Showing posts with label ಕವನ. Show all posts
Showing posts with label ಕವನ. Show all posts

Tuesday, January 14, 2020

ಕುದುರೆಯಷ್ಟೇ ನಾನು.


ಕುದುರೆಯಷ್ಟೇ ನಾನು.
 
ಕುದುರೆಯಷ್ಟೇ ನಾನು.
ಕಣ್ಣ-ಪಟ್ಟಿ ಕಟ್ಟಿಕೊಂಡು
ಎಡಕ್ಕು ನೋಡದೇ, ಬಲಕ್ಕೂ ನೋಡದೇ
ಮುಂದಕ್ಕೋಡಬೇಕು..
ಎದುರಾದರೆ ಎಡ-ಬಲಗಳು
ಲಾಳದ ಅಚ್ಚೊತ್ತುವಂತೆ
ಮುಖದ ಮೇಲೆ ಜಾಡಿಸಿ ಒದೆಯಬೇಕು!

ನಾ ಓಡುತ್ತಿದ್ದೆ, ಅತ್ತಿತ್ತ ನೋಡದೇ..
ಬರಲಿದೆ ಎಂದರು ಬಲದಲ್ಲಿ ಮಂದಿರ
ಕೈ ಮುಗಿದು ಬಂದೆ..
ಇಡ್ಲಿ ಕೊಡುತಿದ್ದಳು ಎಡದಲ್ಲಿ ಇಂದಿರಾ
ಚಟ್ನಿ ಜೊತೆ ತಿಂದೆ..
ಎಡ-ಬಲಗಳ ಭುಜಬಲಗಳ ಚಿಂತೆ
ಹುಲ್ಲು ತಿನ್ನುವ ಕುರುಡು ಕುದುರೆಗೆ ಉಂಟೆ?
ನನ್ನ ದಾರಿಯು ನನಗೆ, ಸಾಗುತಿದ್ದೆ ಮುಂದೆ!

ಓಟ ಮುಂದುವರೆದಿತ್ತು, ಬಂದಿತ್ತು
ಪೊಳ್ಳು ಪ್ರತಿಭಟನೆಗಳ, ಸುಳ್ಳು ಸಂಘರ್ಷಗಳ
ಸುದ್ದಿ ಸಾವಿರ ಕಣ್ಮುಂದೆ..
ಕುದುರೆಯೋ ಕತ್ತೆಯೋ, ದಾಖಲೆ ಕೇಳಿದಿರಾ?
ಲದ್ದಿ ಹಾಕುವೆ, ಬಗ್ಗಿರಿ ಹಿಂದೆ!
ಎಲ್ಲಿಂದಲೋ ಬಂದವನು, ಎಲ್ಲಿಗೋ ಹೊರಟವನು
ಇದ್ದಕಿದ್ದಂತೆ ಹೊತ್ತಿ ವ್ಯಾಪಿಸಿದ
ಗುರುತು ದಾಖಲೆಯ ದಳ್ಳುರಿಯಲಿ ಬೆಂದೆ.

ಓಡಿದೆ ಓಡಿದೆ, ಮೈಮರೆತು ಓಡಿದೆ
ಅಸಹ್ಯವಾಗುತಿತ್ತು ಮೆತ್ತಿಕೊಳ್ಳುತಿರಲು
ಮೈಗೆಲ್ಲಾ ಕೆಸರಿಯ ಬಣ್ಣ.
ಓಡಿದೆ ಓಡಿದೆ, ಮೈ ಬೆವತು ಓಡಿದೆ
ಹಸುವ ತಿಂದವರು ಕುದುರೆಯ ಕೊಂದು
ಬಾಯಿ ಚಪ್ಪರಿಸುವ ಮುನ್ನ.
ಅವರ ಮೇಲಿವರು, ಇವರ ಮೇಲವರು
ಹರಿಹಾಯುತಲಿರಲು ಪ್ರತಿನಿತ್ಯ
ಅರಿವಾಯಿತು ನನಗೆ ಕಟುಸತ್ಯ.
ಜಾತಿ(ಧರ್ಮ) ಇಲ್ಲದೇ ಬಲಕೆ ಬಲವಿಲ್ಲ
ನೀತಿಗೆಟ್ಟವರೇ ಎಡದ ಕುಲವೆಲ್ಲಾ

