Showing posts with label Thriller. Show all posts
Showing posts with label Thriller. Show all posts

Friday, November 02, 2018

ಡೈರೀಸ್ ಆಫ್ ದಾಳಿ ಪಾಪಣ್ಣ - 4


ಅಧ್ಯಾಯ – 4 – ಮತ್ತೆ ಪರಾರಿಯಾದ ಪಾಪಣ್ಣ



ಹಿಂದಿನ ಭಾಗದಲ್ಲಿ : ಪಾಪಣ್ಣನಿಗೆ ಬಸುರಿಯಾಗಿದ್ದ ಮಣಿಕರ್ಣಿಕಾಳನ್ನು ಕಾಣುವ ಬಯಕೆ ಹೆಚ್ಚಾಗಿ, ಹೆರಿಗೆಯ ಸಮಯದಲ್ಲಿ ಅವಳ ಜೊತೆಯಲ್ಲಿರಬೇಕೆಂಬ ಆಸೆಯಿಂದ, ಅದೊಂದು ರಾತ್ರಿ ಜೈಲಿನ ಗೋಡೆ ಹಾರಿ ಪಲಾಯನ ಮಾಡುತ್ತಾನೆ.

          ಗಂಟೆ ಸುಮಾರು ಮೂರು ಮುಕ್ಕಾಲಾಗಿತ್ತು. ದುರ್ಗದ ರಸ್ತೆಗಳು ನಿರ್ಜನವಾಗಿದ್ದವು. ಪಾಪಣ್ಣ ಕೋಟೆ ಬೀದಿಯನ್ನು ಸುತ್ತಿ ಬಂದು ಗೋಪಾಲ ಸ್ವಾಮಿ ಹೊಂಡದಲ್ಲಿಳಿದು ತಣ್ಣಗೆ ಕೊರೆಯುತ್ತಿದ್ದ ನೀರಿನ್ನು ಮುಖಕ್ಕೆರಚಿಕೊಂಡ. ಕೈಗೆ ಜೈಲು ಗೋಡೆಯ ತಂತಿಗಳು ಚುಚ್ಚಿದ್ದ ಗಾಯ ಚುರ್ರೆಂದಿತು. ಚಳಿ ತಾಳಲಾರದೆ ದೇವಸ್ಥಾನದ ಪಡಸಾಲೆಯಲ್ಲಿ ಹುಡುಕಿದಾಗ ಯಾವುದೋ ಹರಿದ ಕಂಬಳಿ ಸಿಕ್ಕಿತು. ಹೊದ್ದುಕೊಂಡು ಮತ್ತೆ ಹೊಂಡದ ಬದಿಯಲ್ಲಿ ಬಂದು ಕುಳಿತ. ಹಿಂದಿದ್ದ ಕೋಟೆಯ ಕಲ್ಲಿನ ನೆರಳುಗಳು ಅವನನ್ನು ಸುರಕ್ಷಿತವಾಗಿ ಬಚ್ಚಿಟ್ಟುಕೊಂಡಂತೆ ಅನ್ನಿಸಿತು. ಜೈಲಿನಲ್ಲೀಗ ಏನಾಗುತ್ತಿರಬಹುದು? ಇಷ್ಟು ಹೊತ್ತಿಗಾಗಲೇ ತಾನು ತಪ್ಪಿಸಿಕೊಂಡ ಸುದ್ದಿ ಗೊತ್ತಾಗಿರಬಹುದೇ? ನೈಟು ಡ್ಯೂಟಿಯಲ್ಲಿದ್ದ ಜಿತೇಂದ್ರ ಮತ್ತೆ ತನ್ನ ಕೋಣೆಯ ಬಳಿಗೆ ಹೋಗಿರಬಹುದೇ? ಗೊತ್ತಾದ ಕೂಡಲೇ ಮೊದಲು ಏನು ಮಾಡಿರಬಹುದು? ಜೈಲರ್ ಬಳಿ ಹೋಗಿರಬಹುದು. ಶಿವಶಂಕರ ಅರ್ಧ ನಿದ್ದೆಯಲ್ಲಿಯೇ ಎದ್ದು ಜೀತೇಂದ್ರನಿಗೆ ಉಗಿದು ಉಪ್ಪು ಹಾಕುತ್ತಾ ಜೈಲಿಗೆ ಓಡಿ ಬಂದಿರಬಹುದು. ಗಂಟಲು ಕೆಟ್ಟ ಆ ಹಳೇ ಸೈರನ್ನುಗಳನ್ನು ಕೂಗಿಸಲು ಆರ್ಡರ್ ಮಾಡಿರಬಹುದು. ಬೆಚ್ಚಿ ಬಿದ್ದವನಂತೆ ಎದ್ದು ನಿಂತು ಜೈಲಿನ ಕಡೆಗೆ ನೋಡಿದ. ಜಾವದ ನಿಶ್ಯಬ್ದದ ಹೊರತಾಗಿ ಬೇರ್ಯಾವ ಸದ್ದೂ ಕೇಳಿಸಲಿಲ್ಲ.

ಬೆಳಕು ಹರಿಯಲು ಸ್ವಲ್ಪ ಸಮಯ ಬಾಕಿ ಇತ್ತು. ಪಾಪಣ್ಣನಿಗೆ ಮಣಿಕರ್ಣಿಕಾಳ ನೆನಪಾಯಿತು. ಹೇಗಿದ್ದಾಳೋ ಏನೋ, ಗಿರಿಜಾಳ ಬಸುರಿನಲ್ಲಿ ಅವಳನ್ನು ತಂಗಿಯಂತೆ ನೋಡಿಕೊಂಡಿದ್ದವಳು. ಈಗ ಅವಳ ಆರೈಕೆಗೆ ಯಾರಿದ್ದಾರೋ, ಆದಷ್ಟು ಬೇಗ ಅವಳನ್ನು ನೋಡಬೇಕು ಎಂದುಕೊಂಡ. ಆದರೆ ಅವಳ ಮನೆ ದುರ್ಗದ ಯಾವ ಭಾಗದಲ್ಲಿ ಇರಬಹುದೆಂಬ ಕಿಂಚಿತ್ ಸುಳಿಹು ಅವನಿಗಿರಲಿಲ್ಲ. ಅವಳನ್ನು ಹುಡುಕುತ್ತಾ ಊರೆಲ್ಲಾ ಅಲೆಯುವುದೂ ಸಾಧ್ಯವಿರಲಿಲ್ಲ. ಪೋಲಿಸರು ಯಾವ ಕ್ಷಣದಲ್ಲಾದರೂ ಹುಡುಕಾಟ ಶುರು ಮಾಡಬಹುದಿತ್ತು. ತಾನು ಅವರ ಕೈಗೆ ಸಿಗದಂತೆ ಮಣಿಯನ್ನು ಪತ್ತೆ ಹಚ್ಚುವುದು ಅಸಾಧ್ಯವಾಗಿತ್ತು. ಯೋಚಿಸುತ್ತಾ ಕುಳಿತ ಪಾಪಣ್ಣನಿಗೆ ಉಪಾಯವೊಂದು ಹೊಳೆಯತು. ಇಡೀ ಚಿತ್ರದುರ್ಗಕ್ಕೆ ಇದ್ದದ್ದೊಂದು ಸರ್ಕಾರಿ ಆರೋಗ್ಯ ಕೇಂದ್ರ. ದುರ್ಗದಲ್ಲೇ ಇದ್ದಳಾದರೆ ಬಸುರಿಯಾಗಿದ್ದ ಮಣಿಕರ್ಣಿಕಾ ಅಲ್ಲಿಗೆ ಔಷಧಿಗಾಗಿ ಬರಲೇಬೇಕಿತ್ತು. ತಾನಲ್ಲಿಗೆ ರೋಗಿಯಾಗಿ ಹೋಗಿ ಹಾಸಿಗೆ ಹಿಡಿದು ಮಲಗಿದರೆ ಮಣಿ ತನಗೆ ಸಿಕ್ಕೇ ಸಿಗುತ್ತಾಳೆ ಎಂದುಕೊಂಡು ಬೆಳಕು ಹರಿಯುವ ತನಕ ಕಾದು ದೇವರಿಗೆ ಕೈಮುಗಿದು, ಆಸ್ಪತ್ರೆಯ ಕಡೆಗೆ ಹೊರಟ.

ಜೈಲಿನಲ್ಲಿದ್ದಾಗಲೇ ಬಡಕಲಾಗಿ ರೋಗಿಯಂತಾಗಿದ್ದ ಪಾಪಣ್ಣನಿಗೆ ಆಸ್ಪತ್ರೆಯಲ್ಲಿ ದಾಖಲಾಗುವುದೇನು ಹೆಚ್ಚು ಕಷ್ಟವಾಗಲಿಲ್ಲ. ಬಹಳ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದೇನೆಂದ್ದು ಡಾಕ್ಟರ ಮುಂದೆ ಬಿದ್ದು ಒದ್ದಾಡಿದಾಗ ಔಷಧಿ ಕೊಟ್ಟು ಎರಡು ದಿನದ ಮಟ್ಟಿಗೆ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಯಿತು. ಎರಡು ದಿನ ನಾಲ್ಕು ದಿನವಾಗಿ ವಾರವೇ ಕಳೆಯಿತು. ಸರ್ಕಾರಿ ಆಸ್ಪತ್ರೆಯಾದ್ದರಿಂದ ಯಾರೂ ಅಷ್ಟಾಗಿ ಪಾಪಣ್ಣನ ಬಗ್ಗೆ ಅಷ್ಟು ಚಿಂತೆ ಮಾಡಿದಂತೆ ಕಾಣಲಿಲ್ಲ. ಆದರೆ ಪಾಪಣ್ಣನಿಗೆ ಮಣಿಕರ್ಣಿಕಾಳದ್ದೇ ಚಿಂತೆಯಾಗಿತ್ತು, ಅವಳೇನಾದರೂ ತನ್ನ ಸಂಬಂಧಿಕರ ಊರಿಗೆ ಹೋಗಿದ್ದರೆ? ಏಕೋ ಆಸ್ಪತ್ರೆಯಲ್ಲಿ ಕಾಯುವುದು ವ್ಯರ್ಥವೆನ್ನಿಸಿತು. ಅದಲ್ಲದೇ ಆಸ್ಪತ್ರೆ ಅಷ್ಟು ಸುರಕ್ಷಿತವೂ ಆಗಿರಲಿಲ್ಲ. ಆದಷ್ಟು ಬೇಗ ಬೇರೇನಾದರೂ ಮಾಡಬೇಕೆಂದು ಯೋಚಿಸತೊಡಗಿದ.

ಮರುದಿನ ಸಂಜೆ ಆಸ್ಪತ್ರೆಯ ದಾದಿಯರು ಮನೆಗೆ ಹೊರಡುವ ಸಮಯ. ಪಾಪಣ್ಣ ಡಾಕ್ಟರು ಕೊಟ್ಟು ಹೋದ ಗುಳಿಗೆಯನ್ನು ಕಿಟಕಿಯಿಂದ ಆಚೆಗೆ ಎಸೆದು ಇತ್ತ ತಿರುಗಬೇಕು. ಎದುರಿನಿಂದ ಸಾಕ್ಷಾತ್ ಮಣಿಕರ್ಣಿಕಾಳೇ ನೆಡೆದು ಬರುತ್ತಿದ್ದಳು. ಪಾಪಣ್ಣನಿಗೆ ಕಣ್ಣಿಂದಲೇ ನಂಬಲಾಗಲಿಲ್ಲ. ತನ್ನ ರೋಗವೆಲ್ಲಾ ವಾಸಿಯಾದವನಂತೆ ಮೈಕೊಡವಿ ಮೇಲೆದ್ದು ಬಾಗಿಲ ಬಳಿಗೆ ಓಡಿದ. ಮಣಿಕರ್ಣಿಕಾ ಒಳಗೆ ಬಂದಳು. ತುಸು ದಪ್ಪವೆನ್ನಿಸಿದರೂ, ಮೈ ಕೈ ತುಂಬಿಕೊಂಡು ಲಕಲಕ ಹೊಳೆಯುತ್ತಿದ್ದಳು. ಅವಳನ್ನು ಕಂಡ ಪಾಪಣ್ಣನಿಗೆ ಸ್ವರ್ಗವೇ ಕಂಡಂತಾಗಿ ಮೈಮರೆತು ನಿಂತ. ಮಣಿಕರ್ಣಿಕಾ ಒಳಗೆ ಬಂದು ಡಾಕ್ಟರ ಬಳಿ ಮಾತನಾಡಿ ಔಷಧಿ ತೆಗೆದುಕೊಂಡವಳು ದಾದಿಯರೊಡನೆ ಸ್ವಲ್ಪ ಹೊತ್ತು ಹರಟೆ ಹೊಡೆದು ನಂತರ ಹೊರಗೆ ಹೊರಟಳು. ಅವಳು ಬಾಗಿಲಿನಿಂದ ಹೊರಗೆ ಹೋದ ಮೇಲೆ ಹತ್ತು ಎಣಿಸಿ ತಾನೂ ಹೊರಬಿದ್ದು ಅವಳನ್ನು ಹಿಂಬಾಲಿಸತೊಡಗಿದ.

ಆದರೆ ಖಾಕಿ ಬಟ್ಟೆಯಲ್ಲಿದ್ದ ಪೇದೆಗಳಿಬ್ಬರು ಆತನ ಹಿಂದೆ ಇದ್ದದ್ದು ಅವನಿಗೆ ತಿಳಿಯಲೇ ಇಲ್ಲ.

***

ಪಾಪಣ್ಣ ಜೈಲಿನಿಂದ ತಪ್ಪಿಸಿಕೊಂಡ ಸುದ್ದಿಯನ್ನು ಕೇಳಿ ಶಿವಶಂಕರನಿಗೆ ತಲೆ ಕೆಟ್ಟು ಹೋಯಿತು, ಆ ಸುದ್ದಿ ಹೊರಗೆ ತಲುಪದಂತೆ ಪಾಪಣ್ಣನನ್ನು ಹುಡುಕಲು ಏರ್ಪಾಡು ಮಾಡಿದ್ದ. ಇದ್ಯಾವುದು ಅರಿಯದ ಮಣಿಕರ್ಣಿಕಾ ಮುಂದಿನ ಭಾನುವಾರ ಬಿರಿಯಾನಿ ಮಾಡಿ ಸರ್ವೇಶನ ಕೈಲಿ ಜೈಲಿಗೆ ಕೊಟ್ಟು ಕಳುಹಿಸಿದ್ದಳು. ಶಿವಶಂಕರ ಪಾಪಣ್ಣನನ್ನು ಭೇಟಿ ಮಾಡಲು ಸಾಧ್ಯವಿಲ್ಲವೆಂದು ಸಬೂಬು ಹೇಳಿ ಬಿರಿಯಾನಿಯನ್ನು ತಾನೇ ತಿಂದು ಸರ್ವೇಶನಿಗೆ ಡಬ್ಬಿ ವಾಪಸ್ಸು ಕೊಟ್ಟು ಆತನ ಹಿಂದೆ ಪೇದೆಗಳನ್ನು ಬಿಟ್ಟಿದ್ದ. ಅವನನ್ನು ಹಿಂಬಾಲಿಸಿದ ಪೇದೆಗಳು ಪಾಪಣ್ಣನಿಗೆ ಬಿರಿಯಾನಿ ಕಳಿಸಿದ್ದು ಮಣಿಕರ್ಣಿಕಾ ಎಂದು ತಿಳಿದಾಗ ಕೆಂಡಮಂಡಲನಾಗಿದ್ದ. ನಿಧಾನವಾಗಿ ಅವನಿಗೆ ಎಲ್ಲವೂ ಅರ್ಥವಾಯಿತು. ಮಣಿಯ ಬಸುರಿಗೆ ಪಾಪಣ್ಣನೇ ಕಾರಣವಾದರೆ ಆತ ಅವಳನ್ನು ಕಾಣಲು ಬಂದೇ ಬರುವನೆಂದು ಊಹಿಸಿ ಮಣಿಯ ಮನೆಯ ಬಳಿ ಪೇದೆಗಳನ್ನು ಬಿಟ್ಟಿದ್ದ. ಅವಳೆಲ್ಲಿಗೆ ಹೋದರೂ ಬಾಲದಂತೆ ಹಿಂಬಾಲಿಸುತ್ತಿದ್ದ ಪೇದೆಗಳಿಗೆ ಆಸ್ಪತ್ರೆಯ ಬಳಿ ಮಣಿಯ ಹಿಂಬಾಲಿಸಿದ ಪಾಪಣ್ಣನನ್ನು ಕಂಡು ಲಾಟರಿ ಹೊಡೆದಂತಾಗಿ ಲಾಟಿ ತಿರುಗಿಸುತ್ತಾ ಖುಷಿಯಿಂದ ಅವನನ್ನು ಹಿಂಬಾಲಿಸಿದ್ದರು.

