ತುಂಬುವುದು? ಹಾಗೆಯೇ ಟಾಕೀಸಿನ ಮೂಲೆಯಲಿ ಕೂತರೆನೇ, ತುಂಟತನ ಹೊರಗೆ ಬರುವುದು. ಹೌದು, ನನ್ನಲ್ಲಿಗೆ ಬರುವವರಲ್ಲಿ ಬಹುಪಾಲು ಮಂದಿ ತುಂಟರೇ. ಅವರಲ್ಲಿ ಹಾಲು ಕದಿಯಲು ಬಂದ ಬೆಕ್ಕಿನ ಅವಸರ, ಕರೆಂಟು ಹೋದಾಗ ಕ್ಯಾಂಡಲ್ಲು ಹುಡುಕುವ ಕೈಗಳ ಚಾತುರ್ಯ, ನಡುರಾತ್ರಿಯಲಿ ದಾರಿ ತಪ್ಪಿದವವರ ಭಯ, ದೂರದಲ್ಲಿ ಕಾಣುವ ಬೆಳಕನ್ನು ಹಿಂಬಾಲಿಸಿ ಹೋಗುವವರ ಕುತೂಹಲ, ಎಲ್ಲವೂ ಇದೆ. ಹೀಗೆ ಸಿನಿಮಾದ ಮುಂದೆ ನೆಡೆಯುವ ಲೈವ್ ಸಿನಿಮಾಗಳಿಗೆ ಪ್ರೇಕ್ಷಕ ನಾನು. ಕತ್ತಲೆಯೊಳಗೆ ನೆಡೆಯುವ ಈ ಕಣ್ಣಾಮುಚ್ಚಾಲೆ ಆಟಗಳಿಗೆ ಅಂಪೈರು ನಾನು.

ಕಂಡವರ ಮಾತುಗಳನ್ನು ಕದ್ದು ಕೇಳಿಸಿಕೊಳ್ಳುವ ಈ ನನ್ನ ಚಟವನ್ನು ಕಂಡು ಮೂಗು ಮುರಿಯಬಹುದು. ಆದರೆ ನೀವೇ ನನ್ನ ಜಾಗದಲ್ಲಿ ನಿಂತು ಯೋಚಿಸಿ. (ಆಯ್ತು ನಿಲ್ಲಬೇಡಿ ಕೂತು ಯೋಚಿಸಿ). ನೀವೊಂದು ಸಿನಿಮಾವನ್ನು ಒಂದು ಸಲ ನೋಡಬಹುದು, ಎರಡು ಸಲ ನೋಡಬಹುದು. ಬಹಳ ಚೆನ್ನಾಗಿದ್ದರೆ ಹತ್ತು ಸಲ ನೋಡಬಹುದು. ಆದರೆ ನಾನು ಸಿನಿಮಾ ಚೆನ್ನಾಗಿದ್ದರೂ ಇಲ್ಲದಿದ್ದರೂ ದಿನಕ್ಕೆ ನಾಲ್ಕು ಸಲ ನೋಡಲೇಬೇಕು. ಹಿಟ್ ಸಿನಿಮಾವಾದರೆ, ಐವತ್ತು ದಿನ ನೂರು ದಿನಗಳವರೆಗೂ ನನಗೆ ಮುಕ್ತಿಯಿಲ್ಲ. ನನಗಿನ್ನೆಷ್ಟು ಜಿಗುಪ್ಸೆಯಾಗಬಹುದು? ಅದರಿಂದ ಹೊರಗೆ ಬರುವ ಒಂದೇ ಒಂದು ದಾರಿಯೆಂದರೆ ನನ್ನಲ್ಲಿಗೆ ಬಂದು ಕುಳಿತವರ ಕಥೆಗಳಿಗೆ ಕಿವಿಯಾಗುವುದು,

