Showing posts with label Kannada. Show all posts
Showing posts with label Kannada. Show all posts

Monday, November 21, 2016

ಕಪ್ಪು ಕಾಂಚಾಣ

ಕಪ್ಪು ಕಾಂಚಾಣ


ಕಪ್ಪು ಕಾಂಚಾಣ ಕುಣಿಯುತ್ತಲಿದ್ಲು
ಬ್ಯಾಂಕೊಳಗೆ ಬರದೆ ನುಲಿಯುತ್ತಲಿದ್ಲು

ಎಲೆಕ್ಷನ್ ಹೊತ್ತಲ್ಲಿ ಸೂಟ್ಕೇಸಲಿ ಕುಳಿತು
ಸೀಟೀನ ಡೀಲನ್ನು ಕುದುರಿಸುತ್ತಿದ್ಲು
ಬಡತನದೆದುರು ನಡುವನ್ನು ಕುಲುಕಿಸಿ
ನೋಟದಲೇ ಓಟನ್ನು ಉದುರಿಸುತ್ತಿದ್ಲು

ಲಂಚಿಗೂ ಕೂಡ ಲಂಚಾನೇ ನುಂಗ್ತಿದ್ದ
ಸಾಹೇಬಗೂ ಇವಳೇ ಊಟ ಬಡಿಸಿದ್ಲು
ಸರ್ವೀಸು ಮುಗಿಸುವ ಹೊತ್ತಿಗಾಗಲೇ
ಕೋಟಿ ಕೋಟಿಗಳ ಸೈಟು ಕೊಡಿಸಿದ್ಲು

ದೇಗುಲದ ಹುಂಡಿಯ ಕಿಂಡಿಯ ಒಳಗೂ
ಇವಳದ್ದೆ ಕರಿಛಾಯೆ ಇಣುಕುತ್ತಲಿತ್ತು
ಧನ ಕನಕ ತೊರೆದ ಕಾವಿ ಸ್ವಾಮಿಯನು
ಕರಿಗೆಜ್ಜೆ ಸೌಂಡು ಕೆಣಕುತ್ತಲಿತ್ತು

ಮೋದಿ ಬಂದು ಇವಳ ಕರಿಸೀರೆ ಕಳಚಲು
‘ಇಟ್ಕಂಡೋರ’ ಫೇಸು ಮಂಕಾಗಿ ಹೋಯ್ತು
ಕಣ್ಣೆದಿರೆ ಸೀರೆ ಬದಲಾಗಿದ್ದನು ಕಂಡ
ಗಾಂಧಿ ತಾತನ ಮೂತಿ ಪಿಂಕಾಗಿ ಹೋಯ್ತು

ಯರ್ಯಾರ ಜೊತೆಗೆ ಎಲ್ಲೆಲ್ಲಿ ಇದ್ಲೋ
ಬಿಳಿಸೀರೆ ಉಟ್ಟು ಬ್ಯಾಂಕಲ್ಲಿ ಬಿದ್ಲೋ


(ಇದಕ್ಕೆ ಸ್ಪೂರ್ತಿಯಾದ, ಕುರುಡು ಕಾಂಚಣ ಪದ್ಯ ಬರೆದ ಬೇಂದ್ರೆಯವರ ಅಕೌಂಟಿಗೆ, ಕೋಟಿ ನಮನ)

- ತ್ರಿವಿಕ್ರಮ

Tuesday, June 28, 2016

ಲೇಟೆಸ್ಟು ಬಂಧನ

ಲೇಟೆಸ್ಟು ಬಂಧನ

ಕೇಳ್ರಪ್ಪೋ ಕೇಳಿ :

ಮತ್ತೆ ಜಾರಿಯಾಗಿದೆ ನನಗೆ
ಹೊಸ ಹಾರ್ಟಲ್ಲಿ ಸೆರೆಮನೆ ವಾಸ
ಒಮ್ಮೆ ಜಾರಿಬಿದ್ದು ಮೇಲೆದ್ದಿದ್ದರೂ
ಮತ್ತೆ ಸುತ್ತಿಕೊಂಡಿದೆ ಪ್ರೇಮಪಾಶ
ಏನು ತಾನೇ ಮಾಡೋದು?
ಎಲ್ಲಾ ಅವಳ ಸಹವಾಸ ದೋಷ..!