***
ಮಣಿಕರ್ಣಿಕಾ ರಸ್ತೆ ಬದಿಯಲ್ಲಿ ನೆಡೆಯುತ್ತಿದ್ದವಳು, ಇದ್ದಕ್ಕಿದ್ದಂತೆ ನಿಂತು ಏನೋ ನೆನಪಾದವಳಂತೆ ಹಿಂದಕ್ಕೆ ತಿರುಗಿ ಬಂದು ರಸ್ತೆ ಬದಿಯಲ್ಲಿ ಮಾರುತ್ತಿದ್ದ ಮಾವಿನಕಾಯಿ ವ್ಯಾಪಾರ ಮಾಡತೊಡಗಿದಳು. ಪಾಪಣ್ಣ ಅವಳಿಗೆ ಕಾಣದಂತೆ ಮರೆಯಾಗಿ ನಿಂತ. ಹಿಂದೆ ಇದ್ದ ಪೇದೆ ಸತೀಶ ಇದೇ ಸರಿಯಾದ ಸಮಯವೆಂದು ಹಿಡಿಯಲು ಮುನ್ನುಗ್ಗಿದ.

ಆದರೆ ಅವನನ್ನು ತಡೆದ ಮತ್ತೊಬ್ಬ ಪೇದೆ ಚೆನ್ನಪ್ಪ ‘ನಾವಿಬ್ರೇ ಅವನನ್ನ ಹಿಡಿಯೋದ್ ಸರಿಯಾಗಲ್ಲ. ಓಡೋದ್ರೆ ಕಷ್ಟ’ ಹೆಂಗೂ ಅವನು ಆಯಮ್ಮನ ಮನೆಗೆ ಹೋಗ್ತಾವ್ನೇ. ನಾನು ಹಿಂದೆ ಹೋಗ್ತೀನಿ’ ನೀನು ಹೋಗಿ ಸಾಹೇಬ್ರನ್ನ, ನಾಲ್ಕೈದು ಜನನ್ನ ಕರ್ಕಂಡ್ ಬಾ’ ಎಂದ.

‘ಏ ಒಬ್ಬನ್ ಹಿಡ್ಯಕ್ಕೆ, ನಾಲ್ಕೈದು ಜನಾನಾ?, ಬಾರಯ್ಯ ನಾನಿದಿನಿ’ ಎಂದು ಮುಂದೆ ಹೆಜ್ಜೆ ಇಟ್ಟ ಸತೀಶ.

‘ಹೇಳ್ದಷ್ಟ್ ಮಾಡಲೇ, ಅವನತ್ರ ಏನಾದ್ರೂ ಕತ್ತಿಗಿತ್ತಿ ಇದ್ದು, ಹೊಟ್ಟೆಗೆ ಹೆಟ್ಬುಟ್ರೆ ಏನ್ ಮಾಡ್ತಿಯಾ?’ ಎಂದು ಚೆನ್ನಪ್ಪ.
ಸತೀಶ ಏನೋ ಯೋಚಿಸಿ ‘ನೀನೇ ಹೋಗು, ನಾನೇ ಫಾಳೋ ಮಾಡ್ತಿನಿ’ ಎಂದ.

‘ನಾನ್ ಸೀನಿಯರ್ರು. ನಾ ಹೇಳಿದ್ ನೀನ್ ಮಾಡಬೇಕು, ಹೋಗ್ತಾ ಇರು’ ಎಂದು ದರ್ಪದಿಂದ ಗದರಿದ.
ಸತೀಶ ಚೆನ್ನಪ್ಪನನ್ನು ಬೈದುಕೊಳ್ಳತ್ತಾ ಜೈಲಿನ ಕಡೆಗೆ ಹೊರಟ. ಮಣಿಕರ್ಣಿಕಾ ಮಾವಿನ ಕಾಯಿ ಕೊಂಡು ಮನೆ ಕಡೆಗೆ ನೆಡೆಯತೊಡಗಿದಳು. ಮುಂದೆ ಮಣಿ, ಅವಳ ಹಿಂದೆ ಪಾಪಣ್ಣ, ಆತನ ಹಿಂದೆ ಪೇದೆ ಚೆನ್ನಪ್ಪ.

ಕತ್ತಲು ನಿಧಾನವಾಗಿ ಆವರಿಸುತ್ತಿತ್ತು. ಮನೆ ತಲುಪಿದ ಮಣಿಕರ್ಣಿಕಾ ಹಣೆಯ ಮೇಲಿನ ಬೆವರು ಒರೆಸುತ್ತಾ ಬಾಗಿಲು ತಟ್ಟಿದಳು. ಬಾಗಿಲು ತೆಗೆದ ಸರ್ವೇಶ ಅವಳ ಕೈಲಿದ್ದ ಬ್ಯಾಗು ತೆಗೆದುಕೊಂಡು ಒಳಗೆ ಹೋದ. ಮಣಿ ಒಳಗೆ ಹೋಗಿ ಇನ್ನೇನು ಬಾಗಿಲು ಹಾಕಬೇಕು, ಪಾಪಣ್ಣ ಹಿಂದಿನಿಂದ ಸೀದಾ ಒಳಗೆ ನುಗ್ಗಿ ಬಾಗಿಲು ಮುಚ್ಚಿದ. ಮಣಿ ಕಿಟಾರನೇ ಕಿರುಚಿದಳು. ಸರ್ವೇಶ ‘ಏಏಏನಾಯ್ತಕ್ಕೋ..’ ಎಂದು ಕೂಗುತ್ತಾ ಬ್ಯಾಗು ಕೈಯಲ್ಲಿ ಹಿಡಿದೇ ಹೊರಗೆ ಓಡಿಬಂದ. ಪಾಪಣ್ಣ ಅವಳ ಬಾಯಿಯನ್ನು ಮುಚ್ಚಿಹಿಡಿದು ಹೊದ್ದುಕೊಂಡಿದ್ದ ಕಂಬಳಿಯನ್ನು ಕೆಳಗೆ ಬಿಟ್ಟ. ಇಬ್ಬರಿಗೂ ಪಾಪಣ್ಣನನ್ನು ಕಂಡು ದಿಗ್ಭ್ರಮೆಯಾಯಿತು. ಮಣಿಯಂತೂ ಮಾತೇ ಹೊರಡದೇ ಅವನನ್ನು ತಬ್ಬಿ ಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಪಾಪಣ್ಣ ನಿಧಾನವಾಗಿ ಅವಳ ಬೆನ್ನು ಸವರುತ್ತಾ ಸಮಾಧಾನ ಮಾಡಿದ. ಹಿಂದೆ ನಿಂತಿದ್ದ ಸರ್ವೇಶನನ್ನು ಕಂಡು ಮುಗುಳ್ನಕ್ಕ.

ಮಣಿ ಸುಧಾರಿಸಿಕೊಂಡು ಕಣ್ಣೀರು ಒರೆಸಿಕೊಳ್ಳುತ್ತಾ ಹಿಂದಕ್ಕೆ ಬಂದು ಪಾಪಣ್ಣನನ್ನು ಕಣ್ತುಂಬಾ ನೋಡಿದಳು. ಕೊನೆಯ ಬಾರಿ ಜೈಲಿನಲ್ಲಿ ಎಲ್ಲಾ ಕಳೆದುಕೊಂಡಂತಿದ್ದ ಪಾಪಣ್ಣ ಈಗ ಸಾಕಷ್ಟು ಬದಲಾಗಿದ್ದ, ಗಡ್ಡ ಮೀಸೆಗಳು ಹಾಗೆಯೇ ಇದ್ದರೂ ಕಣ್ಣುಗಳಲ್ಲಿ ಮಣಿಕರ್ಣಿಕಾಳನ್ನು ಕಂಡು ಹೊಸದೊಂದು ಸಂತಸವಿತ್ತು. ಮಣಿಯ ಕಣ್ಣುಗಳಲ್ಲೂ ಪಾಪಣ್ಣನನ್ನು ಕಂಡು ಅದೇ ಸಂತಸ ಪ್ರತಿಫಲಿಸುತ್ತಿತ್ತು. ಆ ಸಂತೋಷದ ನಡುವೆಯೂ ಅವಳ ಮನದಲ್ಲಿ ನೂರಾರು ಪ್ರಶ್ನೆಗಳು ಬಂದವು,

ಆದರೆ ಮೊದಲು ನಾಲಿಗೆಯಿಂದ ಹೊರಬಿದ್ದಿದ್ದು ‘ಹೇಗೆ ಬಂದಿರಿ?’

ಪಾಪಣ್ಣ ಅವಳ ಭುಜವನ್ನು ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ‘ನಿಮ್ಮುನ್ ನೋಡ್ಬೇಕ್ ಅನ್ನುಸ್ತು, ಸೀದಾ ಬೇಲಿ ಹಾರ್ಕಂಡ್ ಬಂದ್ಬುಟೆ’ ಎಂದ.

ಮಣಿ ನಾಚುತ್ತಾ ತಲೆತಗ್ಗಿಸಿದಳು. ಭುಜದ ಮೇಲಿದ್ದ ಪಾಪಣ್ಣನ ಕೈಯನ್ನು ತೆಗೆದು ತುಂಬಿದ್ದ ಹೊಟ್ಟೆಯ ಮೇಲೆ ಇರಿಸಿಕೊಂಡಳು. ಏಕೋ ಗೊತ್ತಿಲ್ಲ, ಪಾಪಣ್ಣನಿಗೆ ಅದನ್ನು ಮುಟ್ಟಿದ ಕೂಡಲೇ ಮೊದಲ ಹೆಂಡತಿ ಗಿರಿಜಾಳ ನೆನಪಾಯಿತು. ಅವಳ ಹೊಟ್ಟೆಯನ್ನು ಹೀಗೆ ಜೈಲಿನ ಸರಳುಗಳ ನಡುವಿನಿಂದ ಸವರಿದ್ದು, ಆಮೇಲೆ ಮಗು ಜನಿಸಿದಾಗ ಖುಷಿಪಟ್ಟಿದ್ದು, ಮತ್ತೆ ಅದು ಸತ್ತಾಗ ಕಣ್ಣೀರಿಟ್ಟಿದ್ದು ಎಲ್ಲವೂ ಒಮ್ಮೆ ಕಣ್ಮುಂದೆ ಬಂದು ಹೋಯಿತು. ಅವಳ ಮುಂದೆ ಕುಸಿದು ಕುಳಿತು ‘ನಿಮ್ಗೆ ಹೆರಿಗೆ ಆಗೋಗಂಟ ನಿಮ್ ಜೊತೆಗೆ ಇರ್ತಿನಿ ಮೇಡಮ್ಮೋರೆ, ಎಲ್ಗೂ ಹೋಗಕಿಲ್ಲಾ, ಎಂದು ಅವಳ ಒಡಲನ್ನು ತಬ್ಬಿಕೊಂಡು ಕಣ್ಣಿರಿಟ್ಟ.

ಆಗಲೇ ಬಾಗಿಲು ತಟ್ಟಿದ ಸದ್ದಾಯಿತು. ಪಾಪಣ್ಣ ಬೆಚ್ಚಿಬಿದ್ದ.

ಹಿಂದೆಯೆ ಚೆನ್ನಪ್ಪನ ಧ್ವನಿ ಬಂದಿತು ‘ಪಾಪಣ್ಣ ಒಳಗಿದ್ಯಾ ಅಂತ ಗೊತ್ತು, ಬಾಗ್ಲು ತಗಿ’

ಶಿವಶಂಕರ, ಮತ್ತು ಇನ್ನಷ್ಟು ಜನ ಪೋಲಿಸರನ್ನು ಕರೆದುಕೊಂಡು ಬರಲು ಹೊರಟ ಸತೀಶನಿಗೆ ಚೆನ್ನಪ್ಪ ತಾನೊಬ್ಬನೇ ಪಾಪಣ್ಣನನ್ನು ಹಿಡಿದು ಸಾಹೇಬರಿಂದ ಶಹಬಾಸಗಿರಿ ತೆಗೆದುಕೊಳ್ಳುವ ಪ್ಲಾನು ಮಾಡಿದ್ದಾನೆಂಬ ಆಲೋಚನೆ ಬಂದಿತು. ‘ಛೇ, ತಾನು ಮೂರ್ಖನಂತೆ ಅವನೊಬ್ಬನನ್ನೇ ಬಿಟ್ಟು ಬರಬಾರದಿತ್ತು’ ಎಂದುಕೊಂಡು ಅರ್ಧ ದಾರಿಯಲ್ಲೇ ವಾಪಸ್ಸು ಬಂದಿದ್ದ. ಚೆನ್ನಪ್ಪನಿಗೆ ಅವನ ಈ ಉದ್ಧಟತನವನ್ನು ಕಂಡು ಮೈಯೆಲ್ಲಾ ಉರಿದರೂ ಹೆಚ್ಚು ಸಮಯವಿಲ್ಲದೇ ಇದ್ದಿದ್ದರಿಂದ, ಕೂಡಲೇ ಏನಾದರೂ ಮಾಡಬೇಕೆಂದು ಮನೆಯ ಬಾಗಿಲು ತಟ್ಟಿದ್ದ.

‘ಮಣಿಯಮ್ಮ ಬಾಗ್ಲು ತೆಗೆದುಬಿಡು, ಆಟ ಆಡ್ಬೇಡ’ ಮತ್ತೆ ಕೂಗುತ್ತಾ ಬಾಗಿಲು ಬಡಿದ ಚೆನ್ನಪ್ಪ.

ಪಾಪಣ್ಣನ ಮೈಯಲ್ಲ ಬೆವತು ಹೋಯಿತು. ಕೂಡಲೇ ಮೇಲೆದ್ದು ಅತ್ತಿತ್ತ ನೋಡುತ್ತಾ ಮೆಲ್ಲಗೆ ಕೇಳಿದ, ‘ಬಚ್ಚಿಟ್ಕಳಕ್ ಎಲ್ಲಾದ್ರೂ ಜಾಗ ಐತಾ?’

ಮಣಿಕರ್ಣಿಕಾಳಿಗೆ ನಿಂತಲ್ಲೇ ತರತರ ನಡುಗುತ್ತಿದ್ದಳು. ‘ನೀವು ಸರೆಂಡರ್ ಆಗೋದು ಒಳ್ಳೆದು’ ಎಂದು ನಡುಗುವ ದನಿಯಲ್ಲಿ ಹೇಳಿದಳು.