ಓಡಲೇಬೇಕು ಇಲ್ಲಿ, ಕಲಿಗಾಲದಲ್ಲಿ
ಅಧರ್ಮ ಧರ್ಮವ ಗೆಲ್ಲದು
ಧರ್ಮ ಅಧರ್ಮವನು ಮೆಟ್ಟಿ ನಿಲ್ಲದು.
ಕುದುರೆಯಷ್ಟೇ ನಾನು, ಓಡುವುದಷ್ಟೇ ನನ್ನ ಕೆಲಸ.
ನಿನ್ನ ಕರ್ಮವ ನೀ ಮಾಡೆಂದು ನುಡಿದ
ನನ್ನ ಲಗಾಮು ಹಿಡಿದಿರುವ ಜಾಕಿ
ಧರ್ಮ-ಅಧರ್ಮದ ತಕ್ಕಡಿಯ ತೂಗಲು
ಮತ್ತೆ ಅವತಾರವೆತ್ತುವುದು ಬಾಕಿ.

-      - ಆಫ್ಟರ್ ಎ ಲಾಂಗ್ ಟೈಮ್, ತ್ರಿವಿಕ್ರಮ

Wednesday, April 03, 2019

ಕಾದನು ಮಾಧವ ವೇದನೆಯಿಂದಲಿ..


ಕಾದನು ಮಾಧವ ವೇದನೆಯಿಂದಲಿ..



ಕಾದನು ಮಾಧವ ವೇದನೆಯಿಂದಲಿ
ರಾಧೆಯ ದರುಶನಕೆ..
ಒದಗಿದ ವಿರಹವ ಸೈರಿಸಲಾರದೇ
ಸೊರಗಿದ ದಿನದಿನಕೆ..
ಮಾಧವ.. ಸೊರಗಿದ ದಿನದಿನಕೆ..

ತಿಂಗಳೇ ಆಯಿತು.. ಕಂಗಳ ಮುಂದೆ
ಬಾರದೇ ರಾಧೆಮಣಿ
ಕಾದಿಹ ಕರ್ಣವ, ಅಂತಃಕರಣವ
ಸೇರದೇ ಅವಳ ದನಿ
ಕರ್ಣವ.. ಸೇರದೇ ಅವಳ ದನಿ..

ಇತಿಮಿತಿ ಇಲ್ಲದ.. ಕರೆದರು ನಿಲ್ಲದ..
ಕಾಲವ ಶಪಿಸಿದನು..
ಕಾಣದ ನಲ್ಲೆಯ.. ಎಲ್ಲೆಡೆ ಕಾಣುತ..
ನಾಮವ ಜಪಿಸಿದನು..
ನಲ್ಲೆಯ.. ನಾಮವ ಜಪಿಸಿದನು..

ಬರುವಳೇ ರಾಧೆ.. ಇರುಳಲಿ ಕಾದಿದೆ
ಗೋಕುಲದಾ ಬೀದಿ..
ವಿರಹದ ಸೆರೆಯಲಿ, ರಾಧೆಯ ನೆನೆವ
ಮಾಧವ ಅಪರಾಧಿ..
ಸೆರೆಯಲಿ.. ಮಾಧವ ಅಪರಾಧಿ


-      ತ್ರಿವಿಕ್ರಮ

Tuesday, February 19, 2019

ಸರಸ್ವತಿ ನಿನಗೆ ಅಮ್ಮನಲ್ಲ, ಆಂಟಿ..!


ಸರಸ್ವತಿ ನಿನಗೆ ಅಮ್ಮನಲ್ಲ, ಆಂಟಿ..!
ಬಲ್ಲವರು ಹೇಳುವುದ
ಶಿರ ಬಗ್ಗಿಸಿ, ದನಿ ತಗ್ಗಿಸಿ
ಬರೆದುಕೊಳ್ಳಯ್ಯ ಮೂರ್ಖ..!
ವ್ಯಾಸ ವಾಚಿತ ಭಾರತವ
ಬರೆದುಕೊಂಡಂತೆ ಆ ಗಜಮುಖ.