ಒಬ್ಬೊಬ್ಬರದು ಒಂದೊಂದು ಕಥೆಗಳು. ಆದರೆ ಸಾಮಾನ್ಯವಾಗಿ ಈ ಎಲ್ಲಾ ಕಥೆಗಳ ಕ್ಯಾಟಗರಿ ಒಂದೇ. ಏಕೆಂದರೆ ಇದರಲ್ಲಿ ಬಹುತೇಕ ಕಥೆಗಳು ಪಿಸುಮಾತಿನಲ್ಲಿ ಶುರುವಾಗಿ ಬಿಸಿಯುಸಿರಿನಲ್ಲಿ ಮುಂದುವರೆದು ನಸು ನಾಚಿಕೆಯಲ್ಲಿ ಕೊನೆಯಾಗುತ್ತವೆ. ಅವನ ರಸಿಕತೆ, ಅವಳ ಭಾವುಕತೆ, ಇಬ್ಬರನ್ನೂ ತನ್ನೊಳಗೆ ಬಚ್ಚಿಟ್ಟುಕೊಂಡ ಕತ್ತಲಿನ ಜಾಗರೂಕತೆ, ಅಕ್ಕಪಕ್ಕದ ಸೀಟುಗಳಲಿ ಕುಳಿತವರ ಸಿನಿಕತೆ, ಇವೆಲ್ಲವೂ ಇದರಲ್ಲಿವೆ. ಹೇಳುವವರಿಗೆ ಈ ಕಥೆ ಮುಜುಗರ ತಂದರೂ, ಕೇಳುವವರಿಗೆ ಎಂದಿಗೂ ಈ ಕಥೆಗಳ ಬಗ್ಗೆ ಕುತೂಹಲ ಬತ್ತುವುದಿಲ್ಲ. ನಾನು ಮೊದಲೇ ಹೇಳಿದಂತೆ ಯಾವ ಮುಜುಗರವಿಲ್ಲದೇ ಒಂದಷ್ಟು ಕಥೆಗಳನ್ನು ಹೇಳುವೆ ಕೇಳಿ.

#@#

ಕಥೆ ೧

ಇತ್ತೀಚಿನ ಕಥೆಯೊಂದರಿಂದ ಪ್ರಾರಂಭಿಸುತ್ತೇನೆ. ಅವರಿಬ್ಬರೂ ಒಂದೇ ಆಫೀಸಿನವರಿರಬೇಕು, ಕೆಲಸದ ಶಿಫ್ಟು ಮುಗಿಸಿ ನೈಟು ಷೋಗೆ ಬಂದಿದ್ದರು. ತೋಳಿನ ಮೇಲೆ ಹೂವಿನ ಟ್ಯಾಟೂ ಇದ್ದ ಹಿಂದಿ ಹುಡುಗಿಗೆ ಕನ್ನಡದ ಒಂದೊಂದು ಸಂಭಾಷಣೆಯನ್ನೂ ಹಿಂದಿಗೆ ಅನುವಾದಿಸಿ ಹೇಳುತ್ತಿದ್ದ ಆ ಕನ್ನಡಕದ ಹುಡುಗ. ಅವನ ಮಾತುಗಳನ್ನು ಕೇಳಿ ಅವಳು ಬಿದ್ದು