ಪಾಪಣ್ಣ ಅವಳನ್ನೊಮ್ಮೆ ದಿಟ್ಟಿಸಿ ನೋಡಿ ಇಲ್ಲವೆನ್ನುವಂತೆ ತಲೆಯಾಡಿಸುತ್ತಾ ‘ಇಲ್ಲ ಮೇಡಮ್ನೋರೆ ನಿಮ್ ಹೆರಿಗೆ ಆಗೊಗಂಟ ನಾನ್ ಈ ಪೋಲಿಸ್ನೋರ ಕೈಗೆ ಸಿಗಿದಿಲಾ’ ಎಂದು ಅತ್ತಿತ್ತಾ ಓಡಾಡತೊಡಗಿದ.

‘ಸರೆಂಡರ್ ಆಗು ಪಾಪಣ್ಣ, ನಮ್ ಹತ್ರ ಬಂದೂಕಿದೆ, ಸುಟ್ಟುಬಿಡ್ತಿವಿ’ ಸತೀಶ ಹೊರಗಿನಿಂದ ಧಮಕಿ ಹಾಕಿದ.

ಅವರಿಬ್ಬರೇ ಮತ್ತೆ ಮತ್ತೆ ಮಾತನಾಡುತ್ತಿದ್ದರಿಂದ ಹೊರಗೆ ತುಂಬಾ ಜನವಿಲ್ಲವೆಂದು ಪಾಪಣ್ಣನಿಗೆ ಅರಿವಾಯಿತು. ಮಣಿಕರ್ಣಿಕಾ ಇನ್ನೂ ಅಳುತ್ತಲೇ ಇದ್ದಳು. ಏನೂ ಆಗುವುದಿಲ್ಲವೆಂದು ಅವಳಿಗೆ ಸಮಾಧಾನ ಮಾಡಿ ಸುತ್ತಮುತ್ತಲೂ ನೋಡಿದ. ಸರ್ವೇಶನ ಕೈಲಿದ್ದ ಮಾವಿನ ಕಾಯಿಯ ಚೀಲ ಕಾಣಿಸಿತು. ತಕ್ಷಣ ಏನೋ ಯೋಚಿಸಿ ಕೆಳಗೆ ಬಿದ್ದಿದ್ದ ಕಂಬಳಿಯೊಳಗೆ ಮೂರ್ನಾಲ್ಕು ದಪ್ಪದಪ್ಪ ಮಾವಿನ ಕಾಯಿ ಹಾಕಿ ಸುತ್ತಿಟ್ಟ. ಮಣಿಕರ್ಣಿಕಾಳಿಗೆ ಧೈರ್ಯ ಹೇಳಿ ಒಳಗೆ ಕಳುಹಿಸಿ ಸರ್ವೇಶನಿಗೆ ಬಾಗಿಲು ತೆಗೆಯುವಂತೆ ಹೇಳಿದ. ತಾನು ಕೈಲಿ ಮಾವಿನ ಕಾಯಿ ಹಿಡಿದು ಬಾಗಿಲ ಎದುರು ಕುಳಿತ. ಸರ್ವೇಶ ಭಯದಿಂದಲೇ ಹಿಂದೆ ಹಿಂದೆ ನೋಡುತ್ತಾ ಬಾಗಿಲು ತೆಗೆದ.

ಬಾಗಿಲು ತಳ್ಳಿ ಮೊದಲು ಒಳನುಗ್ಗಿದ ಸತೀಶನ ಮುಖಕ್ಕೆ ರಪ್ಪನೆ ಮಾವಿನ ಕಾಯಿಯೊಂದು ಬಡಿದು ಅಪ್ಪಚ್ಚಿಯಾಯಿತು. ಅವನ ಹಿಂದೆಯೇ ಒಳಗೆ ಬಂದ ಚೆನ್ನಪ್ಪನ ತಲೆಗೂ ಮಾವಿನ ಕಾಯಿ ಬಡಿಯಿತು. ಏನಾಗುತ್ತಿದೆ ಎಂದು ಅವರಿಬ್ಬರಿಗೆ ಅರಿವಾಗುಷ್ಟರಲ್ಲಿ ಮಿಂಚಿನಂತೆ ಮುನ್ನುಗ್ಗಿದ ಪಾಪಣ್ಣ ಮಾವಿನಕಾಯಿ ಸುತ್ತಿದ್ದ ಕಂಬಳಿಯನ್ನು ಬಲವಾಗಿ ಬೀಸುತ್ತಾ ಪೇದೆಗಳ ತಲೆ, ಬೆನ್ನು, ಭುಜ, ಹೊಟ್ಟೆ, ತಿಕ ಹೀಗೆ ಎಲ್ಲೆಂದರಲ್ಲಿ ಬಾರಿಸತೊಡಗಿದ. ಚೆನ್ನಪ್ಪ ಹಾಗು ಸತೀಶ ನೆಲಕ್ಕೆ ಬಿದ್ದು ನೋವಿನಿಂದ ಚೀರತೊಡಗಿದರು. ಗಲಾಟೆ ಕೇಳಿ ಮಣಿಕರ್ಣಿಕಾ ಹೊರಗೆ ಓಡಿಬಂದು ಆಶ್ಚರ್ಯದಿಂದ ಪಾಪಣ್ಣನ ಈ ಪ್ರತಾಪವನ್ನು ನೋಡುತ್ತಾ ನಿಂತಳು. ಚೆನ್ನಾಗಿ ಥಳಿಸಿದ್ದಾದ ಮೇಲೆ ಅರೆಕ್ಷಣ ಸುಮ್ಮನೇ ನಿಂತು ಮಣಿಕರ್ಣಿಕಾಳತ್ತ ನೋಡಿದ ಪಾಪಣ್ಣ ಮನೆಯಿಂದ ಹೊರಬಿದ್ದು ಕತ್ತಲೆಯಲ್ಲಿ ಓಡತೊಡಗಿದ. ಚೆನ್ನಪ್ಪ ಸತೀಶ ಸುಧಾರಿಸಿಕೊಂಡು ಮೇಲೆದ್ದು ನೋವಿನಿಂದ ನರಳುತ್ತಾ ಆತನ ಹಿಂದೆ ಓಡತೊಡಗಿದರು.

(ಮುಂದುವರೆಯುವುದು)

Sunday, June 10, 2018

ಡೈರೀಸ್ ಆಫ್ ದಾಳಿ ಪಾಪಣ್ಣ - ೩

 ಅಧ್ಯಾಯ 3 - ಪಾಪಣ್ಣನ ಪ್ರಿಸನ್ ಬ್ರೇಕ್


ಹಿಂದಿನ ಭಾಗದಲ್ಲಿ : ಮೊದಲ ಹೆಂಡತಿಯನ್ನು ಕಳೆದುಕೊಂಡ ದುಃಖದಿಂದ ಹೊರಬರಲಾರದೇ  ಬದುಕುತ್ತಿದ್ದ ಪಾಪಣ್ಣನನಿಗೆ ಆತನ ಕುಡಿ ತನ್ನ ಒಡಲಿನಲ್ಲಿ ಬೆಳೆಯುತ್ತಿರುವುದಾಗಿ ಹೇಳಿದ ಮಣಿಕರ್ಣಿಕಾ ಅಲ್ಲಿ ನಿಲ್ಲದೇ ಹೊರಟು ಹೋಗುತ್ತಾಳೆ.


ಮಣಿಕರ್ಣಿಕಾ ಹೋದ ದಿಕ್ಕಿನಲ್ಲೇ ನೋಡುತ್ತಾ ಸುಮಾರು ಹೊತ್ತಿನವರೆಗೆ ನಿಂತಲ್ಲಿಯೇ ನಿಂತಿದ್ದ ಪಾಪಣ್ಣನ ಕೈಯಲ್ಲಿದ್ದ ಪೈಪು ಹೂವಿನ ಕುಂಡಗಳಲ್ಲಿದ್ದ ಗಿಡಗಳ ಮೇಲೆ ನೀರು ಸುರಿಯುತ್ತಲೇ ಇತ್ತು. ಕಾಲಿನ ಬುಡವೆಲ್ಲಾ ತೇವವಾದಾಗಲೇ ಪಾಪಣ್ಣನಿಗೆ ಎಚ್ಚರವಾದದ್ದು. ಓಡಿ ಹೋಗಿ ಕೊಳಾಯಿಯನ್ನು ನಿಲ್ಲಿಸಿ ನೀರೆಷ್ಟು ಪೋಲಾಯಿತೋ ನೋಡಲು ತೊಟ್ಟಿಯಲ್ಲಿ ಇಣುಕಿದ. ತೊಟ್ಟಿಯಲ್ಲಿನ್ನೂ ಅರ್ಧದಷ್ಟು ನೀರಿತ್ತು. ಆ ಸಂಜೆಯ ಬೆಳಕಿನಲ್ಲೂ ನೀರಿನೊಳಗೆ ಆತನ ಪ್ರತಿಬಿಂಬ ಸ್ಪಷ್ಟವಾಗಿ ಕಂಡಿತು. ಕಳೆದ ಆರು ತಿಂಗಳಿನಲ್ಲಿ ಆತನಿಗೆ ತನ್ನ ಮುಖವನ್ನು ನೋಡಿದ್ದೇ ನೆನಪಿರಲಿಲ್ಲ. ಮುಖದ ಮೇಲೆಲ್ಲ ಮನಸ್ಸೋ ಇಚ್ಛೆ ಬೆಳೆದ ಮೀಸೆ ಗಡ್ಡಗಳಲ್ಲಿ ಅವನಿಗೆ ಅವನ ಗುರುತೇ ಹತ್ತಲಿಲ್ಲ. ದಿಟ್ಟಿಸಿ ನೋಡುತ್ತಾ ಗಿರಿಜಾಳನ್ನು ನೆನಪಿಸಿಕೊಂಡ, ಇಲ್ಲ, ಅವಳ ಮುಖವೂ ಸ್ಪಷ್ಟವಾಗಿ ನೆನಪಾಗಲಿಲ್ಲ. ಇನ್ನು ಆ ಎರಡು ದಿನದ ಆ ಮಗು? ಉಹ್ಹೂ, ಅದರ ಮುಖವೂ ನೆನಪಿಗೆ ಬರುತ್ತಿಲ್ಲ. ಮತ್ತೆ ಮತ್ತೆ ನೆನಪಿಸಿಕೊಳ್ಳಲು ಪ್ರಯತ್ನಿಸಿದ, ಯಾವ ಪ್ರಯೋಜನವೂ ಆಗಲಿಲ್ಲ. ತಾನಷ್ಟು ಪ್ರೀತಿಸುತ್ತಿದ್ದ ಮಡದಿಯನ್ನು ಇಷ್ಟು ಬೇಗ ಮರೆತೆನೇ ಎಂದು ಆಶ್ಚರ್ಯವಾಯಿತು. ಬಹುಶಃ ನಾನವಳ ನೆನಪಿನಲ್ಲಿ ಕೊರಗಬಾರದೆಂದು ಅವಳೇ ತನ್ನ ನೆನಪಿನಿಂದ ಹೊರಟು ಹೋಗಿರಬೇಕೆಂದು ಸಮಾಧಾನ ಮಾಡಿಕೊಂಡ. ಆದರೆ ಅವಳ ನೆನಪೇ ಇಲ್ಲದ ಮೇಲೆ ಯಾರಿಗಾಗಿ ಇಷ್ಟು ದಿನ ಹೀಗೆ ಎಲ್ಲಾ ಕಳೆದುಕೊಂಡವನಂತೆ ಬದುಕುತಿದ್ದೆ ಎಂದು ಯೋಚನೆಯಾಯಿತು.

ಬಹಳ ದಿನಗಳ ನಂತರ ಅಂದು ರಾತ್ರಿ ದಿಂಬಿಗೆ ತಲೆ ಕೊಟ್ಟ ಕೂಡಲೇ ಕಣ್ಣಿಗೆ ನಿದ್ದೆ ಹತ್ತಿತು. ಕನಸಿನಲ್ಲಿ ಲಾರೆನ್ಸ್ ಗಾರ್ಡನ್ನಿನ ತೊಟ್ಟಿಯೊಳಗಿನಿಂದ ತಲೆಗೆ ಬ್ಯಾಂಡೇಜು ಕಟ್ಟಿಕೊಂಡು ಎದ್ದು ಬಂದ ತನ್ನ ಹಳೆಯ ಅಂಗಡಿಯ ಮಾಲಿಕ ಬಸವಪ್ಪ ಶೆಟ್ಟಿ ಹೂಗಿಡಗಳನೆಲ್ಲಾ ಕಟಾವು ಮಾಡಿಸಿದಂತೆ. ಅವನು ಹೋದ ಮೇಲೆ ಇವನೂ ಮಣಿಕರ್ಣಿಕಾ ಸೇರಿ ಆ ಜಾಗವನ್ನೆಲ್ಲಾ ಅಗೆದು ಕೆಳಗೆ ಮಲಗಿದ್ದ ಗಿರಿಜಾಳನ್ನು ಮೇಲಕ್ಕೆತ್ತಿ ತಂದಂತೆ, ಅವಳು ಎದ್ದಾಗ ಮಣಿಕರ್ಣಿಕಾ ಆಕೆಗೆ ಹೂ ಕಟ್ಟಿ ಮುಡಿಸಿ ಅವಳ ಕಂಕುಳಲ್ಲಿದ್ದ ಮಗುವಿಗೆ ಹಾಲುಣಿಸಿದಂತೆ ಹೀಗೆ ಚಿತ್ರ ವಿಚಿತ್ರ ಕನಸುಗಳು ಬಿದ್ದವು. ಆದರೆ ಬೆಳಗೆದ್ದಾಗ ಮತ್ತೆ ಯಾವ ನೆನಪೂ ಇರಲಿಲ್ಲ. ಆದರೆ ಆತನ ಒಳಗೇನೋ ಬದಲಾವಣೆಯಾಗಿತ್ತು. ಮಣಿಕರ್ಣಿಕಾಳ ಭರವಸೆಯಿಂದಲೋ, ತೊಟ್ಟಿಯ ಬಳಿ ಆದ ಜ್ಞಾನೋದಯದಿಂದಲೋ ಅಥವಾ ಅರ್ಥವಿಲ್ಲದ ಆ ಕನಸಿನಿಂದಲೋ, ಪಾಪಣ್ಣ ಮತ್ತೆ ಮೊದಲಿನಂತಾದ. ನಿಧಾನವಾಗಿ ಚೇತರಿಸಿಕೊಳ್ಳತೊಡಗಿದ.