ಕ್ಲರ್ಕು, ಸ್ಟೆನೋ, ಟೈಪಿಸ್ಟುಗಳಂತೆ
ಹಸಿದು ಪಂಕ್ತಿಯಲಿ ಕೂತ
ಬಂಡಲುಗಟ್ಟಲೇ ಬಿಳಿಹಾಳೆಗಳಿಗೆ,
ಮತ್ಯಾರೋ ಮಾಡಿದಡುಗೆಯ
ಬಡಿಸುವ ಭಾಗ್ಯವಷ್ಟೇ ನಿನದು
ಅನ್ನದಾನದ ಪುಣ್ಯದಲಿ
ಪಾಲು ಕೇಳಲೇಬಾರದು.

ಗಣಪನಿಗಾದರೂ ಐಡೆಂಟಿಟಿಯಿತ್ತು.
ನಿನಗೇನುಂಟು ಬದನೇಕಾಯಿ ತೊಟ್ಟು?
ಸಾರಸ್ವತ ಲೋಕದ ಡ್ರೈನೇಜಿನಲಿ
ಲೇಖನಿಯ ಹರಿಗೋಲಾಗಿಸಿ
ಕಾಗದದ ತೆಪ್ಪದಲಿ ತೇಲುತ್ತಿದ್ದ
ಸಾಂದರ್ಭಿಕ ಶಿಶು ನೀನು,
ಶಾರದೆಯು ಸಾಕಿದಳು ತಂದು,
ತನ್ನ ವರಪುತ್ರರು ಗೀಚಾಡಿದ
ಸ್ಲೇಟು ಒರೆಸಿಕೊಂಡಿರು ಎಂದು..!

ಒರೆಸುತಲಿ ಒರೆಸುತಲಿ
ಹೊಟ್ಟೆಗನ್ನವ ಅರಸುತಲಿ
ನಾಲ್ಕು ಅಕ್ಷರ ಕಲಿತು,
ಬರೆಯುವಾಸೆಯು ಬಲಿತು,
ಛಲದಿಂ ತಾಯನೊಲಿಸಿಕೊಂಡ
ಆ ಪ್ರೇಮಪುತ್ರರ ಪಕ್ಕ ಕುಳಿತು,
ಅವರುಲಿದದ್ದು ಬರೆದುಕೊಂಡು
ಅವರುಂಡ ತಟ್ಟೆಯಲುಂಡು
ಎಲ್ಲದರಲು ಅವರನನುಸರಿಸಿ
ಅವರಮ್ಮನ ನೀ ಅಮ್ಮನೆಂದರೆ
ಅದು ಕೇವಲ ನಿನ್ನ ಭ್ರಾಂತಿ,
ಅರಿತುಕೋ ಕಂದ
ಸರಸ್ವತಿ ನಿನಗೆ ಅಮ್ಮನಲ್ಲ, ಆಂಟಿ..!

ಹೋಗು, ಮೊದಲು ಕೈತೊಳದು ಬಾ,
ಅಳಿಸಿಹೋಗಲಿ ಕೈರೇಖೆಗಳು
ಕಾಣಿದಂತೆ ಮೆತ್ತಿಕೊಂಡ ಇಂಕು,
ಇಳಿದುಹೋಗಲಿ ತಾನೊಬ್ಬ
ಕವಿಯೆನ್ನುವ ಮಂಕು.