ಬಿದ್ದು ನಗುತ್ತಿದ್ದರೆ, ತನ್ನದೇ ಜೋಕಿಗೆ ನಗುತ್ತಿದ್ದಾಳೆಂಬಂತೆ ಖುಷಿಯಿಂದ ಬೀಗುತ್ತಿದ್ದ. ಬಿಟ್ಟಿದ್ದರೆ ಪೂರ್ತಿ ಸಿನಿಮಾವನ್ನೆ ಹಿಂದಿಗೆ ಡಬ್ ಮಾಡಿಬಿಡುತ್ತಿದ್ದನೇನೋ, ಅಷ್ಟರಲ್ಲಿ ಸುಂದರವಾದ ರೊಮ್ಯಾಂಟಿಕ್ ಹಾಡೊಂದು ಶುರುವಾಯಿತು, ಅವನು ಮಾತು ನಿಲ್ಲಿಸಿಬಿಟ್ಟ. ಅವಳು ಏನಾಯಿತೆಂಬಂತೆ ಇವನತ್ತ ತಿರುಗಿದಳು. ಟಾಕೀಸಿನ ಡಿಟಿಎಸ್ ಸ್ಪೀಕರುಗಳಲ್ಲಿ ಹಾಡು ಕೇಳುತ್ತಿದ್ದರೆ ಅದಕ್ಕೆ ತಕ್ಕಂತೆ ಇಲ್ಲಿ ಇವನ ಕೈಬೆರಳುಗಳು ಅವಳ ತೋಳ ಮೇಲೆ ಸಂಗೀತ ನುಡಿಸತೊಗಿದವು. ಎಲ್ಲಿಯೂ ಲಯ ತಪ್ಪದ ಅವನ ರಾಗಕ್ಕೆ ಇವಳು ಮಿಡಿದು ಶೃತಿಯಾದಳು. ಅವನ ರಸಿಕತೆಗೆ ರತಿಯಾದಳು. ಕನ್ನಡದ ಈ ಹೇರಿಕೆಯನ್ನು ಹಿಂದಿ ವಿರೋಧಿಸಲಿಲ್ಲ. ಕೆಲವು ನಿಮಿಷಗಳ ಕಾಲ ದೇಹದೊಳಗೆ ಉಚ್ವಾಸ ನಿಶ್ವಾಸಗಳ ಹಗ್ಗ ಜಗ್ಗಾಟ ನೆಡೆದು ಕಡೆಯಲ್ಲಿ ಇಬ್ಬರೂ ಸೋತಿದ್ದರು, ಇಬ್ಬರೂ ಗೆದ್ದಿದ್ದರು. ಕತ್ತಲು ಕಳೆದು ಮುಂಜಾನೆಗೆ ಹೂವರಳುವಂತೆ, ನಡುರಾತ್ರಿಯಲಿ ಥಿಯೇಟರಿನ ದೀಪಗಳುರಿದಾಗ ಅವಳ ಗುಳಿಕೆನ್ನೆಗಳಲಿ ಕೆಂಪು ಕೆಂಪಾದ ಹೂವರಳಿದ್ದವು. ಹಣೆಯ ಮೇಲೆ ಇಬ್ಬನಿಯಂತೆ ಬೆವರ ಹನಿ.