ಅದೊಂದು ದಿನ ಪಾಪಣ್ಣ ನಲ್ಲಿಯ ಬಳಿ ಸ್ನಾನ ಮಾಡುತ್ತಿದ್ದಾಗ, ಪೇದೆಯೊಬ್ಬ ಬಂದು ಆತನನ್ನು ಕಾಣಲು ಯಾರೋ ಬಂದಿರುವುದಾಗಿ ತಿಳಿಸಿದ. ದಿನಗಳ ಲೆಕ್ಕವೇ ಮರೆತುಹೋಗಿದ್ದ ಪಾಪಣ್ಣನಿಗೆ ಅಂದು ಭಾನುವಾರವೆಂದು ನೆನಪಾಯಿತು. ಗಿರಿಜಾ ಸತ್ತಾಗಿನಿಂದ ಆತನನ್ನು ನೋಡಲು ಬಂದದ್ದು ಜೈಲಿನ ಡಾಕ್ಟರು ಒಬ್ಬರೇ. ಈಗ್ಯಾರು ಬಂದಿರಬಹುದು ಎಂದು ಯೋಚಿಸಿ ಬೇಗ ಬೇಗ ಸ್ನಾನ ಮುಗಿಸಿ ವಿಸಿಟರ್ಸ್ ಕೊಠಡಿಗೆ ಹೋದ. ಆತನನ್ನು ಕರೆದುಕೊಂಡು ಬಂದ ಪೇದೆ ಅಲ್ಲಿ ನಿಂತಿದ್ದ ಹುಡುಗನೊಬ್ಬನನ್ನು ತೋರಿಸಿ ಹೊರಟ. ಸುಮಾರು ಹತ್ತೊಂಬತ್ತು ಇಪ್ಪತ್ತು ವರುಷದ ಹುಡುಗ. ಕೈಯಲ್ಲಿ ಬುಟ್ಟಿ ಹಿಡಿದು ಅತ್ತಿತ್ತ ನೋಡುತ್ತಾ ನಿಂತಿದ್ದ. ಪಾಪಣ್ಣ ಹೋಗಿ ಅವನ ಎದುರು ನಿಂತ. ಹುಡುಗ ಮುಜುಗರದಿಂದಲೇ ಮುಗುಳ್ನಕ್ಕ.

‘ಇ.. ಇದು.. ಪಾಪಣ್ಣ ಅಂದ್ರೇ.. ನೀ…ವೇನಾ?’ ಹುಡುಗ ತೊದಲುತ್ತಾ ಕೇಳಿದ.

ಪಾಪಣ್ಣ ಹೌದೆಂಬಂತೆ ತಲೆಯಾಡಿಸಿದ. ಆತನನ್ನು ಮೊದಲೆಲ್ಲಾದರೂ ನೋಡಿದ್ದೇನೆಯೇ ಎಂದು ನೆನಪಿಸಿಕೊಂಡ. ಇಲ್ಲ. ಆತನ ಗುರುತು ಸಿಗಲಿಲ್ಲ.

‘ಮಮಮಣಿಯಕ್ಕ.. ಕಳ್ಸಿದಾಳೆ. ಇದನ್ನ ಕೊಕೊಕೊಡಕ್ಕೆ.. ಬಿಬಿಬಿರಿಯಾನಿ’ ಹುಡುಗ ಕೈಯಲ್ಲಿದ್ದ ಬುಟ್ಟಿಯನ್ನು ಮೇಲೆತ್ತಿ ತೋರಿಸುತ್ತಾ ಹೇಳಿದ.

ಪಾಪಣ್ಣನಿಗೆ ಆ ತೊದಲು ಮಾತಿನಲ್ಲೂ ಮಣಿಯ ಹೆಸರನ್ನು ಕೇಳಿ ಮೈ ಜುಂ ಎಂದಿತು. ಆ ಹುಡುಗನ ಹೆಸರು ಸರ್ವೇಶ, ಮಣಿಕರ್ಣಿಕಾಳ ಮನೆಯಲ್ಲಿ ಕೆಲಸಕ್ಕಿದ್ದ ಹುಡುಗನಂತೆ. ಅವಳು ತಾನು ಜೈಲಿಗೆ ಬರಲು ಸಾಧ್ಯವಾಗದೇ ಇದ್ದಿದ್ದರಿಂದ ಹುಡುಗನನ್ನು ಕಳುಹಿಸಿದ್ದಳು. ಜೊತೆಯಲ್ಲಿ ತಾನೇ ಕೈಯಾರೆ ಮಾಡಿದ್ದ ಬಿರಿಯಾನಿಯನ್ನು ಕಳುಹಿಸಿದ್ದಳು. ಪಾಪಣ್ಣ ಬಿರಿಯಾನಿ ಸವಿಯುತ್ತಾ ಆ ಹುಡುಗನ ಮೇಲೆ ಮಣಿಕರ್ಣಿಕಾಳ ಕುರಿತಾದ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ. ಆತ ತೊದಲುತ್ತಲೇ ಸಾಧ್ಯವಾದಷ್ಟೂ ಉತ್ತರಿಸಿದ. ಅವನು ಹೋದ ಮೇಲೆ ಪಾಪಣ್ಣ ಇಡೀ ದಿನ ತನ್ನ ಕೈಯಲ್ಲಿದ್ದ ಆ ಬಿರಿಯಾನಿಯ ವಾಸನೆಯನ್ನೇ ಆಸ್ವಾದಿಸಿದ.

ಮರುದಿನ ಲೈಬ್ರರಿಯಲ್ಲಿ ಕ್ಯಾಲೆಂಡರ್ ಬದಲಾಯಿಸುತ್ತಿದ್ದಾಗ ತನ್ನ ಬಿಡುಗಡೆಗೆ ಎಷ್ಟು ತಿಂಗಳಿದೆ ಎಂದು ಯೊಚಿಸಿದ. ನೆನಪಾಗಲಿಲ್ಲ. ತನಗೆ ಶಿಕ್ಷೆಯಾದಾಗ ಗಿರಿಜಾಳಿಗೆ ಮೂರು ತಿಂಗಳು, ಈಗ ಮಣಿಕರ್ಣಿಕಾಗೆ ಆರು. ಅವಳಿಗೆ ಹೆರಿಗೆಯಾದಾಗ ಇವಳ ಬಸಿರು ಕಟ್ಟಿದ್ದು. ಅಲ್ಲಿಗೆ ತನಗಿನ್ನು ಒಂದು ವರ್ಷದ ಶಿಕ್ಷೆಯಷ್ಟೇ ಮುಗಿದದ್ದು ಎಂದು ಅರಿವಾದಾಗ ಪಾಪಣ್ಣನಿಗೆ ತಳಮಳವಾಯಿತು. ಅಲ್ಲಿಯವರೆಗೆ ತಾನು ಮಣಿಯನ್ನು ಕಾಣಲಾಗದೆಂಬ ಬೇಸರವಾದರೆ. ಅದಕ್ಕಿಂತ ಹೆಚ್ಚಾಗಿ ಹೆರಿಗೆ ಸಮಯದಲ್ಲಿ ಮೊದಲ ಹೆಂಡತಿಯಿಂದ ದೂರವಿದ್ದು ಆದ ದುರಂತಗಳು ಇಲ್ಲೂ ಆಗಿಹೋದರೆ ಎಂಬ ಭಯ ಶುರುವಾಯಿತು. ಒಂದು ಹಂತದಲ್ಲಿ ಜೀವನವೇ ಬೇಡವೆಂದು ನಿರ್ಧರಿಸಿದ್ದವನಿಗೆ ಮತ್ತೇಕೋ ಸರಳುಗಳಾಚೆಗಿನ ಬದುಕಿನ ಬಯಕೆ ಹೆಚ್ಚಾಗತೊಡಗಿತು.  

ಜೈಲಿನಿಂದ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿದ

ದುರ್ಗದ ಜೈಲು ಬ್ರಿಟೀಷರ ಕಾಲದ್ದು. ಸುಮಾರು ವರುಷ ಹಳೆಯದು. ಹಳೆಯ ಶಾಲೆಯೊಂದರಲ್ಲೆ ಜೈಲು ಮಾಡಿ ಸುತ್ತಲೂ ಇದ್ದ ಗೋಡೆಗಳ ಎತ್ತರ ಹೆಚ್ಚಿಸಿದ್ದರು. ಚೌಕಾಕಾರದ ಕಟ್ಟಡದ ಮೂರು ಬದಿಯಲ್ಲಿ ಜೈಲು ಕೋಣೆಗಳಿದ್ದವು ಪ್ರತಿ ಬದಿಯಲ್ಲು ಆರು ಸೆಲ್ಲುಗಳು. ಹಳೆಯ ಜೈಲಾದ್ದರಿಂದ ಗೋಡೆಗಳು ಶಿಥಿಲಗೊಂಡಿದ್ದರೆ, ಕಬ್ಬಿಣದ ಕಂಬಿಗಳು ತುಕ್ಕು ಹಿಡಿದಿದ್ದವು. ಹೊಸ ಜಾಗದಲ್ಲಿ ಜೈಲು ಕಟ್ಟಲು ಅನುಮತಿ ದೊರೆತಿದ್ದರಿಂದ ಯಾರೂ ಇದರ ರಿಪೇರಿಗೆ ಕೈ ಹಾಕಿರಲಿಲ್ಲ. ಹಗಲಿನಲ್ಲಿ ಸೆಲ್ಲಿನ ಹೊರಗೆ ಓಡಾಡಿಕೊಂಡಿರಲು ಅನುಮತಿಯಿದ್ದರೂ, ಆ ಸಮಯದಲ್ಲಿ ಮುಂದಿನ ಭಾಗದಲ್ಲಿ ಕಾವಲು ಪೋಲೀಸರು ಕಾವಲಿದ್ದರೆ, ಹಿಂದೆ ಸದಾ ಜನರಿಂದ ಗಿಜಿಗುಡುತ್ತಿದ್ದ ಸಂತೆ ಮೈದಾನವಿತ್ತು. ಸಂಜೆ ಸಂತೆ ಮುಗಿಯುವ ವೇಳೆಗೆ ಖೈದಿಗಳು ಮತ್ತೆ ಸೆಲ್ಲಿನೊಳಗೆ ಸೇರಿಕೊಳ್ಳಬೇಕಿತ್ತು. ಹೀಗೆ ಸಾಧ್ಯಾಸಾಧ್ಯತೆಗಳನ್ನು ಯೋಚಿಸಿದ ಪಾಪಣ್ಣ ಕಡೆಗೆ ನಡುರಾತ್ರಿಯಲ್ಲಿ ಸರಳುಗಳನ್ನು ಕತ್ತರಿಸಿ ಹೊರಗೆ ಬಂದು ಹಿಂದಿನಿಂದ ಗೋಡೆ ಹಾರಿ ತಪ್ಪಿಸಿಕೊಳ್ಳುವುದೆಂದು ನಿರ್ಧರಿಸಿದ.

ತಪ್ಪಿಸಿಕೊಳ್ಳಲು ಸಕಲ ಸಿದ್ಧತೆಗಳನ್ನು ನೆಡೆಯತೊಡಗಿತು. ಮೊದಲು ತೋಟದಿಂದ ಪೈಪು ಕತ್ತರಿಸುವವ ಬ್ಲೇಡನ್ನು ತಂದು ತನ್ನ ಚಾಪೆಯ ಕೆಳಗೆ ಸೇರಿಸಿದ. ಆದರೆ ತುಕ್ಕು ಹಿಡಿದ ಕಂಬಿಗಳು ಕತ್ತರಿಸುವಾಗ ಸದ್ದು ಮಾಡುವ ಸಾಧ್ಯತೆಯಿತ್ತು. ಕೆಲವು ದಿನಗಳ ಹಿಂದೆಯಷ್ಟೆ ರಾತ್ರಿಯೆಲ್ಲಾ ಡಿಪಾರ್ಟಮೆಂಟ್ ಪರೀಕ್ಷೆ ಪಾಸು ಮಾಡಲು ಓದುತ್ತಿದ್ದ ಜಿತೇಂದ್ರ, ಲೈಬ್ರರಿಯ ಕಬ್ಬಿಣದ ಕಿಟಕಿ ಬಾಗಿಲುಗಳು ಗಾಳಿಗೆ ಅಲುಗಿ ಕಿರ ಕಿರ ಸದ್ದು ಮಾಡುತ್ತವೆಂದು ಅವುಗಳಿಗೆ ಗ್ರೀಸು ಹಚ್ಚಿದ್ದ. ಮಿಕ್ಕಿದ್ದ ಗ್ರೀಸನ್ನು ಪಾಪಣ್ಣನ ಕೈಯಲ್ಲೆ ಕಳುಹಿಸಿ ಟಾಯ್ಲೆಟ್ಟಿನ ಹಿಂದೆ ಇರಿಸಿದ್ದ. ಪಾಪಣ್ಣ ಆ ರಾತ್ರಿ ಊಟವಾದ ಮೇಲೆ ಯಾರಿಗೂ ಕಾಣದಂತೆ ತನ್ನ ಲೋಟಕ್ಕೆ ಗ್ರೀಸು ತುಂಬಿಕೊಂಡು ತಂದಿಟ್ಟುಕೊಂಡು ತಪ್ಪಿಸಿಕೊಳ್ಳುವ ದಿನಕ್ಕಾಗಿ ಕಾಯತೊಡಗಿದ.

ಎರಡು ವಾರದ ನಂತರ ಮತ್ತೆ ಜಿತೇಂದ್ರನ ಡ್ಯೂಟಿ ಬಂದಿತು. ಬೇರೆ ಗಾರ್ಡುಗಳಾದರೆ ರಾತ್ರಿ ಎಲ್ಲೆಲ್ಲಿ ತಿರುಗುವರೆಂದು ಊಹಿಸಲು ಸಾಧ್ಯವಿರಲಿಲ್ಲ. ಆದರೆ ಜೀತೇಂದ್ರ ಮಾತ್ರ ಲೈಬ್ರರಿ ಸೇರಿದರೆ ಹೊರಗೆ ಬರುತ್ತಿದ್ದದ್ದು ಅಪರೂಪಕ್ಕೆ. ಆತನ ಡ್ಯೂಟಿ ಪ್ರಾರಂಭವಾಗಿ ಮೂರನೇ ದಿನ ರಾತ್ರಿ ಲೈಬ್ರರಿಯ ಲೈಟು ಹೊತ್ತುವುದನ್ನೇ ಕಾಯುತ್ತಿದ್ದ ಪಾಪಣ್ಣ ಹನ್ನೆರಡು ಗಂಟೆ ಬಡಿದ ಕೂಡಲೇ ಕೆಲಸ ಪ್ರಾರಂಭಿಸಿದ. ಮೊದಲು ಕೆಳಭಾಗದಲ್ಲಿದ್ದ ಮೂರು ಸರಳುಗಳಿಗೆ ಗ್ರೀಸು ಹಚ್ಚಿದ. ನಂತರ ಚಾಪೆಯ ಕೆಳಗಿದ್ದ ಬ್ಲೇಡು ಹೊರಗೆ ತೆಗೆದು ಗ್ರೀಸು ಹಚ್ಚಿದ ಜಾಗದಲ್ಲಿ ನಿಧಾನವಾಗಿ ಕತ್ತರಿಸತೊಡಗಿದ. ಪೈಪು ಕತ್ತರಿಸುವ ಬ್ಲೇಡು ತುಂಬಾ ತೆಳ್ಳಗಿತ್ತು. ಆದರೆ ಆ ತುಕ್ಕು ಹಿಡಿದ ಕಂಬಿಗಳನ್ನು ಕತ್ತರಿಸಲು ಅಷ್ಟು ಸಾಕಿತ್ತು. ಕೆಲಸ ಸ್ವಲ್ಪ ನಿಧಾನವಾದರೂ ಚೂರು ಶಬ್ದ ಬರದೇ ಎರಡು ಸರಳುಗಳನ್ನು ಕತ್ತರಿಸಿದ್ದಾಯ್ತು. ಮೂರನೇ ಸರಳನ್ನು ಅಷ್ಟೇ ಜಾಗರೂಕತೆಯಿಂದ ಕತ್ತರಿಸತೊಡಗಿದ ಪಾಪಣ್ಣ ಲೈಬ್ರರಿಯ ದೀಪ ಆರಿದ್ದನ್ನು ಗಮನಿಸಲೇ ಇಲ್ಲ. ಇದ್ದಕ್ಕಿದ್ದಂತೆ ಕತ್ತರಿಸುತ್ತಿದ್ದ ಬ್ಲೇಡಿನ ಮೇಲೆಯೇ ನೇರವಾಗಿ ಟಾರ್ಚಿನ ಬೆಳಕೊಂದು ಬಿದ್ದಾಗ ಬೆಚ್ಚಿದ ಪಾಪಣ್ಣ ಬ್ಲೇಡು ಕೈಬಿಟ್ಟು ರಪ್ಪನೆ ಗೋಡೆಯ ಹಿಂದೆ ಸರಿದು ಕುಳಿತುಕೊಂಡ.