-      - ತ್ರಿವಿಕ್ರಮ


Thursday, August 03, 2017

ಪುತ್ರಕಾಮೇಷ್ಟಿಯಾಗ - ೧

ಪುತ್ರಕಾಮೇಷ್ಟಿಯಾಗ - ೧

(ಪರಮ ಪತಿರ್ವತೆ* ಸೀತೆ)


ವರುಷಗಳುರುಳಿದರು ಮನೆಯಲ್ಲಿ
ವಂಶೋದ್ಧಾರಕನ ಸುಳಿವಿರಲಿಲ್ಲ
ಹತ್ತು ಬೆಟ್ಟವ ಹತ್ತಿ ಬಂದರು
ನೂರು ಗುಡಿಯ ಸುತ್ತಿ ಬಂದರು
ಕುಡಿಯ ನೀಡುವ ದೈವ ಒಲಿದಿರಲಿಲ್ಲ

ನಿಂತರೆ ವ್ರತ ಕುಂತರೆ ಪೂಜೆ
ಮಲಗಿ ಉರುಳಿದರೆ ಹರಕೆ ಸೇವೆ
ಸೊತು ಹೋಗಿದ್ದಳು ಸೀತೆ
ಕುಂಚ ಬಣ್ಣದೊಳದ್ದಲಾಗದ ಮೇಲೆ
ಪರದೆ ಮೇಲೆ ಚಿತ್ರ ಮೂಡೀತೆ?
ಹೊಲವೂಳದೆ ಬೆಳೆಯು ಬೆಳದೀತೆ?
ಮರವ ಸುತ್ತಿ ಹರಕೆ ತೀರಿಸಿ ಬಂದು
ಮರದ ಮಂಚದಲಿ ಮಲಗಿ
ಗೊರಕೆ ಹೊಡೆದರೇನು ಫಲ
ಮದ್ದರೆದು ತಿನಿಸಿದರು ಮುದ್ದು ಮಾಡದ
ಪತಿಗೆ ತಾ ಸತಿಯಾಗಿದ್ದಳಷ್ಟೆ
ಬಂದಿರಲಿಲ್ಲ ರತಿಯಾಗುವ ಕಾಲ

ಇವಳು ಹೊರಗಾದಾಗಲೆಲ್ಲ
ಕೊರಗುತಿದ್ದಳು ಅತ್ತೆ ಜಗಲಿಯಲಿ ಕೂತು
ಒಮ್ಮೆ ಮಿತಿಮೀರಿತ್ತು ಅವಳ ಮಾತು:
"ಹೆರಲಾಗದವಳು ಹೊರೆಯಾಗಿ ಏಕಿರುವೆ
ಬೇರೆ ಸೊಸೆಯನಾದರು ತರುವೆ
ಹಾರಿಕೊಳ್ಳಬಾರದೆ ಹೋಗಿ ಕೆರೆಗೆ?"
‘ಅವನು ಮುಟ್ಟದೇ ಮುಟ್ಟು ನಿಲ್ಲುವುದೇನು’
ಬಾಯ್ತದಿಗೆ ಬಂದ ಮಾತ ಮೌನದಲಿ ಕಟ್ಟಿಟ್ಟು
ಕಣ್ಣೀರಿಟ್ಟಿದ್ದಳು ಹೋಗಿ ಮರೆಗೆ..!

ಬೆದಕುತಿರಲು ಅತ್ತೆ ಮಾತು ಮಾತಿಗು
ಬದುಕಿದ್ದಳು ದಿನವು ಸತ್ತು ಸತ್ತು
ಬತ್ತಿ ಹೋಗಿತ್ತು ಕಣ್ಣು ಅತ್ತು ಅತ್ತು
ಇತ್ತ ತಪ್ಪೊಪ್ಪಿಕೊಳ್ಳಲಾರದ ಪತಿಗೆ
ಇತ್ತು ಅದೆಂಥದೋ ಗುಪ್ತರೋಗ
ಅತ್ತ ಅತ್ತೆಯಿಂದ ತಪ್ಪುತಿರಲಿಲ್ಲ
ನಿತ್ಯ ಬೈಗುಳಗಳ ಶ್ರವಣಸಂಭೋಗ