ಕಥೆ ೨

ಮುಂದಿನ ಕಥೆ ಅದೊಂದು ಮಾರ್ನಿಂಗ್ ಷೋಗೆ ಕಾಲೇಜಿಗೆ ಬಂಕು ಹಾಕಿ ಯೂನಿಫಾರ್ಮಿನಲೇ ಬಂದಿದ್ದ ಅವರಿಬ್ಬರದು. ಅದೆಷ್ಟು ನಿದ್ದೆಗೆಟ್ಟ ರಾತ್ರಿಗಳ ವಾಟ್ಸಾಪ್ ಮೆಸೇಜುಗಳ ಫಲವೋ, ಅಂತೂ ಇಬ್ಬರೂ ಒಂದಾಗಿ ಸಿನಿಮಾಗೆ ಬಂದಿದ್ದರು. ಬುಕ್ ಮಾಡುವಾಗಲೇ ಖಾಲಿಯಿದ್ದ ಕಾರ್ನರ್ ಸೀಟು ಹುಡುಕಿ ಬುದ್ಧಿವಂತಿಕೆ ಮೆರೆದಿದ್ದ ಹುಡುಗ. ಅವಳು ಕ್ರೈಸ್ತರ ಹುಡುಗಿ. ಕತ್ತಿನಲ್ಲಿ ಕ್ರಾಸ್ ಇತ್ತು. ಬಹುಶಃ ಇಬ್ಬರೂ ಅದೇ ಮೊದಲು ಸಿನಿಮಾಗೆ ಜೊತೆಗೆ ಬಂದಿದ್ದಿರಬೇಕು. ಚಿತ್ರದುದ್ದಕ್ಕೂ ಭಯದಿಂದ ಮುದುರಿ ಕುಳಿತಿದ್ದಳು. ಪೋನು ವೈಬ್ರೇಟಾದರೆ ಬೆಚ್ಚಿಬೀಳುತ್ತಿದ್ದಳು. ಆಗಾಗ ವಾಚು ನೋಡುತ್ತಿದ್ದಳು. ವಾಷ್ ರೂಮಿಗೆ ಎದ್ದು ಹೋಗಬೇಕಾದೀತು ಎಂದು ಆತ ತಂದುಕೊಟ್ಟ ಜ್ಯೂಸನ್ನೂ ಮುಟ್ಟಲಿಲ್ಲ. ಸೆಕೆಂಡ್ ಹಾಫ್ ಶುರುವಾಯಿತು. ಹುಡುಗ ಕೇಳಲೋ ಬೇಡವೋ ಎನ್ನುವಂತೆ ಪಿಸುಮಾತಿನಲ್ಲೇ ಪಪ್ಪಿಯೊಂದಕ್ಕೆ ಬೇಡಿಕೆಯಿಟ್ಟ. ಅವಳು ಅವನನ್ನೊಮ್ಮೆ ದುರುಗುಟ್ಟಿ ನೋಡಿ ಸಾಧ್ಯವೇ ಇಲ್ಲವೆಂದಳು. ಹಲವು ಗುಸುಗುಸು ಪಿಸುಪಿಸುಗಳ ನಂತರ ಅವಳು ಕೊಡುವುದಿಲ್ಲವೆಂದು, ಆತನೇ ಕೊಡಬೇಕೆಂದು ನಿರ್ಧಾರವಾಗಿ ಅವಳು ಧೈರ್ಯ ತಂದುಕೊಂಡು ಸಂಕೋಚಗಳಿಂದ ಹ್ಯಾಂಡ್ ರೆಸ್ಟಿನ ಮೇಲೆ ಒರಗಿ ಕೂರುವಂತೆ ಮುಂದೆ ಭಾಗಿ ಕೆನ್ನೆ ಕೊಟ್ಟಳು. ತುಟಿ ಕೊಡುವಳೆಂದು ನಿರೀಕ್ಷಿಸಿದ್ದ ಹುಡುಗನಿಗೆ ನಿರಾಸೆಯಾದರೂ ಕಣ್ಣ ಮುಂದಿದ್ದ ಕೆನ್ನೆಯೂ ಹಿಂದೆ ಹೋಗುವುದರೊಳಗೆ ರಪಕ್ಕನೇ ಮುತ್ತಿಕ್ಕಿದ. ಕಿವಿಗೆ ಅಷ್ಟು ಸನಿಹದಲ್ಲೇ ಕೇಳಿದ ಆ ಮುತ್ತಿನ ಸದ್ದಿಗೆ ಬಾಂಬು ಸಿಡಿದವಳಂತೆ ಬೆಚ್ಚಿಬಿದ್ದು ಹಿಂದೆ ಸೀಟಿಗೊರಗಿ ಎದುಸಿರು ಬಿಡುತ್ತಿದ್ದರೇ. ಅವನು ಏನೋ ಸಾಧಿಸಿದವನಂತೆ ಹೆಮ್ಮೆಯಿಂದ ನಿಟ್ಟುಸಿರು ಬಿಟ್ಟ. ಸಿನಿಮಾ ಪರದೆಯನ್ನೇ ನೋಡುತ್ತಾ ಕುಳಿತ ಅವಳು ಅವನನ್ನು ಮತ್ತೆ ತಿರುಗಿ ನೋಡಲಿಲ್ಲ. ಅವಳನ್ನೇ ನೋಡುತ್ತಾ ಕುಳಿತ ಅವನು ಮತ್ತೆ ಸಿನಿಮಾ ನೋಡಲಿಲ್ಲ.