‘ಪಾಪಣ್ಣ., ಏಯ್ ಪಾಪಣ್ಣ..!’ ಜೀತೇಂದ್ರ ಜೋರಾಗಿ ಕಿರುಚಿದ. ಲೈಬ್ರರಿಯ ಕಡೆಯಿಂದ ಬಂದ ಟಾರ್ಚಿನ ಬೆಳಕು ಆಚೀಚೆ ತಿರುಗಿ ಆರಿತು. ಪಾಪಣ್ಣ ಚೂರು ಅಲ್ಲಾಡದೇ ಕುಳಿತಲ್ಲಿಯೇ ಕುಳಿತಿದ್ದ. ಬೆಳಕು ಆರಿದ್ದೇ ಬ್ಲೇಡು ಕೆಳಗೆ ಬಿಟ್ಟು ಅದರ ಮೇಲೆ ತೊಡೆ ಹಾಕಿ ಕುಳಿತುಕೊಂಡ. ಜೀತೇಂದ್ರ ತಾನು ಕಂಬಿ ಕತ್ತರಿಸುತ್ತಿದ್ದನ್ನು ನೋಡಿಬಿಟ್ಟಿದ್ದರೆ? ಆತ ತನ್ನ ಸೆಲ್ಲಿನೆಡೆಗೆ ಬರುತ್ತಿರುವುದು ಅರಿವಾಗಿ ಎದೆ ಜೋರಾಗಿ ಬಡಿದುಕೊಳ್ಳತೊಡಗಿತು. ತನಗೆ ಆತನ ಹೆಜ್ಜೆ ಸಪ್ಪಳ ಕೇಳುತ್ತಿರುವಷ್ಟೆ ಸ್ಪಷ್ಟವಾಗಿ ಆತನಿಗೆ ನನ್ನ ಎದೆ ಬಡಿತ ಕೇಳುತ್ತಿರಬಹುದು ಎನ್ನಿಸಿತು ಪಾಪಣ್ಣನಿಗೆ. ಬಾಗಿಲಲ್ಲಿ ನಿಂತು ಕಂಬಿಯೊಳಗಿಂದ ಇಣುಕಿದ ಜೀತೇಂದ್ರ ಒಳಗೆ ಬಿದ್ದ ನೆರಳನ್ನೆ ನೋಡುತ್ತಾ ಉಸಿರು ಬಿಗಿಹಿಡಿದು ಕೂತಿದ್ದ ಪಾಪಣ್ಣನ ಮುಖಕ್ಕೆ ಟಾರ್ಚು ಬಿಟ್ಟ. ಪಾಪಣ್ಣ ಬೆಚ್ಚಿದವನಂತೆ ನಟಿಸಿ ಹಿಂದಕ್ಕೆ ತಿರುಗಿದ.

‘ಯೋ ಪಾಪಣ್ಣ, ಎದ್ದಿದ್ಯಾ? ಕೂಗಿದ್ ಕಿವಿ ಕೇಳಲ್ವೇನ್ ನಿಂಗೆ? ’ ಜೀತೇಂದ್ರ ಟಾರ್ಚು ಆರಿಸಿ ಕೇಳಿದ.

‘ಯಾವಾಗ ಜೀತೇಂದ್ರಪ್ಪೋ, ಕೇಳಲೇ ಇಲ್ಲ’ ಎಷ್ಟು ಪ್ರಯತ್ನಿಸಿರದೂ ಮಾತು ತಡವರಿಸಿತು. ಮಾತುಗಳು ಹೊರಗೆ ಹೊರಡುತ್ತಲೇ ತೊಡೆಯ ಕೆಳಗಿದ್ದ ಬ್ಲೇಡು ತಣ್ಣಗೆ ಕೊರೆದು ಮೈಯೆಲ್ಲಾ ಚಳಿಯಾದಂತಾಯಿತು.

   ‘ನಿಂಗೆ ಗ್ಯಾನ ಎಲ್ಲಿರ್ತದೆ ಬಿಡು. ಏನಿಲ್ಲಾ, ಮೊನ್ನೆ ಒಂದಷ್ಟು ಹೊಸ ಬುಕ್ಸ್ ತರ್ಸಿದ್ನಲ್ಲಾ, ಎಲ್ ಜೋಡ್ಸಿದ್ಯಾ ಕೇಳಕ್  ಬಂದೆ’

      ಪಾಪಣ್ಣನ ಶ್ವಾಸದಿಂದ ಸಮಾಧಾನದ ನಿಟ್ಟುಸಿರೊಂದು ಹೊರಗೆ ಬಂದಿದ್ದು ಜೀತೇಂದ್ರನಿಗೆ ಆ ಕತ್ತಲೆಯಲ್ಲಿ ಕಾಣಲಿಲ್ಲ. ಪಾಪಣ್ಣ ಈಗ ಸ್ವಲ್ಪ ಜೋರಾಗಿಯೇ ಮಾತನಾಡಿದ. ‘ಅವನ್ನ ಜೋಡ್ಸಿಲ್ಲಪ್ಪೋ, ಆ ಮೂರನೇ ಲೈನಗೆ ಆ ಗಾಂಧೀ ಪೋಟೋತವನೇ ಮಡ್ಗಿದಿನಿ, ಬಂಡ್ಲುನೂ ಬಿಚ್ಚಿಲ್ಲ’  

‘ಹೌದಾ, ನೋಡ್ತಿನಿ ಬಿಡು. ಟೀ, ಗೀ ಏನಾರ ಕುಡಿತ್ಯಾ?’

      ‘ಟೀಯಾ? ಬ್ಯಾಡ, ನಿದ್ದೆ ಒಂಟೋಯ್ತದೆ’

‘ಈಗೇನ್ ಗೊರ್ಕೆ ಹೊಡ್ಕಂಡ್ ನಿದ್ದೆ ಮಾಡ್ತಿದಿಯಾ ಒಂಟೋಗಕ್ಕೆ, ಕಥೆ ಪಾಪಣ್ಣ ನೀನೊಬ್ಬ’

ಜೀತೇಂದ್ರ ಪಕ್ಕದಲ್ಲಿದ್ದ ಸೆಲ್ಲುಗಳೊಳಕ್ಕೆ ಟಾರ್ಚು ಬಿಡುತ್ತಾ ಲೈಬ್ರರಿಯ ಕಡೆಗೆ ನೆಡೆದು ಹೋಗಿ ಮತ್ತೆ ದೀಪ ಹೊತ್ತಿಸಿದ. ಪಾಪಣ್ಣನಿಗೆ ಹೋದ ಜೀವ ಬಂದಂತಾಯ್ತು. ತಾನು ಸಿಕ್ಕಿಬಿದ್ದಿದ್ದರೆ? ಅಲ್ಲಿಯವರೆಗೂ ಪಾಪಣ್ಣ ಅದರ ಬಗ್ಗೆ ಚಿಂತಿಸಿಯೇ ಇರಲಿಲ್ಲ. ಹೊರಗೆ ಹೋದ ಮೇಲೂ ತಾನು ಸಿಕ್ಕಿಬಿದ್ದರೆ ಏನು ಮಾಡುವುದೆಂಬ ಕಲ್ಪನೆಯೂ ಇರಲಿಲ್ಲ. ಆತನ ತಲೆಯ ತುಂಬಾ ಮಣಿಕರ್ಣಿಕಾಳನ್ನು ಕಾಣುವ ಯೋಚನೆಯೇ ತುಂಬಿಕೊಂಡಿತ್ತು. ಆದರೆ ಈಗೇಕೋ ಸಣ್ಣಗೆ ಭಯ ಶುರುವಾಯಿತು. ಪ್ಲಾನು ಮುಂದಕ್ಕೆ ಹಾಕೋಣಾವೇ ಎನ್ನಿಸಿತು. ಶಿಕ್ಷೆ ಮುಗಿಸಿ ಬಿಡುಗಡೆಗಾಗಿ ಕಾಯುವ ಯೋಚನೆಯೂ ಸುಳಿದು ಹೋಯ್ತು.

ಆದರೆ ಮತ್ತೆ ಮಣಿಕರ್ಣಿಕಾಳ ನೆನಪಾಯ್ತು, ಆದದ್ದಾಗಲಿ ಈಗ ಹಿಂದೇಟು ಹಾಕುವುದು ಬೇಡವೆಂದು ಮತ್ತೆ ಸರಳು ಕತ್ತರಿಸುವುದನ್ನು ಮುಂದುವರೆಸಿದ. ಮೊದಲೆರಡನ್ನು ಕತ್ತರಿಸಿದ ಅನುಭವದಿಂದ ಮೂರನೆಯದನ್ನು ಕತ್ತರಿಸಲು ಹೆಚ್ಚೇನು ಸಮಯ ಹಿಡಿಯಲಿಲ್ಲ. ಇನ್ನು ತಡಮಾಡದೇ, ಬ್ಲೇಡನ್ನು ಮತ್ತೆ ಚಾಪೆಯ ಕೆಳಗೆ ಸೇರಿಸಿ ತನ್ನ ಬಲವನ್ನೆಲ್ಲಾ ಉಪಯೋಗಿಸಿ ಸರಳುಗಳನ್ನು ಬಗ್ಗಿಸಿದ. ನುಸುಳಿ  ಹೊರಬಂದಿದ್ದಾದ ಮೇಲೆ ಸರಳನ್ನು ಮತ್ತೆ ನೇರ ಮಾಡಲು ನೋಡಿದ. ಅವೇಕೋ ಮತ್ತೆ ಮೊದಲಿನಂತಾಗಲು ಒಪ್ಪದೇ ನಾಯಿ ಬಾಲದಂತೆ ಡೊಂಕಾಗಿಯೇ ನಿಂತಿದ್ದವು. ಪಾಪಣ್ಣ ಪ್ರಯತ್ನ ಬಿಟ್ಟು ಎದ್ದು ಕಂಬಗಳ ಮರೆಯಲ್ಲೇ ಓಡಿ ಜೈಲಿನ ಹಿಂಬದಿ ಸೇರಿದ.


ಜೈಲನ್ನು ಒಂದು ಸುತ್ತು ಹೊಡೆದು ಹಿಂದಿನ ಗೋಡೆಯ ಬಳಿಗೆ ಬಂದು ನಿಂತ. ಆಗಲೇ ಅವನಿಗೆ ಆತನ ತಪ್ಪಿನ ಅರಿವಾದದ್ದು. ವರುಷ ಪೂರ್ತಿ ಪ್ರತಿದಿನವೂ ಆ ಗೋಡೆಯನ್ನು ನೋಡಿದ್ದರೂ, ಕೆಲವೊಮ್ಮೆ ಅದಕ್ಕೇ ಒರಗಿ ಮಣಿಕರ್ಣಿಕಾಳ ಜೊತೆಗೆ ಮಾತನಾಡಿದ್ದರೂ, ಯಾರೂ ಇಲ್ಲದಿದ್ದಾಗ ಅದಕ್ಕೆ ಉಚ್ಚೆ ಹೋಯ್ದಿದ್ದರೂ ಎಂದೂ ಅದರ ಎತ್ತರವನ್ನು ಗಮನಿಸಿಯೇ ಇರಲಿಲ್ಲ ಸುಲಭವಾಗಿ ನೆಗೆದು ಕಂಬಿ ಹಿಡಿದು ಹಾರಿ ಹೊರಟುಬಿಡಬಹುದು ಎಂದುಕೊಂಡಿದ್ದ ಗೋಡೆ ಈಗ ಇದ್ದಕ್ಕಿದ್ದಂತೆ ದೊಡ್ಡದಾಗಿ ಬೆಳೆದು ನಿಂತಿದೆ ಎನ್ನಿಸಿತು.

ಗೋಡೆಯಲ್ಲಿ ಕಾಲಿಟ್ಟು ಹತ್ತಲು ಜಾಗವಿದೆಯೇ ಎಂದು ತಡಕಾಡಿದ. ಏನೂ ಕಾಣದೆ ನಿರಾಶನಾಗಿ ಕತ್ತಲಲಿ ನಿಂತು ಸುತ್ತಲೂ ನೋಡುತ್ತಿರುವಾಗ ಕಂಡಿತು ಲಾರೆನ್ಸ್ ಗಾರ್ಡನ್ನಿನಲ್ಲಿ ಗೋಡೆಗೆ ಸಮನಾಗಿ ಬೆಳೆದು ನಿಂತಿದ್ದ ಆ ನುಗ್ಗೆ ಮರ. ಒಮ್ಮೆ ಆತನ ಯೋಚನೆಗೆ ಅವನಿಗೆ ನಗು ಬಂದಿತು. ಆ ಮರ  ಭಾರವನ್ನು ತಡೆಯುವುದು ಸಾಧ್ಯವೇ ಇರಲಿಲ್ಲ. ಆದರೆ ಹೆಂಡತಿ ಸತ್ತ ಮೇಲೆ ಬಹಳ ಇಳಿದು ಹೋಗಿದ್ದಾನೆಂದು ಎಲ್ಲರೂ ಮಾತನಾಡುತ್ತಿದ್ದದು ನೆನಪಾಯ್ತು. ಅಲ್ಲಿಯವರೆಗೆ ಎಂದೂ ಆತನಿಗೆ ಹಾಗನ್ನಿಸದಿದ್ದರೂ ಇವತ್ತೇಕೋ ಅದು ನಿಜವಿರಬೇಕು ಎನ್ನಿಸಿತು. ತಾನು ಬಹಳ ಇಳಿದು ಹೋಗಿದ್ದೇನೆ, ಈ ನುಗ್ಗೇ ಮರವೂ ತನ್ನ ಭಾರವನ್ನು ತಡೆಯಬಲ್ಲದು ಎಂದು ಮನದಲ್ಲೇ ಹೇಳಿಕೊಂಡು ಸೀದಾ ನುಗ್ಗೆಮರದ ಬಳಿ ಬಂದು ನಿಂತನು.