ಇದೇ ಚಿಂತೆಯಲೊಂದು ದಿನ
ಸಂತೆಗೆ ಬಂದಿದ್ದಳು, ಹುಡುಕುತಿದ್ದಳು
ಕೊತ್ತಂಬರಿ ಕಂತೆಗಳಿದ್ದ ಗಾಡಿ
ಆಗ ಕಂಡನಲ್ಲಾ ಅವನು, ಅಬ್ಬಾ
ಎಷ್ಟು ದಿನವಾಯ್ತು ಅವನ ನೋಡಿ
ಇವಳ ಕಂಡವನೆ ಓಡಿ ಬಂದನು
ಕೊಂಚ ತೆಳ್ಳಗಾಗಿದ್ದ, ಬಿಟ್ಟಿದ್ದ ದಾಡಿ
ಇಬ್ಬರಿಗು ಮಾತಿದ್ದರು ಆಡಲು ಕೋಟಿ
ತುಟಿ ಬಿಚ್ಚಲಿಲ್ಲ ಮೌನವನು ಮೀಟಿ
ಪಕ್ಕದಲೆ ನೆಡೆದು ಬಂದರು
ಸಂತೆ ಬೀದಿಯನು ದಾಟಿ

ಹೊಸದಾದ ಗಾಂಭಿರ್ಯವನು
ಹಳೆಯ ಒಲುಮೆಯಲಿ ಅದ್ದಿ
ಇದ್ದಕಿದ್ದಂತೆ ಕೇಳಿದನು ‘ಹೇಗಿದ್ದಿ?’
ಅನಿರೀಕ್ಷಿತವಾದ ಪ್ರಶ್ನೆಗೆ
ನಿರೀಕ್ಷಿತ ಉತ್ತರ ‘ಚೆನ್ನಾಗಿದ್ದೇನೆ’
ಎಂದುಲಿದು ಅವಳು ಉಗುಳು ನುಂಗಲು
ಬೇಡವೆಂದರು ತುಂಬಿ ಬಂದವು ಕಂಗಳು
ಬಿಗಿದ ದುಃಖದುರುಳಿಗೆ ಸಿಕ್ಕವಳಂತೆ
ಬಿಕ್ಕಿ ಅತ್ತಳು ಕರುಳು ಕಿತ್ತು ಬರುವಂತೆ

ಎಷ್ಟಾದರು, ಹಳೆಯ ಸಲುಗೆಯ ಗೆಳೆಯ
ತಾಳಲಾಗದೆ ಹೇಳಿದಳೆಲ್ಲ ವಿಷಯ
ಭಾರವಾದ ಇವಳೆದೆ ಬರಿದಾಗುತಿರಲು
ಸಂತಾಪ ತುಂಬಿಕೊಂಡಿತು ಅವನೆದೆಗೆ
ಕಣ್ಣೊರೆಸಿ, ಬೆನ್ನ ನೇವರಿಸುತಿರಲು
ಅವನ ಸ್ಪರ್ಷ ಮೈಯನಾವರಿಸಿ
ಕಣ್ಣರಳಿಸಿ ನೋಡಿದಳು ಅವನೆಡೆಗೆ
ಪರಿಹಾರ ಕಂಡಿತ್ತು ಅವನ ನೋಟದಲ್ಲಿ
ಸಂಜೆ ಸಿಗಲು ಹೇಳಿ ಹೋದಳು ತೋಟದಲ್ಲಿ

ಮನದ ಅಂಜಿಕೆಯನೆಲ್ಲಾ
ಸಂಜೆ ಸೂರ್ಯನಲಿ ಸುಟ್ಟು
ಬಾನಗೆಂಪಲಿ ಅದ್ದಿ ತೆಗೆದಂತಿದ್ದ
ಕೆಂಪು ಸೀರೆಯನು ಉಟ್ಟು
ದೇವರ ಅಭಿಷೇಕದ ಕುಂಟು ನೆಪ ಹೇಳಿ
ಅಭಿಸಾರವ ಸೇರಿದಳು, ಬೀಸಿತ್ತು ತಂಗಾಳಿ

ಚಂದಿರನ ಬೆಳಕಲ್ಲಿ ಕಂಡವನ
ಬಳಿಗೆ ಬಂದಳು ಬಳಸಿ ನಿಂತಳು
ಮನೆಯ ದೈವವನು ಮನದಿ ನೆನೆದಳು
‘ತಪ್ಪೆನ್ನಿಸಿದರೆ ಮನ್ನಿಸದೆ ನರಕ ಸೇರಿಸು
ಇಲ್ಲವಾದರೆ ಒಪ್ಪಿ ಈ ಹರಕೆ ತೀರಿಸು’
ಎಂದು ಅಪ್ಪಿದಳು ಎದುರು ನಿಂತವನನು