ಕಥೆ ೩

ಇದು ಕೆಲವು ವರುಷಗಳ ಹಿಂದಿನ ಕಥೆ. ಪರೀಕ್ಷೆ ಮುಗಿಸಿ ರಜೆಗೆ ಊರಿಗೆ ಹೋಗುತ್ತಿದ್ದ ಪ್ರೇಮಿಗಳಿಬ್ಬರು ಟ್ರೈನು ಹೊರಡಲು ಸಮಯವಿದ್ದುದರಿಂದ ಕೈಯಲ್ಲಿ ದೊಡ್ಡ ದೊಡ್ಡ ಲಗೇಜುಗಳನ್ನು ಹಿಡಿದು ಸಿನಿಮಾ ನೋಡಲು ಬಂದಿದ್ದರು. ಅವರೇನಾದರೂ ರೈಲ್ವೇ ಸ್ಟೇಷನ್ನಿನಲ್ಲಿ ಇಷ್ಟು ಲಗೇಜುಗಳೊಂದಿಗೆ ಕುಳಿತಿದ್ದರೆ, ಎಲ್ಲಿಗೋ ಓಡಿಹೋಗಲು ತಯಾರಾದವರಂತೆ ಕಾಣುತ್ತಿದ್ದರು. ಬಹುಶಃ ಅವರು ಹೀಗೆ ರಜೆಗೆ ಹೋಗುವುದು ಅದೇ ಮೊದಲ ಸಲವಾಗಿರಲಿಲ್ಲ. ಟಾಕೀಸಿನ ಕತ್ತಲಲಿ ಅಕ್ಕಪಕ್ಕದಲಿ ಕುಳಿತಾಗ ಮುತ್ತು ನೀಡಲು ಎಷ್ಟು ಡಿಗ್ರಿಯವರೆಗೆ ತಿರುಗಬೇಕು, ಸೊಂಟದಲ್ಲಿ ಕೈ ಜಾರಿಸಲು ಸೀಟಿನಲ್ಲಿ ಎಷ್ಟು ಇಂಚು ಕೆಳಗೆ ಜಾರಬೇಕು ಎಂಬ ಸಂಪೂರ್ಣ ಲೆಕ್ಕಾಚಾರಗಳು ಇದ್ದಂತಿತ್ತು. ರಜೆ ಮುಗಿಯುವವರೆಗೆ ಅದೆಷ್ಟು ದಿನಗಳ ಕಾಲ ದೂರವಿರಬೇಕಿತ್ತೋ ಏನೋ ಸಿನಿಮಾ ಪ್ರಾರಂಭವಾದ ಕೂಡಲೇ ಇಬ್ಬರೂ ಅಷ್ಟೂ ದಿನಗಳಿಗಾಗುವಷ್ಟು ನೆನಪುಗಳನ್ನು ಕಲೆಹಾಕತೊಡಗಿದರು. ಅವನ ಕೈಬೆರಳುಗಳು ಯುದ್ಧಕ್ಕೆ ಹೊರಟ ಕಾಲಾಳುಗಳಂತೆ ಅವಳ ದೇಹದ ಮೂಲೆ ಮೂಲೆಗಳನ್ನೆಲ್ಲಾ ಆಕ್ರಮಿಸುತ್ತಿರಲು, ಆತ ನೆನಪುಗಳನ್ನು ದೋಚುತ್ತಾ ಶ್ರೀಮಂತನಾದನು, ಶರಣಾದ ಅವಳು ಯಾವ ಪ್ರತಿರೋಧವಿಲ್ಲದೇ ಬೆರಳುಗಳು ಬಂದಲ್ಲಿಗೆ ದಾರಿ ಮಾಡಿಕೊಟ್ಟು ತನ್ನನ್ನೇ ಅರ್ಪಿಸಿಕೊಂಡು ಅವನ ಸಾಮಂತಳಾದಳು. ಸಿನಿಮಾವಿನ್ನೂ ಮುಗಿದಿರಲಿಲ್ಲ, ಆದರೆ ಟ್ರೈನಿಗೆ ಸಮಯವಾಗಿತ್ತು. ಇಬ್ಬರೂ ನಡುವಿನಲ್ಲೆ ಎದ್ದು ಹೊರಟರು. ಕೈಲಿದ್ದ ಲಗೇಜಿನ ಜೊತೆಗೆ ಎದೆಯೊಳಗೆ ನೂರಾರು ನಾಟಿ ನೆನಪುಗಳ ಲಗೇಜು ಭರ್ತಿಯಾಗಿತ್ತು.