ಸಿಂಹಾಸನವನ್ನೇರುವ ರಾಜ ಮೊದಲು ಅದನ್ನು ಮುಟ್ಟಿ ನಮಸ್ಕರಿಸುವಂತೆ ನುಗ್ಗೇ ಮರಕ್ಕೆ ನಮಸ್ಕಾರ ಮಾಡಿ ಆತನ ತೋಳಿನಷ್ಟೇ ತೆಳ್ಳಗಿದ್ದ ಕೊಂಬೆಗಳನ್ನು ಹಿಡಿದು ನಿಧಾನವಾಗಿ ಅದರ ನಡುವೆ ಬಲಗಾಲಿಟ್ಟು ಮೇಲಕ್ಕೇರಿದ. ಆತನ ಭಾರಕ್ಕೆ ಮರ ಸೀದಾ ಹಿಂದಕ್ಕೆ ಬಾಗಿತು. ಪಾಪಣ್ಣ ನಿಧಾನವಾಗಿ ಅದಕ್ಕಿಂತ ಚೂರು ಎತ್ತರದಲ್ಲಿದ್ದ ಕೊಂಬೆಗಳ ಕವಲಿನಲ್ಲಿ ಎಡಗಾಲಿಟ್ಟು ಬಾವಲಿಯಂತೆ ನೇತಾಡುತ್ತಾ ಅತ್ತಿತ್ತ ತೂಗುತ್ತಿದ್ದ ಮರವನ್ನು ಸಮವಾಗಿರಿಸಿ ಮೇಲೆ ನೋಡಿದ. ಗೋಡೆ ಇನ್ನೂ ಸ್ವಲ್ಪ ಎತ್ತರದಲ್ಲೇ ಇತ್ತು. ವಾಮನ ಭೂಮಿ ಆಕಾಶಗಳ ಮೇಲೆ ಎರಡೂ ಕಾಲಿಟ್ಟಂತೆ ಎರಡೂ ಕೊಂಬೆಗಳ ಮೇಲೆ ಕಾಲಿಟ್ಟು ಮೂರನೇ ಕಾಲಿಡಲು ಜಾಗ ಹುಡುಕಿದ. ಅದರೆ ಮರದ ಮೇಲೆ ಮತ್ತಿನ್ಯಾವ ಕೊಂಬೆಯೂ ಇರಲಿಲ್ಲ. ಏನೋ ಯೋಚಿಸಿ ಉಲ್ಟಾ ತಿರುಗಿ ಗೋಡೆಗೆ ಬಲಗಾಲು ಕೊಟ್ಟು ಮೇಲಿದ್ದ ಕಬ್ಬಿಣದ ಕಂಬಿಯನ್ನೇ ನೋಡುತ್ತಾ ಮನೆದೇವರಾದ ಉಳ್ಳೇಕಾಲು ಲಕ್ಕಮ್ಮನನ್ನು ನೆನೆದು ಮೇಲಕ್ಕೆ ಚಿಮ್ಮಿದ. ನೆಗೆದ ರಭಸಕ್ಕೆ ಆತನಿಗೇ ತಿಳಯದೇ ಗಂಟಲಿನಿಂದ ಉದ್ಗಾರವೊಂದು ಹೊರಬಿದ್ದು, ಎಡಗಾಲಿಟ್ಟಿದ ಕೊಂಬೆ ಪಟ್ಟನೆ ಮುರಿದ ಸದ್ದಿನೊಡನೆ ಬೆರೆತುಹೋಯ್ತು. ಆದಾದ ಮೇಲೆ ಉಳಿದ ನಿಶ್ಯಬ್ದದಲ್ಲಿ ಕಂಬಿಯನ್ನು ಪಾಪಣ್ಣ ಎರಡೂ ಕೈಗಳಿಂದ ಬಿಗಿಯಾಗಿ ಹಿಡಿದು ನೇತಾಡುತ್ತಿದ್ದ.

ಕಂಬಿಯೇನೋ ಸಿಕ್ಕಿತು. ಆದರೆ ಅದನ್ನು ಬಳಸಿ ಗೋಡೆಯ ಮೇಲೆ ಹತ್ತಲು ಪ್ರಯತ್ನಿಸಿದೊಡನೆ ಕಂಬಿ ಅಲುಗಾಡುತ್ತಾ ಗೋಡೆಯಲ್ಲಿ ಬಿರುಕು ಕಾಣಿಸಿತು. ಹೆಚ್ಚು ಪ್ರಯತ್ನಿಸಿದಷ್ಟೂ ಬಿರುಕು ದೊಡ್ಡದಾಗಿ ಕಂಬಿಯೂ ಬಗ್ಗಿತು. ಪಾಪಣ್ಣ ಉಸಿರು ಬಿಗಿ ಹಿಡಿದು ಅಲುಗುತ್ತಿದ್ದ ಕಂಬಿಗೆ ಕಟ್ಟಿದ್ದ ಮುಳ್ಳು ತಂತಿಗೆ ಕೈಹಾಕಿ ಜಗ್ಗಿ ಮೇಲೇರತೊಡಗಿದ. ಮುಳ್ಳುಗಳು ಕೈಗೆ ನಾಟಿಕೊಂಡು ರಕ್ತ ಸೋರತೊಡಗಿತು. ಪಾಪಣ್ಣ ಹಲ್ಲು ಕಚ್ಚಿ ನೋವು ತಡೆಯುತ್ತಾ ಮೇಲಕ್ಕೆ ಬಂದು ಗೋಡೆಯ ಮೇಲೆ ನಿಂತುಬಿಟ್ಟ. ಕತ್ತಲಿನಲ್ಲಿ ವಿಶಾಲವಾದ ಚಿತ್ರದುರ್ಗ ಕಾಣಿಸಿತು. ನಿಧಾನವಾಗಿ ತಂತಿಯನ್ನು ಹಿಡಿದು ಗೋಡೆಯ ಹಿಂಬದಿಗೆ ಬಂದ. ಮರುದಿನದ ಸಂತೆಗೆ ಬಂದ ಒಂದಷ್ಟು ಎತ್ತಿನಗಾಡಿಗಳು ನಿಂತಿದ್ದವು. ಅವುಗಳಿಂದ ಇಳಿಸಿದ ತರಕಾರಿ ಮೂಟೆಗಳನ್ನು ಗೋಡೆಯ ಪಕ್ಕದಲ್ಲೇ ಪಾಪಣ್ಣನಿಗಾಗಿಯೇ ಎಂಬಂತೆ ಜೋಡಿಸಲಾಗಿತ್ತು. ಅದರ ಮೇಲೆ ನೆಗೆದ ಪಾಪಣ್ಣ ಕೈಯಲ್ಲಿ ಸುರಿಯುತ್ತಿದ್ದ ರಕ್ತವನ್ನು ಬಿದ್ದಿದ್ದ ಖಾಲಿ ಚೀಲವೊಂದಕ್ಕೆ ಒರೆಸಿ ಸಂತೆ ಮೈದಾನವನ್ನು ದಾಟಿ ಕತ್ತಲಲ್ಲಿ ನೆಡೆಯತೊಡಗಿದ.




Wednesday, May 23, 2018

ಡೈರೀಸ್ ಆಫ್ ದಾಳಿ ಪಾಪಣ್ಣ


ಅಧ್ಯಾಯ 1

ಪಾಪಣ್ಣ ವಿಸಿಟ್ಸ್ ಗೋಲ್ಡನ್ ಹಾರ್ಸ್



ಆ ಶನಿವಾರ ರಾತ್ರಿ ಗೋಲ್ಡನ್ ಹಾರ್ಸ್ ಬಾರಿನ ಕೌಂಟರಿನಲ್ಲಿ ನಿಂತಿದ್ದ ನಾಲ್ಕೈದು ಕುಡುಕರು ಜೀರೋ ಕ್ಯಾಂಡಲು ಬಲ್ಬಿನ ಬೆಳಕಿನಲ್ಲಿ ತೂರಾಡುತ್ತಾ ಕುಡಿಯುತ್ತಿದ್ದರು. ನಡುವಿನಲ್ಲಿ ಆಗೊಮ್ಮೆ ಈಗೊಮ್ಮೆ ಪೇಪರಿನ ಮೇಲಿದ್ದ ಖಾರವನ್ನು ಬಾಯಿಗೆ ಎಸೆದುಕೊಳ್ಳುತ್ತಿದ್ದರು. ಖಾರವನ್ನು ಜಗಿಯುವಾಗ ಬಿಟ್ಟು ಮಿಕ್ಕೆಲ್ಲಾ ಸಮಯದಲ್ಲೂ ಕಚಪಚ ಕಚಪಚ ಮಾತನಾಡುತ್ತಲೇ ಇದ್ದರು. ಚುನಾವಣೆ ಸಮಯದಲ್ಲಿ ಮಾತನಾಡಲು ವಿಷಯಗಳನ್ನು ಕೇಳಬೇಕೆ? ಗಂಟೆ ಹತ್ತಾಗಿರಬಹದು. ಅಂಗಡಿ ಬಾಗಿಲು ಹಾಕಿಕೊಂಡು ಮೊಟ್ಟೆ ಬಿರಿಯಾನಿ ಕಟ್ಟಿಸಿಕೊಳ್ಳಲು ಬಂದ ಪಕ್ಕದ ಪಾನು ಶಾಪಿನ ಸರೋಜಕ್ಕ ಇದ್ದಕಿದ್ದಂತೆ ಚಿಟಾರನೇ ಚೀರಿದಳು. ಕುಡುಕ ಮಹಾಶಯರೆಲ್ಲಾ ಬೆಚ್ಚಿ ಅತ್ತ ಕಡೆಗೆ ತಿರುಗಲು ಅದೇನೇನೋ ಗೊಣಗುತ್ತಾ ತನ್ನ ಕಾಲನ್ನು ಗೋಣಿ ಚೀಲವೊಂದಕ್ಕೆ ಒರೆಸುತ್ತಿದ್ದಳು.

‘ಏನಾಯ್ತಮ್ಮೋ?’ ದಪ್ಪ ಮೀಸೆ ವೀರಭದ್ರಪ್ಪ ಕೌಂಟರಿನ ಒಳಗಿಂದ ಕತ್ತು ಹೊರಗೆ ಹಾಕಿ ಕೇಳಿದರು.

‘ರಕ್ತ ಕಣಣ್ಣೋ, ಈ ಪಾಟಿ ರಕ್ತ ಚೆಲ್ಲೈತೆ, ಮೈ ಮೇಲೆ ಎಚ್ರ ಇಲ್ದೇ ಕುಡಿತಾ ನಿಂತಿದಿರಲ್ರಪ್ಪ ನಿಮ್ ಗ್ಯಾನಕ್ ನನ್ ಮೆಟ್ ಸಿಗಾಕ’ ಎಂದು ಸರೋಜಕ್ಕ ಅದೇ ಮೆಟ್ಟುಗಳನ್ನು ಗೋಣಿ ಚೀಲಕ್ಕೇ ತಿಕ್ಕುತ್ತಲೇ ಅರಚಿದಳು.

ಅಷ್ಟು ಹೊತ್ತಿನಿಂದ ಅಲ್ಲೇ ನಿಂತು ಕುಡಿಯುತ್ತಿದ್ದರೂ ಯಾರಿಗೂ ಅಲ್ಲಿ ರಕ್ತ ಚೆಲ್ಲಿದ್ದ ಸುಳಿವೂ ಇರಲಿಲ್ಲ. ಅವಳ ಧ್ವನಿ ಕೇಳಿ ಕುಡಿದು ತೇಲುತ್ತಿದ್ದವರೆಲ್ಲಾ ಹಾವು ತುಳಿದವರಂತೆ ನೆಗೆದು ಕುಣಿದಾಡುತ್ತಾ ಪಾದಗಳನ್ನು ನೋಡಿಕೊಳ್ಳತೊಡಗಿದರು. ಅವರ ಕಾಲುಗಳ ನಡುವೆ ನುಗ್ಗಿ ಬಂದ ಬೆಕ್ಕೊಂದು ನೆಲದ ಮೇಲೆ ಚೆಲ್ಲಿದ್ದ ಹಸಿ ರಕ್ತವನ್ನೊಮ್ಮೆ ಬ್ಲಡ್ ಟೆಸ್ಟ್ ಮಾಡುವ ಡಾಕ್ಟರಿನಂತೆ ನಾಲಿಗೆಯಿಂದ ನೆಕ್ಕಿ ನೋಡಿ ಮಿಯಾಂ ಎಂದು ಅದೇನೋ ರಿಪೋರ್ಟ್ ಹೇಳಿ ಮತ್ತೆ ನೆಕ್ಕತೊಡಗಿತು. ನಶೆಯಲ್ಲೇ ಗಿಜಿಗುಡುತ್ತಿದ್ದ ಬಾರು ಈ ಗಲಿಬಿಲಿಯಿಂದ ಮತ್ತಷ್ಟು ಚುರುಕಾಯಿತು. ಎಲ್ಲರೂ ಬಾಯಿಗೆ ಬಂದಂತೆ ರಾಗವಾಗಿ ಮಾತನಾಡತೊಡಗಿದರು. ಈ ಗದ್ದಲ ಕೇಳಿ ಐಪಿಎಲ್ ಪಂದ್ಯ ನೋಡಲು ಪಕ್ಕದಲ್ಲಿದ್ದ ಕಟಿಂಗ್ ಶಾಪಿನಲ್ಲಿ ಸೇರಿದ್ದ ಗುಂಪೊಂದು ಸೇರಿ ಬಾರಿನಲ್ಲಿ ಬೇಡದ ಜನಸಂದಣಿಯಾಯಿತು. ಅದರಲ್ಲಿ ಕೆಲವು ಕುತೂಹಲಕಾರಿ ಯುವಕರು ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಏನಾಯಿತೆಂದು ರೆಕಾರ್ಡ್ ಆಗಿರುವುದನ್ನು ನೋಡಬೇಕೆಂದು ವೀರಭದ್ರಪ್ಪನವರನ್ನು ಒತ್ತಾಯಿಸಿದಾಗ ಆತನಿಗೆ ಮತ್ತಷ್ಟು ಕಿರಿಕಿರಿಯಾಗಿ ಶ್ರೀನಿವಾಸನನ್ನು ಕರೆದು ಕೂಡಲೇ ಚೆಲ್ಲಿದ್ದ ರಕ್ತವನ್ನು ಕ್ಲೀನ್ ಮಾಡಲು ಹೇಳಿದ.

ಬಾರಿನ ಟೇಬಲುಗಳನ್ನು ಕ್ಲೀನು ಮಾಡುತ್ತಿದ್ದ ಸೀನ ವೀರಭದ್ರಪ್ಪ ಕೂಗಿದ್ದು ಕೇಳಿ ಯಾರೋ ಕುಡಿದದ್ದು ಹೆಚ್ಚಾಗಿ ಆಮ್ಲೇಟು ಹೊರಗೆ ಹಾಕಿರಬೇಕೆಂದು ಬಕೇಟು ಪೊರಕೆಗಳ ಸಮೇತವೇ ಹೊರಗೆ ಬಂದ. ಕೌಂಟರಿನ ಮಬ್ಬು ಬೆಳಕಿನಲ್ಲಿ ನೆಲದಲ್ಲಿ ಅದೇನೋ ಕಪ್ಪಗೆ ಚೆಲ್ಲಿದ್ದನ್ನು ಒಂದು ಬೆಕ್ಕು ಮತ್ತೊಂದಷ್ಟು ಜನ ಸುತ್ತಲೂ ನಿಂತು ನೋಡುತ್ತಿದ್ದಾರೆ. ಸೀನ ಮೊದಲು ಬೆಕ್ಕನ್ನು ಪೊರಕೆಯಿಂದ ಹೊಡೆದು ಅಲ್ಲಿಂದ ಓಡಿಸಿದ. ಬೆಕ್ಕು ದೂರದಲ್ಲಿ ಹೋಗಿ ನಿಂತು ಗರ್ಜಿಸಿತು. ನಂತರ ಅಲ್ಲಿ ನಿಂತಿದ್ದವರಿಗೆ ಬದಿಗೆ ಸರಿಯಲು ಹೇಳಿದ. ತಮ್ಮದೇ ತರ್ಕಗಳಲ್ಲಿ ಮುಳುಗಿಹೋಗಿದ್ದ ಅವರೆಲ್ಲಾ ಕದಲದೇ ಅಲ್ಲೇ ನಿಂತಿರಲು ಕಾಲಿಗೆ ಸಿಡಿಯುವಂತೆ ನೀರೆರಚಿ ಪರಪರ ಗುಡಿಸತೊಡಗಿದ. ಹೀಗೆ ಬಾರಿನ ಮಬ್ಬು ಬೆಳಕಿನವರೆಗೆ ಹೋಗಿ ಮಾಯವಾಗಿದ್ದ ಆ ಕಲೆಗಳನ್ನು ತೊಳೆದ ಸೀನ ತಾನು ಬಾರಿನೊಳಕ್ಕೆ ಹೋಗಿ ಮಾಯವಾದ. ಸುಮಾರು ಹೊತ್ತಿನವರೆಗೆ ಅಲ್ಲೇ ನಿಂತಿದ್ದ ಕೆಲವರು ಅಲ್ಲಲ್ಲಿ ಉಳಿದಿದ್ದ ರಕ್ತದ ಹನಿಗಳ ಜಾಡು ಹಿಡಿದು ಹೋರಟರು. ಅದೆಲ್ಲೋ ಲೈಟುಕಂಬದ ಬುಡದಲ್ಲಿದ್ದ ಕತ್ತಲಿನಲ್ಲಿ ಮರೆಯಾಗಿದ್ದನ್ನು ಕಂಡು ಅವರಿಗೂ ನಿರಾಸೆಯಾಯಿತು. ಕಡೆಗೆ ಬೆಕ್ಕು ಯಾವುದೋ ಇಲಿಯೋ ಹೆಗ್ಗಣವನ್ನೋ ಕಚ್ಚಿ ಎಳೆದಾಡಿರಬೇಕು ಎಂಬ ನಿರ್ಧಾರಕ್ಕೆ ಬಂದರು. ಅಷ್ಟರಲ್ಲಿ ಮೆಕ್ಯುಲಮ್ ಔಟಾಗಿ ಕೋಹ್ಲಿ ಬ್ಯಾಟಿಂಗಿಗೆ ಬರಲು ಮತ್ತೆ ಸೆಲೂನಿನ ಒಳಹೊಕ್ಕರು.