ಉರಿವ ಪಂಜಿನಂತಿದ್ದ ಅವನು
ಕೊರೆವ ಮಂಜಿನಂತಿದ್ದ ಇವಳು
ಇಬ್ಬರೂ ಒಂದಾಗಿ ಬೆರೆತಾಗ
ಬಂಜೆಯೆಂದವರ ಬಾಯಿಗೆ ಬಿದ್ದಿತ್ತು ಬೀಗ
ಹರಕೆ ಹೂತ್ತ ದೇವರುಗಳೆಲ್ಲಾ
ಮೇಲೆ ನಿಂತು ಹರಸಿದಂತಿತ್ತು
ನೆಡೆದಿರಲು ಪುತ್ರಕಾಮೇಷ್ಟಿಯಾಗ..!

*ತಿಳಿದು ಮಾಡಿದ ತಪ್ಪಿದೆ. ಶೀರ್ಷಿಕೆಯಲ್ಲೂ, ಕವಿತೆಯಲ್ಲೂ.

- ನಾ ತ್ರಿವಿಕ್ರಮ

Wednesday, March 08, 2017

ಆಕೆ ಮತ್ತು ಈಕೆ



ಜನುಮ ಕೊಟ್ಟಳು ಜನನಿ ಆಕೆ
ಒಂಭತ್ತು ತಿಂಗಳು ಜಠರದಲ್ಲಿಟ್ಟು
ರಮಿಸುತಲಿಹಳು ರಮಣಿ ಈಕೆ
ಒಂಭತ್ತು ವರುಷ ಒಲವ ಕೊಟ್ಟು

ದಿನ ರಾತ್ರಿ ಮಲಗಿಸುತ್ತಿದ್ದಳು ಆಕೆ
ಬರುವುದೆಂದು ಹೆದರಿಸಿ ಗುಮ್ಮ
ಕನಸಾಗಿ ಬಂದು ಕಾಡಿದಳು ಈಕೆ
ನಾನಾದೆ ನಿದ್ರೆಗೆಟ್ಟ ಮಂಕುತಿಮ್ಮ

ಕೈಹಿಡಿದು ಹೆಸರ ಬರೆಸಿದಳು ಆಕೆ
ಅವಳೇ ಮೊದಲ ಗುರುವು, ರೈಟು
ಎನ್ಹೆಸರಿಗೆ ತನ್ಹೆಸರ ಸೇರಿಸಿಹಳು ಈಕೆ
ಇವಳ ಹೆಸರೇ ಎನ್ನ ಹಾರ್ಟು ಬೀಟು

ಎಣ್ಣೆ ಹಚ್ಚಿ ತಲೆ ಬಾಚಿದವಳು ಆಕೆ
ಎನ್ನ ಬಾಲ್ಯಕ್ಕೆ ನೆರಳಾದ ಮರ
ಮೀಸೆ ಚುಚ್ಚಿ ತುಸು ನಾಚಿದವಳು ಈಕೆ
ಹರೆಯಕ್ಕೆ ದೇವರು ಕೊಟ್ಟ ವರ

ಅಮ್ಮನೆಂದಾಗ ಮಿಡಿವ ‘ವೀಣೆ’ ಆಕೆ
ಮಮತೆ ಮೈತುಂಬಿಕೊಂಡ ಮದರ್ರು
ಸುಮ್ಮನಿದ್ದರೂ ನುಡಿವ ‘ವಾಣಿ’ ಈಕೆ
ಇಬ್ರೂ ಮೇಡ್ ಫಾರ್ ಈಚ್ ಅದರ್ರು

ಈಕೆ ಆಕೆಗೆ ಸೊಸೆಯಾದಾಗ, ಅತ್ತೆ ಈಕೆಗೆ ಆಕೆ
ಸಧ್ಯಕ್ಕಿಬ್ಬರಿಗೂ ಕಾಡುತ್ತಿರುವುದು ಒಂದೆ ಚಿಂತೆ
ನಾ ದಪ್ಪಗಾಗ್ತಿಲ್ಲವಲ್ಲ ಯಾಕೆ? ಯಾಕೆ? ಯಾಕೆ?