ಕಥೆ ೪

ನನ್ನಲ್ಲಿಗೆ ಬರುವವರು ಪ್ರೇಮಿಗಳಷ್ಟೇ ಅಲ್ಲ. ಒಮ್ಮೊಮ್ಮೆ ಮದುವೆಯಾದ ದಂಪತಿಗಳು ಇಲ್ಲಿ ಬಂದು ಕೂರುವುದಿದೆ. (ಬೇರೆ ಬೇರೆಯವರ ಜೊತೆಗೆ ಮದುವೆಯಾಗಿದ್ದವರೂ ಬರುವುದುಂಟು, ಅದರ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ) ಕಳೆದ ತಿಂಗಳು ನವವಿವಾಹಿತರಿಬ್ಬರು ಬಂದಿದ್ದರು. ಹೊಸದಾಗಿ ಮದುವೆಯಾಗಿದ್ದರಲ್ಲವೇ, ಅತ್ತೆ ಮನೆಯಲ್ಲಿ ಬಯಸಿದ ಏಕಾಂತ ಸಿಕ್ಕಂತಿರಲಿಲ್ಲ. ಅವರಿಬ್ಬರ ಹಣೆಬರಹದಲ್ಲಿ ಹನಿಮೂನು ಬರೆದಂತಿರಲಿಲ್ಲ. ದೇವಸ್ಥಾನಕ್ಕೆ ಪೂಜೆಗೋ, ಆಸ್ಪತ್ರೆಯ ಚೆಕಪ್ಪಿಗೋ ಹೋಗುವೆವೆಂದು ಹಳೆ ಸಿನಿಮಾದವರ ಹಾಗೆ ಸುಳ್ಳು ಹೇಳಿ ಬಂದಂತಿತ್ತು. ಹೆಂಡತಿಯಿನ್ನೂ ಚಿಕ್ಕವಳು. ಚೂರು ಬಾಯಿಬಡುಕಿ, ಗಂಡ ಮೂವತ್ತು ದಾಟಿದ ಮೌನೇಶ್ವರ. ಇಬ್ಬರಲ್ಲೂ ಆಗಷ್ಟೇ ಸಲುಗೆ ಮೊಳಕೆ ಹೊಡೆದು ಬೆಳೆಯುತ್ತಿತ್ತು. ಅವಳಿನ್ನು ಅವನನ್ನು ಏನೆಂದು ಕರೆಯಬೇಕೆಂದು ನಿರ್ಧರಿಸಿದಂತಿರಲಿಲ್ಲ. ಅದರ ಬಗ್ಗೆಯೇ ಚರ್ಚೆ ನೆಡೆಯುತ್ತಿತ್ತು. ಅಷ್ಟರಲ್ಲಿ ಸಿನಿಮಾ ಶುರುವಾಯಿತು. ನೋಡಿದರೆ ಸಿನಿಮಾದಲ್ಲಿದ್ದ ಹೀರೋ ಹೆಸರೂ, ಪಕ್ಕದ ಸೀಟಿನಲ್ಲಿ ಕುಳಿತಿದ್ದ ಹೀರೋ ಹೆಸರೂ ಎರಡೂ ಒಂದೇ. ಸಿನಿಮಾದಲ್ಲಿ ಅವನ ಹೆಸರು ಬಂದಾಗಲೆಲ್ಲಾ ಇವಳೂ ಅದೇ ಧಾಟಿಯಲ್ಲಿ ಅವನ ಹೆಸರನ್ನು ಕೂಗುತ್ತಾ ರೇಗಿಸತೊಡಗಿದಳು. ಗಂಡ ನೋಡುವ ತನಕ ನೋಡಿ, ಅವಳನ್ನು ಹತ್ತಿರಕ್ಕೆ ಎಳೆದುಕೊಂಡು ಮುತ್ತಿಟ್ಟುಬಿಟ್ಟ. ಇದನ್ನು ನಿರೀಕ್ಷಿಸದ ಅವಳಿಗೆ ಒಮ್ಮೆಲೆ ರೋಮಾಂಚನವಾಯಿತು. ಮಾತು ನಿಂತುಹೋಯಿತು. ಅಮ್ಮನ ಮುಂದೆ ನಿಂತು ಮಾತನಾಡಲೂ ಹೆದರುವ ತನ್ನ ಗಂಡನಿಗೆ ಇಷ್ಟೊಂದು ಧೈರ್ಯವೇ ಎನ್ನಿಸಿತು. ಅವಳ ನಾಚಿದ್ದನ್ನು ಕಂಡು ಒಳಗೊಳಗೆ ಹಿಗ್ಗಿದ ಪತಿಮಹಾಶಯ ಕೈಯನ್ನು ಚಾಚಿ ಕೆನ್ನೆಯ ಬಳಿಗೆ ತಂದಾಗ ಅದನ್ನು ಎರಡು ಕೈಗಳಲ್ಲಿ ಕೆಳಗೆ ತಂದು ಉಳಿದದ್ದನ್ನು ಮನೆಯಲ್ಲಿ ಮುಂದುವರೆಸುವಂತೆ ಕಣ್ಣಲ್ಲೇ ಬೇಡಿಕೊಂಡಳು ಹೆಂಡತಿ. ಆತ ತನ್ನ ತಾಕತ್ತು ತೋರಿಸಿದವನಂತೆ, ಆಯ್ತು ಎನ್ನುತ್ತಾ ಮೀಸೆ ತಿರುವಿ ಸಿನಿಮಾ ನೋಡತೊಡಗಿದ, ಅವಳು ಮನಸ್ಸಿನಲ್ಲೇ ಮನೆ ದೇವರನ್ನು ನೆನಪಿಸಿಕೊಂಡಿದ್ದಳು.