ಬಾರಿಗೆ ಜನ ಬರುತ್ತಿದ್ದರು, ಹೋಗುತ್ತಿದ್ದರು. ಕೌಂಟರಿನಲ್ಲಿ ಸೀರಿಯಲ್ ಸೆಟ್ ಹಾಕಿದ್ದ ಹಳೆಯ ವೆಂಕಟರಮಣ ಸ್ವಾಮಿಯ ಫೋಟೋದ ಕೆಳಗೆ ನಿಂತು ವೀರಭದ್ರಪ್ಪ ಪ್ಲಾಸ್ಟಿಕ್ ಲೋಟಗಳಿಗೆ ಹೆಂಡವನ್ನು ಹೊಯ್ದು ದುಡ್ಡು ತೆಗೆದುಕೊಳ್ಳುತ್ತಲೇ ಇದ್ದರು. ಅಷ್ಟರಲ್ಲಿ ಕ್ರಿಕೆಟ್ ಮ್ಯಾಚು ಮುಗಿದಿತ್ತೇನೋ, ಕಟಿಂಗ್ ಶಾಪಿನ ಬಾಗಿಲು ಹಾಕಿಕೊಂಡು ಜನರೆಲ್ಲಾ ಹೊರಗೆ ಬಂದರು. ಆರ್ಸೀಬಿ ಮೇಲೆ ಬೆಟ್ಟು ಹಾಕಿದ್ದ ಕೆಲವರು ಹಾಗೆ ಬಾರಿಗೊಂದು ವಿಸಿಟ್ಟು ಕೊಟ್ಟು ಹೊರನೆಡೆದರು. ನಡುರಾತ್ರಿ ದಾಟಿ ಕೊನೆ ಪಂಕ್ತಿಯ ಕುಡುಕರು ಲೋಟ ಖಾಲಿ ಮಾಡಿ ಹೋದ ಮೇಲೆ ವೀರಭದ್ರಪ್ಪ ಅಂದಿನ ಲೆಕ್ಕ ಬರೆದಿಡಲು ಶುರು ಮಾಡಿದರು.

ಇತ್ತ ಸೀನಾ ಒಳಗಿದ್ದ ಟೇಬಲ್ಲಿನಲ್ಲಿ ಉಳಿಸಿ ಹೋಗಿದ್ದ ಬಾಟಲಿಗಳನ್ನು ಕ್ಲಿಯರ್ ಮಾಡಿ ಚೆಲ್ಲಿದ್ದ ಹೆಂಡ, ಬಿರಿಯಾನಿ, ಕಬಾಬು, ಮತ್ತು ಅಸಂಖ್ಯಾತ ಮೂಳೆ ತುಂಡುಗಳನ್ನು ಗುಡಿಸುತ್ತಾ. ಕೊನೆಯ ಟೇಬಲ್ಲಿಗೆ ಹೋಗಲು ಸ್ವಲ್ಪ ಹೊತ್ತಿನ ಮೊದಲು ಹೊಡೆದು ಓಡಿಸಿದ್ದ ಬೆಕ್ಕು ಕುಳಿತು ಕಪ್ಪು ಬಣ್ಣದ ಕವರೊಂದನ್ನು ನೆಕ್ಕುತ್ತಿದೆ. ಸೀನ ಉಷ್ ಎಂದು ಮತ್ತೆ ಅದನ್ನು ಓಡಿಸಿ ಕವರನ್ನು ಪರಕೆಯಲ್ಲಿ ಎಳೆದು ಬಕೇಟಿಗೆ ತುಂಬಿಸಲು ನೋಡಿದರೆ ಭಾರವಿದ್ದಂತೆ ಕಂಡಿತು. ಕೈಯಲ್ಲೇ ಹತ್ತಿರಕ್ಕೆ ಎಳೆದುಕೊಂಡು ತೆಗೆದು ನೋಡಿದ. ಪೇಪರಿನಲ್ಲಿ ಕಟ್ಟಿಕೊಟ್ಟಿದ್ದ ಅವರ ಹೋಟಲಿನದ್ದೇ ಕಬಾಬು. ಪೇಪರೆಲ್ಲಾ ಜಿಡ್ಡು ಜಿಡ್ಡಾಗಿ ಅಂಟಿದಂತಾಗುತ್ತಿತ್ತು. ಆದರೆ ಅದು ಎಣ್ಣೆಯ ಜಿಡ್ಡಲ್ಲ ಎಂದು ಸೀನನಿಗೆ ಅನುಮಾನ ಬಂದಿತು. ಕಬಾಬನ್ನು ಟೇಬಲಿನ ಮೇಲೆ ಇಟ್ಟು ಕವರಿನೊಳಗೆ ಕೈ ಹಾಕಿದ. ಕೈಗೆ ಒಳಗೇನೋ ಬೆರಳಿನಂತದ್ದು ತಗುಲಿ ಅರೆಕ್ಷಣ ಬಾರಿನ ಹಿಂದಿನ ಕತ್ತಲೆಯಲ್ಲಿ ಪಾನು ಶಾಪು ಸಾವಿತ್ರಕ್ಕನ ಮಗಳು ಸುಶ್ಮಾಳ ಕೈಹಿಡಿದು ಬೆರಳಲ್ಲಿ ಬೆರಳು ಬೆಸೆದಿದ್ದು ನೆನಪಾಗಿ ರೋಮಾಂಚನವಾದರೂ ಮರುಕ್ಷಣವೇ ನಿಂತಲ್ಲಿಯೇ ಬೆವರಿ ನೀರಾಗಿಹೋದ.

ಸೀನನಿಗೆ ದೂರದ ಕೌಂಟರಿನಲ್ಲಿದ್ದ ವೀರಭದ್ರಪ್ಪನನ್ನು ಕರೆಯಬೇಕೋ ಅಥವಾ ಹತ್ತಿರದಲ್ಲಿದ್ದ ಅಡುಗೆ ಮನೆಯಲ್ಲಿದ್ದ ಭಟ್ಟ ನಾರಾಯಣನನ್ನು ಕರೆಯಬೇಕೋ ಗೊತ್ತಾಗಲಿಲ್ಲ. ಹೀಗೆ ‘ಕೈಗೆ ಕೈ ತಾಕಿ’ ರೋಮಾಂಚನವಾದ ಮೇಲೆ ಆತನ ಗಂಟಲಿನಿಂದ ಹೊರಡುವ ಧ್ವನಿ ಯಾರನ್ನು ತಲುಪಲು ಸಾಧ್ಯ ಎಂದು ಅವನಿಗೆ ಅಂದಾಜು ಸಿಗಲಿಲ್ಲ. ಆದರೂ ಧೈರ್ಯ ಮಾಡಿ ಇಬ್ಬರನ್ನು ಕೂಗುವುದು ಎಂದು ನಿರ್ಧರಿಸಿ ಕೂಗಿಕೊಂಡ.

‘ನಾರಾಯ್ನ.. ಓಯ್ ನಾರಾಯ್ನ.. ಸಾವ್ಕಾರ್ರೆ.. ಇಲ್ ಬನ್ನಿ’ ಎಂದು ಗಜೇಂದ್ರ ಮೋಕ್ಷ ಕಥೆಯಲ್ಲಿ ಮೊಸಳೆ ಬಾಯಿಗೆ ಸಿಕ್ಕು ಕಷ್ಟದಲ್ಲಿದ್ದ ಆನೆ ವಿಷ್ಣುವನ್ನು ಕೂಗುವಂತೆ ಕೂಗಿದ. ಅಂತೂ ಆತನ ಅರ್ತನಾದ ಗುರಿ ಮುಟ್ಟಿತು. ಈತ ಬೊಬ್ಬೆ ಹಾಕುವುದನ್ನು ಕೇಳಿ ತಾನೆ ಮಾಡಿದ್ದ ಬಿರಿಯಾನಿ ತಿನ್ನುತ್ತಿದ್ದ ನಾರಾಯಣ ತಟ್ಟೆ ಕೈಯಲ್ಲೇ ಹಿಡಿದು ಓಡಿಬಂದರೆ, ವೀರಭದ್ರಪ್ಪ ಅವಸರದಲ್ಲಿ ಕೈಯಲ್ಲಿದ್ದ ನೋಟಿನ ಕಂತೆಯನ್ನು ಪೆಟ್ಟಿಗೆಗೆ ಸೇರಿಸಿ ಬೀಗ ಜಡಿದು ಮುಂದಿದ್ದ ಷಟರ್ ಪೂರ್ತಿ ಕೆಳಗೆಳೆದು ಓಡಿ ಬಂದರು.

‘ಲೇಯ್ ಮುಚ್ಚಾ ಬಾಯಿ, ಅದ್ಯಾಕಂಗ್ ಅರಚತೀಯಲೇ ಇಷ್ಟೊತ್ನಾಗೆ? ಏನಾದ್ರು ಹಾವು ಚೇಳು ಎನಾದ್ರು ಕಡಿತಾ?’ ವೀರಭದ್ರಪ್ಪ ಒಳಬರುತ್ತಾ ಗದರಿದರು.

ಸೀನನಿಗೆ ಅವರು ಗದರಿದ್ದು ಕಂಡು ಹೊರಟ ಮಾತು ಗಂಟಲಲ್ಲೇ ಉಳಿದು ಟೇಬಲಿನಲ್ಲಿದ್ದ ಕವರಿನ ಕಡೆಗೆ ಕೈ ತೋರಿಸಿ ‘ಅದು.. ಕವರು.. ಕೈ..’ ಎಂದು ತೊದಲತೊಡಗಿದ.

‘ಏ ನಾರಾಯ್ಣ, ಅದೇನ್ ನೋಡ್ಲಾ ಕವರ್ನಾಗೆ’ ವೀರಭದ್ರಪ್ಪ ಕಿರಿಕಿರಿಯಲ್ಲಿ ಹೇಳಿದರು.

ನಾರಾಯಣ ಊಟದ ತಟ್ಟೆಯನ್ನು ಬಲಗೈಯಲ್ಲಿ ಹಿಡಿದು ಎಡಗೈಯಲ್ಲಿ ಕವರನ್ನೊಮ್ಮೆ ಒತ್ತಿ ನೋಡಿದ. ಏನೋ ಬಾಳೆ ದಿಂಡಿನಂತಿತ್ತು. ಕತ್ತಲಲ್ಲಿ ಕವರಿನ ತುದಿ ಎಲ್ಲಿದೆ ಸಿಗದೆ ಕವರನ್ನೇ ಎತ್ತಿ ನೆಲಕ್ಕೆ ಕೊಡವಿದ. ಕವರನ್ನು ಕೊಡವಿದ ನಾರಾಯಣನ ಕೈಯೇ ಕೆಳಕ್ಕೆ ಕತ್ತರಿಸಿ ಬಿದ್ದಂತೆ ಒಳಗಿನಿಂದ ಮನುಷ್ಯನ ರಕ್ತಸಿಕ್ತವಾದ ಕೈಯೊಂದು ಕೆಳಗೆ ಬಿದ್ದಿತು. ಅದರ ಹಿಂದೇಯೇ ಒಂದಷ್ಟು ಕರ್ರನೇ ರಕ್ತವೂ ಚೆಲ್ಲಿ ನಿಂತಿದ್ದವರ ಕಾಲಿಗೆಲ್ಲಾ ಸಿಡಿಯಿತು. ಅದರ ಸುತ್ತಾ ಇದ್ದ ಮೂರು ಜೀವಗಳು ಸ್ತಬ್ಧರಾದರೆ ಕಿಟಕಿಯಲ್ಲಿದ್ದ ಜೀವವೊಂದು ಸತ್ಯ ಮೊದಲೇ ಗೊತ್ತಿದ್ದಂತೆ ಮಿಯಾಂ ಎಂದಿತು. ತನ್ನ ಕಾಲ ಬುಡದಲ್ಲಿ ಬಂದು ಬಿದ್ದ ಕೈಯನ್ನು ಕಂಡ ಸೀನ ಬೊಬ್ಬೆ ಹಾಕಲು ಬಾಯಿ ತೆರೆದು ಅದೆಷ್ಟು ಹೊತ್ತಾಗಿತ್ತೋ, ಅಂತೂ ಗಂಟಲಿನಿಂದ ವಿಕಾರವಾದ ಕೂಗೊಂದು ಹೊರಗೆ ಬಂದಿತು. ಅದುವರೆಗೆ ಸಾವಿರಾರು ಪ್ರಾಣಿಗಳ ಕೈಕಾಲುಗಳನ್ನು ಕತ್ತರಿಸಿದ್ದ ನಾರಾಯಣನ ಮುಖವೂ ಭಯದಿಂದ ಬಿಳುಚಿಕೊಂಡಿತ್ತು. ಇದ್ದ ಮೂವರಲ್ಲಿ ವೀರಭದ್ರಪ್ಪನೇ ಸ್ವಲ್ಪ ಗಟ್ಟಿ ಮನುಷ್ಯ. ಆತನಿಗೆ ಇದು ಸಾಮಾನ್ಯ ಸಂಗತಿ ಅಲ್ಲದಿದ್ದರೂ ತೀರಾ ಭಯ ಬೀಳುವಂತ ಸಂಗತಿಯೇನು ಆಗಿರಲಿಲ್ಲ. ಸ್ವಲ್ಪ ಹೊತ್ತಿನ ಮುಂಚೆ ಬಾರಿನ ಹೊರಗೆ ಚೆಲ್ಲಿದ್ದ ರಕ್ತದ ಮೂಲ ಇಲ್ಲಿಯವರೆಗೆ ಬಾರಿನೊಳಗೆ ಕುಳಿತಿತ್ತು ಎಂದು ಯೋಚಿಸಿ ಅವರಿಗೆ ಆತಂಕವಾಯಿತು. ಅಲ್ಲಿ ಕುಳಿತಿದ್ದವರು ಯಾರೆಂದು ಕೇಳೋಣವೆಂದರೆ ವೇಟರುಗಳು ಆಗಲೇ ಮನೆಗೆ ಹೋಗಿಬಿಟ್ಟಿದ್ದರು. ವೀರಭದ್ರಪ್ಪ ಧೈರ್ಯ ತಂದುಕೊಂಡು ಇಬ್ಬರ ಮುಖವನ್ನೂ ನೋಡಿ ಹೆದರಿ ನಡುಗುತ್ತಿದ್ದ ಸೀನನಿಗೆ ಒಳಗೆ ಹೋಗುವಂತೆ ಗದರಿಸಿದರು.