ಹೊಸ ಪರಿಚಯವೇನಲ್ಲ
ಅವಳೊಂದು ಹಳೆಯ ನೆನಪು
ಬಾಳ ಜಂಜಾಟದಲ್ಲಿ
ಪ್ರೀತಿ ಪರದಾಟದಲ್ಲಿ
ಉಂಟಾಗಿತ್ತು ಕೊಂಚ ಗ್ಯಾಪು
ನಾನೆಂದು ಊಹಿಸಿರಲಿಲ್ಲ
ಅವಳು ಮರಳಿ ಬರಬಹುದೆಂದು
ಹಿಡಿದು ನನ್ನೆದೆಗೆ ಮ್ಯಾಪು

ಅವಳು ಬಂದಳು;
ಪ್ರೀತಿಯಲೊಮ್ಮೆ ಎಡವಿ
ಬಿದ್ದದ್ದ ನನ್ನ ಮೈದಡವಿ
ಮುದ್ದು ಮಾಡಿದಳು
ಎದೆಯೊಡೆದಾಗ ಆಗಿದ್ದ
ಮಾಯದ ಗಾಯಕ್ಕೆ
ಮದ್ದು ಮಾಡಿದಳು
ಹೊಸ ಪ್ರೀತಿ ಪಾಠವ ಕಲಿಸಿ
ತಿದ್ದಿ ಬುದ್ಧಿ ಹೇಳಿದಳು

ಎಣಿಸಿದರೆ ನನಗಿದು
ಸುಮಾರು ಆರನೇ ಪ್ರೀತಿ
ಆದರೂ ನನಗಿಂತಲೂ
ಅವಳಿಗೆ ಅನುಭವ ಜಾಸ್ತಿ
ನಿಮಗ್ಯಾರಿಗೂ ತಿಳಿದಿರದು
ಅವಳೆಂಥಹಾ ಪುಣ್ಯಾತ್ಗಿತ್ತಿ..!

ಮೊದಮೊದಲು ನಾ
ಭಾವಿಸಿದೆ ನಮ್ಮ ನಡುವಿನ
ಭಾವನಗೆಳು ಕೃತಕವೆಂದು
ಅನುಮಾನಿಸಿದೆ ಆ ಸುಖದ
ಅನುಭವಗಳು ಕ್ಷಣಿಕವೆಂದು
ಆದರೆ ನನಗಾಗಿ ಕಾದಿತ್ತು
ಕಲ್ಪನೆಗೂ ಮೀರಿದ ಕೌತುಕವೊಂದು
ಒಮ್ಮೊಮ್ಮೆ ಸುಳ್ಳು ಕೂಡ
ಆಗುವುದು ಹಸಿ ಸತ್ಯ
ಆಹ್ವಾನವಿತ್ತಳು ಸ್ವೀಕರಿಸಲು
ಅವಳ ಒಲವಿನ ಆತಿಥ್ಯ

(ಅವಳೋ
ಸೌಂದರ್ಯದ ಸೊಕ್ಕು ಮುರಿದು
ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ರೂಪಸಿ
ನಾನೋ
ಬಸ್ ಸ್ಟಾಂಡಿನಲಿ ಬರದ ರೈಲಿಗೆ
ಬೆಳಗಾನ ಕಾದು ಕೂತಿದ್ದ ಬೇವರ್ಸಿ)

ನಾನೂ ಯೋಚಿಸಿದೆ :
ಹುಡುಗಿಯೂ ಸೂಪರ್
ಮುಗಿದು ಹೋಗುವ ಮುನ್ನ
ಇಂಥ ಒಳ್ಳೆ ಆಫರ್
ಹೃದಯಾನ ಮಾರಿಯಾದರೂ
ಜೀವನದ ಯಾನದಲಿ
ಜೊತೆ ಬರುವೆನಂದು
ಸೈನ್ ಮಾಡಿಕೊಟ್ಟೆ ಪೇಪರ್