ನಿಮಗೆ ಈ ಕಥೆಗಳು ಹೊಸದಾಗಿದ್ದರೇ ನಿಮ್ಮನ್ನು ಒಂದು ಪ್ರಶ್ನೆ ಕಾಡುತ್ತಿರಬಹುದು, ನನ್ನಲ್ಲಿ ಬಂದು ಕುಳಿತ ಮಾತ್ರಕ್ಕೆ ಅವರೇನು ಅದೃಷ್ಯರಾಗಿಬಿಡುತ್ತಾರಾ? ನಾನೇನು ಮಾಯಾ ಕುರ್ಚಿಯಾ ಎಂದು. ಖಂಡಿತ ಇಲ್ಲ. ನನ್ನನ್ನು ಹಾಗೆ ಮಾಯಾ ಕುರ್ಚಿಯೆಂದುಕೊಂಡು ಕುಳಿತು ಸಿಕ್ಕಿಬಿದ್ದವರೂ ಇದ್ದಾರೆ. ಅದೊಮ್ಮೆ ಪಕ್ಕದಲ್ಲಿ ಸೀನಿಯರ್ ಸಿಟಿಜನ್ ಒಬ್ಬರು ಕುಳಿತಿದ್ದಾರೆಂಬ ಪರಿವೆಯೂ ಇಲ್ಲದೇ ಯೌವನದ ಹೊಳೆ ಹರಿಸುತ್ತಿದ್ದ ಜೋಡಿಯೊಂದಕ್ಕೆ ಅಂಕಲ್ ಇಡೀ ಟಾಕೀಸಿಗೆ ಕೇಳುವಂತೆ ಉಗಿದು ಉಪ್ಪು ಹಾಕಿದ್ದರು. ಹೊಳೆಗೆ ಅಣೆಕಟ್ಟು ಕಟ್ಟಿದ್ದರು. ಇನ್ನೊಮ್ಮೆ ಸಿನಿಮಾದ ಕ್ಲೈಮ್ಯಾಕ್ಸಿನ ಹಿನ್ನಲೆ ಸಂಗೀತದ ಹಿನ್ನಲೆಯಲ್ಲಿ ಪ್ರೇಮಿಗಳು ಕ್ಲೈಮ್ಯಾಕ್ಸ್ ತಲುಪುತ್ತಿದ್ದ ಸದ್ದುಗಳು, ಇದ್ದಕ್ಕಿದ್ದಂತೆ ಸಂಗೀತ ನಿಂತಾಗ ಚಿತ್ರಮಂದಿರದಲೆಲ್ಲಾ ವ್ಯಾಪಿಸಿ ಇಡೀ ಚಿತ್ರ ಮಂದಿರ ನನ್ನ ಕಡೆಗೆ ತಿರುಗಿತ್ತು. ಪ್ರೇಮಿಗಳಿಗೆ ರಸಭಂಗವಾಗಿತ್ತು. ಮೊನ್ನೆ ಮೊನ್ನೆಯಷ್ಟೇ ತುಂಬಿದ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಮುಗಿದು ಕೆಲವೇ ನಿಮಿಷದಲಿ ಲೋಕವನೇ ಮರೆತು ತುಟಿಗೆ ತುಟಿಯೊತ್ತಿದ್ದ ಪ್ರೇಮಿಗಳ ಮೇಲೆ ವಾಚ್ ಮನ್ ಕೆಂಪಣ್ಣ ಬಂದು ಟಾರ್ಚು ಬಿಟ್ಟಾಗ ಕೆಂಪಗಿದ್ದ ಆ ಹೊರರಾಜ್ಯದ ಜೋಡಿ ಮತ್ತಷ್ಟು ಕೆಂಪಾಗಿ ಹೋಗಿದ್ದರು. ಕೆಂಪಣ್ಣನಿಗೆ ಇದೆಲ್ಲಾ ಸಾಮಾನ್ಯವಾಗಿದ್ದರಿಂದ ಮೆಲ್ಲಗೆ ಗೊಣಗಿಕೊಳ್ಳುತ್ತಾ ತಾನು ಇತರೆ ಸೀಟುಗಳ ಕಡೆಗೆ ಟಾರ್ಚು ಬಿಡುತ್ತಾ ಮುಂದೆ ಹೋದ. ಆದರೆ ನಾಚಿಕೆಯಾದ ಆ ಇಬ್ಬರೂ ಅಲ್ಲಿ ಕೂರಲಾರದೇ ಅವಸರದಲ್ಲಿ ಎದ್ದು ಹೊರಗೆ ಹೊರಟು ಕತ್ತಲೆಯಲ್ಲಿ ಎತ್ತೆತ್ತಲೋ ಸಾಗಿ ಯಾರದೋ ಕಾಲೆಡವಿ ಬಿದ್ದು, ಮತ್ಯಾರದೋ ಕಾಲು ತುಳಿದು ಬಾಗಿಲಿನ ಕಡೆಗೆ ಕೆಂಪಣ್ಣನೇ ಮತ್ತೆ ಬಂದು ಬ್ಯಾಟರಿ ಬಿಟ್ಟು ಅವರಿಗೆ ಹೊರಕ್ಕೆ ದಾರಿ ತೋರಿಸಿದ್ದ.