ಕೆಳಗೆ ಬಿದ್ದಿದ್ದ ಕೈಯನ್ನೊಮ್ಮೆ ದಿಟ್ಟಿಸಿ ನೊಡಿ ಏನನ್ನೋ ಯೋಚಿಸಿ ನಾರಾಯಣನಿಗೆ ‘ಲೋ ನಾರಾಯ್ಣ, ಬೇಗ ಹೋಗಿ ಆ ಎಲೆಕ್ಷನ್ ಚೆಕ್ ಪೋಸ್ಟ್ ಹತ್ರ ಯಾರಾದ್ರೂ ಪೋಲಿಸ್ನೋರು ಇರ್ತಾರೆ. ಹೋಗಿ ಹಿಂಗಿಂಗೆ ಅಂತ ಹೇಳಿ ಜಲ್ದಿ ಕರ್ಕೊಂಡ್ ಬಾ, ಎಂದು ಮತ್ತೇನೋ ಹೇಳಲು ಬಾಯಿ ತೆರೆದರು ಅಷ್ಟರಲ್ಲಿ,

‘ಬ್ಯಾಡ ಸ್ವಾಮಿ, ಆ ಪೋಲೀಸ್ನೋರು ಬಂದು ಕೈಯ ಎತ್ಕೊಂಡೋಗ್ಬಿಟ್ರೆ ನಾ ತಿರ್ಗಾ ಪೋಲಿಸ್ ಸ್ಟೇಷನ್ ಮ್ಯಾಲೇ ದಾಳಿ ಇಕ್ಬೇಕಾಯ್ತದೆ.’ ಅಂತ ಟಾಯ್ಲೆಟ್ಟು ರೂಮಿನ ಕಡೆಯಿಂದ ಧ್ವನಿಯೊಂದು ಬಂದಿತು.

ಧ್ವನಿಯ ಹಿಂದೆಯೇ ಐದು ಮುಕ್ಕಾಲಡಿ ಎತ್ತರದ ಸಣಕಲು ಆಕೃತಿಯೊಂದು ಹೊರಗೆ ಬಂದು ತೂರಾಡುತ್ತಾ ಟೇಬಲ್ಲುಗಳನ್ನು ಹಿಡಿದು ಸೀದಾ ಇವರ ಬಳಿಗೆ ತಲುಪಿತು. ವಯಸ್ಸು ಸುಮಾರು ಅರವತ್ತು-ಅರವತ್ತೈದಿರಬಹುದು. ಒಂದು ದಿನದ ಮಟ್ಟಿಗೆ ಮಾಸಿದ್ದ ಬಿಳಿ ಪಂಚೆ, ಮೇಲೊಂದು ಮ್ಯಾಚಿಂಗ್ ಇರದ ಬಣ್ಣದ ಅಂಗಿ. ಕೋಲುಮುಖ, ದಪ್ಪ ದಪ್ಪ ಹುಬ್ಬುಗಳು, ನೀಟಾಗಿ ಗಡ್ಡ ಮೀಸೆಗಳನ್ನು ಶೇವ್ ಮಾಡಿದ್ದರೂ ತುಟಿಗಳ ಮೇಲೊಂದು ಮೀಸೆ ಇಟ್ಟರೆ ಕಣ್ಣಿನ ಬುಡದಲ್ಲಿದ್ದ ಗಾಯದ ಗುರುತಿನ ಜೊತೆ ಸೇರಿ ಮುಖ ಇನ್ನೆಷ್ಟು ಭೀಕರವಾಗಿ ಕಾಣಬಹುದೆಂದು ಊಹಿಸಿಕೊಳ್ಳಬಹುದಿತ್ತು.

‘ದಾಳಿ ಇಕ್ಕದೇನ್ ತೊಂದ್ರೆ ಇಲ್ಲ, ಆದ್ರೆ ಈ ಬೆಂಗ್ಳೂರೈತಲ್ಲ, ಬೋ ವಿಚಿತ್ರ, ಒಂದ್ ಸರಿ ಬಂದಾಗ ಇದ್ದಂಗೆ ಇನ್ನೊಂದ್ ಸರಿ ಇರಲ್ಲ, ಓದ್ ಸರಿ ಪೋಲಿಸ್ ಸ್ಟೇಷನು ಇದ್ದಿದ್ ಜಾಗ್ದಲ್ಲಿ ಈಗ ಪೋಸ್ಟಾಪೀಸು ಆಗಿರುತ್ತೆ, ಹುಡ್ಕೊದ್ ಕಷ್ಟ ಸ್ವಾಮಿ’ ಎಂದು ಹೇಳಿ ಅಮಲೇರಿದ ಕಣ್ಣುಗಳಲ್ಲಿ ಅವಕ್ಕಾಗಿ ನಿಂತಿದ್ದ ಮೂವರನ್ನೂ ನೋಡಿದ ಆ ವ್ಯಕ್ತಿ.

ಮೂವರ ಮುಖದಲ್ಲೂ ಭಯ ಕುತೂಹಲಗಳು ವಿಸ್ಕಿಗೆ ನೀರು ಬೆರೆತಷ್ಟು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಭಯದಲ್ಲಿ ಮಾತು ಹೊರಬರದೆ ತುಟಿ ಅದುರುತ್ತಿದ್ದರೆ, ಕಣ್ಣಲ್ಲಿ ಕುತೂಹಲ ಮನೆ ಮಾಡಿತ್ತು. ಇದರ ಪರಿವೆಯೇ ಇಲ್ಲದಂತೆ ಆ ವ್ಯಕ್ತಿ ಟಾಯ್ಲೆಟ್ಟಿನಲ್ಲಿ ಸರಿಯಾಗಿ ಕಟ್ಟಿಕೊಳ್ಳದೇ ಉದುರುತ್ತಿದ್ದ ಪಂಚೆಯನ್ನು ಬಿಗಿದುಕೊಂಡು ಕಾಲು ಬೆರಳಿನಲ್ಲಿ ಬ್ಯಾಲನ್ಸ್ ಮಾಡಿ ಮೇಲಕ್ಕೆತ್ತಿ ಕಟ್ಟಿಕೊಂಡ. ಜೇಬಿನಿಂದ ಅರ್ಧ ಸೇದಿದ ಬೀಡಿಯೊಂದನ್ನು ಬಾಯಲ್ಲಿಟ್ಟು ಜೇಬೆಲ್ಲ ತಡಕಾಡಿ ಸಿಕ್ಕ ಪೊಟ್ಟಣದಲ್ಲಿದ್ದ ಕೊನೆಯ ಬೆಂಕಿ ಕಡ್ಡಿಯನ್ನು ಗೀಚತೊಡಗಿದ. ಕೈ ಒದ್ದೆಯಾಗಿದ್ದಕ್ಕೋ ಏನೋ ಕಡ್ಡಿ ಹತ್ತದೇ ಇರಲು ಮೂವರೂ ಕಡ್ಡಿಯನ್ನೇ ನೋಡತೊಡಗಿದರು. ಇದ್ದಕ್ಕಿದ್ದಂತೆ ರಪ್ಪನೆ ಬೆಂಕಿ ಕಿಡಿ ಹೊತ್ತಿಕೊಳ್ಳಲು ನಿಧಾನವಾಗಿ ಬೀಡಿ ಹಚ್ಚಿದ ವ್ಯಕ್ತಿ ನಡುಗುತ್ತಿದ್ದ ಕೈಯಲ್ಲಿ ಪೊರಕೆಯನ್ನು ಹಿಡಿದುಕೊಂಡಿದ್ದ ಸೀನನನ್ನು ನೋಡಿ ಒಮ್ಮೆ ನಕ್ಕು ಹೊಗೆ ಬಿಟ್ಟ.

‘ಮಿಕ್ಸಿಂಗಲ್ಲಿ ಏನೋ ಎಡವಟ್ಟಾಗೈತೆ, ಅದಕ್ಕೆ ಎರಡಕ್ ಹೋದಾಗ್ಯಾಕೋ ಜೊಂಪ್ ಹತ್ತದಂಗಾಗೈತೆ ಕಣ್ರಪ್ಪ. ನೀವೇನೋ ಕ್ಲೀನು ಮಾಡ್ಕೊತಿದ್ರೇನೋ ಮಾಡ್ಕಳಿ, ನಿಮಗ್ಯಾಕ್ ತೊಂದ್ರೆ’ ಎಂದು ಮೂವರಿಗೂ ಹೇಳಿ ನಾರಾಯಣನ ಕೈಯಲ್ಲಿದ್ದ ಕವರನ್ನು ಕಿತ್ತುಕೊಂಡ ಆ ವ್ಯಕ್ತಿ ಅನಾಮತ್ತಾಗಿ ಕೆಳಗೆ ಬಿದ್ದಿದ್ದ ಕೈಯನ್ನು ಚಿಕ್ಕ ಮಕ್ಕಳು ಆಟದ ಸಾಮಾನು ಎತ್ತಿಕೊಳ್ಳುವಂತೆ ಎತ್ತಿ ಕವರಿಗೆ ಹಾಕಿಕೊಂಡು ಟೇಬಲ್ಲಿನ ಮೇಲೆ ಇಟ್ಟಿದ್ದ ಕಬಾಬನ್ನು ಅದರೊಳಗೆ ತುಂಬಿಕೊಂಡು ಗಂಟು ಕಟ್ಟಿದ. ಆ ಕೋಳಿಯ ಮಸಾಲೆ ಬೆರೆತ ಮಾಂಸದ ತುಂಡುಗಳು ರಕ್ತ ಸೋರುತ್ತಿದ್ದ ಮನುಷ್ಯನ ಹಸಿ ಮಾಂಸದ ಜೊತೆಗೆ ಬೆರತ ಪರಿಯನ್ನು ಕಂಡು ಅಡುಗೆ ಮನೆಯ ಬಾಗಿಲಿನಲ್ಲಿದ್ದ ನಾರಾಯಣ ಮುಖ ಕಿವುಚಿದ.

ಹೊರಡಲು ಬಾಗಿಲ ಕಡೆಗೆ ತಿರುಗಿದ ವ್ಯಕ್ತಿ ಅದಕ್ಕೂ ಮೊದಲು ಅಷ್ಟು ಹೊತ್ತಿನಿಂದ ಏನೂ ನಿಂತು ತನ್ನನ್ನೇ ನೋಡುತ್ತಿದ್ದ ಆ ಮೂವರಿಗೂ ತನ್ನಿಂದ ತಡವಾಗಿದ್ದಕ್ಕೆ ಕಾರಣ ನೀಡಬೇಕೆನ್ನಿಸಿತೇನೋ, ಬಾಯಲ್ಲಿದ್ದ ಮೋಟು ಬೀಡಿಯನ್ನು ಎರಡು ಬಾರಿ ಧೀರ್ಘವಾಗಿ ಎಳೆದು ನೆಲಕ್ಕೆಸೆದು ಚೂರು ತೊದಲದೇ ಮಾತನಾಡತೊಡಗಿದ.

‘ನಾನ್ ಕತ್ಲಾಗೋ ಒತ್ಗೆ ಕೆಲ್ಸ ಮುಗ್ಸಿ ಊರ್ ಸೇರ್ಕಳನಾ ಅಂತಾನೇ ಬಂದುದ್ದು, ಆ ತಿರ್ಭೋಕಿ ಟೈಲರ್ದು ಅಂಗಡಿ ಉಡ್ಕೋ ಒತ್ಗೆ ಸಾಕ್ ಸಾಕಾಗೋಯ್ತು. ನಮ್ ಮಗಾ ಇಲ್ಲೇ ಈ ಬೆಂಗ್ಳೂರ್ನಾಗೆ ನರ್ಸಿಂಗ್ ಮಾಡ್ತೈತೆ. ಆಸ್ಪೆಟ್ಲಾಗೆ ಏನೋ ಫಂಕ್ಷನ್ನು, ಬ್ಲೌಜು ಒಲ್ಸನಾ ಅಂತ ಆವಯ್ಯಂತಾಕೆ ಓದ್ರೆ, ಅಳ್ತೆ ತಗತೀನಿ ಅಂತ ನಮ್ ಮಗೀದು ಬೆನ್ ಸವರ್ತಾನಂತೆ ಹಲಾಲ್ಕೋರ್’, ಆ ಕೊಳ್ ಸುತ್ತಾ ಇದ್ದಿದ್ದ್ ಟೇಪಲ್ಲೇ ನೇಣಾಕ್ಬುಡ್ತಿದ್ದೆ ಸೂಳೆಮಗನ್ನಾ. ಫುಲ್ ಮಡ್ರು ಬೇಡ, ಅವನಗೂ ಎಂಡ್ರು ಮಕ್ಳಿರ್ತವೆ, ಆಫು ಸಾಕು ಅಂತ ನಮ್ ಹೆಂಗಸ್ರು ಒತ್ತಿ ಒತ್ತಿ ಯೋಳ್ ಕಳ್ಸಿದ್ರು. ಅದಕ್ಕೆ ಬುಟ್ಬಂದೆ. ಈಗ ಕೈಯೂ ತಕ್ಕಂಡೋಗ್ಲಿಲ್ಲಾ ಅಂದ್ರೆ ನಾಕೂರ್ನಾಗೆ ಈ ಪಾಪಣ್ನ ಮರ್ವಾದೇ ಏನಾಗ್ಬೇಡಾ. ಉಣ್ಣೋ ಕೈ ತೆಗದ್ರೆ ಬಡ್ಡಿ ಮಗ ಚಮಚದಲ್ಲಿ ತಿಂತಾನೆ, ಈಗ ತೊಳ್ಕೊಳೋ ಕೈ ತೆಗದಿದಿನಲ್ಲ ಚಮಚ ತಕಂಡು ತಿಕ ತೊಳ್ಕಳ್ಳಿ ನೋಡನಾ’

ನಿಧಾನವಾಗಿ ಸೋನೆ ಮಳೆಯಂತೆ ಶುರುವಾದ ಮಾತುಗಳು ಕೊನೆಗೆ ಕೊನೆಗೆ ಸಿಡಿಲಿನಂತೆ ಆರ್ಭಟಿಸಿದ್ದವು. ಕಡೆಗೆ ಮಳೆ ನಿಂತ ಮೇಲೆ ಉಳಿವ ಮೌನದಂತಹದೇ ಒಂದು ಆ ಬಾರಿನಲ್ಲಿ ಉಳಿದುಕೊಂಡಿತ್ತು. ಆದರೆ ತೊಟ್ಟಿಕ್ಕುತಿದ್ದದ್ದು ಮಾತ್ರ ಮಳೆಹನಿಯಲ್ಲ. ಕವರಿನಲ್ಲಿದ್ದ ರಕ್ತ.

ಹೇಳಿದ್ದೆಲ್ಲವನ್ನು ಮುಗಿಸಿದ ಪಾಪಣ್ಣ ‘ನಾನಿನ್ ಬತ್ತಿನ್ರಪ್ಪ, ಲಾರಿ ಗೀರಿ ಹತ್ಕಂಡು ಒತ್ತಾರೆಗೆ ಊರ್ ಸೇರ್ಕಬೇಕು’ ಎಂದು ಕೈಮುಗಿದು ಎದ್ದು ಬಾಗಿಲ ಕಡೆಗೆ ನೆಡೆಯತೊಡಗಿದ.

(ರಕ್ತ ಮುಂದೆ ಹರಿಯುವುದು)