ಪ್ರೀತಿ ಲೀಕಾಗಿದ್ದ
ಬಾಳ ನೌಕೆಗೀಗ
ಮತ್ತೆ ತುಂಬಿಸಿಹಳು ಇಂಧನ
ನನಗವಳು ಲೈಕಾಗಿ
ನಾನವಳಿಗೆ ಲಾಕಾಗಿ
ಶುರುವಾಗಿದೆ ‘ಲೇಟೆಸ್ಟು ಬಂಧನ’

(ಹಾಕ್ರೋ ಸ್ಟೆಪ್ಪು)

-ತ್ರಿವಿಕ್ರಮ

Sunday, February 21, 2016

ಸಿಟ್ಟಿಗೊಂದು ಸಾನೆಟ್ಟು

ಸಿಟ್ಟಿಗೊಂದು ಸಾನೆಟ್ಟು
 

ನಿನ್ನ ಸೃಷ್ಟಿ ಮಾಡವಾಗ ಬ್ರಹ್ಮ ಮಾಡಿಬಿಟ್ಟ ಸಣ್ಣ ಲೋಪ
ಮೂಗು ಸ್ವಲ್ಪ ಉದ್ದ ಮಾಡಿ ಅದರ ತುದಿಯಲಿಟ್ಟ ಕೋಪ.
ನಿನ್ನ ಕೋಪ ನನಗೆ ವರದೊಡನೆ ಕೊಟ್ಟ ಬಿಟ್ಟಿ ಶಾಪ
ಈಗ ನನಗೆ ನಾನೇ ಅಂದುಕೊಳ್ಳಬೇಕು ‘ಅಯ್ಯೊ ಪಾಪ’.

ನನಗೋ ಸದಾ ನಿನ್ನ ರೇಗಿಸುತಾ ತರಲೆ ಮಾಡುವ ಚಾಳಿ
ತರಲೆ ತಲೆಕೆಳಾಗಾಗಲು ಕೆರಳಿ ನೀನಾಗುವೆ ಮಹಾಕಾಳಿ..!
ತಪ್ಪು ಮಾಡಿ ಬೆಪ್ಪ ಕುರಿಯಂತೆ ನಾ ಸಿಗುವೆ ನಿನ್ನ ಕೈಲಿ
ನಿನ್ನ ಕೋಪ ತಾಪಗಳಿಗೆ ನಾ ತಾನೆ ಆಗಬೇಕು ಬಲಿ?

ತಪ್ಪಾಯ್ತು ಮಾರಾಯ್ತಿ..! ನನ್ನ ತಂಟೆ ತರಲೆ ಎಲ್ಲಾ ಬಿಟ್ಟು
ಬೇಡುತಿರುವೆನು, ಕೊಂಚ ಕಡಿಮೆ ಮಾಡಿಕೊಳ್ಳೆ ನಿನ್ನ ಸಿಟ್ಟು
ಮಾಡಿದ ತಪ್ಪಿಗೆ ನೂರಿಪ್ಪತ್ತು ಮುತ್ತಿನ ತಪ್ಪು ಕಾಣಿಕೆ ಕೊಟ್ಟು
ಅದರೊಡನೆ ಬರೆದಿರುವೆ ಈ ಹದಿನಾಲ್ಕು ಸಾಲುಗಳ ಸಾನೆಟ್ಟು

ಇನ್ನೊಮ್ಮೆ ಕೇಳುವೆ, ಕ್ಷಮಿಸುಬಿಡೆ ಚಿನ್ನಮ್ಮ ಸಾರಿ
ಕೊಂಚ ಕರುಣೆಯ ತೋರೆ, ಕ್ಷಮಯಾಧರಿತ್ರಿ ನೀ ನಾರಿ





- ತ್ರಿವಿಕ್ರಮ