#@#

ಹೇಳುತ್ತಾ ಹೋದರೆ, ಈ ಕಥೆಗಳಿಗೆ ಕೊನೆಯೇ ಇಲ್ಲ. ವರ್ಷಕ್ಕೆ ಎಷ್ಟು ಸಿನಿಮಾಗಳು ಬಿಡುಗಡೆಯಾಗುತ್ತವೆಯೋ ಅದರ ಹತ್ತರಷ್ಟು ಕಥೆಗಳು ನನ್ನ ಬಳಿಯಿವೆ. ಇಲ್ಲಿ ಕೂತಿದ್ದು ಎದ್ದು ಹೋದ ಸಾವಿರಾರು ಜನರ ಕಥೆಗಳು. ಇಲ್ಲಿ ಕುಳಿತಿರುವಷ್ಟು ಹೊತ್ತು ಅದು ಅವರ ಕಥೆಗಳು. ಅವರು ಎದ್ದು ಹೋದ ಮೇಲೆ ಅವರ ಕಥೆಗಳು ನನ್ನ ಕಥೆಗಳು. ನಾ ನಿಮಗೆ ಹೇಳಬೇಕಾದ ಕಥೆಗಳು. ಹೇಳದಿದ್ದರೇ ಕತ್ತಲಲ್ಲೇ ಕಳೆದು ಹೋಗುವ ಕಥೆಗಳು.

ಸದ್ಯಕ್ಕಿಷ್ಟು ಸಾಕು. ಸಿನಿಮಾ ಮತ್ತೆ ಶುರುವಾಗುತ್ತಿದೆ. ಅಗೋ, ಆ ಜೋಡಿ ಪಾಪ್‌ಕಾರ್ನು, ಕೂಲ್‌ಡ್ರಿಂಕು ಹಿಡಿದು ಇತ್ತಲೇ ಬರುತ್ತಿದೆ. ಈ ಏಸಿಯ ಚಳಿಯಲ್ಲೂ ತಾವು ಬೆಚ್ಚಾಗಾಗಿ ನನ್ನನ್ನೂ ಬಿಸಿ ಮಾಡುತ್ತಾ ಮತ್ತೊಂದು ಹೊಸ ಕಥೆ ಹೇಳಲು.