- ತ್ರಿವಿಕ್ರಮ

Friday, January 27, 2017

ಹಾಳು ಮಾಡಲಿಲ್ಲ, ಹಾಡು ಮಾಡಿದೆ


 
ಈಡೇರಿಸುವೆ ನಿನ್ನ ಹಾಡಾಗುವ ಬಯಕೆ
ನೋಡಿಲ್ಲಿ ಚೆಲುವೆ ನನ್ನತ್ತ
ಬ್ರಹ್ಮನೇ ಎರಡು ಪೆಗ್ಗೊಡೆದಾಗ
ಪೆನ್ನಿಡಿದು ಬರೆದ ಹಾಡು ನೀನು,
ನಾನಿಲ್ಲಿ ಕೇವಲ ನಿಮಿತ್ತ

ಮುಂಗುರುಳೇ ಸಂಗೀತ ಬೈತಲೆಯು ಶೀರ್ಷಿಕೆ
ಮುಂಗುರುಳೇ ಸಂಗೀತ ಬೈತಲೆಯು ಶೀರ್ಷಿಕೆ
ಶುರುವಿನಲೆ ಕೈ ನಡುಗುತಿದೆಯಲ್ಲಾ ತ್ರಿಲೋಕ
ಸ್ಟಡಿ.. ಸ್ಟಡಿ.. ಸ್ಟಡಿ.. ಹಾಂ ಈಗ ಓಕೆ..!

ನೀ ರೆಪ್ಪೆ ತೆರೆದಾಗ ಮೂಡಿತು ಮೊದಲ ಸಾಲು
ಆ ಸಾಲನ್ನೆ ತಿದ್ದುತ್ತಾ ತೀಡುತ್ತಾ
ಬಿದ್ದಿರುತ್ತಿದ್ದೆನೇನೋ ಪೂರ್ತಿ ಬಾಳು
ಎಚ್ಚರವಾಗೋಯ್ತು ನೀ ಕಣ್ಣ ಮಿಟುಕಿಸಲು
ಕುಡಿನೋಟದ ಪನ್ನೀರನು ಚುಮುಕಿಸಲು

ಮಾಡಹೋಗದೇ ವೃತಾ ಕಾಲಹರಣ
ಬರೆದು ಕೆಡವಿದೆ ನೋಡು
ಕಂಗಳ ಪಲ್ಲವಿಗೆ ಚಂದುಟಿಯು ಚರಣ
ಕುಡಿಹುಬ್ಬುಗಳಾದವು ಒಂದಕ್ಕೊಂಡು ಪ್ರಾಸ
ಕೆಂಪು ಕೆನ್ನೆಗಳಲ್ಲಿರಲಿಲ್ಲ ವ್ಯಾಕರಣ ದೋಷ

ಇಲ್ಲಿಗೆಲ್ಲವೂ ಮುಗಿಯಿತು ನನ್ನ ಪ್ರಕಾರ
ಉ’ಗುರು’ ಕಚ್ಚುತ್ತಾ ‘ಲಘು’ವಾಗಿ ನೀ ನಗುವಾಗ
ಬೇಕೇತಕೆ ಹೇಳು ಬೇರೆ ಅಲಂಕಾರ?
ಇನ್ನು ಕೆಳಗೆ ಹೋಗಲಾರೆ ಸಾಕು
ಕೊಡುವೆ ಒಂದು ಮಾಸ್ಟರ್ ಸ್ಟ್ರೋಕು

ಮುದ್ದು ಮೂಗು ಕೊನೆಯ ಸಾಲು, ತುದಿಯು ಸ್ಡಲ್ಪ ಚೂಪು
ಇಟ್ಟರೆ ಮುಗಿದುಹೋಯ್ತು ಮೂಗುತಿಯ ಫುಲ್ ಸ್ಟಾಪು..! 

- ತ್ರಿವಿಕ್ರಮ